'ಪ್ರೇಮ್ ಕಹಾನಿ' ಸೋಲು ಕಲಿಸಿದ ಬದುಕಿನ ಪಾಠ: 'ಕಾರ್ ಇದೆ, ಪೆಟ್ರೋಲ್ಗೆ ದುಡ್ಡಿಲ್ಲ'
'ತಾಜ್ ಮಹಲ್' ಸಿನಿಮಾ ಚಂದ್ರು ಅವರಿಗೆ ಬಹುದೊಡ್ಡ ಸಕ್ಸಸ್ ತಂದುಕೊಡ್ತು. ನಾಯಕ ಅಜಯ್ ರಾವ್ಗೂ ಈ ಚಿತ್ರ ಬ್ರೇಕ್ ಕೊಡ್ತು. ಇವರಿಬ್ಬರ ಕಾಂಬಿನೇಷನ್ಗೆ ಸಿಕ್ಕ ಗೆಲವಿನ ಪರಿಣಾಮ ಮೂಡಿಬಂದ ಚಿತ್ರವೇ ಪ್ರೇಮ್ ಕಹಾನಿ.
Recommended Video
ತಾಜ್ ಮಹಲ್ ಚಿತ್ರದಂತೆ ಪ್ರೇಮ್ ಕಹಾನಿ ಸಿನಿಮಾ ಮೇಲೂ ಬಹಳ ನಿರೀಕ್ಷೆ ಇತ್ತು. ಬಿಡುಗಡೆಗೆ ಮುಂಚೆ ಹಾಡುಗಳು ಸಹ ಅಷ್ಟೇ ಹಿಟ್ ಆಗಿದ್ದವು. ಆದ್ರೆ, ಸಿನಿಮಾ ರಿಲೀಸ್ ಆದ್ಮೇಲೆ ಅಂದುಕೊಂಡಂತೆ ರೆಸ್ಪಾನ್ಸ್ ಸಿಕ್ಕಿಲ್ಲ. ಮೊದಲ ಚಿತ್ರದಲ್ಲಿ ಸಂಪಾದನೆ ಮಾಡಿದ ಖ್ಯಾತಿ ಎರಡನೇ ಚಿತ್ರ ಮುಗಿಯುಷ್ಟರಲ್ಲಿ ಕಳೆದುಕೊಳ್ಳಬೇಕಾಯಿತು. ಈ ಸೋಲು ಆರ್ ಚಂದ್ರು ಅವರನ್ನು ಬಹಳ ನೋವಿಗೆ ತಳ್ಳಿತ್ತು. ಮುಂದೆ ಓದಿ....

ಬಾಡಿಗೆ ಕಟ್ಟಲು ಸಹ ಕಷ್ಟ ಆಯಿತು
''ತುಂಬಾ ಕಷ್ಟದಲ್ಲಿದ್ದವನಿಗೆ ತಾಜ್ ಮಹಲ್ ಬಳಿಕ ಹೈಫೈ ಲೈಪ್ ಬಂತು. ಆದ್ರೆ, ಪ್ರೇಮ್ ಕಹಾನಿ ನಂತರ ಬಹಳ ಕಷ್ಟದ ಜೀವನ ನೋಡಬೇಕಾಯಿತು. 14 ಸಾವಿರ ಮನೆ ಬಾಡಿಗೆ ಕಟ್ಟುವುದಕ್ಕು ಹಿಂದೆ ಮುಂದೆ ಯೋಚನೆ ಮಾಡುವಂತಾಗಿತ್ತು. ನನಗೆ ಅಡ್ವೈಸರ್ ಇರಲಿಲ್ಲ, ಹಾಗಾಗಿ, ಹಣವನ್ನು ಹೇಗೆ ನಿರ್ವಹಿಸಬೇಕು ಎನ್ನುವುದು ಗೊತ್ತಾಗದೇ ನಾನೇ ಮಾಡಿಕೊಂಡ ಎಡವಟ್ಟು ಇದು. ಈ ಅನುಭವ, ನನ್ನನ್ನು ಮತ್ತಷ್ಟು ಶಕ್ತಿಶಾಲಿಯಾಗಿಸಿತು'' ಎಂದು ಆರ್ ಚಂದ್ರು ಫಿಲ್ಮಿಬೀಟ್ ಡೈರೆಕ್ಟರ್ ಡೈರಿಯಲ್ಲಿ ಹೇಳಿಕೊಂಡಿದ್ದಾರೆ.

ಕಬ್ಬನ್ ಪಾರ್ಕ್ಗೆ ಬಂದ್ವಿ
''ಎರಡನೇ ಚಿತ್ರದ ಸೋಲಿನಿಂದ ಎದುರಾದ ಕಷ್ಟಗಳು ನನ್ನನ್ನು ಬಹಳ ಕಾಡಿತು. ಈ ಸಮಯದಲ್ಲಿ ಸಂಗೀತ ನಿರ್ದೇಶಕ ಅಭಿಮಾನ್ ರಾಯ್ ಸ್ವಲ್ಪ ಧೈರ್ಯ ತುಂಬಿದರು. ನನ್ನನ್ನು ಕಬ್ಬನ್ ಪಾರ್ಕ್ಗೆ ಕರೆದುಕೊಂಡು ಹೋದರು. ಕಬ್ಬನ್ ಪಾರ್ಕ್ನಲ್ಲಿ ಕಲ್ಲ ಮೇಲು ಕೂತ್ಕೊಂಡು ಏನು ಮಾಡೋದು ಯೋಚನೆ ಮಾಡ್ತಿದ್ವಿ. ಮೊದಲನೇ ಚಿತ್ರಕ್ಕೂ ಮುಂಚೆ ಲಾಲ್ಬಾಗ್ನಲ್ಲಿ ಕೂತ್ಕೊಳ್ತಿದ್ವಿ. ಎರಡನೇ ಚಿತ್ರದ ಆದ್ಮೇಲೆ ಕಬ್ಬನ್ ಪಾರ್ಕ್ಗೆ ಬಂದ್ವಿ'' ಎಂದು ಚಂದ್ರ ಸ್ಮರಿಸಿಕೊಂಡಿದ್ದಾರೆ.

ಮನೆಗೆ ಹೋಗ್ಬಿಡೋಣ ಅಂತ ಯೋಚನೆ ಬಂದಿತ್ತು
''ಕಬ್ಬನ್ ಪಾರ್ಕ್ನಲ್ಲಿ ಕೂತ್ಕೊಂಡು ಮುಂದೆ ಏನು ಮಾಡೋದು ಅಂತ ಯೋಚನೆ ಮಾಡಿದ್ದೆ. ಎಲ್ಲವೂ ಬದಲಾಯ್ತು, ಭವಿಷ್ಯ ಏನೂ ಅಂತ ಗೊತ್ತಾಗ್ತಿಲ್ಲ. ಊರಿಗೆ ಹೋಗಿ ಜಮೀನು ಮಾಡ್ಬೇಕಾ ಎನ್ನುವ ಯೋಚನೆ ಸಹ ಬಂತು. ಈ ಸಮಯದಲ್ಲಿ ರಾಯ್ ಅವರ ಬಳಿ ಒಂದು ಕಥೆ ಹೇಳಿದೆ. ಹೆಚ್ಚು ಕಥೆಗಳನ್ನು ರೆಡಿ ಮಾಡಿ ಇಟ್ಕೊಂಡಿದ್ದೆ. ಕಥೆ ಕೇಳಿದ ಅಭಿಮಾನ್ ರಾಯ್ ತುಂಬಾ ಚೆನ್ನಾಗಿದೆ, ಯಾರಾದರೂ ದೊಡ್ಡ ನಿರ್ಮಾಪಕರಿಗೆ ಕಥೆ ಹೇಳಿ'' ಎಂದು ಸಲಹೆ ನೀಡಿದರು.

ಚಿಂಗಾರಿ ನಿರ್ಮಾಪಕನಿಗೆ ಕಥೆ ಹೇಳಿದೆ
''ಚಿಂಗಾರಿ ನಿರ್ಮಾಪಕ ಮಹಾದೇವ್ ಅವರಿಗೆ ತಾಜ್ ಮಹಲ್ ಕಥೆ ಹೇಳಿದ್ದೆ. ಚೆನ್ನಾಗಿದೆ ಮಾಡೋಣ ಅಂದಿದ್ರು. ಆದ್ರೆ ಮಾಡೋಕೆ ಆಗಿರಲಿಲ್ಲ. ಆಮೇಲೆ ಹೊಸ ಕಥೆಯನ್ನು ಅವರಿಗೆ ಹೇಳಿದೆ. ಕಥೆ ಕೇಳಿದ ಅವರು 'ಹೇ ಸೂಪರ್ ಆಗಿದೆ' ಅಂತಾರೆ. ಆಮೇಲೆ ಅವರು ಮುಂದೆ ಬರಲ್ಲ. ತಾಜ್ ಮಹಲ್ ರೀತಿ ಕಥೆ ಕೇಳಿ ಸುಮ್ಮನೆ ಆಗಬಿಟ್ರು'' - ಆರ್ ಚಂದ್ರು

ಕಾರ್ ಇದೆ, ಪ್ರೆಟ್ರೋಲ್ಗೆ ದುಡ್ಡಿಲ್ಲ
''ತುಂಬಾ ಬೇಜಾರಿನ ಸಮಯ ಅದು. ಕಾರ್ ಇದೆ, ಆದ್ರೆ ಪೆಟ್ರೋಲ್ ಹಾಕೋಕೆ ದುಡ್ಡಿಲ್ಲ. ಸುಮ್ಮನೆ ಕಬ್ಬನ್ ಪಾರ್ಕ್ಗೆ ಹೋಗ್ತೀವಿ, ಕಾರ್ ನಿಲ್ಲಿಸಿ ಒಂದು ಕಡೆ ಕೂತ್ಕೊಳ್ತೀವಿ. ಜನರು ತಾಜ್ ಮಹಲ್ ಡೈರೆಕ್ಟರ್ ಅಂತ ಜನ ಗುರುತಿಸುವ ಮಟ್ಟಕ್ಕೆ ಇದ್ದೆ. ಆಗ ನಮ್ಮ ಗಮನಕ್ಕೆ ಬಂದಿದ್ದು ಶಿವಣ್ಣ'' ಎಂದು ಮೈಲಾರಿ ಹುಟ್ಟಿದ ಕಥೆ ಹೇಳಿದರು. (ಮೈಲಾರಿ ಹುಟ್ಟಿದ ಕಥೆ ಮುಂದುವರಿಯುತ್ತೆ)


Click it and Unblock the Notifications











