ಜೀವದ ಗೆಳೆಯನನ್ನು ಕಳೆದುಕೊಂಡ ಶ್ರೀನಾಥ್ ನೋವಿನ ನುಡಿ
ಅನಂತ್ ಕುಮಾರ್ ಅವರ ನಿಧನಕ್ಕೆ ರಾಜ್ಯದ ಅನೇಕ ಮಹನೀಯರು ಹಾಗೂ ಅವರ ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ನಟ ಶ್ರೀ ನಾಥ್ ಕೂಡ ಸಂತಾಪ ಸೂಚಿಸಿದ್ದಾರೆ.
ಅನಂತ್ ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದ ಹಿರಿಯ ನಟ ಶ್ರೀನಾಥ್ ಅವರ ಬಗ್ಗೆ ಅನೇಕ ವಿಷಯಗಳನ್ನು ಹಂಚಿಕೊಂಡರು. ಶ್ರೀನಾಥ್ ಪಾಲಿಗೆ ಅನಂತ್ ಕುಮಾರ್ ಒಬ್ಬ ಜೀವದ ಗೆಳೆಯ, ರಾಜಕೀಯ ಗುರು, ಮಾರ್ಗದರ್ಶಕ ಸ್ಥಾನದಲ್ಲಿದ್ದರು. ಶ್ರೀನಾಥ್ ಆರು ವರ್ಷ ಎಂ ಎಲ್ ಸಿ ಆಗಿದ್ದರು.
ಸುಮಾರು 22 ವರ್ಷಗಳಿಂದ ಶ್ರೀನಾಥ್ ಹಾಗೂ ಅನಂತ್ ಕುಮಾರ್ ಸ್ನೇಹಿತರಾಗಿದ್ದರು. ಹೀಗಿರುವಾಗ ಇಂದು ಇದ್ದಕ್ಕಿದ್ದ ಹಾಗೆ ತಮ್ಮ ಸ್ನೇಹಿತನ ಸಾವಿನ ಸುದ್ದಿ ಕೇಳಿ ಆಘಾತಗೊಂಡಿರುವ ಶ್ರೀನಾಥ್ ತಮ್ಮ ನೋವಿನ ನುಡಿಯನ್ನು ಹೇಳಿಕೊಂಡಿದ್ದಾರೆ. ಮುಂದೆ ಓದಿ...

ನನಗಿಂತ ಬಹಳ ಚಿಕ್ಕ ವಯಸ್ಸಿನವರು
''ಅನಂತ್ ಗೆ ಅಂತಿಮ ನಮಸ್ಕಾರ ಮಾಡಲು ನಾನು ಬರಬೇಕಿತ್ತಾ ಅಂತ ಈ ಸಮಯಕ್ಕೆ ಅನಿಸಿಬಿಡುತ್ತದೆ. ಏಕೆಂದರೆ, ಅನಂತ್ ಅವರು ನನಗಿಂತ ಅವರಿಗೆ ಬಹಳ ಚಿಕ್ಕ ವಯಸ್ಸಿನವರು. 96ನೇ ಇಸವಿಯಲ್ಲಿ ಅವರು ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧೆ ಮಾಡಿದರು. ಅಲ್ಲಿಂದ ನನ್ನ ಅವರ ಪರಿಚಯ ಶುರು ಆಯ್ತು.'' - ಶ್ರೀನಾಥ್, ಹಿರಿಯ ನಟ

ನನ್ನ ಜೀವದ ಗೆಳೆಯ
''ನಮ್ಮ ನಡುವೆ ಶುರುವಾದ ಸ್ನೇಹ ನಂತರ ಜೀವದ ಗೆಳೆಯರಾಗುವ ಹಾಗೆ ಆಯ್ತು. ಅವರು ನನ್ನ ಮಾರ್ಗದರ್ಶಕರಾಗಿದ್ದರು. ಭಾರತೀಯ ಜನತಾ ಪಾರ್ಟಿಯಲ್ಲಿ ಸಕ್ರಿಯರಾಗಲು ಸಲಹೆ, ಸೂಚನೆ ನೀಡುತ್ತಿದ್ದರು. ಅವರು ಚಿಕ್ಕವರಾಗಿದ್ದರೂ ಎಲ್ಲ ವಿಚಾರಗಳಲ್ಲಿ ದೊಡ್ಡವರಾಗಿದ್ದರು. ನನ್ನ ಜೊತೆಗೆ ಅವರು ಕೊನೆಯುಸಿರಿರುವವರೆಗೆ ಇರುತ್ತಾರೆ ಎಂದುಕೊಂಡಿದ್ದೆ.'' - ಶ್ರೀನಾಥ್, ಹಿರಿಯ ನಟ

ಒಬ್ಬ ಸ್ನೇಹ ಜೀವಿ
''ಅನಂತ್ ಕುಮಾರ್ ಒಬ್ಬ ಸ್ನೇಹ ಜೀವಿ. ಅವರು ತೋರುತ್ತಿದ್ದ ಸ್ನೇಹ ಅನೇಕರಿಗೆ ಮಾದರಿ. ಅವರು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದರೂ ತಾನು ಒಬ್ಬ ಸ್ನೇಹ ಜೀವಿ ಎನ್ನುವುದನ್ನು ಮರೆತಿರಲಿಲ್ಲ. ಸ್ನೇಹ ನಮ್ಮ ಸಾಧನೆಗೆ ಮೆಟ್ಟಿಲಾಗುತ್ತದೆ ಎಂದು ಅನಂತ್ ತೋರಿಸಿಕೊಟ್ಟರು.'' - ಶ್ರೀನಾಥ್, ಹಿರಿಯ ನಟ

ರಾಜಕೀಯದಲ್ಲಿ ಅವರನ್ನು ಹಿಂಬಾಲಿಸಿದೆ
''ನಾನು ಒಬ್ಬ ನಟನಾಗಿ ನಂತರ ರಾಜಕೀಯಕ್ಕೆ ಬಂದೆ. ರಾಜಕೀಯದಲ್ಲಿ ಅವರ ನಡೆ ನುಡಿ ನೋಡಿ ಹಿಂಬಾಲಿಸಿದೆ. ಪಕ್ಷಾತೀತವಾಗಿ ಆ ಮನುಷ್ಯ ಸಂಪಾದನೆ ಮಾಡಿದ್ದು ಸ್ನೇಹ. ಅನೇಕರು ಅನಂತ್ ಕುಮಾರ್ ನಮ್ಮ ಸ್ನೇಹಿತ ಅಂತ ಹೇಳಿಕೊಳ್ಳುವುದಕ್ಕೆ ಸಂತೋಷ ಪಡುತ್ತಿದ್ದರು. ಅವರು ಯಾವತ್ತು ನಮ್ಮ ಹೃದಯದಲ್ಲಿ ಇರುತ್ತಾರೆ.'' - ಶ್ರೀನಾಥ್, ಹಿರಿಯ ನಟ
ಅನಂತ ಕುಮಾರ್ ಮಾಡಿದ ಮಹತ್ವದ ಸಾಧನೆಗಳೇನು? ವಿವರ ಇಲ್ಲಿದೆ...

ಇಂದು ಬೆಳಗಿನ ಜಾವ ವಿಧಿವಶ
ಅಂದಹಾಗೆ, ಕೇಂದ್ರ ಸಚಿವ, ಬಿಜೆಪಿಯ ಪ್ರಮುಖ ನಾಯಕ ಅನಂತ್ ಕುಮಾರ್ (59) ಅವರು ನವೆಂಬರ್ 12ರ ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಅವರು ನಗರದ ಶಂಕರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅನಂತ್ ಕುಮಾರ್ ಕಡೆಯ ಹಂತದಲ್ಲಿ ಲಂಡನ್ ಗೆ ಹೋಗಿ ಚಿಕಿತ್ಸೆ ಪಡೆದು, ಸಾಕಷ್ಟು ಹೋರಾಟ ನಡೆಸಿದರೂ ಗೆಲ್ಲಲು ಸಾಧ್ಯವಾಗಲೇ ಇಲ್ಲ.


Click it and Unblock the Notifications











