ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: 'ನಾತಿಚರಾಮಿ' ಚಿತ್ರಕ್ಕೆ 5 ಪ್ರಶಸ್ತಿಯ ಗರಿ
66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರ ಪಟ್ಟಿಪ್ರಕಟವಾಗಿದೆ. ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಪ್ರಶಸ್ತಿ ಪಟ್ಟಿಗೆ ಈ ಮುಂಚೆಯೇ ಸಹಿ ಹಾಕಿದ್ದರು. ಆದರೆ, ಲೋಕಸಭೆ ಚುನಾವಣೆ 2019 ಹಿನ್ನಲೆಯಲ್ಲಿ ಪ್ರಶಸ್ತಿ ಘೋಷಣೆ ವಿಳಂಬವಾಗಿತ್ತು.
ಅಂಧಾಧುನ್(ಹಿಂದಿ) ಚಿತ್ರದ ನಟನೆಗಾಗಿ ಆಯುಷ್ಮಾನ್ ಖುರಾನಾ ಹಾಗೂ ಉರಿ ಚಿತ್ರದ ನಟನೆಗಾಗಿ ವಿಕ್ಕಿ ಕೌಶಲ್ ಅತ್ಯುತ್ತಮ ನಟ ಪ್ರಶಸ್ತಿ ಬಾಚಿಕೊಂಡಿದ್ದಾರೆ. ಮಹಾನಟಿ(ತೆಲುಗು) ಚಿತ್ರದ ನಟನೆಗಾಗಿ ಕೀರ್ತಿ ಸುರೇಶ್ ಅತ್ಯುತ್ತಮ ನಟಿ ಪ್ರಶಸ್ತಿ ಗೆ ಪಾತ್ರರಾಗಿದ್ದಾರೆ. ಶ್ರೇಷ್ಠ ನಿರ್ದೇಶಕ ಪ್ರಶಸ್ತಿ ಉರಿ ಚಿತ್ರದ ನಿರ್ದೇಶಕ ಆದಿತ್ಯ ಧರ್ ಪಾಲಾಗಿದೆ.
ಕನ್ನಡ ಚಿತ್ರಗಳು ಈ ಬಾರಿ ಒಟ್ಟು 12 ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ವಿಶೇಷ ಅಂದ್ರೆ ನಾತಿಚರಾಮಿ ಒಂದೇ ಚಿತ್ರ 5 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ನಿರ್ದೇಶಕ ಮನ್ಸೂರೆ ಸಾರಥ್ಯದಲ್ಲಿ ಮೂಡಿ ಬಂದಿರುವ ಸಿನಿಮಾ ನಾತಿಚರಾಮಿ. ಐದು ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಖುಷಿಯಲ್ಲಿದ್ದಾರೆ ನಿರ್ದೇಶಕ ಮನ್ಸೂರೆ.

ಅತ್ಯುತ್ತಮ ಪ್ರಾದೇಶಿಕ ಸಿನಿಮಾ ನಾತಿಚರಾಮಿ
ನಾತಿಚರಾಮಿ ಪ್ರಾದೇಶಿಕ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಮುಗಿಡೇರಿಸಿಕೊಂಡಿದ್ದಾರೆ. ನಟಿ ಶ್ರುತಿ ಹರಿಹರನ್ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಸೇರಿದಂತೆ ಅನೇಕ ಕಲಾವಿದರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ನಾತಿಚರಾಮಿ ಮಹಿಳಾ ಪ್ರಧಾನ ಸಿನಿಮಾ. ಈಗಾಗಲೆ ಅನೇಕ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲಿ ಭಾಗಿಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡ ಸಿನಿಮಾ.

ಅತ್ಯುತ್ತಮ ಹಿನ್ನಲೆ ಗಾಯಕಿ- ಬಿಂದು ಮಾಲಿನಿ
ಪ್ರಾದೇಶಿಕ ವಿಭಾಗದಲ್ಲಿ ಉತ್ತಮ ಚಿತ್ರ ಪ್ರಶಸ್ತಿ ಮುಡಿ ಗೇರಿಸಿಕೊಳ್ಳುತ್ತಿದ್ದಂತೆ ಅತ್ಯುತ್ತಮ ಹಿನ್ನಲೆ ಗಾಯಕಿ ಪ್ರಶಸ್ತಿ ಕೂಡ ಬಂದಿದೆ. ಗಾಯಕಿ ಬಿಂದು ಮಾಲಿನಿ ಅತ್ಯುತ್ತಮ ಹಿನ್ನಲ್ಲೆ ಗಾಯಕಿ ಪ್ರಶಸ್ತಿಯನ್ನು ಗೆದ್ದು ಬೀಗಿದ್ದಾರೆ. "ಮಾಯಾವಿ ಮನವೆ" ಹಾಡಿಗೆ ಪ್ರಶಸ್ತಿ ಬಂದಿದೆ. ವಿಶೇಷ ಅಂದ್ರೆ ಚಿತ್ರಕ್ಕೆ ಧ್ವನಿ ನೀಡಿದ್ದಲ್ಲದೆ ಬಿಂದು ಸಂಗೀತ ನಿರ್ದೇಶನ ಕೂಡ ಮಾಡಿದ್ದಾರೆ.

ಉತ್ತಮ ಸಾಹಿತಿ- ಮನ್ಸೂರೆ
ಇನ್ನು ನಾತಿಚರಾಮಿ ಚಿತ್ರದ ಸಾಹಿತ್ಯ ವಿಭಾಗಕ್ಕು ಪ್ರಶಸ್ತಿ ಬಂದಿದೆ. ಅತ್ಯುತ್ತಮ ಚಿತ್ರಸಾಹಿತಿ ನಿರ್ದೇಶಕ ಮನ್ಸೂರೆ ಪಾಲಾಗಿದೆ. ಮಾಯಾವಿ ಮನವೆ ಹಾಡಿನ ಸಾಹಿತ್ಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ ಮನ್ಸೂರೆ ಸಾಹಿತ್ಯ ಬರೆಯುವುದು ಅಪರೂಪಕ್ಕೆ ಅಂತೆ. ಅಲ್ಲದೆ ಈ ಚಿತ್ರದ ಹಾಡಿಗಾಗಿ ಅನೇಕರ ಬಳಿ ಬರೆಸಿದ್ದಾರಂತೆ. ಆದ್ರೆ ಅವರಿಗೆ ಮನಸ್ಸಿಗೆ ಸಮಾಧಾನ ಆಗದ ಕಾರಣ "ಮಾಯಾವಿ ಮನವೆ" ಹಾಡನ್ನು ತುಂಬ ತಲೆಕೆಡಿಸಿಕೊಂಡು ಅವರೆ ಬರೆದಿದ್ದರಂತೆ. ಅವರ ಶ್ರಮಕ್ಕೀಗ ಪ್ರತಿಫಲ ಸಿಕ್ಕಿದೆ.

ಅತ್ಯುತ್ತಮ ಸಂಕಲನ- ನಾಗೇಂದ್ರ ಕೆ ಉಜ್ಜನಿ
ಅತ್ಯುತ್ತಮ ಸಂಕಲನ ವಿಭಾಗ ಕೂಡ ನಾತಿಚರಾಮಿ ಚಿತ್ರದ ಪಾಲಾಗಿದೆ. ಚಿತ್ರದ ಸಂಕಲನಕಾರನಾಗಿ ನಾಗೇಂದ್ರ ಕೆ ಉಜ್ಜನಿ ಕೆಲಸ ಮಾಡಿದ್ದಾರೆ. ಚಿತ್ರದ ಅತ್ಯುತ್ತಮ ಸಂಕಲನಕ್ಕಾಗಿ ನಾಗೇಂದ್ರ ರಾಷ್ಟ್ರಪ್ರಶಸ್ತಿಯನ್ನು ಗೆದ್ದು ಬೀಗಿದ್ದಾರೆ.

ತೀರ್ಪುಗಾರರ ವಿಶೇಷ ಪ್ರಶಸ್ತಿ- ಶ್ರುತಿ ಹರಿಹರನ್
ನಾತಿಚರಾಮಿ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿರುವ ಶ್ರುತಿ ಹರಿಹರನ್ ಅವರಿಗೆ ತೀರ್ಪುಗಾರರ ವಿಶೇಷ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಚಿತ್ರದಲ್ಲಿ ಅದ್ಭುತ ಅಭಿನಯದ ಮೂಲಕ ತೀರ್ಪುಗಾರರ ಗಮನಸೆಳೆದಿರುವ ಶ್ರುತಿ ಹರಿಹರನ್ ಈ ಬಾರಿಯ ರಾಷ್ಟಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಫಿಲ್ಮಿಬೀಟ್ ಜೊತೆ ಸಂತಸ ಹಂಚಿಕೊಂಡ ನಿರ್ದೇಶಕ ಮನ್ಸೂರೆ
"ಮನ್ಸೂರೆ ನಿರ್ದೇಶನದಲ್ಲಿ ಮೂಡಿ ಬಂದಿರುವ ನಾತಿಚರಾಮಿ ಚಿತ್ರಕ್ಕೆ 5 ಪ್ರಶಸ್ತಿ ಬಂದಿರುವ ಖುಷಿಯನ್ನು ಫಿಲ್ಮಿಬೀಟ್ ಕನ್ನಡದ ಜೊತೆ ಹಂಚಿಕೊಂಡಿದ್ದಾರೆ. "ಏನು ಹೇಳಬೇಕು, ಏನು ಮಾತನಾಡಬೇಕು ಎನ್ನುವುದೆ ಗೊತ್ತಾಗತ್ತಿಲ್ಲ. ಯಾವುದಾದರು ಒಂದು ವಿಭಾಗದಲ್ಲಿ ಪ್ರಶಸ್ತಿ ಬರಬಹುದು ಅಂತ ಅಂದುಕೊಂಡಿದ್ದೆ. ಆದ್ರೆ 5 ವಿಭಾಗದಲ್ಲಿ ಬಂದಿರುವುದು ಅರಗಿಸಿಕೊಳ್ಳಲು ಆಗುತ್ತಿಲ್ಲ. ತುಂಬಾ ಖುಷಿಯಾಗುತ್ತಿದೆ. ನನ್ನ ಜೊತೆಗೆ ಕನ್ನಡದಲ್ಲಿ ಬೇರೆ ಸಿನಿಮಾಗೂ ಬಂದಿದೆ ಖುಷಿಯಾಗುತ್ತಿದೆ. ಏನು ಹೇಳಬೇಕೆಂದೆ ಗೊತ್ತಾಗುತ್ತಿಲ್ಲ. ಬಿಂದು ಸುಮ್ಮನೆ ಸಂಗೀತ ಮಾಡಬೇಕು ಅಂತ ಮಾಡಿಲ್ಲ. ಬಿಂದು ಮಾಲಿನಿ ಅವರೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಾಹಿತ್ಯವನ್ನು ತುಂಬ ತಲೆಕೆಡಿಸಿಕೊಂಡು ಬರೆದಿದ್ದೀನಿ. ಸಾಹಿತ್ಯಕ್ಕೆ ಬಂದಿರುವುದು ಕೂಡ ತುಂಬ ಖುಷಿಯಾಗುತ್ತಿದೆ"ಎಂದು ಹೇಳಿದ್ದಾರೆ.


Click it and Unblock the Notifications











