ಐಪಿಎಲ್ ಪಂದ್ಯಕ್ಕೆ ದರ್ಶನ್ ಫೋಟೋ ತಂದವನನ್ನು ಸ್ಟೇಡಿಯಂನಿಂದ ಹೊರದಬ್ಬಿದ ಸಿಬ್ಬಂದಿ
ಬುಧವಾರ(ಏಪ್ರಿಲ್ 2) ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಆರ್ಸಿಬಿ ಎದುರು ಜಿಟಿ ಗೆಲುವಿನ ನಗೆ ಬೀರಿತು. ಸಾವಿರಾರು ಅಭಿಮಾನಿಗಳು ನೇರವಾಗಿ ಪಂದ್ಯಕ್ಕೆ ಸಾಕ್ಷಿ ಆಗಿದ್ದರು. ಕೋಟ್ಯಂತರ ಜನ ಟಿವಿಯಲ್ಲಿ ಪಂದ್ಯ ವೀಕ್ಷಿಸಿದ್ದರು. ಇನ್ನು ಪಂದ್ಯ ವೀಕ್ಷಿಸಲು ಅಭಿಮಾನಿಯೊಬ್ಬ ನಟ ದರ್ಶನ್ ಫೋಟೊ ಹಿಡಿದು ಸ್ಟೇಡಿಯಂಗೆ ಬಂದಿದ್ದ. ಆದರೆ ಆತನನ್ನು ಗೇಟ್ನಲ್ಲಿ ಸಿಬ್ಬಂದಿ ತಡೆದರು.
ರಾತ್ರಿ 8 ಗಂಟೆಗೆ ಆರಂಭವಾದ ಪಂದ್ಯ ಮದ್ಯರಾತ್ರಿವರೆಗೆ ಮುಂದುವರೆಯಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಗುಜರಾತ್ ಟೈಟನ್ಸ್ (GT) 8 ವಿಕೆಟ್ಗಳಿಂದ ಸೋಲಿಸಿತು. ಮೊದಲ 2 ಪಂದ್ಯಗಳಲ್ಲಿ ಗೆದ್ದಿದ್ದ ಆರ್ಸಿಬಿ 3ನೇ ಪಂದ್ಯದಲ್ಲಿ ನಿರಾಸೆ ಅನುಭವಿಸಿತು.

ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ಸಿಬಿ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 169 ಗಳಿಸಿತು. 170 ರನ್ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಜಿಟಿ ತಂಡ 13 ಎಸೆತಗಳು ಬಾಕಿ ಇರುವಂತೆ 2 ವಿಕೆಟ್ ಮಾತ್ರ ಕಳೆದುಕೊಂಡು ಗುರಿ ತಲುಪಿತು. ಆರ್ಸಿಬಿ ಸೋಲು ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿದೆ. ಪಂದ್ಯ ವೀಕ್ಷಿಸಲು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗಿದ್ದವರು ನಿರಾಸೆಯಿಂದ ಮರಳಿದ್ದರು.
ಸಂಜೆ 4 ಗಂಟೆಯಿಂದಲೇ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣ ಪ್ರವೇಶಿಸಲು ಆರಂಭಿಸಿದ್ದರು. ಈ ನಡುವೆ ದರ್ಶನ್ ಫೋಟೊ ಹಿಡಿದಿದ್ದ ಅಭಿಮಾನಿಯೊಬ್ಬ ಗುಂಪಿನಲ್ಲಿ ಮುಖ್ಯದ್ವಾರದ ಮೂಲಕ ಕ್ರೀಡಾಂಗಣದ ಒಳಗೆ ಹೋಗಲು ಮುಂದಾಗಿದ್ದ. ಆದರೆ ಅಲ್ಲಿಂದ ಸಿಬ್ಬಂದಿ ಆತನನ್ನು ತಡೆದ್ದರು. ಶರ್ಟ್ ಪಟ್ಟಿ ಹಿಡಿದು ಹೊರಗಡೆ ಕರೆದುಕೊಂಡು ಹೋಗಿ ಬಿಟ್ಟರು.
ಸಿಬ್ಬಂದಿ ಪ್ರವೇಶ ನಿರಾಕರಿಸುತ್ತಿದ್ದಂತೆ ಆತ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಒಳಗೆ ಹೋಗಲು ಮುಂದಾಗಿದ್ದಾನೆ. ಆದರೆ ಸಿಬ್ಬಂದಿ ಅದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಇತ್ತೀಚೆಗೆ ಸಭೆ, ಸಮಾರಂಭ, ಜಾತ್ರೆ ಮಹೋತ್ಸವಗಳಲ್ಲಿ ಹೀಗೆ ನೆಚ್ಚಿನ ನಟರ ಫೋಟೊಗಳನ್ನು ಹಿಡಿದು ಅಭಿಮಾನಿಗಳು ಕುಣಿದಾಡುತ್ತಾರೆ. ತಮ್ಮ ಅಭಿಮಾನ ಮೆರೆಯುವ ಪ್ರಯತ್ನ ಮಾಡುತ್ತಾರೆ. ಅದೇ ರೀತಿ ಬುಧವಾರ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ RCB vs GT ವೇಳೆ ದರ್ಶನ್ ಫೋಟೊ ಹಿಡಿದು ಸಂಭ್ರಮಿಸಲು ಅಭಿಮಾನಿ ಮುಂದಾಗಿದ್ದ. ಸದ್ಯ ಈ ವೀಡಿಯೋ ವೈರಲ್ ಆಗ್ತಿದೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಆರೋಪಿಯಾಗಿದ್ದಾರೆ. 5 ತಿಂಗಳ ಕಾಲ ಜೈಲಿನಲ್ಲಿದ್ದು ಬಳಿಕ ಜಾಮೀನು ಪಡೆದು ಬಿಡುಗಡೆ ಆಗಿದ್ದರು. ದರ್ಶನ್ ಕೊಲೆ ಆರೋಪಿ, ಹಾಗಾಗಿ ಫೋಟೋವನ್ನು ಚಿನ್ನಸ್ವಾಮಿ ಕ್ರೀಡಾಂಗಣದ ಒಳಕ್ಕೆ ಸಿಬ್ಬಂದಿ ಬಿಟ್ಟಿಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ದರ್ಶನ್ ಕೊಲೆ ಪ್ರಕರಣದಲ್ಲಿ ಆರೋಪಿ ಆಗಿದ್ದರೂ ಅಭಿಮಾನಿಗಳು ಮಾತ್ರ ನೆಚ್ಚಿನ ನಟನನ್ನು ಬೆಂಬಲಿಸುತ್ತಾ ಬರುತ್ತಿದ್ದಾರೆ.
ಕಳೆದ ವರ್ಷ ಜೂನ್ನಲ್ಲಿ ರೇಣುಕಾಸ್ವಾಮಿ ಪ್ರಕರಣ ಬೆಳಕಿಗೆ ಬಂದಿತ್ತು. ಬಳಿಕ ದರ್ಶನ್, ಪ್ರೇಯಸಿ ಪವಿತ್ರಾ ಗೌಡ ಸೇರಿ 16 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾತ್ತು.
ಡಿಸೆಂಬರ್ ವೇಳೆಗೆ ಎಲ್ಲಾ ಆರೋಪಿಗಳು ಜಾಮೀನು ಪಡೆದು ಬಿಡುಗಡೆ ಆಗಿದ್ದರು. ಅದಕ್ಕೂ ಮುನ್ನ ಅಂದರೆ ಅಕ್ಟೋಬರ್ 30ರಂದು ದರ್ಶನ್ ಮಧ್ಯಂತರ ಜಾಮೀನು ಪಡೆದಿದ್ದರು. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಚಿಕಿತ್ಸೆಗಾಗಿ 6 ವಾರಗಳ ಮಧ್ಯಂತರ ಜಾಮೀನು ಸಿಕ್ಕಿತ್ತು. ಬಳಿಕ ರೆಗ್ಯೂಲರ್ ಜಾಮೀನು ಸಿಕ್ಕಿತ್ತು. ಜೈಲಿನಿಂದ ಹೊರಬಂದ ಬಳಿಕ ದರ್ಶನ್ ಬೆನ್ನು ನೋವಿನ ಕಾರಣ ವಿಶ್ರಾಂತಿ ಪಡೆದಿದ್ದರಿ. ಇತ್ತೀಚೆಗೆ ಮತ್ತೆ 'ಡೆವಿಲ್' ಸಿನಿಮಾ ಚಿತ್ರೀಕರಣಕ್ಕೆ ಹಾಜರಾಗುತ್ತಿದ್ದಾರೆ.


Click it and Unblock the Notifications











