ಮಕ್ಕಳ ಆನ್ ಲೈನ್ ಕ್ಲಾಸ್ನಲ್ಲಿ ಕಿರಿಕಿರಿ ಆಗ್ತಿದ್ಯಾ?, ಹೊಸ ಉಪಾಯ ಮಾಡಿದ್ದಾರೆ ಸುದೀಪ್
ಅಭಿನಯ ಚಕ್ರವರ್ತಿ ನಟನೆ ಜೊತೆಗೆ ಸಾಮಾಜಿಕ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಮೂಲಕ ಅನೇಕ ಜನಪರ ಕೆಲಸಗಳನ್ನು ಮಾಡುತ್ತಿದ್ದಾರೆ. ಸಾಕಷ್ಟು ಮಂದಿಗೆ ನೆರವಿನ ಹಸ್ತ ಚಾಚಿದ್ದಾರೆ. ಕೊರೊನಾ ಲಾಕ್ ಡೌನ್ ಸಮಯದಲ್ಲಿ ಸುದೀಪ್ ಟ್ರಸ್ಟ್ ಸಾಕಷ್ಟು ಮಾನವೀಯ ಕೆಲಸಗಳನ್ನು ಮಾಡುವ ಮೂಲಕ ಅನೇಕರ ಪ್ರಾಣ ಉಳಿಸಿದೆ. ಜೊತೆಗೆ ಆರೋಗ್ಯ, ಶಿಕ್ಷಣ, ಹಸಿದವರಿಗೆ ಅನ್ನ ಹೀಗೆ ಅನೇಕ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದಾರೆ.
ಇನ್ನು ವಿಶೇಷ ಎಂದರೆ ಕಿಚ್ಚ ಚಾರಿಟೇಬಲ್ ಸೊಸೈಟಿ ಅಕ್ಷರ ಕ್ರಾಂತಿಗೆ ಮುಂದಾಗಿರುವುದು. ಈ ಮೂಲಕ ಮೊದಲ ಹಂತವಾಗಿ ಶಾಲೆಗಳನ್ನು ದತ್ತು ಪಡೆದುಕೊಳ್ಳುವ ಕೆಲಸ ಯಶಸ್ವಿ ಆಗಿದೆ. ಈಗ ಮುಂದಿನ ಹಂತವಾಗಿ ಆ ಮಕ್ಕಳಿಗೆ ಸರಿಯಾದ ರೀತಿಯ ಶಿಕ್ಷಣ ಕೊಡಿಸುವ ಕೆಲಸದತ್ತ ಗಮನಹರಿಸಿದೆ. ಇದಕ್ಕಾಗಿ ಉತ್ತಮವಾದ ಪ್ಲಾನ್ ಮಾಡಿದೆ. ಈ ವಿಚಾರವಾಗಿ ಮಹತ್ವದ ಕೆಲಸಕ್ಕೆ ಕೈಹಾಕಿರುವ ಕಿಚ್ಚ ಚಾರಿಟೆಬರ್ ಸೊಸೈಟಿ, ಹೊಸ ಆಪ್(App) ಪರಿಚಯಿಸಿ ಆ ಮೂಲಕ ಮಕ್ಕಳಿಗೆ ಪಾಠ ಮಾಡಲು ಮುಂದಾಗಿದೆ.
ಸದ್ಯ ಕೊರೊನಾ ಕಾರಣದಿಂದ ಶಾಲೆಗಳು ಬಂದ್ ಆಗಿದ್ದು, ಮಕ್ಕಳಿಗೆ ಆನ್ಲೈನ್ ಕ್ಲಾಸ್ ನಡೆಯುತ್ತಿದೆ. ಆದರೆ ಈ ಆನ್ಲೈನ್ ಕ್ಲಾಸ್ನಲ್ಲಿ ಆಗುವ ಕಿರಿಕಿರಿ ತಡೆಯಲು ಹೊಸ ಆಪ್ ಬಿಡುಗಡೆ ಮಾಡುತ್ತಿದೆ. ಈ ಬಗ್ಗೆ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿಯ ಅಧ್ಯಕ್ಷ ರಮೇಶ್ ಕಿಟ್ಟಿ ಬಹಿರಂಗ ಪಡಿಸಿದ್ದಾರೆ.

ಹೊಸ ಆಪ್ ಮೂಲಕ ಟ್ರಸ್ಟ್ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡುವತ್ತ ಗಮನ ಹರಿಸಿದ್ದಾರೆ. ಅಂದಹಾಗೆ ಕಿಚ್ಚ ಅಂಡ್ ತಂಡದವರು ಮಾಡಿರುವ ಹೊಸ ಆಪ್ನಿಂದ ಮಕ್ಕಳ ಆನ್ ಲೈನ್ ಕ್ಲಾಸ್ ಇನ್ನಷ್ಟು ಸುಲಭ ಆಗಲಿದೆ. ಸದ್ಯ ಆನ್ಲೈನ್ ಕ್ಲಾಸ್ನಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ಬೆನ್ನು ನೋಡಿಕೊಂಡು ಪಾಠ ಕೇಳುತ್ತಿದ್ದಾರೆ. ಅದರಿಂದ ಪಾಠ ಅರ್ಥ ಆಗದೇ ವಿದ್ಯಾರ್ಥಿಗಳು ಕಷ್ಟಪಡುತ್ತಿದ್ದಾರೆ. ಆದರೆ ಈ ಆಪ್ ಬಳಸಿದರೆ ಅಂಥ ಪ್ರಮೇಯ ಎದುರಾಗುವುದಿಲ್ಲ ಎಂಬ ಭರವಸೆಯನ್ನು ಕಿಚ್ಚ ಸದೀಪ್ ಚಾರಿಟೇಬಲ್ ಸೊಸೈಟಿ ನೀಡಿದೆ.
ಸುದೀಪ್ ಚಾರಿಟೇಬಲ್ ಸೊಸೈಟಿಯ ಅಧ್ಯಕ್ಷರು ಹೇಳಿದ್ದೇನು?
ಡಾರ್ಕ್ ಬೋರ್ಡ್ ಆನಿಮೇಷನ್ ಎಜುಕೇಷನ್ ಎಂಬ ಆಪ್ ಬಳಸಿ ಆನ್ ಲೈನ್ ಕ್ಲಾಸ್ ಮಾಡಬಹುದು. ಇದರಿಂದ ವಿದ್ಯಾರ್ಥಿಗಳಿಗೆ ದೊಡ್ಡ ಲಾಭ ಇದೆ. ಈ ಆಪ್ ಬಳಸಿ ಪಾಠ ಮಾಡಿದರೆ ಮಕ್ಕಳಿಗೆ ಶಿಕ್ಷಕರ ಪಾಠ ಚೆನ್ನಾಗಿ ಅರ್ಥ ಆಗುತ್ತದೆ. ಶಾಲೆಯಲ್ಲಿ ಡಾರ್ಕ್ ಬೋರ್ಡ್ ರೂಂ ಮಾಡಿ ಪಾಠ ಮಾಡಬಹುದು. ಯಾವುದೇ ವಿಷಯದ ಪಾಠವನ್ನು ರೆಕಾರ್ಡ್ ಮಾಡಿ ಕೂಡ ವಿದ್ಯಾರ್ಥಿಗಳಿಗೆ ಕಳಿಸಬಹುದು ಎಂದು ರಮೇಶ್ ಕಿಟ್ಟಿ ಮಾಹಿತಿ ನೀಡಿದ್ದಾರೆ.
ಈ ಡಾರ್ಕ್ ಬೋರ್ಡ್ ಪಾಠ ಮಕ್ಕಳು ಶಿಕ್ಷಕರ ಮುಂದೆ ಕೂತು ಪಾಠ ಕೇಳಿದ ಹಾಗಿರುತ್ತದೆ. ಶಿಕ್ಷಕರ ಹಾವ ಭಾವವನ್ನು ನೋಡಿ ಮಕ್ಕಳ ಪಾಠ ಅರ್ಥ ಮಾಡಿಕೊಳ್ಳಬಹುದು. ಡ್ರಾಯಿಂಗ್ ಬರೆದೂ ಕೂಡ ಪಾಠ ಮಾಡೋದಕ್ಕೆ ಸಹಾಯ ಆಗುತ್ತೆ. ಈ ಆಪ್ ಅನ್ನು ಎಲ್ಲಾ ಸರ್ಕಾರಿ ಶಾಲೆ, ಖಾಸಗಿ ಶಾಲೆಯವರು ಬಳಸಿಕೊಳ್ಳಬಹುದು. ಜೊತೆಗೆ ರಾಜ್ಯ ಸರ್ಕಾರಕ್ಕೂ ಈ ಆಪ್ ಬಗ್ಗೆ ಮನವರಿಕೆ ಮಾಡಿಕೊಡಲು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಮುಂದಾಗುತ್ತಿದೆ.
ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಈ ಆಪ್ ಬಗ್ಗೆ ತಿಳಿಸಿ, ಆನ್ ಲೈನ್ ಕ್ಲಾಸ್ಗಳಲ್ಲಿ ಬಳಸಿಕೊಳ್ಳುವಂತೆ ಮನವಿ ಮಾಡಲಿದೆ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ. ದತ್ತು ಪಡೆದ ಶಾಲೆಗಳನ್ನು ಈ ಆಪ್ ಮೂಲಕ ಸಂಪೂರ್ಣ ಡಿಜಿಟಲ್ ಆಗಿಸುವ ಕೆಲಸ ಮಾಡುತ್ತಿದ್ದಾರೆ ಕಿಚ್ಚ ಸುದೀಪ್. ಮೊದಲು ಸುದೀಪ್ ದತ್ತು ಪಡೆದ ಶಾಲೆಗಳಲ್ಲಿ ಈ ಆಪ್ ಬಳಕೆ ಮಾಡಲಾಗುತ್ತೆ. ಆ ನಂತರ ಎಲ್ಲಾ ಶಾಲಾ ಶಿಕ್ಷಕರಿಗೂ ಇದನ್ನು ಬಳಸಿಕೊಳ್ಳಲು ಉತ್ತೇಜಿಸುವ ಕೆಲಸ ಮಾಡುತ್ತೇವೆ ಎಂದು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಅಧ್ಯಕ್ಷ ರಮೇಶ್ ಕಿಟ್ಟಿ ಹೇಳಿದ್ದಾರೆ.
ಸುದೀಪ್ ಬಳಿ ಇರುವ ಸಿನಿಮಾಗಳು
ಸುದೀಪ್ ಸದ್ಯ ಬಹುನಿರೀಕ್ಷೆಯ ವಿಕ್ರಾಂತ ರೋಣ ಸಿನಿಮಾದ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಕಾಟುತ್ತಿದ್ದಾರೆ. ಈ ಸಿನಿಮಾಗೂ ಮೊದಲೇ ಕಿಚ್ಚ ಕೋಟಿಗೊಬ್ಬ-3 ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಅಂದುಕೊಂಡಂತೆ ಆಗಿದ್ದಾರೆ ಈ ಸಿನಿಮಾ ಈಗಾಗಲೇ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಲೆಕ್ಕಾಚಾರ ಉಲ್ಟಪಲ್ಟವಾಗಿದೆ. ಕೋಟಿಗೊಬ್ಬ-3 ಯಾವಾಗ ಬಿಡುಗಡೆಯಾಗಬಹುದು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಜೊತೆಗೆ ಈಗಾಗಲೇ ವಿಕ್ರಾಂತ್ ರೋಣನ ಹವಾ ಶುರುವಾಗಿದೆ. ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಎಂಟ್ರಿ ಚಿತ್ರದ ಮೇಲಿನ ಕುತೂಹಲ ಮತ್ತು ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಈಗಾಗಲೇ ಜಾಕ್ವೆಲಿನ್ ಮೊದಲ ಲುಕ್ ಬಿಡುಗಡೆಯಾಗಿದ್ದು ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಇನ್ನು ಕಿಚ್ಚನ ಜೊತೆ ಹೆಜ್ಜೆ ಹಾಕಿರುವುದನ್ನು ತೆರೆಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.


Click it and Unblock the Notifications











