ಯುವ ಸಿನಿಮಾ ಕೈಬಿಟ್ಟು ಹೊಸ ಸಿನಿಮಾ ಕೈಗೆತ್ತಿಕೊಂಡ ದುನಿಯಾ ಸೂರಿ; ಮುಹೂರ್ತ ಫಿಕ್ಸ್
ಸ್ಟಾರ್ ನಟರು ವರ್ಷಕ್ಕೆರಡು ಸಿನಿಮಾ ಮಾಡಬೇಕು ಎನ್ನುವುದು ಕೆಲವರ ವಾದ. ಆದರೆ ಸ್ಟಾರ್ ನಿರ್ದೇಶಕರು ಏನ್ ಮಾಡ್ತಿದ್ದಾರೆ. ಸಂತೋಷ್ ಆನಂದ್ ರಾಮ್, ದುನಿಯಾ ಸೂರಿ, ಪವನ್ ಒಡೆಯರ್, ತರುಣ್ ಸುಧೀರ್, ನರ್ತನ್ ಹೀಗೆ ಪ್ರತಿಭಾನ್ವಿತ ನಿರ್ದೇಶಕರು ಸಿನಿಮಾ ಮಾಡಲು ಮೀನಾಮೇಷ ಎಣಿಸುತ್ತಿದ್ದಾರೆ. 'ಬ್ಯಾಡ್ ಮ್ಯಾನರ್ಸ್' ಬಳಿಕ ಯುವ ರಾಜ್ಕುಮಾರ್ ಕಾಂಬಿನೇಷನ್ನಲ್ಲಿ ಸೂರಿ ಸಿನಿಮಾ ಶುರುವಾಗಿತ್ತು. ಸದ್ಯಕ್ಕೆ ಆ ಸಿನಿಮಾ ನಿಂತು ಹೋಗಿದೆ.
'ಯುವ' ಹಾಗೂ 'ಎಕ್ಕ' ಸಿನಿಮಾಗಳ ಬಳಿಕ ಸೂರಿ ನಿರ್ದೇಶನದ ಚಿತ್ರಕ್ಕೆ ಯುವ ರಾಜ್ಕುಮಾರ್ ಸೈ ಎಂದಿದ್ದರು. ಸಿನಿಮಾ ಮುಹೂರ್ತ ಕೂಡ ನಡೆದಿತ್ತು. ದುನಿಯಾ ವಿಜಯ್ ಪುತ್ರಿ ರಿತನ್ಯಾ ನಾಯಕಿಯಾಗಿ ಆಯ್ಕೆ ಆಗಿದ್ದರು. ಪಿಆರ್ಕೆ ಪ್ರೊಡಕ್ಷನ್ಸ್, ಕೆಆರ್ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಬೇಕಿತ್ತು. ಆದರೆ ಕಥೆ, ಚಿತ್ರಕಥೆ ಸಿದ್ಧವಾಗದ ಕಾರಣ ಈ ಸಿನಿಮಾ ಕೈಬಿಟ್ಟು ಸೂರಿ ಮತ್ತೊಂದು ಚಿತ್ರಕ್ಕೆ ಮುಂದಾಗಿದ್ದಾರೆ ಎನ್ನಲಾಗ್ತಿದೆ.

ದುನಿಯಾ ಸೂರಿ ನಿರ್ದೇಶನದಲ್ಲಿ ಧ್ರುವ ಸರ್ಜಾ ನಟಿಸುತ್ತಾರೆ ಎಂದು ಗುಲ್ಲಾಗಿದೆ. ಅದೇ ನಿಜವಾಗುವ ಸುಳಿವು ಸಿಕ್ಕಿದೆ. ಇನ್ನೊಂದು ತಿಂಗಳಲ್ಲಿ ಸಿನಿಮಾ ಸೆಟ್ಟೇರಲಿದೆ. ಈಗಾಗಲೇ 'KD' ಸಿನಿಮಾ ಮುಗಿಸಿರುವ ಆಕ್ಷನ್ ಪ್ರಿನ್ಸ್ 'ಕ್ರಿಮಿನಲ್' ಎಂಬ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆ ಬಳಿಕ ಸೂರಿ ನಿರ್ದೇಶನದಲ್ಲಿ ನಟಿಸುವುದು ಪಕ್ಕಾ ಎನ್ನಲಾಗ್ತಿದೆ. ರಾ ಮೇಕಿಂಗ್ನಿಂದ ಗಮನ ಸೆಳೆದ ಸೂರಿ ಹಾಗೂ ಮಾಸ್ ಪರ್ಫಾರ್ಮರ್ ಧ್ರುವ ಕಾಂಬಿನೇಷನ್ ಕ್ಲಿಕ್ ಆಗುವ ಸುಳಿವು ಸಿಕ್ತಿದೆ. ಏಪ್ರಿಲ್ 30ಕ್ಕೆ 'KD' ಸಿನಿಮಾ ತೆರೆಗಪ್ಪಳಿಸಲಿದೆ. ವರ್ಷಾಂತ್ಯಕ್ಕೆ 'ಕ್ರಿಮಿನಲ್' ಚಿತ್ರಮಂದಿರಗಳಿಗೆ ಬರೋದು ಪಕ್ಕಾ. ಆ ಬಳಿಕ ಸೂರಿ- ಧ್ರುವ ಸಿನಿಮಾ ತೆರೆಮೇಲೆ ನೋಡಬಹುದು.
'ಭೈರತಿ ರಣಗಲ್' ಬಳಿಕ ಧ್ರುವ ಸರ್ಜಾ ಜೊತೆ ಸಿನಿಮಾ ಮಾಡಲು ನರ್ತನ್ ಮಾತುಕತೆ ನಡೆಸಿದ್ದರು. '777 ಚಾರ್ಲಿ' ಚಿತ್ರದ ನಿರ್ದೇಶಕ ಕಿರಣ್ ರಾಜ್ ಕೂಡ ಆಕ್ಷನ್ ಪ್ರಿನ್ಸ್ ಜೊತೆ ಸಿನಿಮಾ ಮಾಡುವ ಸಾಧ್ಯತೆಯಿದೆ. ಅದೆಲ್ಲದರ ನಡುವೆ ಸೂರಿ ಕಾಂಬಿನೇಷನ್ ಸಿನಿಮಾ ಫೈನಲ್ ಆಗ್ತಿದೆ. ಚಿತ್ರಕ್ಕೆ ನಿರ್ಮಾಪಕರು ಯಾರು? ಕಥೆ ಏನು? ನಾಯಕಿ ಯಾರು? ಎನ್ನುವ ಬಗ್ಗೆ ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಸಿಗಲಿದೆ.

'ಟಗರು' ಬಳಿಕ ಸೂರಿ ನಿರ್ದೇಶನದ ಸಿನಿಮಾಗಳು ಅಷ್ಟಾಗಿ ಸದ್ದು ಮಾಡಲಿಲ್ಲ. 'ಪಾಪ್ಕಾರ್ನ್ ಮಂಕಿಟೈಗರ್' ಹಾಗೂ 'ಬ್ಯಾಡ್ ಮ್ಯಾನರ್ಸ್' ಕೈಹಿಡಿಯಲಿಲ್ಲ. ಹಾಗಾಗಿ ಅಳೆದು ತೂಗಿ ಹೊಸ ಚಿತ್ರಕ್ಕೆ ಕೈ ಹಾಕುತ್ತಿದ್ದಾರೆ. ಗೆಲ್ಲಲೇಬೇಕು ಎನ್ನುವ ಹಠಕ್ಕೆ ಬಿದ್ದಿದ್ದಾರೆ. ಸೂರಿ ಸ್ಟಾರ್ ಡೈರೆಕ್ಟರ್ ಪಟ್ಟ ಪಡೆದಿದ್ದಾರೆ. ಹೀರೊ ಯಾರೇ ಆಗಿದ್ದರೂ ಸೂರಿ ಸಿನಿಮಾ ಎನ್ನುವ ಕಾರಣಕ್ಕೆ ಜನ ಮುಗಿಬಿದ್ದು ಸಿನಿಮಾ ನೋಡುತ್ತಾರೆ. ಇಂತಿಪ್ಪ ಸೂರಿ ಒಂದು ಸಿನಿಮಾ ಮಾಡಲು ಇಷ್ಟು ಸರ್ಕಸ್ ಮಾಡುತ್ತಿರುವುದು ಯಾಕೆ ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತಿದೆ.
'ಎಕ್ಕ' ಸಿನಿಮಾ ಸೋಲಿನ ಹಿನ್ನೆಲೆಯಲ್ಲಿ ಯುವ ರಾಜ್ಕುಮಾರ್ ಮುಂದಿನ ಸಿನಿಮಾ ಬಗ್ಗೆ ನಿರೀಕ್ಷೆ ಕಮ್ಮಿ ಆಗಿದೆ. ಅಪ್ಪು ಹುಟ್ಟುಹಬ್ಬ ಅಥವಾ ಅಣ್ಣಾವ್ರ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಘೋಷಿಸುವ ಸಾಧ್ಯತೆ ದಟ್ಟವಾಗಿದೆ. ಈ ಬಾರಿ ಕನ್ನಡ ಬದಲು ಪರಭಾಷಾ ನಿರ್ದೇಶಕರ ಜೊತೆ ಯುವ ಸಿನಿಮಾ ಮಾಡಬಹುದು ಎನ್ನುವ ಊಹಾಪೋಹ ಕೂಡ ಶುರುವಾಗಿದೆ. ಒಳ್ಳೆ ಸಿನಿಮಾಗಳಿಲ್ಲದೇ ಕನ್ನಡ ಚಿತ್ರರಂಗ ಸೊರಗುತ್ತಿದೆ. ಸ್ಟಾರ್ ನಟರು, ನಿರ್ದೇಶಕರು ಈ ದಿಸೆಯಲ್ಲಿ ಗಮನ ಹರಿಸಬೇಕಿದೆ.


Click it and Unblock the Notifications











