ಇವತ್ತು ಎಲ್ಲೆಲ್ಲಿ, ಹೇಗಿತ್ತು ದರ್ಶನ್, ಶಿವರಾಜ್ಕುಮಾರ್ ಚುನಾವಣೆ ಪ್ರಚಾರ? ಹುಬ್ಬಳ್ಳಿಯಲ್ಲಿ ಸಂಬರಗಿಗೆ ಶಿವಣ್ಣ ತಿರುಗೇಟು
ಸ್ಯಾಂಡಲ್ವುಡ್ ತಾರೆಯರ ಚುನಾವಣೆ ಪ್ರಚಾರ ಮುಂದುವರೆದಿದೆ. ಬಹಿರಂಗ ಪ್ರಚಾರಕ್ಕೆ ಇನ್ನು 2 ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ಮತಬೇಟೆ ಬಿರುಸುಗೊಂಡಿದೆ. ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಶಿವರಾಜ್ಕುಮಾರ್ ಇಂದು ಕೂಡ ವಿವಿಧ ಅಭ್ಯರ್ಥಿಗಳ ಪರ ಮತಯಾಚಿಸಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ನಟ ಶಿವರಾಜ್ಕುಮಾರ್ ತಮ್ಮ ಬಗ್ಗೆ ಕೆಲವರ ಟೀಕೆಗಳಿಗೆ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರಚಾರ ಸಭೆಯಲ್ಲಿ ನಟ ಶಿವರಾಜ್ ಕುಮಾರ್ ಭಾಗಿಯಾಗಿ ಮಾತನಾಡಿದರು. ಇತ್ತೀಚೆಗೆ ವರುಣ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪರ ಶಿವಣ್ಣ ಮತ ಕೇಳಿದ್ದರು. ಇನ್ನು ಹಿರಿಯೂರು ಮತ್ತು ಹೊಳಲ್ಕೆರೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂ ಚಂದ್ರಪ್ಪ ಹಾಗೂ ಹಿರಿಯೂರು ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಕೆ ಪೂರ್ಣಿಮಾ ಶ್ರೀನಿವಾಸ್ ಅವರ ಪರವಾಗಿ ನಟ ಸುದೀಪ್ ಪ್ರಚಾರ ನಡೆಸಬೇಕಿತ್ತು. ಮಳೆಯ ಕಾರಣ ಕಾರ್ಯಕ್ರಮ ನಾಳಗೆ ಮುಂದೂಡಲಾಗಿದೆ. ಇನ್ನು ಹೊನ್ನಾಳಿಯಲ್ಲಿ ರೇಣುಕಾಚಾರ್ಯ ಪರ ದರ್ಶನ್ ಭರ್ಜರಿ ರೋಡ್ ಶೋ ನಡೆಸಿದರು.

ಇನ್ನು ಶಿವಣ್ಣ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿರುವುದಕ್ಕೆ ಬಿಜೆಪಿ ನಾಯಕರು ಬೇಸರ ವ್ಯಕ್ತಪಡಿಸಿದ್ದರು. ಬಿಗ್ಬಾಸ್ ಖ್ಯಾತಿಯ ಪ್ರಶಾಂತ್ ಸಂಬರಗಿ "ಶಿವಣ್ಣ ಯಾವತ್ತೂ ಸ್ಕ್ರಿಪ್ಟ್ ಕೇಳೋದೇ ಇಲ್ಲ. ಆದರೆ, ಪೇಮೆಂಟ್ ತುಂಬಾನೇ ಮುಖ್ಯ. ಒಪ್ಪಿಕೊಂಡಿದ್ದ ಸಿನಿಮಾ ಮಾಡ್ತಾರೆ. ತುಂಬಾ ಎಮೋಷನಲ್ ಜೀವಿ ನಮ್ಮ ಶಿವಣ್ಣ. ಸಿನಿಮಾ ಫ್ಲಾಪ್ ಆದರೂ, ಅವರು ಕೇರ್ ಮಾಡಲ್ಲ. ಮತ್ತೆ ಪೇಮೆಂಟ್ ತಗೊಂಡು ಇನ್ನೊಂದು ಫಿಲ್ಮ್ ಗೆ ಸೈನ್ ಮಾಡ್ಬಿಡ್ತಾರೆ. ಅದೇ ಫಾರ್ಮುಲಾ ರಾಜಕೀಯದಲ್ಲೂ ಅನುಸರಿಸಿದ್ದಾರೆ. ಕ್ಯಾಂಡಿಡೇಟ್ ಗೆದ್ರೆ ಏನು ಸೋತ್ರೆ ಏನು ಎಲ್ಲಾ ಒಂದೇ. ಏನೋ ಹೇಳ್ತಾರಲ್ಲ ಗೆದ್ದರೆ ಬೆಟ್ಟ. ಇಲ್ಲ ಅಂದ್ರೆ.. ಬಂತಾ ಪ್ಯಾಕೆಟ್.. ಸರಿ ಆಲ್ ರೈಟ್ ಮುಂದೆ ಹೋಗೋಣ" ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದರು.
ಪ್ರಶಾಂತ್ ಸಂಬರಗಿಗೆ ಶಿವಣ್ಣ ಉತ್ತರ
ಪ್ರಶಾಂತ ಸಂಬರಗಿ ಪೋಸ್ಟ್ ವಿಚಾರಕ್ಕೆ ನಟ ಶಿವಣ್ಣ ಪ್ರತಿಕ್ರಿಯಿಸಿದ್ದು, " ಆ ರೀತಿ ಮಾತಾಡೋದು ಸರಿ ಅಲ್ಲ. ಅದನ್ನು ವಾಪಸ್ ತಗೆದುಕೊಳ್ಳಬೇಕು. ನಮ್ಮ ಹತ್ರ ಹಣನೇ ಇಲ್ವಾ? ನಾನು ಹಣ ಪಡೆದು ಇಲ್ಲಿ ಬಂದಿಲ್ಲ, ವ್ಯಾಪರಕ್ಕೆ ಬಂದಿಲ್ಲ. ಹೃದಯದಿಂದ ನಾನು ಬಂದಿರೋದು. ಮನುಷ್ಯನಿಗಾಗಿ ಬಂದಿದ್ದೇನೆ. ಯಾರನ್ನೂ ಟೀಕೆ ಮಾಡೋಕೆ ನಾನು ಬಂದಿಲ್ಲ. ಬೇರೆ ಯಾರನ್ನೂ ಟೀಕೆ ಮಾಡೋಕೆ ಬಂದಿಲ್ಲ. ನೀವ್ ಆನ್ಸರ್ ಮಾಡಿ ನೋಡೋಣ. ನಾನು ಎಲ್ಲ ಪ್ರಶ್ನೆಗೂ ಉತ್ತರ ಕೊಡಲ್ಲ" ಎಂದು ಹೇಳಿದ್ದಾರೆ.
ಟ್ರೋಲ್ ವಿಚಾರದ ಬಗ್ಗೆ ಮಾತನಾಡಿದ ಸೆಂಚುರಿ ಸ್ಟಾರ್ "ಟ್ರೋಲ್ ಮಾಡೋದು ಸರಿನಾ? ಯಾತಕ್ಕೆ ಟ್ರೋಲ್? ನಾನೇನು ಮಾಡಬೇಕು ಇದಕ್ಕೆ. ನೀವೆ ಮನಸ್ಸಿನಿಂದ ನೋಡಿ ಟ್ರೋಲ್ ಮಾಡೋದು ಸರಿನಾ? ಇಲ್ಲಿರೋರು ಎಲ್ಲರೂ ಟ್ರೋಲ್ ಮಾಡೋಕೆ ಬಂದಿದ್ದಾರಾ? ಇಲ್ಲಿ ಬಂದಿರೋರು ಎಲ್ಲಾ ಕಾಂಗ್ರೆಸ್ನವರಾ? ಎಲ್ಲಾ ಪಕ್ಷದವರು ಇರ್ತಾರೆ. ಟ್ರೋಲ್ ಯಾಕೆ, ಮನುಷ್ಯ ಅರ್ಥ ಮಾಡಕೊಳ್ಳಬೇಕು. ಎಷ್ಟು ದಿನ ಟ್ರೋಲ್ ಮಾಡ್ತಾರೆ.
ಹೃದಯದಿಂದ ಥಿಂಕ್ ನೋಡಬೇಕಿದೆ. ಮೈಂಡ್ ಇಂದ ಯೋಚನೆ ಮಾಡಬಾರದು. ಸಾವಿರ ಜನ ಹೇಳ್ತಾರೆ ಅಂತಾ ಫಾಲೋ ಮಾಡಬಾರದು. ಅಣ್ಣಾವ್ರು ಯಾವ ಪಕ್ಷದಲ್ಲಿ ಗುರುತಿಸಿಕೊಂಡಿಲ್ಲ ಅನ್ನೋ ಹೇಳಿಕೆಗೆ ಶಿವಣ್ಣ ಗರಂ ಆಗಿ ಪದೇ ಪದೇ ಅದೇ ಪ್ರಶ್ನೆ ಯಾಕೆ ಎಂದು ಕೇಳಿದ್ದಾರೆ.
ಹಾಡು ಹಾಡಿ ರಂಜಿಸಿದ ಶಿವಣ್ಣ
ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪರ ಪ್ರಚಾರ ಮಾಡಿ ಮಾತನಾಡಿದ ಶಿವಣ್ಣ "ಹುಬ್ಬಳ್ಳಿಯವರು ಹೂವಿನಂತ ಮನಸಿನವರು. ಹುಬ್ಬಳ್ಳಿ ಅಂದ ತಕ್ಷಣ ಒಂದು ಸ್ಪೆಷಲ್ ಕನೆಕ್ಷನ್. ನನಗೆ ಅದೃಷ್ಟದ ಜಾಗ ಇದು. ನಾನು ಇಲ್ಲಿ ಮಾಡಿದ ಸಿನಿಮಾ ಎಲ್ಲ ಹಿಟ್ ಆಗಿದೆ. ಅಪ್ಪಾಜಿ ಕಾಲದಿಂದಲೂ ನಮಗೆ ಹುಬ್ಬಳ್ಳಿ ಸ್ಪೆಷಲ್. ನಾನು ಇಲ್ಲಿಗೆ ಬಂದಾಗ ಯಾವಾಗಲೂ ಜಗದೀಶ್ ಶೆಟ್ಟರ್ ಮನೆಗೆ ಹೋಗ್ತಿದೆ. ಅವಲಕ್ಕಿ ಮಾಡ್ತಿದ್ರು. ಬಹಳ ಚೆನ್ನಾಗಿರುತ್ತಿತ್ತು. ಅವರ ಫ್ಯಾಮಿಲಿ ಜೊತೆ ಬಹಳ ಒಡನಾಟ ಇತ್ತು. ಶೆಟ್ಟರ್ ಅವರನ್ನು ಗೆಲ್ಲಿಸಿ. ಗೆದ್ದಮೇಲೆ ನಾನು ಮತ್ತೆ ಬರ್ತೀನಿ ಎಂದ ಶಿವರಾಜಕುಮಾರ್ 'ಮೈಲಾರಿ', 'ಹುಟ್ಟಿದರೆ ಕನ್ನಡ ನಾಡಲ್ಲಿ' ಹಾಡುಗಳನ್ನು ಹಾಡಿ ರಂಜಿಸಿದರು.
ರೇಣುಕಾಚಾರ್ಯ ಪರ ದರ್ಶನ್ ಮತಬೇಟೆ
ನ್ಯಾಮತಿ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಎಂ. ಪಿ. ರೇಣುಕಾಚಾರ್ಯರ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭರ್ಜರಿ ಪ್ರಚಾರ ನಡೆಸಿದರು. ಸಾವಿರಾರು ಯುವಕರು ದರ್ಶನ್ ತೂಗುದೀಪ ನೋಡಲು ಮುಗಿಬಿದ್ದರು. ಹೊನ್ನಾಳಿ ಪಟ್ಟಣ ಹಾಗೂ ನ್ಯಾಮತಿಯಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ತು. ಹೊನ್ನಾಳಿ - ನ್ಯಾಮತಿ ವಿಧಾನಸಭಾ ಕ್ಷೇತ್ರವು ಜಿದ್ದಾಜಿದ್ದಿನ ಕಣವಾಗಿದೆ. ಶುಕ್ರವಾರವಷ್ಟೇ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಅಭ್ಯರ್ಥಿ ಡಿ. ಜಿ. ಶಾಂತನಗೌಡ ಪರ ಪ್ರಚಾರ ನಡೆಸಿದ್ದರು. ಇದಕ್ಕೆ ಠಕ್ಕರ್ ಎಂಬಂತೆ ಇಂದು ದರ್ಶನ್ ಅವರನ್ನು ಕರೆಸಿ ರೋಡ್ ಶೋ ನಡೆಸುವ ಮೂಲಕ ತಿರುಗೇಟು ನೀಡುವ ಪ್ರಯತ್ನವನ್ನು ರೇಣುಕಾಚಾರ್ಯ ಮಾಡಿದರು.

ರೇಣುಕಾಚಾರ್ಯ ಪತ್ನಿ, ಪುತ್ರಿ ಹಾಗೂ ಪುತ್ರರ ಜೊತೆ ತೆರೆದ ವಾಹನದಲ್ಲಿ ರೋಡ್ ಶೋ ನಡೆಸುವ ವೇಳೆ ಜನಜಂಗುಳಿಯೇ ನೆರೆದಿತ್ತು. ರಸ್ತೆಯ ಇಕ್ಕೆಲಗಳಲ್ಲಿ ದರ್ಶನ್ ಪರ ಘೋಷಣೆಗಳು ಮುಗಿಲು ಮುಟ್ಟಿದವು. ಹೊನ್ನಾಳಿ ಪಟ್ಟಣದಲ್ಲಿ ಮಾತನಾಡಿದ ದರ್ಶನ್ ತೂಗುದೀಪ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿ. ಜನರ ಪರವಾಗಿ ಕೆಲಸ ಮಾಡುವ ರೇಣುಕಾಚಾರ್ಯರನ್ನು ಗೆಲ್ಲಿಸಿ. ಅವರಿಗೆ ಮತ ನೀಡುವ ಮೂಲಕ ಜಯಶಾಲಿಯಾಗುವಂತೆ ಮಾಡಿ ಎಂದು ಮನವಿ ಮಾಡಿದರು.
ನ್ಯಾಮತಿ ಪಟ್ಟಣದಲ್ಲಿ ಖ್ಯಾತ ಚಿತ್ರನಟ, ಡಿ ಬಾಸ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ತುಗದೀಪ ಅವರ ಹವಾ ಜೋರಾಗಿತ್ತು. ಚುನಾವಣಾ ಪ್ರಚಾರದ ರೋಡ್ ಶೋ ದಲ್ಲಿ ಪಾಲ್ಗೊಂಡು ರೇಣುಕಾಚಾರ್ಯರ ಪರ ಮತಯಾಚಿಸಿದರು. ಈ ಸಂಧರ್ಭದಲ್ಲಿ ಸಹಸ್ತ್ರಾರು ಸಂಖ್ಯೆಯಲ್ಲಿ ಕ್ಷೇತ್ರದ ಜನರು, ದರ್ಶನ್ ಅಭಿಮಾನಿಗಳು ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು. ಇನ್ನು ಹೊನ್ನಾಳಿ ಮತ್ತು ನ್ಯಾಮತಿ ಪಟ್ಟಣದಲ್ಲಿ ರೋಡ್ ಶೋ ಹೋಗುವ ಮಾರ್ಗದುದ್ದಕ್ಕೂ ಜನರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ಯುವಕರಂತೂ ದರ್ಶನ್ ಕೈ ಬೀಸುತ್ತಿದ್ದಂತೆ ಹುಚ್ಚೆದ್ದು ಕುಣಿದರು.


Click it and Unblock the Notifications











