'ಬಿಲ್ಲಾ ರಂಗ ಬಾಷ' ಚಿತ್ರದ ಪ್ರಮುಖ ಪಾತ್ರಕ್ಕೆ ಬಹುಭಾಷಾ ನಟ ಆಯ್ಕೆ!
ಅನೂಪ್ ಭಂಡಾರಿ ನಿರ್ದೇಶನದಲ್ಲಿ ಸುದೀಪ್ ನಟನೆಯ 'ಬಿಲ್ಲಾ ರಂಗ ಬಾಷ' ಸಿನಿಮಾ ಹೈಪ್ ಕ್ರಿಯೇಟ್ ಮಾಡ್ತಿದೆ. ಮುಂದಿನ ವರ್ಷವೇ ಸಿನಿಮಾ ತೆರೆಗೆ ಬರಲಿದೆ. ಭರ್ಜರಿ ಸೆಟ್ ಹಾಕಿ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಮೂಡಿ ಬರುತ್ತಿದೆ.
ಸುದೀಪ್ ಬಿಟ್ಟರೆ 'ಬಿಲ್ಲಾ ರಂಗ ಬಾಷ' ಸಿನಿಮಾ ಸ್ಟಾರ್ಕಾಸ್ಟ್ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಚಿತ್ರತಂಡ ಗುಟ್ಟು ಕಾಪಾಡಿಕೊಳ್ಳುತ್ತಿದೆ. ಘಟಾನುಘಟಿ ಕಲಾವಿದರೇ ಚಿತ್ರದಲ್ಲಿ ನಟಿಸಲಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಪರಭಾಷೆಯ ಸ್ಟಾರ್ ನಟರು ತಂಡ ಸೇರುವ ಸಾಧ್ಯತೆಯಿದೆ. ಮುಖ್ಯವಾದ ಪಾತ್ರಕ್ಕೆ ಬಹುಭಾಷಾ ನಟನನ್ನು ಕರೆತರಲು ಅನೂಪ್ ಭಂಡಾರಿ ಪ್ರಯತ್ನಿಸುತ್ತಿದ್ದಾರೆ.

'ರಂಗಿತರಂಗ' ಸಿನಿಮಾ ಬಳಿಕ ಅನೂಪ್ ಮಾಡಿದ್ದ 'ರಾಜರಥ' ಸಿನಿಮಾ ಗೆಲ್ಲಲಿಲ್ಲ. ಬಳಿಕ ಸುದೀಪ್ ಜೊತೆ 'ವಿಕ್ರಾಂತ್ ರೋಣ' ಸಿನಿಮಾ ಮಾಡಿದ್ದರು. ಇದೀಗ 'ಬಿಲ್ಲಾ ರಂಗ ಬಾಷ' ಇವರಿಬ್ಬರೂ ಜೊತೆಯಾಗಿದ್ದಾರೆ. 10 ವರ್ಷ ಪೂರೈಸಿರುವ 'ರಂಗಿತರಂಗ' ಸಿನಿಮಾ ಮರು ಬಿಡುಗಡೆಗೆ ಸಿದ್ಧವಾಗುತ್ತಿದೆ. ಮುಂದಿನ ವಾರವೇ ಮತ್ತೆ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಈ ಬಗ್ಗೆ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದೆ.
'ಬಿಲ್ಲಾ ರಂಗ ಬಾಷ' ಚಿತ್ರದ ಪ್ರಮುಖ ಪಾತ್ರದಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್ ನಟಿಸುವ ಸಾಧ್ಯತೆಯಿದೆ. ಈ ಬಗ್ಗೆ ಅನೂಪ್ ಹಾಗೂ ಸಾಯಿಕುಮಾರ್ ಇಬ್ಬರೂ ಸುಳಿವು ಕೊಟ್ಟಿದ್ದಾರೆ. "ವಿಕ್ರಾಂತ್ ರೋಣ' ಕಥೆ ಮಾಡಿದಾಗ ಅದು 'ರಂಗಿತರಂಗ'-2 ಆಗಿತ್ತು. ಅದನ್ನು ಸಾಯಿಕುಮಾರ್ ಸರ್ಗೆ ಹೇಳಿದ್ದೆ. ಬಳಿಕ ಸುದೀಪ್ ಅವರ ಬಳಿ ಹೇಳಿ ಕೊಂಚ ಬದಲಾಯಿತು. ಆಗ ಸಾಯಿಕುಮಾರ್ ಅವರ ಪಾತ್ರಕ್ಕೆ ಮಹತ್ವ ಇಲ್ಲ ಎಂದು ಅವರು ನಟಿಸಲಿಲ್ಲ. ಮುಂದೆ ಇದಕ್ಕಿಂತ ದೊಡ್ಡ ಚಿತ್ರಕ್ಕೆ ಜೊತೆಯಾಗುತ್ತೇವೆ. ಆದಷ್ಟು ಬೇಗ ಇದು ನಡೆಯುತ್ತದೆ" ಎಂದು ಅನೂಪ್ ಭಂಡಾರಿ ಹೇಳಿದ್ದಾರೆ.
ಇದೇ ವಿಚಾರದ ಬಗ್ಗೆ ಮಾಧ್ಯಮವೊಂದರ ಸಂದರ್ಶನದಲ್ಲಿ ಸಾಯಿಕುಮಾರ್ ಕೂಡ ಮಾತನಾಡಿದ್ದಾರೆ. "ಖಂಡಿತ ಅಂತಹ ಅವಕಾಶ ಸಿಕ್ಕರೆ ನಟಿಸುತ್ತೇನೆ. ಅನೂಪ್ ಕೂಡ ಹೇಳುತ್ತಿದ್ದಾರೆ ನೋಡೋಣ. ಸುದೀಪ್ ಅವ್ರ ಬಳಿಕ ಕೂಡ ಕೇಳಿದ್ದೀನಿ. ಚಿತ್ರರಂಗದಲ್ಲಿ ಇದು ನನ್ನ 50ನೇ ವರ್ಷ. ಹಾಗಾಗಿ ಸಿನಿಮಾದಲ್ಲಿ ನಟಿಸಬೇಕು ಎಂದೆ. ಅವರು ಮುಗುಳ್ನಕ್ಕು ಓಕೆ ಎನ್ನುವಂತೆ ಪ್ರತಿಕ್ರಿಯಿಸಿದ್ದಾರೆ. ನೋಡೋಣ ಅನೂಪ್ ಏನ್ ಮಾಡ್ತಾರೆ" ಎಂದು ಸಾಯಿಕುಮಾರ್ ಹೇಳಿದ್ದಾರೆ.
ಸಾಯಿಕುಮಾರ್ ಕನ್ನಡ ಚಿತ್ರರಂಗಕ್ಕೆ ಹೊಸಬರೇನು ಅಲ್ಲ. ದಶಕಗಳ ಹಿಂದೆಯೇ ಕನ್ನಡ ಸಿನಿಮಾಗಳಲ್ಲಿ ಮಿಂಚಿದ್ದರು. 'ಪೊಲೀಸ್ ಸ್ಟೋರಿ' ಸಿನಿಮಾ ಮೂಲಕ ಹೀರೊ ಆಗಿ ಸಕ್ಸಸ್ ಕಂಡಿದ್ದರು. ಡೈಲಾಗ್ ಕಿಂಗ್ ಎಂಬ ಬಿರುದು ಸಿಕ್ಕಿತ್ತು. ಇತ್ತೀಚಿನ ವರ್ಷಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಾ ಬರ್ತಿದ್ದಾರೆ.


Click it and Unblock the Notifications











