ಬಂಗಾರದ ಚಿಟ್ಟೆ ರನ್ಯಾ ರಾವ್ಗೆ ಒಂದು ವರ್ಷ ಜೈಲೇ ಗತಿ..!
ಹಣ ಕಂಡರೆ ಹೆಣ ಕೂಡ ಬಾಯಿ ಬೀಡುವ ಕಾಲ ಇದು. ಈ ಕಾಲದಲ್ಲಿ ದುಡ್ಡೊಂದಿದ್ದರೆ ಸಾಕು ಎಲ್ಲವನ್ನೂ ಪಡೆದುಕೊಳ್ಳಬಹುದು ಅನ್ನುವ ಮನಸ್ಥಿತಿ ಅನೇಕರದ್ದು. ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ.
ದುಡ್ಡಿಗಾಗಿ ಅನೇಕರು ಇಲ್ಲಿ ಆತ್ಮ ಸಾಕ್ಷಿಯನ್ನು ಮಾರಿಕೊಳ್ಳುತ್ತಾರೆ. ದೀಢೀರ್ ಶ್ರೀಮಂತರಾಗಲು ಅಡ್ಡದಾರಿಯನ್ನು ಹಿಡಿಯುತ್ತಾರೆ. ಮೋಸ, ಸುಲಿಗೆ, ವಂಚನೆಯ ಪ್ರಕರಣದಲ್ಲಿ ಕೂಡ ಸಿಲುಕಿಕೊಳ್ಳುತ್ತಾರೆ. ಇದಕ್ಕೆ ಭಾರತೀಯ ಚಿತ್ರರಂಗದಲ್ಲಿ
ರಾಶಿ ರಾಶಿ ಉದಾಹರಣೆಗಳಿವೆ. ಈ ಸಾಲಿಗೆ ಸೇರಿಕೊಂಡಿರುವ ಮಾಣಿಕ್ಯ ಚಿತ್ರದ ನಾಯಕಿ ರನ್ಯಾ ರಾವ್ ಸದ್ಯ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಹೊರ ಬರಲು ನಾನಾ ಕಸರತ್ತು ಮಾಡುತ್ತಿದ್ದಾರೆ. ಆದರೆ ಹೊರ ಬರುವುದು ಅಂದುಕೊಂಡಷ್ಟು ಸುಲಭ ಅಲ್ಲ.

ಯಾಕೆಂದರೆ ರನ್ಯಾ ರಾವ್ ವಿರುದ್ಧ ಕಾಫಿಪೋಸಾ ಆಕ್ಟ್ ಜಾರಿ ಮಾಡಲಾಗಿದೆ. ಈ ಆಕ್ಟ್ನ ಅನ್ವಯ ಹೆಚ್ಚು ಕಡಿಮೆ ಒಂದು ವರ್ಷ ರನ್ಯಾ ಜೈಲಿನಲ್ಲಿ ಕಾಲ ಕಳೆಯಬೇಕು ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ.
ಹೌದು, ಕಾಫಿಪೋಸಾ ಆಕ್ಟ್ ನಡಿ ಬಂಧನವಾದರೆ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಸಾಧ್ಯ ಇಲ್ಲ. ಇನ್ನು ಕಾಫಿಪೋಸಾ ಅಡಿ ಅರೆಸ್ಟ್ ಆದವರನ್ನು ಮೂರು ತಿಂಗಳಿಂದ ಒಂದು ವರ್ಷದವರೆಗೆ ಜೈಲಿನಲ್ಲಿ ಇರಿಸಬಹುದು. ತೀರಾ ಗಂಭೀರವಾದ ಪ್ರಕರಣಗಳಲ್ಲಿ ಸೆರೆವಾಸವನ್ನು ಎರಡು ವರ್ಷದವರೆಗೆ ವಿಸ್ತರಿಸಬಹುದು. ಹೀಗಾಗಿ ರನ್ಯಾ ರಾವ್ ಒಂದು ವರ್ಷದವರೆಗೆ ಹೊರ ಬರುವುದು ಬಹುತೇಕ ಅನುಮಾನವೇ.
ಅಂದ್ಹಾಗೇ ಕಾಫಿಪೋಸಾ ಎಂದರೆ ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳ ಸಾಗಾಣಿಕೆ ತಡೆ ಕಾಯ್ಡೆ. ಕಳ್ಳಸಾಗಣೆ ಪ್ರಕರಣದ ಆರೋಪಿಗಳ ಮೇಲೆ ಕಾಫಿಪೊಸಾ ಹೇರಲಾಗುತ್ತದೆ. ಇಷ್ಟೇ ಅಲ್ಲದೇ ವಿದೇಶ ವಿನಿಮಯ ಅಥವಾ ಆರ್ಥಿಕ ಅಪರಾಧ ಎಸಗಿಸದವರ ಮೇಲೆ ಕೂಡ ಈ ಕಾಯ್ದೆ ಜಾರಿ ಮಾಡಲಾಗುತ್ತೆ.
ಆರೋಪಿ ಜಾಮೀನು ಪಡೆದು ಹೊರ ಬಂದರೆ ಮತ್ತೆ ಕಳ್ಳ ಸಾಗಾಣಿಕೆಯಲ್ಲಿ ತೊಡಗಿಸಿಕೊಳ್ಳಬಹುದು ಅಥವಾ ಜೈಲಿಂದ ಹೊರ ಬಂದ ನಂತರ ತಪ್ಪಿಸಿಕೊಳ್ಳಬಹುದು ಅಥವಾ ತನಿಖೆಗೆ ಸರಿಯಾದ ಸಹಕಾರ ನೀಡಿದಿರಬಹುದು ಎಂದು ಈ ಕಾಫಿಪೋಸಾ ಕಾಯ್ದೆಯನ್ನು ಹೇರಲಾಗುತ್ತೆ.
ಈ ಕಾಯ್ದೆಯ ಸೆಕ್ಷನ್ 3 (1) ರ ಅಡಿಯಲ್ಲಿ ನಟಿ ರನ್ಯಾ ರಾವ್ ವಿರುದ್ಧ ಬಂಧನದ ಆದೇಶವನ್ನು ಸಿಇಐಬಿ ಜಂಟಿ ಕಾರ್ಯದರ್ಶಿ ಅನುಪಮ್ ಪ್ರಕಾಶ್ ಹೊರಡಿಸಿದ್ದಾರೆ. ಈಗಾಗಲೇ ಬಂಧನದಲ್ಲಿರುವ ಹರ್ಷವರ್ಧಿನಿ ರನ್ಯಾ ಅವರನ್ನು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿ ಇರಿಸಿ ಎಂದು ಅನುಪಮ್ ಪ್ರಕಾಶ್ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ. ಆದೇಶದ ಪ್ರತಿಯನ್ನು ರನ್ಯಾ ರಾವ್ ಅವರಿಗೆ ಕೂಡ ಕಳುಹಿಸಿದ್ದಾರೆ.
ಸದ್ಯ ರನ್ಯಾ ಮೇಲೆ ಕಾಫಿಪೋಸಾ ಕಾಯ್ಡೆ ಹೇರಲಾಗಿದ್ದು ಇದೇ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ತರುಣ್ ಮತ್ತು ಸಾಹಿಲ್ ಜೈನ್ ಮೇಲೆ ಕೂಡ ಈ ಕಾಫಿಪೋಸಾ ಅಸ್ತ್ರವನ್ನು ಪ್ರಯೋಗಿಸುವ ಸಾಧ್ಯತೆ ಇದೆ.
ಇನ್ನುಳಿದಂತೆ ಕಳೆದ ಮಾರ್ಚ್ ನಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಣಿಕ್ಯ, ಪಟಾಕಿ ಚಿತ್ರಗಳಲ್ಲಿ ಅಭಿನಯಿಸಿರುವ ರನ್ಯಾ ರಾವ್ ಬರೋಬ್ಬರಿ 14.2 ಕೆಜಿ ಚಿನ್ನದ ಸಮೇತ ಸಿಕ್ಕಿ ಬಿದ್ದಿದ್ದರು. ಆ ನಂತರ ಡಿಆರ್ಐ ಪ್ರಕರಣದ ತನಿಖೆ ನಡೆಸಿದಾಗ ವರ್ಷಕ್ಕೆ 27 ಬಾರಿ ಬೆಂಗಳೂರಿಂದ ದುಬೈಗೆ ಹಾರಾಡಿಕೊಂಡು ರನ್ಯಾ ಸುಮಾರು 49.6 ಕೆಜಿ ಅಕ್ರಮ ಚಿನ್ನ ಸಾಗಾಣೆ ಮಾಡಿರುವುದು ಪತ್ತೆಯಾಗಿತ್ತು.
ಸದ್ಯ ರನ್ಯಾ ರಾವ್ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಮತ್ತೊಂದು ಕಡೆ ರನ್ಯಾ ರಾವ್ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್ನಲ್ಲಿ ನಡೆಯುತ್ತಿದ್ದು, ಜಾಮೀನು ಆದೇಶವನ್ನು ಕಾಯ್ದಿರಿಸಲಾಗಿದೆ. ಹೀಗಿರುವಾಗ ಇದೀಗ ರನ್ಯಾ ಅವರ ಮೇಲೆ ಕಾಫಿಪೋಸಾ ಕಾಯ್ದೆಯನ್ನು ಹೇರಲಾಗಿದೆ. ರನ್ಯಾ ಅವರ ಸಂಕಷ್ಟ ಈಗ ಇನ್ನು ಹೆಚ್ಚಾಗಿದೆ.


Click it and Unblock the Notifications











