ಕೊಲೆ ಯತ್ನ ಪ್ರಕರಣ: 'ಸ್ಟೈಲ್ ರಾಜ' ಚಿತ್ರದ ನಿರ್ದೇಶಕ ಬಂಧನ
ಚಿಕ್ಕಣ್ಣ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ 'ಸ್ಟೈಲ್ ರಾಜ' ಚಿತ್ರದ ನಿರ್ದೇಶಕ ಹರೀಶ್ ಅವರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅಶೋಕ್ ಎಂಬಾತನ ಕೊಲೆಗೆ ಸುಪಾರಿ ಕೊಟ್ಟ ಆರೋಪದ ಮೇಲೆ ಸಿನಿಮಾ ನಿರ್ದೇಶಕ ಹರೀಶ್ ಅರೆಸ್ಟ್ ಆಗಿದ್ದಾರೆ ಎಂದು ಸುದ್ದಿ ವಾಹಿನಿಗಳು ವರದಿ ಮಾಡಿವೆ.
ನಿರ್ದೇಶಕ ಹರೀಶ್ ಜೊತೆ ರಾಜಶೇಖರ್, ಸತೀಶ್, ಸುರೇಶ್ ಎಂಬುವರನ್ನೂ ಕೂಡ ಪೊಲೀಸರು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ತಲೆ ಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಅಶೋಕ್ ಅವರ ಸಂಬಂಧಿಕರ ಬಳಿ ನಿರ್ದೇಶಕ ಹರೀಶ್ ತಮ್ಮ ಚಿತ್ರದ ಕೆಲಸಗಳಿಗಾಗಿ 3.5 ಲಕ್ಷ ಹಣವನ್ನು ಪಡೆದಿದ್ದರಂತೆ. ಸಿನಿಮಾ ಬಿಡುಗಡೆಯಾದರು, ಹಣ ಮಾತ್ರ ಪಾವತಿಸಿರಲಿಲ್ಲ. ಹಣ ಕೇಳಿದರೆ ತಪ್ಪಿಸಿಕೊಂಡು ತಿರುಗುತ್ತಿದ್ದನು. ಹೀಗಾಗಿ, ಹಣಕ್ಕಾಗಿ ಪೀಡಿಸುತ್ತಿದ್ದ ಅಶೋಕ್ ಅವರನ್ನ ಸುಪಾರಿ ಕೊಟ್ಟು ಕೊಲೆ ಮಾಡುವುದಕ್ಕೆ ಸಂಚು ರೂಪಿಸಿದ್ದರು ಎಂಬ ಆರೋಪ ಹರೀಶ್ ಅವರ ಮೇಲೆ ಬಂದಿದೆ.
ಇತ್ತೀಚೆಗೆ ರೌಡಿ ಸತೀಶ್ & ಟೀಂ, ಅಶೋಕ್ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದರು. ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯ ವೇಳೆ ನಿರ್ದೇಶಕ ಹರೀಶ್, ಅಶೋಕ್ ಕೊಲೆಗೆ ಸುಪಾರಿ ಕೊಟ್ಟಿದ್ದು ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಇದಕ್ಕು ಮುಂಚೆ ಹಣ ನೀಡಿದ್ದ ಅಶೋಕ್ ಕಡೆಯವರು ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರ ಮೇಲೆ ಹಲ್ಲೆ ಮಾಡಿದ್ದರು. ಹೀಗಾಗಿ, ಬ್ಯಾಡರಹಳ್ಳಿಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು ಎನ್ನಲಾಗಿದೆ.


Click it and Unblock the Notifications











