"ಬೊಮ್ಮಾಯಿ ಮಾಮ ಅವರನ್ನು ಗೆಲ್ಲಿಸಿಬಿಟ್ಟು ಹೋಗ್ತೀನಿ": ಕಿಚ್ಚ ಸುದೀಪ್
ಇತ್ತೀಚೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ನಟ ಸುದೀಪ್ ಬೆಂಬಲ ಸೂಚಿಸಿದ್ದರು. ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದಾಗಿ ಹೇಳಿದ್ದರು. ಇಂದು(ಏಪ್ರಿಲ್ 19) ಸಿಎಂ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾವಿಯಲ್ಲಿ ನಾಮಪತ್ರ ಸಲ್ಲಿಸಿದ್ದು ಈ ವೇಳೆ ರೋಡ್ಶೋನಲ್ಲಿ ನಟ ಸುದೀಪ್ ಕೂಡ ಭಾಗಿ ಆಗಿದ್ದರು. ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಕೂಡ ಸಾಥ್ ನೀಡಿದ್ದಾರೆ.
ಶಿಗ್ಗಾಂವಿ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ನಟ ಕಿಚ್ಚ ಸುದೀಪ್ ಮಾತನಾಡಿದರು. "ಮೊದಲ ಬಾರಿಗೆ ನಾನು ಈ ಊರಿಗೆ ಬಂದಿದ್ಧೇನೆ. ಬಹಳ ಸುಂದರವಾಗಿ ಸ್ವಾಗತ ಕೋರಿದ್ದೀರಾ. ಸುಂದರವಾಗಿ ನಿಮ್ಮ ಪ್ರೀತಿ ತೋರಿಸಿದ್ದೀರಾ. ಧನ್ಯವಾದಗಳು. ಕನಕದಾಸರು, ಸಂತ ಶಿಶಿನಾಳ ಶರೀಫರು ಹುಟ್ಟಿದ ಈ ಭೂಮಿಯನ್ನು ನಾನು ನನ್ನ ಚುನಾವಣೆ ಪ್ರಚಾರ ಆರಂಭಿಸಿದ್ದೇನೆ. ಬಹಳ ಖುಷಿ ಇದೆ ನನಗೆ. ನಾನು ನಮ್ಮ ಮಾನ್ಯ ಮುಖ್ಯಮಂತ್ರಿಗಳ ಪರವಾಗಿ ಇಲ್ಲಿಗೆ ಬಂದಿದ್ಧೇನೆ."

"ಸಿಎಂ ಬೊಮ್ಮಾಯಿ ಅವರ ಬಗ್ಗೆ ಹೇಳಬೇಕು ಅಂದ್ರೆ, ಬಹಳ ಕಡಿಮೆ ಅವಧಿಯಲ್ಲಿ ಬಹಳ ಕೆಲಸ ಮಾಡಿದಂತಹ ಒಳ್ಳೆಯ ವ್ಯಕ್ತಿ ನನ್ನ ಪ್ರೀತಿಯ ಬೊಮ್ಮಾಯಿ ಮಾಮ ಅಂದ್ರೆ ತಪ್ಪಾಗಲ್ಲ. ಹಿಂದಿಯಲ್ಲಿ ಒಂದು ಒಳ್ಳೆಯ ಮಾತಿದೆ. ನಾಮ್ಕೆವಾಸ್ತೆ ಅಲ್ಲ, ಕಾಮ್ಕೆವಾಸ್ತೆ ಅಂತ. ಅದನ್ನು ಅವರಲ್ಲಿ ನಾನು ನೋಡುತ್ತೇನೆ. ಈ ಊರಿಗೆ ಬಂದಾಗ ಇಷ್ಟು ಒಳ್ಳೆ ಮೆರವಣಿಗೆ ಆದಾಗ ಈ ಬಿಸಿಲಲ್ಲಿ ನಿಂತು ನೀವು ಅವರನ್ನು ಸ್ವಾಗತಿಸಿದ ರೀತಿ ಅವರಿಗೆ ತೋರಿದ ಪ್ರೀತಿ ನೋಡಿದರೆ ಅವ್ರು ಎಷ್ಟು ಜರನ ಮನಗೆದ್ದಿದ್ದಾರೆ ಅನ್ನೋದು ಗೊತ್ತಾಗುತ್ತದೆ. ಇದಕ್ಕಾಗಿ ಎಷ್ಟು ಒಳ್ಳೆ ಕೆಲಸ ಮಾಡಿದ್ದಾರೆ ಅನ್ನೋದು ಗೊತ್ತಾಗುತ್ತೆ"
"ಸಿಎಂ ಅವರಿಗೆ ಸಿಕ್ಕಿರುವ ಅವಧಿ ಬಹಳ ಕಮ್ಮಿ. ಅವರಿಗೆ ಕೆಲಸ ಮಾಡಲು ಅವಕಾಶ ಬೇಕು. ಈಗ ಅವರ ಜೊತೆ ನಾನು ಬಂದಿದ್ದೇನೆ. ಕೆಲಸಗಳು ನಡಿಬೇಕು. ಜನರಿಗೆ ಒಳ್ಳೆಯದು ಆಗಬೇಕು. ಮುಖ್ಯವಾಗಿ ನಿಮಗೆ ಒಳ್ಳೆಯದು ಆಗಬೇಕು. ನನ್ನನ್ನು ಕರೆಸಿದ್ದಕ್ಕೆ ಧನ್ಯವಾದಗಳು. ನಾನು ಭಾರತೀಯನಾಗಿ, ಪ್ರಧಾನಿ ಮೋದಿಯವರ ಕೆಲಸಗಳನ್ನು ಮೆಚ್ಚುತ್ತೇನೆ. ಇವತ್ತು ವಿದೇಶಕ್ಕೆ ಹೋದ್ರು ಭಾರತದ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಾರೆ. ಯಾವುದೇ ಸರ್ಕಾರ ರಚನೆ ಆದರೂ ಕೆಲವು ಕೆಲಸ ನಡೆಯುತ್ತೆ, ಕೆಲವು ಕೊರತೆ ಇರುತ್ತೆ. ನಿಮ್ಮ ನಂಬಿಕೆ ಇದ್ದರೆ ಕೆಲಸಗಳು ಚೆನ್ನಾಗಿ ಆಗುತ್ತೆ.

"ಸುಮ್ ಸುಮ್ನೆ ಕ್ಯಾಂಪೇನ್ಗೆ ನಾವು ಇಳಿಯಲ್ಲ. ಕೆಲಸ ಆಗಬೇಕು ಎನ್ನುವ ಕಡೆ ಬರ್ತೀವಿ. ಒಳ್ಳೆಯದಾಗಲಿ. ನನ್ನ ಸಿನಿಮಾದಲ್ಲಿ ಒಂದು ಸಾಲಿತ್ತು. ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇಬೇಕು ಒಳ್ಳೆತನ. ಅದನ್ನು ನಂಬಿ ಇಲ್ಲಿವರೆಗೂ ಬಂದವನು, ಇಲ್ಲಿಂದ ಮುಂದೆ ಕೂಡ ನಂಬಿಕೊಂಡು ಹೋಗ್ತೀನಿ. ಜೊತೆಗೆ ನಿಮ್ಮೆಲ್ಲರ ಸಹಕಾರದಿಂದ ಬೊಮ್ಮಾಯಿ ಮಾಮ ಅವರನ್ನು ಗೆಲ್ಲಿಸಿಬಿಟ್ಟು ಹೋಗ್ತೀನಿ" ಎಂದು ಸುದೀಪ್ ಹೇಳಿದ್ದಾರೆ.


Click it and Unblock the Notifications











