ಸದ್ಯಕ್ಕಿಲ್ಲ 100% ಅವಕಾಶ: ಅತಂತ್ರ ಸ್ಥಿತಿಯಲ್ಲಿ ಸ್ಟಾರ್ ನಟರ ಚಿತ್ರಗಳು
ಆಗಸ್ಟ್ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ಚಿತ್ರಮಂದಿರಗಳಿಗೆ 100% ಆಸನ ಭರ್ತಿಯೊಂದಿಗೆ ಪ್ರದರ್ಶನ ಮಾಡಲು ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಈ ನಿರೀಕ್ಷೆಯ ಹುಸಿಯಾಗಿದೆ. ಸದ್ಯಕ್ಕೆ ಥಿಯೇಟರ್ಗಳಿಗೆ 100% ಅನುಮತಿ ಸಿಗುವುದು ಬಹಳ ಕಷ್ಟವಾಗಿದೆ.
ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ನೇತೃತ್ವದಲ್ಲಿ ನಿಯೋಗವೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ 100 % ಅನುಮತಿ ಕೊಡಿ ಎಂದು ಮನವಿ ಮಾಡಿದರು. ಆದರೆ, ಫಿಲಂ ಚೇಂಬರ್ ಅವರಿಂದ ಮನವಿ ಸ್ವೀಕರಿಸಿದ ಸಿಎಂ ತಜ್ಞರ ವರದಿ, ಸಲಹೆ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂಬ ಭರವಸೆಯನ್ನಷ್ಟೇ ಕೊಟ್ಟಿದ್ದಾರೆ.
ಸದ್ಯ ಗಡಿ ಪ್ರದೇಶಗಳಲ್ಲಿ ಸೋಂಕು ಹೆಚ್ಚಿದೆ. ಹಾಗಾಗಿ, ಆ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದೇನೆ. ಅಲ್ಲಿಂದ ಹಿಂತಿರುಗಿದ ನಂತರ ತಜ್ಞರ ವರದಿ ಮತ್ತು ಸಲಹೆ ಪಡೆದು ನಿರ್ಧಾರ ತೆಗೆದುಕೊಳ್ಳುತ್ತೇನೆ, ಈ ತಕ್ಷಣಕ್ಕೆ 100% ಸಾಧ್ಯವಿಲ್ಲ ಎಂದು ಸಿಎಂ ತಿಳಿಸಿದರು. ಸರ್ಕಾರದ ಈ ನಿರ್ಧಾರದಿಂದ ಕೆಲವು ಸ್ಟಾರ್ ನಟರ ಚಿತ್ರಗಳು ಅತಂತ್ರ ಸ್ಥಿತಿ ಎದುರಿಸಬೇಕಿದೆ. ಮುಂದೆ ಓದಿ...

ಸಲಗ ಮುಂದಿನ ನಡೆ
100 ಪರ್ಸೆಂಟ್ ಅವಕಾಶ ಕೊಡುತ್ತಿದ್ದಂತೆ ಚಿತ್ರಮಂದಿರಕ್ಕೆ ಬರುವ ಮೊದಲ ಚಿತ್ರ ನಾವೇ ಎಂದು ಸಲಗ ಈ ಹಿಂದಿನಿಂದಲೂ ಹೇಳಿಕೊಂಡು ಬಂದಿದೆ. ಆಗಸ್ಟ್ ಮೊದಲ ಅಥವಾ ಎರಡನೇ ವಾರದಲ್ಲಿ 100 ಪರ್ಸೆಂಟ್ ಆಸನ ಭರ್ತಿಗೆ ಅನುಮತಿ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಬಿಡುಗಡೆ ದಿನಾಂಕ ಸಹ ಪ್ರಕಟಿಸಿದೆ. ಸರ್ಕಾರದ ಸದ್ಯದ ತೀರ್ಮಾನ ಗಮನಿಸಿದರೆ ಇನ್ನು ಸ್ವಲ್ಪ ದಿನ ಪೂರ್ಣ ಪ್ರಮಾಣದಲ್ಲಿ ಚಿತ್ರಮಂದಿರಗಳು ಕಾರ್ಯನಿರ್ವಹಿಸುವುದು ಬಹುತೇಕ ಅನುಮಾನ. ಈಗ ಸಲಗ ನಿರ್ಮಾಪಕ ನಡೆ ಏನು ಎನ್ನುವುದು ಪ್ರಶ್ನೆಯಾಗಿದೆ.

ಆಗಸ್ಟ್ 20ಕ್ಕೆ ಸಲಗ ಎಂಟ್ರಿ
ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಸಲಗ ಸಿನಿಮಾ ಚಿತ್ರಮಂದಿರಕ್ಕೆ ಬರಲಿದೆ. ಈಗಾಗಲೇ ಎರಡು ಬಾರಿ ಸಲಗ ಸಿನಿಮಾ ಬಿಡುಗಡೆಯ ದಿನಾಂಕವನ್ನು ನಿಗದಿ ಮಾಡಿ ಮುಂದೂಡಿಕೊಂಡಿತ್ತು. ಒಂದು ವೇಳೆ ಆಗಸ್ಟ್ 20ರವರೆಗೂ 50 ಪರ್ಸೆಂಟ್ ಮಾತ್ರ ಇದ್ದರೆ ಸಲಗ ಸಿನಿಮಾ ರಿಲೀಸ್ ಮಾಡಲು ನಿರ್ಮಾಪಕ ಕೆಪಿ ಶ್ರೀಕಾಂತ್ ಮುಂದಾಗ್ತಾರಾ ಅಥವಾ ಇನ್ನಷ್ಟು ದಿನ ಕಾಯ್ತೇವೆ ಎಂದು ಮುಂದೂಡಿಕೆ ಮಾಡ್ತಾರಾ ಎನ್ನುವುದು ಈಗ ಕುತೂಹಲ ಮೂಡಿಸಿದೆ.

'ನಿನ್ನ ಸನಿಹಕೆ' ಚಿತ್ರವೂ ಅದೇ ಬಿಡುಗಡೆ
ಸಲಗ ಬಿಡುಗಡೆ ದಿನವೇ ಡಾ ರಾಜ್ ಕುಮಾರ್ ಮೊಮ್ಮಗಳು ಅಭಿನಯದ 'ನಿನ್ನ ಸನಿಹಕೆ' ಚಿತ್ರವೂ ಥಿಯೇಟರ್ಗೆ ಬರಲಿದೆ. ಸೂರಜ್ ಗೌಡ ನಟಿಸಿ, ನಿರ್ದೇಶಿಸಿರುವ 'ನಿನ್ನ ಸನಿಹಕೆ' ಚಿತ್ರವೂ ವರಮಹಾಲಕ್ಷ್ಮಿ ಹಬ್ಬದ ವಿಶೇಷವಾಗಿ ಪ್ರೇಕ್ಷಕರೆದುರು ಬರುವುದಾಗಿ ಘೋಷಿಸಿಕೊಂಡಿದೆ. ಈಗ 50 ಪರ್ಸೆಂಟ್ ಮಾತ್ರ ಮುಂದುವರಿಯುವುದರಿಂದ ಈ ಚಿತ್ರದ ನಡೆ ಏನು ಎನ್ನುವುದು ಅಷ್ಟೇ ಕುತೂಹಲ ಇದೆ.

ಭಜರಂಗಿ 2 ಚಿತ್ರಕ್ಕೆ ಸಮಯ ಇದೆ
ಇನ್ನು ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಸಿನಿಮಾ ಸೆಪ್ಟೆಂಬರ್ 10 ರಂದು ತೆರೆಗೆ ಬರಲಿದೆ. ಹಾಗಾಗಿ, ಶಿವಣ್ಣನ ಸಿನಿಮಾ ಬರುವ ವೇಳೆ ಸರ್ಕಾರದಿಂದ ಪಾಸಿಟಿವ್ ಪ್ರತಿಕ್ರಿಯೆ ಸಿಗಬಹುದು. ಆದರೆ, ಸಲಗ ಮತ್ತು ನಿನ್ನ ಸನಿಹಕೆ ಚಿತ್ರಗಳಿಗೆ ಕೇವಲ 8 ದಿನ ಮಾತ್ರ ಸಮಯವಕಾಶ ಇರುವುದರಿಂದ ನಿಜಕ್ಕೂ ಅತಂತ್ರ ಸ್ಥಿತಿಯಲ್ಲಿದೆ.

ದೊಡ್ಡ ಚಿತ್ರಗಳು ಬಂದ್ರೆನೇ ಹೊಸಬರಿಗೂ ಸಹಾಯ
ಚಿತ್ರಮಂದಿರಗಳಿಗೆ 100% ಅವಕಾಶ ಕೊಡುವಂತೆ ಸಿಎಂ ಬಳಿ ಮನವಿ ಮಾಡಿದ ನಂತರ ಮಾತನಾಡಿದ ಸಾರಾ ಗೋವಿಂದು ''ಕಳೆದ ಎರಡು ವರ್ಷಗಳಿಂದ ಚಿತ್ರರಂಗದ ಸಮಸ್ಯೆ ಎದುರಿಸುತ್ತಿದೆ. ಈಗ 50 ಪರ್ಸೆಂಟ್ ಇರುವುದರಿಂದ ಯಾವುದೇ ಹೊಸ ಸಿನಿಮಾ ಬರ್ತಿಲ್ಲ. ದೊಡ್ಡ ಬಜೆಟ್ ಚಿತ್ರಗಳ ಥಿಯೇಟರ್ಗೆ ಬಂದರೆ ಹೊಸಬರ ಸಿನಿಮಾಗಳಿಗೂ ಸಹಾಯವಾಗುತ್ತದೆ. ಹಾಗಾಗಿ, 100 ಪರ್ಸೆಂಟ್ ಅವಕಾಶ ಕೊಡಿ'' ಎಂದು ವಿನಂತಿಸಿದರು.


Click it and Unblock the Notifications











