ಅಂದು ಬೇಡವೆಂದಿದ್ದ ಹುಟ್ಟುಹಬ್ಬವನ್ನ ಮತ್ತೆ ಆಚರಿಸಲು ಸುದೀಪ್ ನಿರ್ಧಾರ: ಕಾರಣ ಇಲ್ಲಿದೆ
Recommended Video

ಸೆಪ್ಟಂಬರ್ 2.....ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ. ಮಾಣಿಕ್ಯನ ಈ ಹುಟ್ಟುಹಬ್ಬವನ್ನ ಅಭಿಮಾನಿಗಳು ಪ್ರೀತಿಯಿಂದ 'ಕಿಚ್ಚೋತ್ಸವ' ಎಂಬ ಹೆಸರಿನಿಂದ ಆಚರಿಸುತ್ತಾರೆ. ಆದ್ರೆ, ಸುದೀಪ್ ಈ ವರ್ಷ ತಮ್ಮ ಹುಟ್ಟುಹಬ್ಬವನ್ನ ಸೆಲೆಬ್ರೆಟ್ ಮಾಡಿಕೊಳ್ತಾರಾ ಎನ್ನುವುದು ಕುತೂಹಲ.
ಯಾಕಂದ್ರೆ, ಕಳೆದ ವರ್ಷ ಸ್ವತಃ ಸುದೀಪ್ ಅವರೇ ಘೋಷಣೆ ಮಾಡಿದಂತೆ, ''ಇನ್ಮುಂದೆ ನಾನು ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುವುದಿಲ್ಲ. ನನ್ನ ಹುಟ್ಟುಹಬ್ಬಕ್ಕೆ ಮಾಡುವ ಖರ್ಚಿನಿಂದ ಬಡವರಿಗೆ, ನೊಂದವರಿಗೆ ಸಹಾಯವಾಗಲಿ'' ಎಂದು ನಿರ್ಧರಿಸಿದ್ದರು. ಅದರಂತೆ ಕಳೆದ ವರ್ಷ ಸುದೀಪ್ ಅಭಿಮಾನಿಗಳನ್ನ ಭೇಟಿ ಮಾಡಿರಲಿಲ್ಲ.
ಆದ್ರೀಗ, ಕಿಚ್ಚ ಸುದೀಪ್ ತಮ್ಮ ಮನಸ್ಸನ್ನ ಬದಲಾಯಿಸಿಕೊಂಡಿದ್ದಾರೆ. ಒಂದೊಳ್ಳೆ ಕಾರಣಕ್ಕಾಗಿ ಅಭಿನಯ ಚಕ್ರವರ್ತಿ ಮತ್ತೆ ತಮ್ಮ ಜನುಮದಿನವನ್ನ ಅಭಿಮಾನಿಗಳ ಜೊತೆ ಆಚರಿಸಲು ಮುಂದಾಗಿದ್ದಾರೆ. ಆ ಕಾರಣ ಏನು.? ಮುಂದೆ ಓದಿ......

ಮತ್ತೆ ಬರ್ತಡೇ ಆಚರಿಸಲು ಸುದೀಪ್ ಸೈ
ಕಳೆದ ವರ್ಷ ಅಭಿಮಾನಿಗಳಿಗೆ ಸುದೀಪ್ ಸಿಕ್ಕಿರಲಿಲ್ಲ. ಈ ವರ್ಷ ಅಭಿಮಾನಿಗಳಿಗಾಗಿ ದಿನವನ್ನ ಮೀಸಲಿಡಲಿದ್ದಾರೆ. ಆದ್ರೆ, ಆಡಂಬರವಿರಬಾರದು ಎಂದು ಕರೆ ನೀಡಿದ್ದಾರೆ. ಎಲ್ಲಿಯೂ ದುಡ್ಡು ಖರ್ಚು ಮಾಡಬಾರದು ಎಂದು ಸುದೀಪ್ ಮನವಿ ಮಾಡಿಕೊಂಡಿದ್ದಾರೆ. ಬನ್ನಿ, ವಿಶ್ ಮಾಡಿ, ಬೇರೇನೂ ತರಬಾರದು ಎಂದು ಕಿಚ್ಚ ಕೇಳಿಕೊಂಡಿದ್ದಾರೆ.

ಯಾವುದೇ ಉಡುಗೊರೆ ಬೇಡ
ನೆಚ್ಚಿನ ನಟನನ್ನ ನೋಡಲು ಬರುವ ಅಭಿಮಾನಿಗಳು ವಿಶೇಷವಾದ, ದುಬಾರಿಯಾದ ಉಡುಗೊರೆಗಳನ್ನ ತರುವುದು ಸಾಮಾನ್ಯ. ಆದ್ರೆ, ಇಂತಹ ಉಡುಗೊರೆಗಳಿಗೆ ಈ ಸಲ ಜಾಗವಿಲ್ಲ. ಸ್ವತಃ ಸುದೀಪ್ ಅವರೇ ನೇರವಾಗಿ ತಿಳಿಸಿದ್ದಾರಂತೆ. ಯಾವುದೇ ಉಡುಗೊರೆಯನ್ನ ತರುವಂತಿಲ್ಲ, ತಂದರೂ ನಾನು ಸ್ವೀಕರಿಸುವುದಿಲ್ಲ ಎಂದು ಸುದೀಪ್ ತಮ್ಮ ಅಭಿಮಾನಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರಂತೆ.

ಕೇಕ್-ಹಾರ-ಪಟಾಕಿಗೆ ಬ್ರೇಕ್
ಕೆಜಿಗಟ್ಟಲೇ ಕೇಕ್ ಗಳು, ಲಕ್ಷಾಂತರ ಮೌಲ್ಯದ ಹಾರಗಳು, ಪಟಾಕಿಗಳನ್ನ ತರುವುದನ್ನೆಲ್ಲಾ ಸುದೀಪ್ ನಿರಾಕರಿಸಿದ್ದಾರೆ. ಕೇಕ್ ಗಳನ್ನ ತಂದು ಬೀಸಾಡ್ತಾರೆ, ನಂತರ ಅದನ್ನ ನಿರಾಶ್ರಿತ ಮಕ್ಕಳು ಬೀದಿಯಲ್ಲಿ ಎತ್ಕೊಂಡು ತಿಂತಾರೆ. ಅಂತಹ ಕೆಲಸ ಆಗಬಾರದು. ಕೇಕ್, ಹಾರ, ಶಾಲು, ಹೀಗೆ ಯಾವುದು ವಸ್ತುಗಳನ್ನ ತರುವಂತಿಲ್ಲ ಎಂದು ತಿಳಿಸಿದ್ದಾರಂತೆ.

ಕೊಡಗಿಗೆ ನೆರವಾಗಿ....
ಈಗಾಗಲೇ ಸುದೀಪ್ ಅಭಿಮಾನಿ ಸಂಘಗಳಿಂದ ಕೊಡಗಿನ ಜನತೆಗೆ ಹಲವು ರೀತಿಯಲ್ಲಿ ಸಹಾಯ ಹಸ್ತ ಚಾಚಲಾಗಿದೆ. ಅಗತ್ಯವಸ್ತುಗಳು, ಬಟ್ಟೆ-ಬರೆಯನ್ನ ಒದಗಿಸಿದ್ದಾರೆ. ಈಗಲೂ ಈ ಬರ್ತಡೇಗೆ ಖರ್ಚು ಮಾಡುವ ಹಣವನ್ನ ಉಳಿಸಿ, ಅಲ್ಲಿನ ಜನತೆಗೆ ಸಹಾಯವಾಗುವ ರೀತಿಯಲ್ಲಿ ಮಾಡಬೇಕಾಗಿದೆ ಎಂದು ಅಭಿಮಾನಿಗಳಿಗೆ ತಿಳುವಳಿಕೆ ನೀಡಿದ್ದಾರೆ.

ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಆಚರಣೆ
ಕಳೆದ ವರ್ಷ ಹುಟ್ಟುಹಬ್ಬ ಬೇಡವೆಂದು ನಿರ್ಧರಿಸಿದ್ದ ಸುದೀಪ್, ಈ ವರ್ಷ ಆಚರಣೆ ಮಾಡಲು ಕಾರಣ ಅಭಿಮಾನಿಗಳ ಒತ್ತಾಯ. ನಮಗಾಗಿ ನೀವು ಸಿಗೋದು ಒಂದು ದಿನ, ಆ ದಿನವನ್ನ ನೀವು ಬೇಡ ವೆಂದರೆ ನಮ್ಮ ಅಭಿಮಾನಕ್ಕೆ ಅರ್ಥ ಸಿಗಲ್ಲ ಎಂದು ಸುದೀಪ್ ಬಳಿ ಬಹುತೇಕ ಅಭಿಮಾನಿಗಳ ಕೇಳಿಕೊಂಡಿದ್ದಾರೆ. ಹೀಗಾಗಿ, ಅಭಿಮಾನಿಗಳಿಗಾಗಿಯೇ ಇರುವ ನಟ ತಮ್ಮ ನಿರ್ಧಾರವನ್ನ ಬದಲಿಸಿಕೊಂಡಿದ್ದಾರೆ.


Click it and Unblock the Notifications











