ಕನ್ನಡಕ್ಕೆ ನಿಂಬೆಹುಳಿ ತಂದ ಬಾಲಿವುಡ್ ಸುಭಾಷ್ ಘಾಯ್

ಬಾಲಿವುಡ್ ನಲ್ಲಿ ಸುಭಾಷ್ ಘಾಯ್ ಅವರದು ಭಾರಿ ದೊಡ್ಡ ಹೆಸರು. ತಮ್ಮ 'ಮುಕ್ತಾ ಆರ್ಟ್ಸ್' ಮೂಲಕ ಹತ್ತಾರು ಸೂಪರ್ ಹಿಟ್ ಸಿನಿಮಾಗಳನ್ನು ಚಿತ್ರರಸಿಕರಿಗೆ ಕೊಟ್ಟವರು. ಅವರ ಸಾಕಷ್ಟು ಸಿನಿಮಾಗಳು ಬೇರೆ ಬೇರೆ ಭಾಷೆಗಳಿಗೂ ರೀಮೇಕ್ ಆಗಿವೆ. ಅಲ್ಲಿ ನಿರ್ದೇಶನ, ನಿರ್ಮಾಣ ಎರಡರಲ್ಲೂ ಫೇಮಸ್ ಆಗಿರುವ ಅವರು ಇದೇ ಮೊದಲ ಬಾರಿಗೆ ದಕ್ಷಿಣ ಭಾರತೀಯ ಸಿನಿಮಾವೊಂದರ ನಿರ್ಮಾಣಕ್ಕೆ ಕೈಹಾಕಿದ್ದಾರೆ. ಅದರಲ್ಲೂ ಕನ್ನಡ ಚಿತ್ರ ಎಂಬುದು ಇನ್ನೂ ವಿಶೇಷ.
ಹೇಮಂತ್ ಹೆಗಡೆ ನಿರ್ದೇಶನದ 'ನಿಂಬೆಹುಳಿ' ಚಿತ್ರ ಬಿಡುಗಡೆ ಸಿದ್ಧವಾಗಿದೆ. ಈ ಸಂಬಂಧ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರಾಡಿದ ಮಾತುಗಳು ಹೀಗಿವೆ..."ಐ ಲವ್ ಬೆಂಗಳೂರು. ನನಗೆ ಕನ್ನಡ ಸಿನಿಮಾಗಳ ಬಗ್ಗೆ ಹೆಚ್ಚು ಗೊತ್ತಿಲ್ಲ. ಇದೇ ಮೊದಲ ಬಾರಿಗೆ ಹಿಂದಿಯೇತರ ಸಿನಿಮಾವೊಂದಕ್ಕೆ ಹಣ ತೊಡಗಿಸಿದ್ದೇನೆ. ಇಲ್ಲಿ ನನಗೆ ವಿಷ್ಣುವರ್ಧನ್ ಹಾಗೂ ಭಾರತಿ ವಿಷ್ಣುವರ್ಧನ್ ಗೊತ್ತು. ನಾನು ಅವರಿಬ್ಬರ ಜೊತೆಯಲ್ಲಿ 'ಉತ್ತರ್ ದಕ್ಷಿಣ್ ಎಂಬ ಸಿನಿಮಾದಲ್ಲಿ ಕೆಲಸ ಮಾಡಿದ್ದೇನೆ. ಭಾರತಿ ನಿಜಕ್ಕೂ ಬಹಳ ಅಪರೂಪದ ಕಲಾವಿದೆ.
'ನಿಂಬೆಹುಳಿ' ಹಾಡಿಗೆ ಒಳ್ಳೆಯ ರೆಸ್ಪಾನ್ಸ್ ಬಂದಿದೆ. ಅದು ನನಗೆ ಖುಷಿ ನೀಡಿದೆ, ಜೊತೆಗೆ ಚಿತ್ರವೊಂದು ಯಶಸ್ವಿಯಾಗುವ ಮುನ್ಸೂಚನೆ ಅದು. ನನ್ನ ಬಹುತೇಕ ಸಿನಿಮಾಗಳು ಹಾಡಿನಿಂದಲೇ ಜನರ ಕುತೂಹಲ ಹೆಚ್ಚಿಸಿ ಹಿಟ್ ಆಗಿವೆ. 'ಕರ್ಝ್', 'ಹೀರೋ', 'ಖಳನಾಯಕ್', 'ಪರದೇಸ್', 'ತಾಲ್' ಹೀಗೆ ಯಾವುದೇ ಇರಲಿ, ಅದರಲ್ಲಿರುವ ಹಾಡುಗಳು ಸಾಕಷ್ಟು ಹಿಟ್ ಆದಂಥವು. 'ನಿಂಬೆಹುಳಿ' ಚಿತ್ರಕ್ಕೆ ಕನ್ನಡಿಗರ ಪ್ರತಿಕ್ರಿಯೆ ನೋಡಿಕೊಂಡು, ನಂತರ ಅದನ್ನು ಹಿಂದಿಯಲ್ಲಿ ಮಾಡುವವನಿದ್ದೇನೆ".
ಈ ಮೇಲಿನಂತೆ ಅಂದು ಮಾತನಾಡಿರುವ ಸುಭಾಷ್ ಘಾಯ್, ನಿಜಕ್ಕೂ ಗ್ರೇಟ್ ವ್ಯಕ್ತಿ. ಅಂಥವರೊಬ್ಬರು ಕನ್ನಡ ಚಿತ್ರಜಗತ್ತಿಗೆ ಪರಿಚಯವಾಗಿರುವುದು, ಚಿತ್ರವೊಂದನ್ನು ನಿರ್ಮಿಸಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಅಂಥ ಪ್ರತಿಷ್ಠಿತ ಬ್ಯಾನರ್ ಗಳು ಕನ್ನಡಕ್ಕೆ ಬಂದಷ್ಟೂ ಒಳ್ಳೆಯದು. 'ನಿಂಬೆಹುಳಿ' ನಿರ್ದೇಶಕ ಹೇಮಂತ್ ಹೆಗಡೆ ಅದನ್ನು ಗಮನದಲ್ಲಿಟ್ಟುಕೊಂಡೇ ಈ ಸಿನಿಮಾ ಮಾಡಿದ್ದಾರೆ ಎಂಬುದು ಸಿಕ್ಕಿರುವ ಸುದ್ದಿ. ಅದೇ ಆಗಿದ್ದರೆ ಎಲ್ಲರಿಗೂ ಸಂತೋಷ.
ಅಂದಹಾಗೆ, ಹೇಮಂತ್ ಹೆಗಡೆ ನಿರ್ದೇಶನದ 'ನಿಂಬೆಹುಳಿ' ಚಿತ್ರದ ಹಾಡು "ರಾಮ ರಾಮಾ ಶ್ರೀರಾಮ... ಫಸ್ಟ್ ನೈಟೇ ಟ್ರಾಫಿಕ್ ಜಾಮಾ..." (ವಿಡಿಯೋ ನೋಡಿ) ಎಂಬ ಹಾಡು 'ಯೂಟ್ಯೂಬ್' ನಲ್ಲಿ ಹೊಸ ಹವಾ ಎಬ್ಬಿಸಿದೆ. ಜನಪ್ರಿಯ ಹನಿಗವಿ ಎಚ್ ದುಂಡಿರಾಜ್ ಬರೆದು ವೀರ್ ಸಮರ್ಥ್ ಸಂಗೀತ ಸಂಯೋಜಿಸಿರುವ ಈ ಹಾಡು ಈಗಾಗಲೆ '80,000' ಹಿಟ್ಸ್ ದಾಖಲಿಸಿದೆ. ಚಿತ್ರ ಬಿಡುಗಡೆ ಹೊತ್ತಿಗೆ ಈ ಹಾಡು ಮತ್ತಷ್ಟು ಜನರನ್ನು ಸೆಳೆದು ಚಿತ್ರಕ್ಕೆ ಒಳ್ಳೆಯ ಓಪನಿಂಗ್ ದೊರಕಿಸಿಕೊಡುವುದು ಖಂಡಿತ ಎಂದಿದ್ದಾರೆ ಚಿತ್ರದ ನಿರ್ದೇಶಕ ಹೇಮಂತ್ ಹೆಗಡೆ ಹಾಗೂ ನಿರ್ಮಾಪಕ ಸುಭಾಷ್ ಘಾಯ್. (ಒನ್ ಇಂಡಿಯಾ ಕನ್ನಡ)


Click it and Unblock the Notifications











