'ಮ್ಯಾಕ್ಸ್' ಜೋಡಿ ಹೊಸ ಸಿನಿಮಾ K47 ಮುಹೂರ್ತ; ಇಲ್ಲಿದೆ ಎಕ್ಸ್ಕ್ಲೂಸಿವ್ ಫೋಟೊಸ್
ಸದ್ದಿಲ್ಲದೇ ಸುದೀಪ್ ನಟನೆಯ ಹೊಸ ಸಿನಿಮಾ ಸೆಟ್ಟೇರಿದೆ. 'ಬಿಲ್ಲ ರಂಗ ಬಾಷ' ಜೊತೆಗೆ ಈ ಚಿತ್ರದಲ್ಲಿ ಕಿಚ್ಚ ನಟಿಸಿದ್ದಾರೆ. 'ಮ್ಯಾಕ್ಸ್' ಸಿನಿಮಾ ಮಾಡಿ ಗೆದ್ದಿದ್ದ ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಸತ್ಯಜ್ಯೋತಿ ಫಿಲ್ಮ್ಸ್ ಸಂಸ್ಥೆ ಚಿತ್ರ ನಿರ್ಮಾಣ ಮಾಡುತ್ತಿದೆ.
ಕಳೆದ ವರ್ಷ ಡಿಸೆಂಬರ್ 25ಕ್ಕೆ ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿ 'ಮ್ಯಾಕ್ಸ್' ಸಿನಿಮಾ ಬಂದು ಗೆದ್ದಿತ್ತು. 50 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗಿತ್ತು. ಅದೇ ತಂಡ ಈ ಚಿತ್ರಕ್ಕೆ ಜೊತೆಯಾಗಿದೆ. ಆದರೆ ಈ ಚಿತ್ರಕ್ಕೆ 'ಮ್ಯಾಕ್ಸ್' ಕಥೆಗೂ ಯಾವುದೇ ಸಂಬಂಧ ಇಲ್ಲ. ಇದು ಹೊಸ ಕಥೆ. ಆದರೆ ಅದಕ್ಕಿಂತಲೂ ಅದ್ಭುತ ಕಥೆ ಎಂದು ಚಿತ್ರತಂಡ ಹೇಳಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಚಿತ್ರದ ಬಗ್ಗೆ ತಂಡ ಮಾಹಿತಿ ನೀಡಿತ್ತು.

ಸತ್ಯಜ್ಯೋತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಚೇರನ್ ನಿರ್ದೇಶನದ ಸಿನಿಮಾದಲ್ಲಿ ಕಿಚ್ಚ ನಟಿಸಬೇಕಿತ್ತು. ಆದರೆ ಈಗ ಚೇರನ್ ಜಾಗಕ್ಕೆ ವಿಜಯ್ ಕಾರ್ತಿಕೇಯನ್ ಬಂದಿದ್ದಾರೆ. ಇದು ಕೂಡ ಔಟ್ ಅಂಡ್ ಔಟ್ ಮಾಸ್ ಎಂಟರ್ಟೈನರ್ ಸಿನಿಮಾ ಆಗಿರಲಿದೆ. 'ಮ್ಯಾಕ್ಸ್' ಚಿತ್ರಕ್ಕೂ ತಮಿಳು ಚಿತ್ರ ನಿರ್ಮಾಣ ಸಂಸ್ಥೆ ವಿ ಕ್ರಿಯೇಷನ್ಸ್ ಬಂಡವಾಳ ಹೂಡಿತ್ತು. ಇದೀಗ ಈ ಚಿತ್ರವನ್ನು ಕೂಡ ತಮಿಳು ಸಂಸ್ಥೆ ನಿರ್ಮಿಸುತ್ತಿದೆ.
ಚೆನ್ನೈನಲ್ಲಿ ಸೆಟ್ ಹಾಕಿ 'K47' ಸಿನಿಮಾ ಚಿತ್ರೀಕರಣ ಆರಂಭಿಸಲಾಗುತಿದೆ. ಅಲ್ಲೇ ಪೂಜೆ ಸಲ್ಲಿಸಿದ್ದು ಪ್ರಿಯಾ ಸುದೀಪ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ಮೂಡಿ ಬರಲಿದೆ. ಈ ಚಿತ್ರದಲ್ಲಿ ಕೂಡ ಸುದೀಪ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಅಬ್ಬರಿಸುವ ಸುಳಿವು ಸಿಗುತ್ತಿದೆ. ಹೊಸ ಸೆಟ್ ಕೂಡ 'ಮ್ಯಾಕ್ಸ್' ಚಿತ್ರದ ಪೊಲಿಸ್ ಸ್ಟೇಷನ್ ಸೆಟ್ ನೆನಪಿಸುವಂತಿದೆ. ಸೆಟ್ನಲ್ಲಿ ಕೆಲವರು ಪೊಲೀಸರ ರೀತಿ ಖಾಕಿ ತೊಟ್ಟು ಕಾಣಿಸಿಕೊಂಡಿದ್ದಾರೆ.

'ಮ್ಯಾಕ್ಸ್' ಚಿತ್ರದಲ್ಲಿ ಕನ್ನಡ ಕಲಾವಿದರು ಹಾಗೂ ತಂತ್ರಜ್ಞರು ಕೆಲಸ ಮಾಡಿದ್ದರು. ಹೊಸ ಚಿತ್ರದಲ್ಲಿ ಕೂಡ ಅದೇ ಪ್ರಯತ್ನ ನಡೀತಿದೆ. ಈ ವರ್ಷ ಡಿಸೆಂಬರ್ 25ಕ್ಕೆ ಶತಾಯಗತಾಯ ಸಿನಿಮಾ ಬಿಡುಗಡೆ ಮಾಡುವ ಪ್ರಯತ್ನ ಮಾಡುತ್ತೇವೆ ಎಂದು ಸುದೀಪ್ ಹೇಳಿದ್ದಾರೆ. ಈಗಾಗಲೇ ಅನೂಪ್ ಭಂಡಾರಿ ನಿರ್ದೇಶನದ 'ಬಿಲ್ಲ ರಂಗ ಬಾಷ' ಸಿನಿಮಾ ಚಿತ್ರೀಕರಣ ಕೂಡ ಸುದೀಪ್ ಆರಂಭಿಸಿದ್ದಾರೆ. ಬೆಂಗಳೂರಿನಲ್ಲಿ ಒಂದು ಶೆಡ್ಯೂಲ್ ಮುಗಿಸಿದೆ.
ಯೂರೋಪ್ನಲ್ಲಿ 'ಬಿಲ್ಲ ರಂಗ ಬಾಷ' ಚಿತ್ರದ ಶೂಟಿಂಗ್ ನಡೆಯಬೇಕಿದೆ. ಅಲ್ಲಿಗೆ ತೆರಳಲು ಸಿದ್ಧತೆ ನಡೀತಿದೆ. ಅದಕ್ಕೂ ಮುನ್ನ 'K47' ಚಿತ್ರದ ಒಂದು ಶೆಡ್ಯೂಲ್ ಮುಗಿಸುವ ಲೆಕ್ಕಾಚಾರದಲ್ಲಿದೆ ಚಿತ್ರತಂಡ. 'ಮ್ಯಾಕ್ಸ್'ಗಿಂತಲೂ ಇದು ಬಹಳ ವಿಭಿನ್ನ ಕಥೆ ಎಂದು ಸುದೀಪ್ ಹೇಳಿದ್ದಾರೆ. ತಮ್ಮ ಪಾತ್ರ ಕೂಡ ಅದಕ್ಕಿಂತ ಭಿನ್ನವಾಗಿ ಬಹಳ ಚೆನ್ನಾಗಿ ಇರುತ್ತದೆ ಎಂದು ತಿಳಿಸಿದ್ದಾರೆ.
ಚೊಚ್ಚಲ ನಿರ್ದೇಶನದಲ್ಲೇ ವಿಜಯ್ ಕಾರ್ತಿಕೇಯನ್ ಸಕ್ಸಸ್ ಕಂಡಿದ್ದರು. ಹಾಗಾಗಿ ಸುದೀಪ್ ಕರೆದು ಮತ್ತೊಂದು ಅವಕಾಶ ಕೊಟ್ಟಿದ್ದಾರೆ. 'ಮ್ಯಾಕ್ಸ್' ರೀತಿಯಲ್ಲೇ ಈ ಚಿತ್ರದಲ್ಲಿ ಕೂಡ ಕಿಚ್ಚನಿಗೆ ನಾಯಕಿ ಇಲ್ಲ. ಈ ವಿಚಾರವನ್ನು ಸುದೀಪ್ ಖಚಿತಪಡಿಸಿದ್ದಾರೆ. ಸದ್ಯಕ್ಕೆ ಚಿತ್ರಕ್ಕೆ ಒಳ್ಳೆ ಟೈಟಲ್ ಸಿಕ್ಕಿಲ್ಲ. ಇದು ಸುದೀಪ್ ನಟನೆಯ 47ನೇ ಸಿನಿಮಾ. ಹಾಗಾಗಿ 'K47' ಎಂದು ಕರೆಯಲಾಗುತ್ತಿದೆ.
ಈ ಚಿತ್ರಕ್ಕೆ ಕೂಡ ಅಜನೀಶ್ ಲೋಕನಾಥ್ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ ಇರಲಿದೆ. ಕಿಚ್ಚನನ್ನು ಮತ್ತೆ ಖಾಕಿ ಖದರ್ನಲ್ಲಿ ನೋಡಲು ಅಭಿಮಾನಿಗಳು ಕಾಯುವಂತಾಗಿದೆ.


Click it and Unblock the Notifications











