ಯಾರೂ ಏನೇ ಹೇಳಿದ್ರು ನನ್ನ ಹೋರಾಟ ನಿಲ್ಲಲ್ಲ: 6 ಅಂಶಗಳನ್ನ ಮುಂದಿಟ್ಟ ಶ್ರುತಿ
Recommended Video

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಮಾಡಿರುವ ಆರೋಪದ ಸ್ವರೂಪ ಬೇರೆ ಕಡೆ ಸಾಗುತ್ತಿದೆ. ಇದು ರಾಜಕೀಯ ಪ್ರೇರಿತ ಇರಬಹುದು ಎಂದು ಕೆಲವರು, ಇದು ಚೇತನ್ ಸೇಡು ಎಂದು ಮತ್ತೆ ಕೆಲವರು, ಇನ್ನು ಕೆಲವರು ಶ್ರುತಿಗೆ ಧ್ರುವ ಸರ್ಜಾ ಸಿನಿಮಾ ಸಿಕ್ಕಿಲ್ಲ ಎಂಬ ಕಾರಣಕ್ಕೆ ಎಂದು ಮಾತನಾಡುತ್ತಿದ್ದಾರೆ.
ಅಲ್ಲಿಗೆ ಶ್ರುತಿ ಮಾಡಿದ್ದ ಮೀಟೂ ಆರೋಪ ತನ್ನ ಸ್ವರೂಪ ಕಳೆದುಕೊಳ್ಳುತ್ತಿದೆ. ವಿಷ್ಯ ಮತ್ತು ಸಮಸ್ಯೆಯನ್ನ ಬಿಟ್ಟು ಬೇರೆ ಎಲ್ಲವೂ ಚರ್ಚೆಯಾಗ್ತಿದೆ. ಇದನ್ನ ಗಮನಿಸಿದ ಶ್ರುತಿ ಮತ್ತೊಮ್ಮೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಪ್ರಮುಖವಾಗಿ ಆರು ಅಂಶಗಳನ್ನ ಮುಂದಿಟ್ಟಿರುವ ಶ್ರುತಿ, ಕನ್ನಡ ಚಿತ್ರರಂಗದ ಹಿರಿಯರು ಎನಿಸಿಕೊಂಡಿರುವ ಕೆಲವು ವ್ಯಕ್ತಿಗಳನ್ನ ಪ್ರಶ್ನಿಸಿದ್ದಾರೆ. ಷಡ್ಯಂತ್ರ, ಕುತಂತ್ರ, ಸೇಡು ಎಂದು ಬಿಂಬಿತವಾಗಿರುವ ಈ ಆಪಾದನೆಯ ಬಗ್ಗೆ ತಮ್ಮದೇ ಆದ ಅಭಿಪ್ರಾಯದಲ್ಲಿ ಉತ್ತರ ಕೊಟ್ಟಿದ್ದಾರೆ. ಹಾಗಿದ್ರೆ, ಶ್ರುತಿ ಮುಂದಿಟ್ಟಿರು ಆ ಆರು ಪ್ರಮುಖ ಅಂಶಗಳು ಯಾವುದು.?

ನನ್ನ ಹಿಂದೆ ಯಾರೂ ಇಲ್ಲ
'ಚಿತ್ರರಂಗದಲ್ಲಿರುವ ಗಣ್ಯರು ಎನಿಸಿಕೊಂಡಿರುವ ಕೆಲವರು ಹೇಳುತ್ತಿರುವ ಪ್ರಕಾರ ನನ್ನ ಹಿಂದೆ ಯಾರೂ ಇಲ್ಲ. ನನಗೆ ಹೀಗೆ ಮಾಡಲು ಯಾರೂ ಕುಮ್ಮಕ್ಕು ಕೊಡ್ತಿಲ್ಲ. ಚೇತನ್, ಕವಿತಾ ಲಂಕೇಶ್, ಪ್ರಕಾಶ್ ರೈ ಇದಕ್ಕೆ ಕಾರಣವಲ್ಲ. ಆದ್ರೂ, ಇವರೆಲ್ಲರೂ ನನ್ನ ಜೊತೆ ನನ್ನ ಬೆಂಬಲಕ್ಕೆ ನಿಂತಿದ್ದಕ್ಕೆ ಅವರಿಗೆಲ್ಲಾ ನಾನು ಧನ್ಯವಾದ ತಿಳಿಸುತ್ತೇನೆ' - ಶ್ರುತಿ ಹರಿಹರನ್

ಕಾನೂನು ಹೋರಾಟಕ್ಕೆ ಸಿದ್ಧ
'ಅರ್ಜುನ್ ಸರ್ಜಾ ವಿರುದ್ಧ ನಾನು ಮಾಡಿರುವ ಆರೋಪಗಳು ನಿಜ. ಸರ್ಜಾ ಒಂದು ವೇಳೆ ಮಾನನಷ್ಟ ಮೊಕದ್ದಮೆ ಹಾಕಿದರೇ ನಾನು ಕೂಡ ಕಾನೂನಿನ ಹೋರಾಟಕ್ಕೆ ಸಿದ್ಧವಾಗಿದ್ದೇನೆ' ಎಂದು ಶ್ರುತಿ ಹೇಳುತ್ತಿದ್ದಾರೆ.

ಸಾಕ್ಷಿ ಯಾರಿಗೂ ಕೊಡಲ್ಲ
'ನನ್ನ ಬಳಿ ಇರುವ ಸಾಕ್ಷ್ಯಗಳನ್ನ, ಆಧಾರವನ್ನ ನಾನು ಯಾರಿಗೂ ಕೊಡವ ಅವಶ್ಯಕತೆಯಿಲ್ಲ. ನೀವು ಯಾವುದನ್ನ ನಂಬುತ್ತೀರೋ ಅದನ್ನ ನಂಬಿ. ನ್ಯಾಯಾಲಯದಲ್ಲಿ ಈ ಪ್ರಕರಣ ಹೋದರೇ, ಅಲ್ಲಿ ನನ್ನ ಸಾಕ್ಷಿಗಳನ್ನ ಒದಗಿಸುತ್ತೇನೆ. ಅದರ ಪ್ರಕಾರ ನನಗೆ ನ್ಯಾಯ ಸಿಗಲಿ' ಎಂದು ಶ್ರುತಿ ಸ್ಪಷ್ಟಪಡಿಸಿದ್ದಾರೆ.

ನನ್ನನ್ನು ದೋಷಿ ಮಾಡಲಾಗುತ್ತಿದೆ
'ಸರ್ಜಾ ಫ್ಯಾನ್ಸ್ ಕ್ಲಬ್ ಗಳಿಂದ ನನಗೆ ಬೆದರಿಕೆ ಕರೆ ಬರ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ, ಪತ್ರಿಕೆಗಳಲ್ಲಿ, ಟಿವಿ ಮಾಧ್ಯಗಳಲ್ಲಿ ಪಕ್ಷಪಾತ ಮಾದರಿಯ ವರದಿಗಳು ಬರುತ್ತಿವೆ. ಸತ್ಯ ಏನೂ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ನಿಮಗೆ ಅನಿಸಿದ್ದನ್ನ ನೀವು ಮಾಡಿ, ನನಗೆ ಅನಿಸಿದ್ದನ್ನ ನಾನು ಮಾಡುತ್ತೇನೆ' ಎಂದು ಶ್ರುತಿ ಕಿಡಿಕಾರಿದ್ದಾರೆ.

ಹಿರಿಯರು ಮಾಡುತ್ತಿರುವದೇನು.?
'ಕಲಾವಿದರ ಹಕ್ಕುಗಳ ರಕ್ಷಣೆ ಮತ್ತು ಅವರ ಸಮಸ್ಯೆಗಳನ್ನ ಬಗೆಹರಿಸುವುದು, ಚಿತ್ರರಂಗ ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದು, ಪುರುಷ ಮತ್ತು ಮಹಿಳೆಯರು ಕೆಲಸ ಮಾಡಲು ಆರೋಗ್ಯಕರ ವಾತಾವರಣ ಇರುವಂತೆ ನೋಡಿಕೊಳ್ಳುವುದು ಮುನಿರತ್ನ, ಸಾರಾ ಗೋವಿಂದು, ಚಿನ್ನೇಗೌಡ ಸೇರಿದಂತೆ ನಿಮ್ಮಂತ ಹಿರಿಯರ ಕರ್ತವ್ಯ. ಆದ್ರೆ, ಇತ್ತೀಚೀನ ದಿನಗಳಲ್ಲಿ ಸಂಗೀತಾ ಭಟ್, ಸಂಜನಾ, ಏಕ್ತಾ ಇವರುಗಳು ಮಾಡಿರುವ ಆರೋಪಗಳು ನಮ್ಮ ಚಿತ್ರರಂಗ ನಿಜಕ್ಕೂ ಸುರಕ್ಷಿತವಾಗಿದೆಯಾ ಎಂಬ ಅನುಮಾನ ಉಂಟು ಮಾಡುತ್ತಿದೆ. ಕೆಲವು ಮಾಧ್ಯಮಗಳಲ್ಲಿ ಕುಳಿತು ನಿಮ್ಮ ಘನತೆಗೆ ತಕ್ಕಂತೆ ವರ್ತಿಸದೇ ನಮ್ಮ ತೇಜೋವಧೆ ಮಾಡಿದ್ದೀರಾ. ಇದರಿಂದ ನಮಗೆ ಆತಂಕವಾಗಿದೆ' ಎಂದಿದ್ದಾರೆ.

ನನ್ನ ಹೋರಾಟ ನಿಲ್ಲಲ್ಲ
'ಯಾರು ಏನೇ ಹೇಳಿದರು ನನಗೆ ತೋಚಿದ್ದನ್ನ ನಾನು ಮಾಡುತ್ತೇನೆ. ನನ್ನ ಆಲೋಚನೆಯಂತೆ ಹೋರಾಟ ಮಾಡುತ್ತೇನೆ. ಇದಕ್ಕಾಗಿ ಎಷ್ಟು ಸಮಯ ಬೇಕಾದರೂ ನಾನು ಹೋರಾಡುತ್ತೇನೆ. ನಾನು ಇದಕ್ಕಾಗಿ ಸಿದ್ಧವಾಗಿದ್ದೇನೆ ಎಂದು ಶ್ರುತಿ ಎಚ್ಚರಿಕೆ' ನೀಡಿದ್ದಾರೆ.


Click it and Unblock the Notifications











