ಜನಿವಾರ ಹಾಕಿದವರೆಲ್ಲಾ ಬಸವಣ್ಣ ಆಗಲು ಸಾಧ್ಯವೆ?
ಈ ಹಿಂದೆ ಬಸವಣ್ಣ ಅವರ ಹೆಸರಿನಲ್ಲಿ ಹಲವಾರು ಚಿತ್ರಗಳು ಬಂದಿವೆ. ಆಗ ಯಾರಿಂದಲೂ ವಿರೋಧ ವ್ಯಕ್ತವಾಗಿರಲಿಲ್ಲ. ಈಗೇಕೆ ವಿರೋಧ ವ್ಯಕ್ತಪಡಿಸುತ್ತಿದ್ದೀರಿ. ವರನಟ ಡಾ.ರಾಜ್ ಕುಮಾರ್ ಅವರು 'ಬೀದಿ ಬಸವ', ಪುನೀತ್ ರಾಜ್ ಕುಮಾರ್ ಅವರು ಅವರು 'ನಮ್ಮ ಬಸವ' ಎಂಬ ಚಿತ್ರಗಳಲ್ಲಿ ಅಭಿನಯಿಸಿದಾಗ ಯಾಕೆ ಶೀರ್ಷಿಕೆ ವಿವಾದ ಹುಟ್ಟುಹಾಕಲಿಲ್ಲ ಎಂದು ಅವರು ನೇರವಾಗಿ ಪ್ರಶ್ನಿಸಿದರು.
'ಬಸವಣ್ಣ' ಎಂದು ಹೆಸರಿಟ್ಟುಕೊಂಡರೆ ಏನು ತಪ್ಪು. ಒಂದು ವೇಳೆ ಶ್ರೀನಿವಾಸ ರಾಜು ಅವರು ತಮ್ಮ ಚಿತ್ರಕ್ಕೆ ಜಗದ್ಯೋತಿ ಬಸವಣ್ಣ ಅಥವಾ ಬಸವೇಶ್ವರ ಎಂದಿಟ್ಟು ಆಗ ಅವರ ಕೈಗೆ ಕತ್ತಿ, ಪಿಸ್ತೂಲು ಕೊಟ್ಟಿದ್ದರೆ ತಪ್ಪು ಎಂದು ಹೇಳಬಹುದಿತ್ತು.
ನನಗೆ ವೈಯಕ್ತಿಕವಾಗಿ ಹೇಳಬೇಕು ಎಂದರೆ ಬಸವಣ್ಣ ಎಂಬ ಶೀರ್ಷಿಕೆಯನ್ನು ಕೇಳಿದಾಗ 12ನೇ ಶತಮಾನದ ಬಸವಣ್ಣ ನನ್ನ ಕಣ್ಣಮುಂದೆ ಬರುವುದಿಲ್ಲ. ಉಪೇಂದ್ರ ಅವರ ಬಸವಣ್ಣನೇ ಬರುತ್ತಾನೆ ಎಂದರು. ಅಣ್ಣ ಬಸವಣ್ಣ ಎಂಬ ಪಾತ್ರವನ್ನು ಮಾಡಿದ ಶ್ರೀನಿವಾಸ ಮೂರ್ತಿ ಅವರು ಈ ರೀತಿಯಾಗಿ ಟಿವಿ9 ವಾಹಿನಿಯ ನಿರೂಪಕ ರೆಹಮಾನ್ ಅವರಿಗೆ ಪ್ರತಿಕ್ರಿಯಿಸಿದರು.
ನಾನು ಬಸವಣ್ಣ ಪಾತ್ರವನ್ನು 2000ನೇ ಇಸವಿಯಲ್ಲಿ ಮಾಡಿದಾಗ ಎರಡು ವರ್ಷಗಳ ಕಾಲ ಬಹಳ ನಿಷ್ಠೆಯಿಂದ ಮಾಡಿದ್ದೇನೆ. ಬಸವಣ್ಣ ಹೆಸರು ಹೇಳಿಕೊಂಡು ಜನಿವಾರ ಹಾಕಿಕೊಂಡು ಎಷ್ಟೋ ಜನ ಮಾಂಸ ತಿನ್ತಾರೆ. ತಮ್ಮ ಚಿತ್ರದಲ್ಲಿ ಜಗದ್ಯೋತಿ ಬಸವಣ್ಣ ಅವರ ಬಗ್ಗೆ ಒಂದೇ ಒಂದು ಪದವಿದ್ದರೂ ಸೆನ್ಸಾರ್ ಮಾಡಿಸಬೇಡಿ ಎಂದು ಚಿತ್ರದ ನಿರ್ದೇಶಕರೇ ಸ್ಪಷ್ಟೀಕರಣ ನೀಡಿದ್ದಾರೆ ಎಂದ ಮೇಲೆ ಇದರಲ್ಲಿ ವಿವಾದ ಎಲ್ಲಿಂದ ಬಂತು ಎಂದರು.
ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಹೆಸರಿಡಬೇಕು ಎಂದು ಗಲಾಟೆ ಮಾಡುತ್ತಿದ್ದರು. ಜಗದ್ಯೋತಿ ಬಸವೇಶ್ವರ ಹೆಸರು ಯಾಕಿಡಬಾರದಿತ್ತು. ಈ ಸಲುವಾಗಿ ಇವರೆಲ್ಲಾ ಯಾಕೆ ಹೋರಾಟ ಮಾಡಲಿಲ್ಲ? ಎಂದು 'ಬಸವಣ್ಣ' ಶೀರ್ಷಿಕೆ ವಿರೋಧಿಸುತ್ತಿರುವವರನ್ನು ಶ್ರೀನಿವಾಸ ಮೂರ್ತಿ ಕೆಣಕಿದರು.


Click it and Unblock the Notifications












