ಮದಕರಿ ಸಿನಿಮಾ 'ಜಾತಿ' ವಿವಾದ: ಸ್ವಾಮೀಜಿ ಹೇಳಿಕೆಗೆ ಪತ್ರ ಬರೆದ ಸುದೀಪ್
Recommended Video

'ಮದಕರಿ ನಾಯಕ ಚಿತ್ರವನ್ನ ನಮ್ಮ ಸಮುದಾಯದವರೇ ಆದ ಕಿಚ್ಚ ಸುದೀಪ್ ಅವರೇ ಮಾಡಬೇಕು. ಬೇರೆ ಯಾರೇ ಮಾಡಿದ್ರು, ಅದನ್ನ ನಾವು ಒಪ್ಪುವುದಿಲ್ಲ. ಅದರ ವಿರುದ್ಧ ಪ್ರತಿಭಟನೆ ಮಾಡ್ತೀವಿ. ಅಗತ್ಯ ಬಿದ್ರೆ ಕೋರ್ಟ್ ಗೂ ಹೋಗುತ್ತೇವೆ' ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಾ ಪುರಿ ಸ್ವಾಮೀಜಿ ಹೇಳಿಕೆ ನೀಡಿದ್ದರು.
ಈ ಹೇಳಿಕೆ ಸ್ಯಾಂಡಲ್ ವುಡ್ ಮಂದಿಗೆ ಮತ್ತು ಅಭಿಮಾನಿ ಬಳಗದಲ್ಲಿ ಸಮರಕ್ಕೆ ಕಾರಣವಾಯಿತು. 'ಮದಕರಿ ನಾಯಕ' ಚಿತ್ರ ಮಾಡಲು ಜಾತಿ ಮಾನದಂಡವೇ ಎಂಬ ವಿಷ್ಯದಡಿ ಸಾಮಾಜಿಕ ಜಾಲತಾಣ, ಟಿವಿ ವಾಹಿನಿಗಳಲ್ಲಿ ಚರ್ಚೆ ಮಾಡಲಾಯಿತು.
ಈ ಬಗ್ಗೆ ಸ್ವತಃ ಸುದೀಪ್ ಅವರೇ ಮಧ್ಯ ಪ್ರವೇಶ ಮಾಡಬೇಕು. ಸ್ವಾಮೀಜಿ ಅವರ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಬೇಕು ಎಂಬ ಒತ್ತಾಯವನ್ನ ಕನ್ನಡ ಕಲಾಭಿಮಾನಿಗಳು ಮಾಡಿದ್ರು. ಕೊನೆಗೂ ಕಿಚ್ಚ ಸುದೀಪ್ ಅವರು ಈ ವಿಷ್ಯದ ಬಗ್ಗೆ ಗೂಗಲ್ ಪ್ಲಸ್ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಅಷ್ಟಕ್ಕೂ, ಸ್ವಾಮೀಜಿ ಹೇಳಿಕೆ ಕುರಿತು ಸುದೀಪ್ ಏನಂದ್ರು.? ಮುಂದೆ ಓದಿ.....

ಅವರ ಸಿನಿಮಾ ಅವರು ಮಾಡಲಿ....
'ಈಗ ಚಾನಲ್ ಗಳು ಹಾಗೂ ವೇದಿಕೆಗಳಲ್ಲಿ ಚರ್ಚೆಯ ವಿಷಯವಾಗಿರುವ ವಸ್ತು, ಚರ್ಚೆ ಮಾಡುವುದಕ್ಕಾಗಿಯೇ ಹುಟ್ಟಿಕೊಂಡಿರುವಂತಿದೆ. ವಿಷಯ ಸರಳವಾಗಿದೆ... ರಾಕ್ ಲೈನ್ ವೆಂಕಟೇಶ್ ಅವರು ತಮಗೆ ಇಷ್ಟವಿರುವ ಸಿನಿಮಾ ಮಾಡುತ್ತಿದ್ದಾರೆ. ನಾನು ಇಷ್ಟಪಟ್ಟು ಕನಸು ಕಂಡು ಮಾಡಬೇಕೆಂದಿರುವ ಸಿನಿಮಾ ನಾನು ಮುಂದುವರೆಸುತ್ತೇನೆ' - ಸುದೀಪ್, ನಟ

ಸ್ವಾಮೀಜಿ ಅಭಿಪ್ರಾಯ ಅಷ್ಟೇ ಅದು
'ಸ್ವಾಮೀಜಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಷಯ ಇಲ್ಲಿಗೆ ಮುಗಿಯಬೇಕು. ಮುಗಿಯದ ಚರ್ಚೆಗಳಿಂದ ಏನೂ ಪ್ರಯೋಜನವಿಲ್ಲ. ಎಲ್ಲರ ಅಭಿಪ್ರಾಯ, ಆಸೆಗಳು ಹಾಗೂ ಚಿಂತನೆಗಳನ್ನು ಗೌರವಿಸುತ್ತ ಈ ವಿಷಯದ ಬಗೆಗಿನ ಚರ್ಚೆ ಇಲ್ಲಿಗೆ ತಿಳಿಯಾಗಲಿ' - ಸುದೀಪ್, ನಟ

ನನಗೆ ಚರ್ಚೆಯ ವಿಷಯವೇ ಅಲ್ಲ
'ಕ್ರಿಯಾಶೀಲ ಕೆಲಸಗಳಲ್ಲಿ ಎಂದೂ ಜಾತಿಯ ಯೋಚನೆಗಳು ಬರುವುದಿಲ್ಲ, ಬರಕೂಡದು. ಸ್ವಾಮೀಜಿಗಳು, ರಾಕ್ ಲೈನ್ ವೆಂಕಟೇಶ್ ರವರು ಹಾಗೂ ಚಾನೆಲ್ ರವರ ಅಭಿಪ್ರಾಯಗಳನ್ನು ಗೌರವಿಸುತ್ತೇನೆ. ಆದ್ರೆ, ಇದು ನನಗೆ ಚರ್ಚೆಯ ವಿಷಯವೇ ಅಲ್ಲ' - ಸುದೀಪ್, ನಟ

ಸಿನಿಮಾ ಮಾಡುವುದೇ ಪ್ರೇಕ್ಷಕರಿಗಾಗಿ
'ನನ್ನ ಹಿಂದಿನ ಪತ್ರದಲ್ಲೂ ಇದನ್ನು ಸ್ಪಷ್ಟಪಡಿಸಿದ್ದೇನೆ. ಸಿನಿಮಾ ಮಾಡುವುದೇ ಪ್ರೇಕ್ಷಕರಿಗಾಗಿ. ಎರಡೂ ಸಿನಿಮಾಗಳನ್ನು ಅವರಿಗೆ ಕೊಡುಗೆ ಕೊಡೋಣ. ಎರಡೂ ಚಿತ್ರಗಳು ಚರಿತ್ರೆಯ ಆ ಮಹಾಪುರುಷನಿಗೆ ಗೌರವ ಸಲ್ಲಿಸಲಿ. ಈಗ ನಡೆಯುತ್ತಿರುವ ಚರ್ಚೆಗಳಿಗಿಂತ ಎರಡು ಚಿತ್ರಗಳು ಮಾಡಿ ಅವರಿಗೆ ಗೌರವಿಸೋಣ' - ಸುದೀಪ್, ನಟ

ಚರ್ಚೆ ಮಾಡಲು ಬೇರೆ ಸಮಸ್ಯೆಗಳಿವೆ
'ಗಮನ ಹರಿಸಲು ಇದಕ್ಕಿಂತ ಮುಖ್ಯವಾಗಿ ಸಾಮಾನ್ಯ ಜನರ ಸಮಸ್ಯೆಗಳು ಬಹಳಷ್ಟಿವೆ. ಇದಕ್ಕೆ ಹರಿಬಿಟ್ಟ ಶಕ್ತಿ ಹಾಗು ಶ್ರಮ ಆ ಸಮಸ್ಯೆಗಳಿಗೆ ವ್ಯಯಿಸಿದರೆ ಎಲ್ಲರ ಜೀವನವು ಸ್ವಲ್ಪವಾದರೂ ಹಸನಾದೀತು. ಯೋಚನೆಗಳು ಯಾವಾಗಲೂ ಜನಪರವಾಗಿರಲೆಂದು ನನ್ನ ಈ ಎರಡು ಮಾತುಗಳೇ ಹೊರತು ಯಾರ ಮನಸನ್ನು ನೋಯಿಸಲು ಅಲ್ಲ' - ಸುದೀಪ್, ನಟ


Click it and Unblock the Notifications











