ಮತ್ತೊಂದು ಮಹತ್ವದ ಕೆಲಸ: ಶಿವಮೊಗ್ಗದ ಆವಿಗೆ ಗ್ರಾಮ ದತ್ತು ಪಡೆದ ಸುದೀಪ್
ಭಾರತೀಯ ಚಿತ್ರರಂಗದ ಧ್ರುವತಾರೆ ಕಿಚ್ಚ ಸುದೀಪ್ ಸಿನಿಮಾ ಕ್ಷೇತ್ರದ ಹೊರಗೆಯೂ 'ರಿಯಲ್ ಹೀರೋ'. ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಮೂಲಕ ಅನೇಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.
ಇತ್ತೀಚಿಗಷ್ಟೆ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ನಾಲ್ಕು ವರ್ಷ ಪೂರೈಸಿತ್ತು. ನಾಲ್ಕು ವರ್ಷದ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದ ಅಭಿಮಾನಿಗಳು ಮೂಕಪ್ರಾಣಿಗಳಿಗೆ ಸಹಾಯಹಸ್ತ ಚಾಚಿದ್ದರು.
ಸದ್ಯದಲ್ಲೇ ಮತ್ತೊಂದು ಪ್ರಮುಖ ವಿಚಾರವೊಂದನ್ನು ಹೇಳುತ್ತೇವೆ ಎಂದು ''ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ'' ಸುಳಿವು ನೀಡಿತ್ತು. ಆ ಪ್ರಮುಖ ಪ್ರಕಟಣೆ ಇಂದು ಹೊರಬಿದ್ದಿದೆ.

ಹೌದು, ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಮೂಲಕ ನಟ ಸುದೀಪ್ ಶಿವಮೊಗ್ಗದ ಆವಿಗೆ ಎಂಬ ಗ್ರಾಮವನ್ನು ದತ್ತು ಪಡೆದುಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆವಿಗೆ ಗ್ರಾಮದ ಅಭಿವೃದ್ದಿ ಹಾಗೂ ಮಾದರಿ ಗ್ರಾಮವನ್ನಾಗಿಸುವ ಮಹತ್ವಾಕಾಂಕ್ಷೆಯಿಂದ ಸುದೀಪ್ ಚಾರಿಟೇಬಲ್ ಸೊಸೈಟಿ ಈ ಗ್ರಾಮವನ್ನು ದತ್ತು ಪಡೆದಿದೆ. ಈ ಕುರಿತು ಸ್ಥಳೀಯ ಶಾಸಕರು ಹಾಗೂ ಆಡಳಿತ ಮಂಡಳಿಯಿಂದ ಅನುಮತಿ ಸಹ ಪಡೆದುಕೊಳ್ಳಲಾಗಿದೆ.
ಅಂದ್ಹಾಗೆ, ಸುದೀಪ್ ಅವರ ಗ್ರಾಮವೊಂದನ್ನು ದತ್ತು ಪಡೆದುಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ದಿಪಡಿಸಿರುವ ಉದಾಹರಣೆಗಳಿವೆ.
ಇನ್ನು ಸಿನಿಮಾ ವಿಚಾರಕ್ಕೆ ಬಂದ್ರೆ ಕೋಟಿಗೊಬ್ಬ 3 ಸಿನಿಮಾ ಏಪ್ರಿಲ್ ತಿಂಗಳಲ್ಲಿ ತೆರೆಗೆ ಬರಲಿದೆ. ಅದಾದ ಬಳಿಕ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಆಗಲಿದೆ. ಸದ್ಯ, ಸುದೀಪ್ ಬಿಗ್ ಬಾಸ್ ಕನ್ನಡ ಹೊಸ ಆವೃತ್ತಿಯಲ್ಲಿ ಬ್ಯುಸಿ ಇದ್ದಾರೆ.


Click it and Unblock the Notifications











