ಸ್ವಲ್ಪ ತಾಳಿ 'ದಂಡುಪಾಳ್ಯ' ಕತೆ ಇನ್ನೂ ಮುಗಿದಿಲ್ಲ
'ದಂಡುಪಾಳ್ಯ' ಚಿತ್ರದಲ್ಲಿ ಬಹಳಷ್ಟು ಕಲಾವಿದರಿದ್ದರೂ ಪೂಜಾಗಾಂಧಿ ಬೆತ್ತಲೆ ಬೆನ್ನಿನ ಕಾರಣ ಸಿನಿಮಾಗೆ ಸಾಕಷ್ಟು ಪ್ರಚಾರ ಸಿಕ್ಕಿದ್ದು ಸುಳ್ಳಲ್ಲ. ನಿರ್ದೇಶಕ ಶ್ರೀನಿವಾಸ ರಾಜು ಅವರ ತಂತ್ರ ಫಲಿಸಿದೆ. ನಿರೀಕ್ಷೆಯಂತೆ ಚಿತ್ರ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಇದೇ ಸಂತಸದಲ್ಲಿರುವ ಚಿತ್ರದ ನಿರ್ದೇಶಕ ಶ್ರೀನಿವಾಸರಾಜು ಅವರು ಮತ್ತೆ ಪೆನ್ನು ಪೇಪರ್ ಹಿಡಿದು ಕೂತಿದ್ದಾರೆ. ಈ ಬಾರಿಯೂ ಅವರು 'ದಂಡುಪಾಳ್ಯ' ಗ್ಯಾಂಗ್ ಮತ್ತೊಂದು ಮುಖದ ಮೇಲೆ ಬೆಳಕು ಬೀರಲಿದ್ದಾರೆ. ಅರ್ಥಾತ್ 'ದಂಡುಪಾಳ್ಯ ಭಾಗ 2' ಮಾಡುವ ಸಿದ್ಧತೆಯಲ್ಲಿದ್ದಾರೆ.
'ದಂಡುಪಾಳ್ಯ' ಗ್ಯಾಂಗ್ ನ ಹಿಂದಿರುವ ಶಕ್ತಿಗಳು, ಅವರ ಮತ್ತಷ್ಟು ಕ್ರೌರ್ಯ, ಅದರ ಹಿನ್ನೆಲೆ ಎಲ್ಲವುಗಳಿಗೂ ಉತ್ತರವಾಗಿ ಭಾಗ 2 ಮೂಡಿಬರಲಿದೆ. ಹತ್ಯೆಗಳ ಹಿಂದೆ ಹಲವಾರು ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು. ಚಿತ್ರದ ಎರಡನೇ ಭಾಗದಲ್ಲಿ ಅವರ ಮುಖಗಳನ್ನು ಅನಾವರಣ ಮಾಡುವುದಾಗಿ ಶ್ರೀನಿವಾಸರಾಜು ತಿಳಿಸಿದ್ದಾರೆ.
ಈಗಾಗಲೆ ಜೈಲು ಸೇರಿರುವ 'ದಂಡುಪಾಳ್ಯ' ಹಂತಕರು ಎರಡನೇ ಭಾಗದಲ್ಲಿ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳುತ್ತಾರೆ. ಮೊದಲ ಭಾಗದಲ್ಲಿ ಅಭಿನಯಿಸಿದ್ದ ಬಹುತೇಕ ಕಲಾವಿದರು ಪಾರ್ಟ್ 2ನಲ್ಲೂ ಇರುತ್ತಾರೆ.
ಪೂಜಾಗಾಂಧಿ, ಮಕರಂದ್ ದೇಶಪಾಂಡೆ ಜೊತೆಗೆ ಬಾಲಿವುಡ್ ನಿಂದ ಓಂಪುರಿ, ಮನೋಜ್ ಬಾಜಪೇಯಿ ಸೇರಿದಂತೆ ಇನ್ನಷ್ಟು ಖ್ಯಾತನಾಮರನ್ನು ಕರೆತರುವ ಉದ್ದೇಶವಿದೆ ಎನ್ನುತ್ತಾರೆ ನಿರ್ದೇಶಕರು.
'ದಂಡುಪಾಳ್ಯ'ದ ತಾಂತ್ರಿಕ ವರ್ಗ ಇಲ್ಲೂ ಮುಂದುವರಿಯುತ್ತದೆ. ಚಿತ್ರದಲ್ಲಿ ಹಸಿಬಿಸಿ ದೃಶ್ಯಗಳು ಜಾಸ್ತಿಯಾದವಲ್ಲ ಎಂಬ ಟೀಕೆಗೆ ಭಾಗ ಎರಡರಲ್ಲಿ ಉತ್ತರ ಸಿಕ್ಕಲಿದೆಯಂತೆ! ಇದರ ಜೊತೆಗೆ ಇನ್ನಷ್ಟು ನೈಜ ಸನ್ನಿವೇಶಗಳು ಸೇರ್ಪಡೆಯಾಗಲಿವೆ ಎನ್ನುತ್ತಾರೆ ಶ್ರೀನಿವಾಸ.
'ದಂಡುಪಾಳ್ಯ' ಗ್ಯಾಂಗ್ ಸದಸ್ಯೆ ಲಕ್ಷ್ಮಿ ಪಾತ್ರದಲ್ಲಿ ಅಭಿನಯಿಸಿದ್ದ ಪೂಜಾಗಾಂಧಿ ಅರೆಬೆತ್ತಲೆ ದೃಶ್ಯಗಳು ಬಹಳಷ್ಟು ಚರ್ಚೆಗೆ ಕಾರಣವಾಗಿದ್ದವು. ಚಿತ್ರಕ್ಕೆ ಶೀರ್ಷಿಕೆ ವಿವಾದ, ಕೃತಿಚೌರ್ಯ ಆರೋಪಗಳು ಎದುರಾದರೂ ಚಿತ್ರತಂಡ ಇದ್ಯಾವುದಕ್ಕೂ ಸೊಪ್ಪುಹಾಕಿರಲಿಲ್ಲ. ಈಗ ಎರಡನೇ ಭಾಗಕ್ಕೆ ಮುಂದಾಗಿರುವುದು ವಿಶೇಷ.
'ದಂಡುಪಾಳ್ಯ' ಚಿತ್ರದಲ್ಲಿ ಕೊಲೆ, ದರೋಡೆ, ಅತ್ಯಾಚಾರ, ಕಳ್ಳತನಗಳ ಇತರೆ ಸಮಾಜಘಾತುಕ ಕೃತ್ಯಗಳನ್ನು ವೈಭವೀಕರಿಸಲಾಗಿದೆ. ಇದು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಅಂಬೇಡ್ಕರ್ ಕ್ರಾಂತಿ ಸೇನೆ ಆರೋಪಿಸಿತ್ತು. ಚಿತ್ರದಲ್ಲಿ ನಟಿ ಪೂಜಾಗಾಂಧಿ ಅರೆಬೆತ್ತಲಾಗಿ ಕಾಣಿಸಿಕೊಂಡಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಅವರ ವಿರುದ್ಧವೂ ಧಿಕ್ಕಾರ ಕೂಗಿ ಪ್ರತಿಭಟಿಸಿದ್ದರು.
ಚಿತ್ರದಲ್ಲಿನ ಸಮಾಜಘಾತುಕ ಕೃತ್ಯಗಳಿಗೆ ಕತ್ತರಿ ಹಾಕಬೇಕು. ಸಮಾಜದ ಮೇಲೆ ದುಷ್ಪರಿಣಾಮ ಬೀರುವ ಸನ್ನಿವೇಶಗಳಿಗೆ ಕತ್ತರಿ ಹಾಕದಿದ್ದರೆ ಕಾನೂನು ಹೋರಾಟ ನಡೆಸಲಾಗುತ್ತದೆ ಎಂದು ಅಂಬೇಡ್ಕರ್ ಕ್ರಾಂತಿಸೇನೆಯ ಅಧ್ಯಕ್ಷ ಕ್ರಾಂತಿರಾಜ್ ಎಚ್ಚರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇಷ್ಟೆಲ್ಲಾ ವಾದ ವಿವಾದಗಳಿದ್ದರೂ ಶ್ರೀನಿವಾಸರಾಜು ಕ್ಯಾರೆ ಎನ್ನದೆ ಭಾಗ 2ಕ್ಕೆ ಮುಂದಾಗಿರುವುದು ಗಾಂಧಿನಗರಲ್ಲಿ ಬಹಳ ಚರ್ಚಾಸ್ಪದ ವಿಷಯವಾಗಿದೆ. (ಏಜೆನ್ಸೀಸ್)


Click it and Unblock the Notifications











