ರಾಮೋಜಿರಾವ್ ಸ್ಟುಡಿಯೋ ಮಾದರಿಯಲ್ಲಿ ಕಂಠೀರವಕ್ಕೆ ಕಾಯಕಲ್ಪ
ಬೆಂಗಳೂರು : ನಗರದ ಕಂಠೀರವ ಸ್ಟುಡಿಯೋದ ಕಣ್ಣೀರು ಒರೆಸುವ ಮಾತು ಹಲವಾರು ವರ್ಷದಿಂದ ಕೇಳಿ ಬರ್ತಾ ಇದೆ. ಈಗ ಕೊನೆಗೂ ಸ್ಟುಡಿಯೋ ಅಭಿವೃದ್ಧಿ ಆಗೋ ಲಕ್ಷಣ ಕಂಡುಬಂದಿದೆ. ಸ್ಟುಡಿಯೋದ ಒಂದು ಭಾಗವನ್ನು ಬಿಡಿಎಗೆ ಮಾರಿ ಬರೋ ಹಣದಲ್ಲಿ ರಾಮೋಜಿರಾವ್ ಸ್ಟುಡಿಯೋ ಮಾದರಿಯಲ್ಲಿ ಕಂಠೀರವವನ್ನು ಅಭಿವೃದ್ಧಿ ಮಾಡೋದಾಗಿ ರಾಜ್ಯ ವಾರ್ತಾ ಸಚಿವ ಎಂ. ಶಿವಣ್ಣ ಹೇಳಿದ್ದಾರೆ. (ಕುಚ್ ಪಾನೇಕೇಲಿಯೆ ಕುಚ್ ಖೋನಾ ಪಡ್ತಾಹೈ !)
ಸೋಮವಾರ ಕನ್ನಡ ಚಲನಚಿತ್ರ ಇತಿಹಾಸ ಪುಸ್ತಕ ಬಿಡುಗಡೆ ಮಾಡಿ ಮಾತಾಡ್ತಿದ್ದ ಸಚಿವರು, ಕಂಠೀರವ ಸ್ಟುಡಿಯೋ ಅಭಿವೃದ್ಧಿಗೆ ಕೈಗೊಳ್ಳಲಾಗಿರುವ ಯೋಜನೆಗಳನ್ನು ವಿವರಿಸಿದರು. ಕಂಠೀರವ ಸ್ಟುಡಿಯೋ 13-14 ಎಕರೆ ಇದೆ. ಇದರಲ್ಲಿ ಒಂದು ಎಕರೆ ಮಾರಿದ್ರು ಕೋಟಿ ರುಪಾಯಿ ಬರತ್ತೆ. ಆ ಹಣದಲ್ಲಿ ಹೈದರಾಬಾದ್ನ ರಾಮೋಜಿರಾವ್ ಫಿಲಂ ಸಿಟಿ ಮಾದರಿಯಲ್ಲೇ ಇದನ್ನೂ ಅಭಿವೃದ್ಧಿ ಪಡಿಸಲಾಗುವುದು ಎಂದು ಅವರು ಹೇಳಿದರು.
ಕಂಠೀರವ ಸ್ಟುಡಿಯೋ ಈ ಹೊತ್ತು ತೀರಾ ದುರವಸ್ಥೆಯಲ್ಲಿದೆ. ಆದರೆ, ಇದನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸೋ ಯೋಚನೆ ಸರಕಾರಕ್ಕಿಲ್ಲ. ಇಲ್ಲಿನ ಕೆಲವು ನೌಕರರು ಸ್ವಯಂ ನಿವೃತ್ತಿ ಬಯಸಿದ್ದಾರೆ. ಹೆಚ್ಚುವರಿ ನೌಕರರಿಗೆ ನಿವೃತ್ತಿ ಸೌಲಭ್ಯ ನೀಡಿ, ಸ್ಟುಡಿಯೋವನ್ನು ಪುನರುಜ್ಜೀವನಗೊಳಿಸೋದಾಗಿ ಸಚಿವರು ತಿಳಿಸಿದರು.
ಸಿನಿಮಾ ಅಕಾಡಮಿ : ಬಹು ದಿನಗಳ ಬೇಡಿಕೆಯಾದ ಸಿನಿಮಾ ಅಕಾಡಮಿ ಸ್ಥಾಪಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಪ್ರಕಟಿಸುವುದಾಗಿಯೂ ಅವರು ಪ್ರಕಟಿಸಿದರು. ಪ್ರಸ್ತುತ ಇರುವ ಅಕಾಡಮಿಗಳಿಗೇ ಹಣ ಪೂರೈಸೋದು ಸರಕಾರಕ್ಕೆ ಕಷ್ಟ ಆಗಿದೆ. ನಿಜಕ್ಕೂ ಸಿನಿಮಾ ಅಕಾಡಮಿ ಬೇಕೆ ಎಂಬ ಬಗ್ಗೆ ಚರ್ಚಿಸುವುದು ಅಗತ್ಯ ಎಂದು ಸಚಿವರು ಹೇಳಿದರು.
ಸಿನಿಮಾ ಇತಿಹಾಸ : ಹಂಪಿ ಕನ್ನಡ ವಿಶ್ವವಿದ್ಯಾಲಯ ಹಾಗೂ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯು ಹೊರತಂದಿರುವ ಎರಡು ಸಂಪುಟಗಳ ಕನ್ನಡ ಚಲನಚಿತ್ರ ಇತಿಹಾಸ ಪುಸ್ತಕವನ್ನು ಸಚಿವರು ಬಿಡುಗಡೆ ಮಾಡಿದ ಅವರು, ಈ ಪುಸ್ತಕದ ಮಾದರಿಯಲ್ಲೇ ರಂಗಭೂಮಿಯ ಸಮಗ್ರ ಇತಿಹಾಸ ಹೊರತರಲೂ ಸರಕಾರ ನೆರವು ನೀಡಲಿದೆ ಎಂದರು.
ಕಾರ್ಯಕ್ರಮದಲ್ಲಿ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ಸಿ.ಎನ್. ಚಂದ್ರಶೇಖರ್, ವಾಣಿಜ್ಯ ಮಂಡಳಿ ಅಧ್ಯಕ್ಷ ತಲ್ಲಂ ನಂಜುಂಡಶೆಟ್ಟಿ, ನಟಿ ಜಯಮಾಲ, ಪುಸ್ತಕದ ಸಂಪಾದಕರಾದ ವಿಜಯಾ ಹಾಗೂ ವಿ.ಎನ್. ಸುಬ್ಬರಾವ್ ಮೊದಲಾದವರು ಪಾಲ್ಗೊಂಡಿದ್ದರು.


Click it and Unblock the Notifications