ಬಡ ಮಕ್ಕಳ ನೆರವಿಗೆ ಧಾವಿಸಿದ ಕಿಚ್ಚ ಸುದೀಪ್
ಈ ಕೊರೊನಾ ಸಂಕಷ್ಟದ ಸಮಯದಲ್ಲಿ ಹಲವರು ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಿದ್ದಾರೆ. ಚಂದನವನದ ನಟ-ನಟಿಯರು ಸಹ ತಮ್ಮ ಶಕ್ತ್ಯಾನುಸಾರ ನೆರವಿನ ಹಸ್ತ ಚಾಚುತ್ತಿದ್ದಾರೆ.
ಕಿಚ್ಚ ಸುದೀಪ್, ತಮ್ಮ ಅಭಿಮಾನಿ ಬಳಗದ ಮೂಲಕ ಹಲವು ಸಮಾಜೋಪಯೋಗಿ ಕಾರ್ಯಗಳನ್ನು ಮಾಡುತ್ತಲೇ ಬಂದಿದ್ದಾರೆ. ಇದೀಗ ಕೋವಿಡ್ ಸಂಕಷ್ಟದ ಸಮಯದಲ್ಲಿ ತಮ್ಮ ಸೇವಾಕಾರ್ಯವನ್ನು ಇನ್ನಷ್ಟು ವಿಸ್ತಾರಗೊಳಿಸಿದ್ದಾರೆ.
ಕೋವಿಡ್ ಎರಡನೇ ಅಲೆ ಅಪ್ಪಳಿಸಿದ ಸಂದರ್ಭದಲ್ಲಿ ಚಿತ್ರರಂಗದ ಬಹುತೇಕ ಹಿರಿಯ ನಟ, ನಟಿಯರಿಗೆ ದಿನಸಿ ಕಿಟ್, ಔಷಧಗಳನ್ನು ನೀಡಿದ ಕಿಚ್ಚ ಸುದೀಪ್, ಸಾರ್ವಜನಿಕರಿಗೂ ಆಹಾರ ವ್ಯವಸ್ಥೆ, ಊಟದ ವ್ಯವಸ್ಥೆ ಮಾಡಿದ್ದರು. ಇದೀಗ ಬಡ ಮಕ್ಕಳ ಆರೋಗ್ಯದ ಸುಧಾರಿಸುವತ್ತ ಗಮನ ಕೇಂದ್ರೀಕರಿಸಿದ್ದಾರೆ.

ಕೋವಿಡ್ ಮೂರನೇ ಅಲೆಯ ಬಗ್ಗೆ ಈಗಾಗಲೇ ಜಾಗೃತಿ ಮೂಡಿಸಲಾಗುತ್ತಿದ್ದು, ಮೂರನೇ ಅಲೆಯು ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಕೆಲವರು ತಜ್ಞರು. ಅದರಲ್ಲಿಯೂ ಪೌಷ್ಟಿಕಾಂಶ ಕೊರತೆಯುಳ್ಳ ಮಕ್ಕಳ ಮೇಲೆ ಇದರ ಪರಿಣಾಮ ಹೆಚ್ಚು ಎನ್ನಲಾಗುತ್ತಿದೆ.
ಹಾಗಾಗಿ, ಈಗಲೇ ಎಚ್ಚೆತ್ತುಕೊಂಡಿರುವ ಸುದೀಪ್ ಬೆಂಬಲದ ಕಿಚ್ಚ ಸುದೀಪ ಚಾರಿಟೇಬಲ್ ಟ್ರಸ್ಟ್, ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸುವ ಗುರಿಯನ್ನು ವಿಧಿಸಿಕೊಂಡಿದೆ.
ಸಣ್ಣ ಮಕ್ಕಳನ್ನು ಹೊಂದಿದ ಬಡಕುಟುಂಬದ ಮನೆ ಬಾಗಿಲಿಗೆ ಪೌಷ್ಟಿಕಾಂಶಯುಕ್ತ ಆಹಾರವನ್ನು ತಲುಪಿಸುವ ಯತ್ನವನ್ನು ಕಿಚ್ಚ ಸುದೀಪ ಚಾರಿಟೇಬಲ್ ಟ್ರಸ್ಟ್ ಮಾಡುತ್ತಿದೆ.

1 ರಿಂದ ಹತ್ತು ವರ್ಷದ ಒಳಗಿನ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರವನ್ನು ಸುದೀಪ್ ಟ್ರಸ್ಟ್ ಸದಸ್ಯರು ನೀಡಲಿದ್ದಾರೆ. 'ಮುಂದಿನ ಭಾರತ, ಸ್ವಸ್ಥ ಭಾರತ' ನಾಳೆಯ ಭರವಸೆಯ ಬೆಳಕಿಗೆ ಜೊತೆಯಾಗಲು ಕರೆ ಮಾಡಿ ಎಂದು ಸಂಪರ್ಕ ಸಂಖ್ಯೆಯನ್ನು ನೀಡಿದ್ದಾರೆ ತಮ್ಮ ಪೋಸ್ಟರ್ಗಳಲ್ಲಿ.
Recommended Video
ಕಿಚ್ಚ ಸುದೀಪ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಮೇಶ್ ಕಿಟ್ಟಿ ಮಾತನಾಡಿ, ''ಮೂರನೇ ಅಲೆಯು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳುತ್ತಿದ್ದಾರೆ. ಹಾಗಾಗಿ ಈ ವಿಷಯವಾಗಿ ನಾವು ಸುದೀಪ್ ಬಳಿ ಮಾತನಾಡಿ ನಂತರ ವೈದ್ಯ ಬಾಳಿಗ ಅವರ ಸಲಹೆ ಪಡೆದು ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ವಿತರಣೆ ಕಾರ್ಯ ಆರಂಭಿಸಿದ್ದೇವೆ'' ಎಂದಿದ್ದಾರೆ.


Click it and Unblock the Notifications











