ಬಾಲಿವುಡ್ ಸಿನಿಮಾಗಳನ್ನು ನೋಡಲು ನಮ್ಮ ಮಕ್ಕಳು ಹಿಂದಿ ಕಲಿಬೇಕಾ? ಮಾಜಿ ಸಚಿವರ ಹೇಳಿಕೆಗೆ ಆಕ್ರೋಶ
ಈ ವರ್ಷದಿಂದಲೇ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ತೃತೀಯ ಭಾಷೆಯ ಅಂಕವನ್ನು ಪರಿಗಣಿಸದಿರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಹಿಂದಿ ಭಾಷೆಯನ್ನು ಕಲಿಯುವುದರಲ್ಲಿ ಸರ್ಕಾರದ ವಿರೋಧವಿಲ್ಲ, ಆದರೆ ಅದು ಪರೀಕ್ಷೆಯ ಅಂಕಗಳಿಗೆ ಕಡ್ಡಾಯವಾಗಬಾರದು ಎಂದು ಕೂಡ ಹೇಳಿದೆ. ರಾಜ್ಯದ ಶಾಲೆಗಳಲ್ಲಿ ತೃತೀಯ ಭಾಷೆಯಾಗಿ ಹಿಂದಿ ಭಾಷೆಯನ್ನು ಬಹುತೇಕ ಶಾಲೆಗಳಲ್ಲಿ ಕಲಿಸಲಾಗುತ್ತಿದೆ. ಹಾಗಾಗಿ ಹಿಂದಿ ಭಾಷೆಯ ವಿರುದ್ಧ ಕೈಗೊಂಡಿರುವ ನಿರ್ಧಾರ ಇದು ಎನ್ನುವುದು ಕೆಲವರ ಆರೋಪ.
ಸರ್ಕಾರದ ನಿರ್ಧಾರವನ್ನು ಸಾಕಷ್ಟು ಜನ ಸ್ವಾಗತಿಸಿದ್ದಾರೆ. ಇದರಿಂದ ಮಕ್ಕಳ ಮೇಲಿನ ಒತ್ತಡ ಕಮ್ಮಿ ಆಗುತ್ತದೆ ಎಂದು ಹೇಳುತ್ತಿದ್ದಾರೆ. ಪ್ರತಿಪಕ್ಷ ಬಿಜೆಪಿ ಸೇರಿ ಹಲವರು ಇದನ್ನು ವಿರೋಧಿಸುತ್ತಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷೆ ಇನ್ನೆರಡು ದಿನ ಇರುವಾಗ ಸರ್ಕಾರ ಕೈಗೊಂಡ ನಿರ್ಧಾರ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸುತ್ತಿದ್ದಾರೆ. ಮಾಜಿ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಕೂಡ ಈ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

ಫೇಸ್ಬುಕ್ನಲ್ಲಿ ಈ ಬಗ್ಗೆ ಸುರೇಶ್ ಕುಮಾರ್ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. "ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಲೆ ಇಲ್ಲವೇ?" ಎಂದು ಅವರು ಪ್ರಶ್ನಿಸಿದ್ದಾರೆ. "ಪರೀಕ್ಷೆ ನಡೆಸುವುದು, ಅದರಲ್ಲಿಯೂ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುವುದು ಹುಡುಗಾಟಕೆಯಾಗಬಾರದು. ಪರೀಕ್ಷೆ ಕೇವಲ ಮೂರು ದಿನ ಇರುವಾಗ ಆ ಪರೀಕ್ಷೆಗೆ ಮನ್ನಣೆ ಇಲ್ಲವೆಂದು ಘೋಷಿಸುವುದು ಮಕ್ಕಳ ಪರಿಶ್ರಮಕ್ಕೆ ಬಗೆದ ಒಂದು ದ್ರೋಹವೆಂದರೆ ತಪ್ಪಾಗಲಾರದು. ಎಸ್ಎಸ್ಎಲ್ಸಿ ಪರೀಕ್ಷೆಗಳ ನಡುವೆಯೇ ಹಿಂದಿಯನ್ನು ಮೌಲ್ಯಾಂಕಕ್ಕೆ ಪರಿಗಣಿಸುವುದಿಲ್ಲವೆಂಬ ಸರ್ಕಾರದ ಹೇಳಿಕೆ ಅತ್ಯಂತ ಬೇಜವಾಬ್ದಾರಿ ಮತ್ತು ವಿದ್ಯಾರ್ಥಿ ವಿರೋಧಿ ಕ್ರಮವಾಗಿದೆ." ಎಂದಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿ ಏಷ್ಯಾನೆಟ್ ಸುವರ್ಣ ವಾಹಿನಿಗೆ ಮಾಜಿ ಸಚಿವರಾದ ಸುರೇಶ್ ಕುಮಾರ್ ಹೇಳಿಕೆ ನೋಡಿದ್ದಾರೆ. ದೂರವಾಣಿ ಸಂಪರ್ಕದಲ್ಲಿ ಅವರು ಮಾತನಾಡಿದ್ದಾರೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಬಾಲಿವುಡ್ ಸಿನಿಮಾಗಳನ್ನು ನೋಡಲು ಹಿಂದಿ ಭಾಷೆ ಕಲಿತಿದ್ದರೆ ಉಪಯೋಗವಾಗುತ್ತದೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಇದು ಕೆಲವರ ಬೇಸರಕ್ಕೆ ಕಾರಣವಾಗಿದೆ. ನಮ್ಮ ಮಕ್ಕಳು ಹಿಂದಿ ಸಿನಿಮಾಗಳನ್ನು ನೋಡಿ 10 ವರ್ಷ ಹಿಂದಿ ಭಾಷೆಯನ್ನು ಶಾಲೆಯಲ್ಲಿ ಕಲಿಯಬೇಕೇ? ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಈಗಾಗಲೇ ಕರ್ನಾಟಕದಲ್ಲಿ ಡಬ್ಬಿಂಗ್ ಸಿನಿಮಾ ಪ್ರದರ್ಶನಕ್ಕೆ ಅನುಮತಿಯಿದೆ. ಹಿಂದಿ ಸಿನಿಮಾಗಳು ಕೂಡ ಕನ್ನಡಕ್ಕೆ ಡಬ್ ಆಗಿ ಬರ್ತಿವೆ. ಆ ಸಿನಿಮಾಗಳನ್ನು ನೋಡಲು ಮಕ್ಕಳು ಹಿಂದಿ ಕಲಿಯಬೇಕಿಲ್ಲ ಎಂದು ತಿರುಗೇಟು ನೀಡುತ್ತಿದ್ದಾರೆ. ವಾಸ್ತವದಲ್ಲಿ ಇದು ನಿಜ ಕೂಡ ಹೌದು. ಪರಭಾಷಾ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ಬರ್ತಿವೆ. ನಿಧಾನವಾಗಿ ಅದಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. 'ಧುರಂಧರ್-2' ಸಿನಿಮಾ ಕನ್ನಡ ಡಬ್ಬಿಂಗ್ ವರ್ಷನ್ ಒಂದೇ ವಾರದಲ್ಲಿ 1 ಕೋಟಿ ರೂ. ಕಲೆಕ್ಷನ್ ಮಾಡಿದೆ. ಕನ್ನಡಕ್ಕೆ ಹೆಚ್ಚು ಶೋ ಕೊಡುವಂತೆ ಬೇಡಿಕೆ ಶುರುವಾಗಿದೆ.
ಸುರೇಶ್ ಕುಮಾರ್ ಮಾತನಾಡಿ "ಮಕ್ಕಳು ಎಲ್ಲಾ ಭಾಷೆಗಳನ್ನು ಕಲಿಯಬೇಕು. ಅವರನ್ನು ಫೇಲ್ ಮಾಡಬೇಡಿ. ಆದರೆ ಅವರು ಕಲಿತಿದ್ದಕ್ಕೆ ಫಲಿತಾಂಶ ಸಿಗಬೇಕು.. ಭಾಷೆ ಒಂದು ಶಕ್ತಿ, ಅಸ್ತ್ರ.. ಮಕ್ಕಳ ಮೇಲೆ ಒತ್ತಡ ಹೇರಬಾರದು. ಆಸಕ್ತಿ ಹೆಚ್ಚಿಸಬೇಕು. ಈ ಭಾಷೆಯಿಂದ ಮುಂದೆ ಹೆಚ್ಚು ಜನರ ಸಂಪರ್ಕ ಗಳಿಸುವ ಅವಕಾಶ ನಮ್ಮ ಮಕ್ಕಳು ಕಳೆದುಕೊಳ್ತಾರೆ. ಉದಾಹರಣೆಗೆ 'ಧುರಂಧರ್-2' ಸಿನಿಮಾ ಬಂದಿದೆ. ಬೆಂಗಳೂರಿನಲ್ಲಿ ಒಂದೇ ಜಾಗದಲ್ಲಿ 36 ಶೋ ನಡೀತಿದೆ.. ಜನ ಹೋಗ್ತಿದ್ದಾರೆ. ಭಾಷೆ ಮೀರಿ ಅವರಿಗೆ ಭಾವನೆ ಅರ್ಥ ಆಗ್ತಿದೆ. ಇಂತಹ ಸಮಯದಲ್ಲಿ ಭಾಷೆ ಕಲಿತಷ್ಟು ಒಬ್ಬ ವ್ಯಕ್ತಿ ಹೆಚ್ಚು ಶ್ರೀಮಂತನಾಗುತ್ತಾನೆ" ಎಂದಿದ್ದಾರೆ.
ಬಾಲಿವುಡ್ ಸಿನಿಮಾಗಳನ್ನು ನೋಡಿ ಉತ್ತರ ಭಾರತದವರನ್ನು ಉದ್ಧಾರ ಮಾಡಲು ನಮ್ಮ ಮಕ್ಕಳು ಹಿಂದಿ ಭಾಷೆ ಕಲಿಬೇಕಾ? ಎಂದು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪರ ವಿರೋಧ ಚರ್ಚೆ ಜೋರಾಗಿದೆ.


Click it and Unblock the Notifications











