ಸರ್ಜಾ ವಿರುದ್ಧ ಇಷ್ಟು ದಿನ ಹೇಳಿದ್ದು ಒಂದೇ, ಈಗ ಹೇಳ್ತಿರೋದು ಐದು ಆರೋಪ.!
ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿದ್ದ ಶ್ರುತಿ ಹರಿಹರನ್ ಇಷ್ಟು ದಿನ 'ವಿಸ್ಮಯ' ಚಿತ್ರದ ಶೂಟಿಂಗ್ ಸೆಟ್ ನಲ್ಲಿ ಅಸಭ್ಯವಾಗಿ ನಡೆದುಕೊಂಡಿದ್ದರು ಎಂದು ಮಾತ್ರ ಹೇಳುತ್ತಿದ್ದರು. ಚಿತ್ರದ ರಿಹರ್ಸಲ್ ಮಾಡಬೇಕಾದರೇ ಕೆಟ್ಟದಾಗಿ ಸ್ಪರ್ಶಿಸಿದ್ದರು, ಜೊತೆಗೆ ಗಟ್ಟಿಯಾಗಿ ತಬ್ಬಿಕೊಂಡು ಅನುಚಿತವಾಗಿ ವರ್ತಿಸಿದ್ದರು ಎಂದು ದೂರಿದ್ದರು.
ಅಲ್ಲರೂ ಇದು ಚಿತ್ರೀಕರಣದ ಸಮಯದಲ್ಲಿ ಮಾಮೂಲು. ಗಂಡ ಹೆಂಡತಿ ದೃಶ್ಯಗಳು ಅಂದ್ಮೇಲೆ ಬೈ ಮಿಸ್ ಆಗಿ ಹೀಗೆ ಆಗಬಹುದು, ಇದಕ್ಕೆ ಮೀಟೂ ಅಂದ್ಬಿಟ್ರೆ ಹೇಗೆ ಎಂದು ಪ್ರಶ್ನಿಸಿದ್ದರು.
ಆದ್ರೀಗ, ನಟ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಪೊಲೀಸ್ ದೂರು ನೀಡಿದ್ದಾರೆ. ಈ ದೂರಿನಲ್ಲಿ ಆರೋಪಗಳ ಸುರಿಮಳೆ ಮಾಡಿದ್ದಾರೆ. ಒಂದಲ್ಲ ಎರಡಲ್ಲಾ ಐದು ಗಂಭೀರ ಆರೋಪ ಮಾಡಿರುವ ಶ್ರುತಿ, ಸರ್ಜಾ ಹಲವು ರೀತಿಯಲ್ಲಿ ನನ್ನನ್ನು ಕಾಡಿದ್ದರು ಎಂದು ಬಾಂಬ್ ಸಿಡಿಸಿದ್ದಾರೆ. ಅಷ್ಟಕ್ಕೂ, ಶ್ರುತಿ ಹೇಳುತ್ತಿರುವ ಉಳಿದ ಆರೋಪಗಳು ಯಾವುದು.? ಮುಂದೆ ಓದಿ....

ದೇವನಹಳ್ಳಿ ಘಟನೆ
2015ನೇ ಡಿಸೆಂಬರ್ ತಿಂಗಳಲ್ಲಿ ದೇವನಹಳ್ಳಿ ಆಸ್ಪತ್ರೆಯೊಂದರಲ್ಲಿ ವಿಸ್ಮಯ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಬೆಳಿಗ್ಗೆ 7 ರಿಂದ ಸಂಜೆ 5ರ ವರೆಗೂ ಶೂಟಿಂಗ್ ಶೆಡ್ಯೂಲ್ ಆಗಿತ್ತು. ಈ ಮಧ್ಯೆ ನಟ ಅರ್ಜುನ್ ಸರ್ಜಾ ಅವರು ನನ್ನ ಬಳಿ ಬಂದು 'ಶೂಟಿಂಗ್ ಮುಗಿದ ಮೇಲೆ ನನ್ನ ಖಾಸಗಿ ಜಾಗಕ್ಕೆ ಬಾ, ಅಲ್ಲಿ ಸ್ವಲ್ಪ ಹೊತ್ತು ಸಮಯ ಕಳೆಯೋಣ' ಎಂದು ಹೇಳಿದರು. ಇದರ ಉದ್ದೇಶವೇನು.? ನನ್ನನ್ನು ಅವರ ಪ್ರೈವೇಟ್ ಸ್ಥಳಕ್ಕೆ ಕರೆದು ಲೈಂಗಿಕವಾಗಿ ಬಳಸಿಕೊಳ್ಳುವ ಯತ್ನ ಇದಾಗಿತ್ತು ಎಂದು ಶ್ರುತಿ ಆರೋಪಿಸಿದ್ದಾರೆ.

ದೇವನ ಹಳ್ಳಿ ಸಿಗ್ನಲ್ ಘಟನೆ
ಅದೇ ತಿಂಗಳ ಒಂದು ದಿನ ನಾನು ಮತ್ತು ನನ್ನ ತಂಡದ ಸದಸ್ಯರ ಜೊತೆ ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ದೇವನಹಳ್ಳಿ ಸಿಗ್ನಲ್ ಬಳಿ ನಿಂತಿದ್ದೆ. ಹಿಂದೆಯಿಂದ ಮತ್ತೊಂದು ಕಾರಿನಲ್ಲಿ ಬಂದಿದ್ದ ಸರ್ಜಾ ಕಾರಿನ ಗ್ಲಾಸ್ ತೆಗೆದು ''ಬಾ ರೆಸಾರ್ಟ್ ಹೋಗೋಣ, ಅಲ್ಲಿ ಒಳ್ಳೆ ಸಮಯ ಕಳೆಯೋಣ ಬಾ ಎಂದರು. ನಾನು ಎಷ್ಟೇ ಸಲ ಕರೆದರೂ ನೀನು ಬರುತ್ತಿಲ್ಲ ಅಲ್ವಾ, ಅಲ್ಲಿ ಯಾರೂ ಇರಲ್ಲ ನಾವಿಬ್ಬರೇ ಇರ್ತೀಬಿ ಬಾ ಅಂದ್ರು'' ಎಂದು ದೂರಿದ್ದಾರೆ.

ಯುಬಿ ಸಿಟಿ ಘಟನೆ
ಜುಲೈ ತಿಂಗಳಲ್ಲಿ ಯುಬಿ ಸಿಟಿಯಲ್ಲಿ ಶೂಟಿಂಗ್ ಇತ್ತು. ಈ ಮಧ್ಯೆ ನಾನು ಲಾಬಿಯಲ್ಲಿ ನಿಂತಿದ್ದೆ. ಹಿಂದೆಯಿಂದ ಬಂದು ಹಿಡಿದುಕೊಂಡ ಸರ್ಜಾ ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡ್ರು. ಯಾಕೆ ಇಲ್ಲಿ ಒಬ್ಬಳೇ ಕೂತಿದ್ದೀಯಾ, ಬಾ ನನ್ನ ರೂಂಗೆ ಹೋಗೋಣ ಅಂದ್ರು. ನನ್ನ ದೇಹದ ಮೇಲೆ ಕೈಹಾಕಿದರು. ಆದ್ರೆ, ನಾನು ಬರೋದಿಲ್ಲ ಎಂದು ಬಿಡಿಸಿಕೊಂಡು ಎದ್ದು ಹೋದೆ'' ಎಂದು ದೂರಿದ್ದಾರೆ.

ನಿನ್ನ ಸಿನಿ ಜೀವನ ಮುಗಿಸ್ತೀನಿ ಅಂದ್ರು
'ಒಂದಲ್ಲಾ ಒಂದು ದಿನ ನೀನಾಗಿ ನನ್ನ ರೂಂಗೆ ಬರುವಂತೆ ಮಾಡ್ತೀನಿ ಅಂದ್ರು. ನನಗೆ ತುಂಬಾ ಬೇಸರವಾಯ್ತು ವಿರೋಧಿಸಿದ್ದೆ. ಆಗ ನನ್ನ ಮೇಲೆ ಗರಂ ಆದ ಸರ್ಜಾ ಈ ವಿಷ್ಯ ಯಾರಿಗಾದರೂ ಹೇಳಿದ್ರೆ ನಿನ್ನ ಸಿನಿ ಜೀವನ ಮುಗಿಸ್ತೀನಿ' ಅಂತ ಬೆದರಿಕೆ ಹಾಕಿದ್ರು ಎಂದು ಶ್ರುತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ರಿಹರ್ಸಲ್ ವಿಷ್ಯ ಕೂಡ ಪ್ರಸ್ತಾಪ
ಈ ಹಿಂದೆ ಮೀಟೂ ಅಭಿಯಾನದಲ್ಲಿ ಶ್ರುತಿ ಮಾಡಿದ್ದ ರಿಹರ್ಸಲ್ ವಿಷ್ಯವನ್ನ ಕೂಡ ಇಲ್ಲಿ ಉಲ್ಲೇಖಿಸಿದ್ದಾರೆ. ಹೆಬ್ಬಾಳದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಶೂಟಿಂಗ್ ನಡೆಯುವಾಗ, ರಿಹರ್ಸಲ್ ಇತ್ತು. ಒಂದು ಡೈಲಾಗ್ ಹೇಳಿ ನಂತರ ತಬ್ಬಿಕೊಳ್ಳುವ ದೃಶ್ಯವಿತ್ತು. ಇದನ್ನ ದುರುಪಯೋಗಪಡಿಸಿಕೊಂಡ ಸರ್ಜಾ, ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡು ಅಸಭ್ಯವಾಗಿ ವರ್ತಿಸಿದ್ದರು. ನಾನು ಈ ಬಗ್ಗೆ ನಿರ್ದೇಶಕರಿಗೆ ಹೇಳಿ ಇನ್ಮುಂದೆ ರಿಹರ್ಸಲ್ ಮಾಡಲ್ಲ ಎಂದಿದ್ದೆ ಎಂದು ಶ್ರುತಿ ನೀಡಿರುವ ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ.


Click it and Unblock the Notifications











