ಬಿಗ್ಬಾಸ್ ಮನೆಗೆ ಬೀಗ ಬಿದ್ದಾಗ ನಾನು ಫೋನ್ ಮಾಡಿದ್ದು ಅವ್ರಿಗೆ; ಸಮಸ್ಯೆ ಬಗೆಹರಿಸಿದ್ದು ಅವ್ರೇ- ಸುದೀಪ್
ಈ ಬಾರಿ ಬಿಗ್ಬಾಸ್ ಕನ್ನಡ ಸೀಸನ್ ಸಾಕಷ್ಟು ವಿವಾದಗಳಿಂದ ಸುದ್ದಿ ಮಾಡಿದ್ದು ಗೊತ್ತೇಯಿದೆ. ಎರಡ್ಮೂರು ದಿನ ಬಿಗ್ಬಾಸ್ ಮನೆಗೆ ಬೀಗ ಬಿದ್ದಿತ್ತು. ಬಳಿಕ ಸಮಸ್ಯೆ ಬಗೆಹರಿದು ಕಾರ್ಯಕ್ರಮ ಮತ್ತೆ ಅದೇ ಮನೆಯಲ್ಲಿ ನಡೆಯುವಂತಾಗಿತ್ತು. ಸೀಸನ್ ಆರಂಭವಾದ ಕೆಲವೇ ದಿನಗಳಲ್ಲಿ ಸಮಸ್ಯೆ ಆಗಿತ್ತು. ಅಕ್ಟೋಬರ್ 7ರಂದು ಬಿಗ್ಬಾಸ್ ಸೆಟ್ ಹಾಕಿರುವ ಜಾಲಿವುಡ್ ಸ್ಟುಡಿಯೋ ಗೇಟ್ ಬಂದ್ ಆಗಿತ್ತು.
ತ್ಯಾಜ್ಯ ನೀರು ಸಂಸ್ಕರಣೆ, ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿಗೆ ಸಂಬಂಧಿಸಿದಂತೆ ಪರಿಸರ ನಿಯಮ ಉಲ್ಲಂಘನೆ, ಪೊಲೀಸ್ ಅನುಮತಿ ಇಲ್ಲ ಕಾರಣಗಳಿಗಾಗಿ ಅಧಿಕಾರಿಗಳು ಜಾಲಿವುಡ್ ಸ್ಟುಡಿಯೋಗೆ ಬೀಗ ಜಡಿದಿದ್ದರು. ಅದೇ ಸ್ಟುಡಿಯೋ ಒಳಗೆ ಬಿಗ್ಬಾಸ್ ಮನೆ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗುತ್ತಿದೆ. ಅಂದು ಬೀಗ ಹಾಕಿದ ತಕ್ಷಣ ನಾನು ಡಿಸಿಎಂ ಡಿ. ಕೆ ಶಿವಕುಮಾರ್ ಅವರಿಗೆ ಫೋನ್ ಮಾಡಿದ್ದೆ ಎಂದು ಸುದೀಪ್ ಹೇಳಿದ್ದಾರೆ.

ವಿಷಯ ಗೊತ್ತಾಗುತ್ತಿದ್ದಂತೆ ನಾನು ನಲಪಾಡ್ ಮೂಲಕ ಡಿಕೆ ಶಿವಕುಮಾರ್ ಅವರೊಟ್ಟಿಗೆ ಕರೆ ಮಾಡಿ ಮಾತನಾಡಿದೆ. ಕೂಡಲೇ ಸಮಸ್ಯೆ ಬಗೆಹರಿಸುವ ಭರವಸೆ ಕೊಟ್ಟರು. ಅವರೊಟ್ಟಿಗೆ ನನಗೆ ಆತ್ಮೀಯ ಒಡನಾಟ ಇದೆ. ಇಲ್ಲದೇ ಇದ್ದರೆ ಕೂಡಲೇ ಅವರು ರಾತ್ರಿ 11 ಗಂಟೆಗೆ ಟ್ವೀಟ್ ಮಾಡುತ್ತಿರಲಿಲ್ಲ ಎಂದು R- ಕನ್ನಡ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸುದೀಪ್ ಹೇಳಿದ್ದಾರೆ.
'ಮಾರ್ಕ್' ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಸುದೀಪ್ ಸಾಕಷ್ಟು ಸಂದರ್ಶನಗಳಲ್ಲಿ ಮಾತನಾಡುತ್ತಿದ್ದಾರೆ. ಈ ವೇಳೆ ಬಿಗ್ಬಾಸ್ ಶೋಗೆ ಸಂಬಂಧಿಸಿದ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ. ಚಿತ್ರರಂಗದ 'ನಟ್ಟು ಬೋಲ್ಟು ಟೈಟ್ ಮಾಡ್ತೀವಿ' ಎಂದು ಬೆಂಗಳೂರು ಚಿತ್ರೋತ್ಸವ ಸಮಾರಂಭದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದರು. ಇದಕ್ಕೆ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿ, ಚಿತ್ರರಂಗದ ಬಗ್ಗೆ ತಿಳಿದುಕೊಂಡು ಮಾತನಾಡಬೇಕು, ನಾವು ಸದಾ ಎಲ್ಲರಿಗೂ ಸಹಕಾರ ನೀಡುತ್ತಾ ಬಂದಿದ್ದೇವೆ. ಯಾವತ್ತೂ ಕರೆದಾಗ ಬರಲ್ಲ ಎಂದು ಹೇಳಿಲ್ಲ. ಸಾಧು ಕೋಕಿಲ ಕಾರಣದಿಂದ ಈ ಗೊಂದಲವಾಗಿದೆ ಎಂದು ಸುದೀಪ್ ಹೇಳಿದ್ದರು.
ಬಿಗ್ಬಾಸ್ ಮನೆಗೆ ಬೀಗ ಬಿದ್ದಾಗ ಅದು ರಾಜಕೀಯಪ್ರೇರಿತ ಎನ್ನುವ ಅರ್ಥದಲ್ಲಿ ಚರ್ಚೆ ಆಗಿತ್ತು. ಚಿತ್ರರಂಗದ ನೆಟ್ಟು ಬೋಲ್ಟು ಟೈಟ್ ಮಾಡೋದು ಅಂದ್ರೆ ಇದೇನಾ? ಎಂದು ಕೆಲವರು ಕಾಮೆಂಟ್ ಮಾಡಲು ಆರಂಭಿಸಿದ್ದರು. ಇದೇ ವಿಚಾರವಾಗಿ ಸುದೀಪ್ ಮಾತನಾಡಿದ್ದಾರೆ. "ನಟ್ಟು ಬೋಲ್ಟು ನನಗೋಸ್ಕರ ಮಾಡಿದ್ರು ಎನ್ನುವುದು ಸರಿಯಲ್ಲ. ಡಿಕೆ ಸರ್ ಜೊತೆ ನನ್ನ ಬಾಂಧವ್ಯ ಬಹಳ ಚೆನ್ನಾಗಿದೆ. ಅವರ ಹೆಸರನ್ನು ಸುಮ್ಮನೆ ಎಳೆದು ತಂದರು. ಅವ್ರಿಗೆ ಇದಕ್ಕೂ ಸಂಬಂಧವೇ ಇರಲಿಲ್ಲ" ಎಂದು ಸುದೀಪ್ ಸ್ಪಷ್ಟಪಡಿಸಿದ್ದಾರೆ.
ಬಿಗ್ಬಾಸ್ ಮನೆಗೆ ಬೀಗ ಹಾಕುವ ವಿಚಾರದಲ್ಲಿ ಒಳಗೊಳಗೆ ಸಾಕಷ್ಟು ವಿಚಾರಗಳಿವೆ ಎಂದು ಸುದೀಪ್ ಹೇಳಿದ್ದಾರೆ. "ನಿಜ ಹೇಳಬೇಕು ಅಂದ್ರೆ ಸಮಸ್ಯೆ ಬಗೆಹರಿಸಿಕೊಟ್ಟಿದ್ದು ಡಿಕೆ ಸರ್. ನನಗೂ ಅವರಿಗೂ ಆಗಿಬರಲ್ಲ ಅಂದ್ರೆ, ನಾನು ಯಾಕ ಫೋನ್ ಮಾಡ್ತಿದ್ದೆ. ನಾನೇ ಫಸ್ಟ್ ಫೋನ್ ಮಾಡ್ದೆ. ನನ್ನ ಗೆಳೆಯ ನಲಪಾಡ್ ಮೂಲಕ ಫೋನ್ ಮಾಡಿದ್ದೆ. ಕೂಡಲೇ ಪ್ರತಿಕ್ರಿಯಿಸಿದರು. ನಮ್ಮ ಮೇಳೆ ಗೌರವ ಇಲ್ಲದಿದ್ದರೆ ಮಾಡ್ತಿದ್ರಾ? 11 ಗಂಟೆ ರಾತ್ರಿಗೆ ಟ್ವೀಟ್ ಮಾಡ್ತಿದ್ರಾ? ಎಂದು ಸುದೀಪ್ ವಿವರಿಸಿದ್ದಾರೆ.
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಜಾಲಿವುಡ್ ಸ್ಟುಡಿಯೋ ಮೇಲೆ ಕ್ರಮ ಕೈಗೊಂಡು ಬೀಗ ಹಾಕಿದ್ದಾಗ ಅನಿವಾರ್ಯವಾಗಿ ಬಿಗ್ಬಾಸ್ ಶೋ ಚಿತ್ರೀಕರಣ ನಿಂತಿತ್ತು. ಮನೆ ಒಳಗೆ ಇದ್ದ ಸ್ಪರ್ಧಿಗಳನ್ನು ತಾತ್ಕಾಲಿಕವಾಗಿ ಈಗಲ್ಟನ್ ರೆಸಾರ್ಟ್ಗೆ ಸ್ಥಳಾಂತರಿಸಲಾಗಿತ್ತು. ಮೂರ್ನಾಲ್ಕು ದಿನಗಳ ಬಳಿಕ ಸಮಸ್ಯೆ ಬಗೆಹರಿದು ಮತ್ತೆ ಸ್ಪರ್ಧಿಗಳು ಮನೆ ಒಳಗೆ ಹೋಗಿದ್ದರು.


Click it and Unblock the Notifications











