ಇತ್ತ ಅಪ್ಪು ಪತ್ನಿಗೆ.. ಅತ್ತ ದರ್ಶನ್ ಪತ್ನಿಗೆ ಆನ್ಲೈನ್ ನಿಂದನೆ; ಕಿಡಿಗೇಡಿಗಳ ಹುಚ್ಚಾಟಕ್ಕೆ ಕೊನೆ ಎಂದು?
ಆನ್ಲೈನ್ನಲ್ಲಿ ಸೂಪರ್ಸ್ಟಾರ್ಗಳ ವಿರುದ್ಧ ಕಿಡಿಗೇಡಿಗಳು ನಿಂದನೆ ಮಾಡುವುದು ಇದೇ ಮೊದಲೇನು ಅಲ್ಲ. ತಮ್ಮ ನಟನಿಗೆ ಪೈಪೋಟಿ ನೀಡುತ್ತಿರುವ ಮತ್ತೊಬ್ಬ ನಟನನ್ನು ಗುರಿಯಾಗಿಸಿಕೊಂಡು ಕೆಟ್ಟದಾಗಿ ಕಾಮೆಂಟ್ ಮಾಡಿ ನಿಂದನೆ ಮಾಡುತ್ತಿರುತ್ತಾರೆ. ಇದು ಈ ಹಿಂದೆ ಹಲವು ಬಾರಿ ನಡೆದಿದೆ. ಆದ್ರೀಗ ಇನ್ನೊಂದು ಹಂತಕ್ಕೆ ಹೋಗಿದ್ದು ಮುಜುಗರಕ್ಕೆ ಎಡೆ ಮಾಡಿಕೊಡುತ್ತಿದೆ.
ಸೋಶಿಯಲ್ ಮೀಡಿಯಾದ ತಮ್ಮ ಕೈಯಲ್ಲಿದೆ ಅನ್ನುವ ಕಾರಣಕ್ಕೆ ಕಿಡಿಗೇಡಿಗಳು ತಮ್ಮಿಷ್ಟದಂತೆ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಕೆಲವು ತಿಂಗಳಿಂದ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರನ್ನು ಗುರಿಯಾಗಿಸಿಕೊಂಡು ಕೆಟ್ಟದಾಗಿ ನಿಂದನೆ ಮಾಡುತ್ತಿದ್ದರು. ಈಗ ಆ ಸಾಲಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ಸೇರಿಕೊಂಡಿದ್ದಾರೆ.

ಕಿಡಿಗೇಡಿಗಳು ಅಶ್ವಿನಿ ಪುನೀತ್ ರಾಜ್ಕುಮಾರ್ ವಿರುದ್ಧ ಆನ್ಲೈನ್ನಲ್ಲಿ ಕೆಟ್ಟದಾಗಿ ನಿಂದನೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಹಲವು ಮಾಡಿದ್ದಾರೆ. ಆಗ ದೊಡ್ಮನೆಯ ಅಭಿಮಾನಿಗಳು ಕಿಡಿಗೇಡಿಗಳ ವಿರುದ್ಧ ಸಮರ ಸಾರಿದ್ದರು. ಆ ವೇಳೆ ದರ್ಶನ್ ಅಭಿಮಾನಿಗಳ ಹೆಸರು ಕೇಳಿ ಬಂದಿತ್ತು. ಈ ಬಾರಿ ಅಪ್ಪು ಪತ್ನಿ ಹಾಗೂ ದರ್ಶನ್ ಪತ್ನಿ ಇಬ್ಬರ ವಿರುದ್ಧವೂ ಕೆಟ್ಟದಾಗಿ ಕಾಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ.
ಮತ್ತೆ ಅಪ್ಪು ಪತ್ನಿ ನಿಂದಿಸಿದ ಕಿಡಿಗೇಡಿಗಳು
ಯೋಗೇಂದ್ರ ಪ್ರಸಾದ್ ಅನ್ನುವ ಎಕ್ಸ್ (ಟ್ವಿಟರ್) ಖಾತೆಯಿಂದ ನಿನ್ನೆ (ಆಗಸ್ಟ್ 27) ನಿನ್ನೆ ಅಪ್ಪು ಪತ್ನಿ ವಿರುದ್ಧ ಕೆಟ್ಟದಾಗಿ ನಿಂದನೆ ಮಾಡಲಾಗಿತ್ತು. ಅಭಿಮಾನಿಯೊಬ್ಬರ ಜೊತೆ ನಿಂತಿರುವ ಫೋಟೋ ಹಾಕಿ ಕಾಮೆಂಟ್ ಮಾಡಲಾಗಿತ್ತು. ಕಿಡಿಗೇಡಿಯ ಆ ಪೋಸ್ಟ್ನಲ್ಲಿರುವ ಕಾಮೆಂಟ್ ಅನ್ನು ಓದುವುದಕ್ಕೆ ಯೋಗ್ಯವಲ್ಲ. ಆದರೆ, ಈ ಪೋಸ್ಟ್ ಅಪ್ಪು ಅಭಿಮಾನಿಗಳನ್ನು ಮತ್ತೆ ಕೆರಳಿಸಿದೆ.

ನಿನ್ನೆ (ಆಗಸ್ಟ್ 27) ಈ ಪೋಸ್ಟ್ ನೋಡುತ್ತಿದ್ದಂತೆ ಅಪ್ಪು ಅಭಿಮಾನಿಗಳು ಕೆಂಡಾಮಂಡಲವಾಗಿದ್ದಾರೆ. ದರ್ಶನ್ ಅಭಿಮಾನಿ ಅಂತ ಹೇಳಿಕೊಂಡಿರುವ ಕೆಲವರು ಈ ಪೋಸ್ಟ್ ಅನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಅದನ್ನೇ ಇಟ್ಟುಕೊಂಡು ರಾಜವಂಶದ ಅಭಿಮಾನಿಗಳು ಮತ್ತೆ ಕಿಡಿಕಾರುವುದಕ್ಕೆ ಶುರು ಮಾಡಿದ್ದಾರೆ.
ದರ್ಶನ್ ಪತ್ನಿಯನ್ನೂ ನಿಂದನೆ ಕಿಡಿಗೇಡಿಗಳು
ಹಾಗಂತ ಈ ಬಾರಿ ಕೇವಲ ಪುನೀತ್ ರಾಜ್ಕುಮಾರ್ ಪತ್ನಿಯಷ್ಟೇ ಕಿಡಿಗೇಡಿಗಳಿಗೆ ಗುರಿಯಾಗಿಲ್ಲ. ದರ್ಶನ್ ಪತ್ನಿ ವಿಜಯಲಕ್ಷ್ಮಿಯನ್ನು ಗುರಿಯಾಗಿಸಿಕೊಂಡು ಕೆಟ್ಟದಾಗಿ ನಿಂತಿಸಿದ್ದಾರೆ. ಡಿ ಬಾಸ್ 6106 ಅನ್ನುವ ಖಾತೆಯಿಂದ ವಿಜಯಲಕ್ಷ್ಮಿ ದರ್ಶನ್ರನ್ನು ನಿಂದಿಸಲಾಗಿದೆ. ಈ ಪೋಸ್ಟ್ ಕೂಡ ಓದುವುದಕ್ಕೆ ಯೋಗ್ಯವಲ್ಲದ. ಆದರೆ, ದರ್ಶನ್ ಅಭಿಮಾನಿಗಳು ಪುನೀತ್ ಅಭಿಮಾನಿಗಳ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಈ ಕೃತ್ಯ ಅಪ್ಪು ಅಭಿಮಾನಿಗಳ ಕೆಲಸ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಪೊಲೀಸರಿಗೆ ಟ್ಯಾಗ್ ಮಾಡಿದ ಅಪ್ಪು ಫ್ಯಾನ್ಸ್
ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ವಿಜಯಲಕ್ಷ್ಮಿ ದರ್ಶನ್ ವಿರುದ್ಧ ಕಿಡಿಗೇಡಿಗಳ ನಿಂದನೆಗೆ ನೆಟ್ಟಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಗಳ ಅತಿರೇಕದ ಸಂದೇಶಗಳನ್ನು ಕಟುವಾಗಿ ಟೀಕಿಸಿದ್ದಾರೆ. ಇಂತಹ ಸಂದೇಶಗಳಿಗೆ ಕಡಿವಾಣ ಹಾಕಲೇಬೇಕು ಅಂತ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಅದೇ ಇನ್ನೊಂದು ಕಡೆ ಅಪ್ಪು ಅಭಿಮಾನಿಗಳು ಈ ಕೆಟ್ಟ ನಿಂದನೆಯ ಪೋಸ್ಟ್ ಅನ್ನು ಪೊಲೀಸರಿಗೆ ಟ್ಯಾಗ್ ಮಾಡುತ್ತಿದ್ದಾರೆ. ಮುಂದೆ ಈ ಕಿತ್ತಾಟ ಅದ್ಯಾವ ಮಟ್ಟಕ್ಕೆ ಹೋಗುತ್ತೋ ಗೊತ್ತಿಲ್ಲ.


Click it and Unblock the Notifications











