'ಸುದೀಪ್ ರನ್ನು ಬ್ಯಾನ್ ಮಾಡಿ' ಎಂದ ಕನ್ನಡ ಪರ ಸಂಘಟನೆಗೆ ಅಭಿಮಾನಿಗಳ ಸವಾಲ್
ನಟ ಕಿಚ್ಚ ಸುದೀಪ್ ರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎನ್ನುವ ಕೂಗು ಕೇಳಿ ಬರುತ್ತಿದೆ. ಕನ್ನಡ ಪರ ಸಂಘಟನೆವೊಂದು ಸುದೀಪ್ ಅವರನ್ನು ಬ್ಯಾನ್ ಮಾಡಬೇಕೆಂದು ಹೋರಾಟಕ್ಕೆ ಇಳಿದಿದೆ. ರಮ್ಮಿ ಜಾಹಿರಾತಿನಲ್ಲಿ ಕಾಣಿಸಿಕೊಂಡ ಸುದೀಪ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಮ್ಮಿ ಜಾಹಿರಾತಿನಿಂದ ತಪ್ಪು ಸಂದೇಶ ಹೋಗುತ್ತಿದೆ ಎಂದು ಸಂಘಟನೆ ಅಧ್ಯಕ್ಷ ಶಿವಕುಮಾರ್ ನಾಯಕ್ ಆರೋಪ ಮಾಡಿದ್ದಾರೆ.
Recommended Video
ಸುದೀಪ್ ವಿರುದ್ಧ ಹೋರಾಟಕ್ಕೆ ಇಳಿದ ಸಂಘಟನೆಗೀಗ ಕಿಚ್ಚನ ಅಭಿಮಾನಿಗಳು ಸವಾಲ್ ಎಸೆದಿದ್ದಾರೆ. ತಾಕತ್ತಿದ್ದರೆ ಮೊದಲು ಸರ್ಕಾರಕ್ಕೆ ಈ ಬಗ್ಗೆ ತಿಳಿಸಿ, ರಮ್ಮಿ ಬ್ಯಾನ್ ಮಾಡಿಸಿ ಎಂದು ದೀರ್ಘವಾದ ಪತ್ರ ಬರೆದಿದ್ದಾರೆ. ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಕಿಚ್ಚನ ಅಭಿಮಾನಿ ಬಳಗದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮುಂದೆ ಓದಿ..

ತಾಕತ್ತಿದ್ದರೆ ರಮ್ಮಿ ಬ್ಯಾನ್ ಮಾಡಿಸಿ
ಅಂದ್ಹಾಗೆ ಸುದೀಪ್ ಅಭಿಮಾನಿಗಳು ಬರೆದ ಪತ್ರ ಹೀಗಿದೆ "ನಿಮಗೆ ತಾಕತ್ತಿದ್ದರೆ ಮೊದಲು ಸರ್ಕಾರಕ್ಕೆ ಇದರ ಬಗ್ಗೆ ತಿಳಿಸಿ. ಸುಮ್ಮನೆ ಒಬ್ಬ ಕಲಾವಿದನ ತೇಜೋವಧೆ ಮಾಡಿದಕ್ಕೆ ಮೊಂಡು ಕಾರಣವನ್ನು ಹುಡುಬೇಡಿ. ತೆಲಂಗಾಣ ಸರ್ಕಾರ ಅಲ್ಲಿನ ಭಾಷಾಭಿಮಾನಿಗಳು ಹೋರಾಟದ ಮೂಲಕ ರಮ್ಮಿ ಸರ್ಕಲ್ ಬ್ಯಾನ್ ಮಾಡಿಸಿದ್ದಾರೆ"ಎಂದು ಸವಾಲ್ ಎಸೆದಿದ್ದಾರೆ.

ಹೆಮ್ಮೆಯ ಕನ್ನಡಿಗನ ಬಗ್ಗೆ ಮಾತನಾಡುವಾಗ ಯೋಚಿಸಿ
"ಅಷ್ಟೊಂದು ಕಾಳಜಿ ಇದ್ದರೆ ಅರೆಜಾಗೃತ ಭಾಷಾಭಿಮಾನಿಗಳೇ ಮೊದಲು ಕರ್ನಾಟಕ ಸರ್ಕಾರಕ್ಕೆ ಇದರ ಈ ಆಪ್ ನ ನಿಷೇಧದ ಬಗ್ಗೆ ಮಾತಾಡಿ. ಸುದೀಪ್ ರಂತಹ ಕನ್ನಡ ಹಾಗೂ ಕರ್ನಾಟಕದ ಹೆಸರನ್ನು ದೇಶದಾದ್ಯಂತ ಬಾನೆತ್ತರಕ್ಕೆ ಹಾರಿಸಿರುವ ಹಾಗೂ ಹಾರಿಸುತ್ತಿರುವ ಹೆಮ್ಮೆಯ ಕನ್ನಡಿಗನ ಬಗ್ಗೆ ಮಾತನಾಡಲು ನಿಮಗಿರುವ ನೈತಿಕತೆ ಹಾಗೂ ಯೋಗ್ಯತೆ ಏನು ಎಂಬುದನ್ನು ಅಲೋಚಿಸಿ" ಎಂದು ದೀರ್ಘವಾಗಿ ಪತ್ರ ಬರೆದಿದ್ದಾರೆ.

ಸಂಘಟನೆಯ ಆರೋಪವೇನು?
''ರಮ್ಮಿ ಒಂದು ಜೂಜಾಟ. ಇದನ್ನು ಸುದೀಪ್ ಪ್ರಚಾರ ಮಾಡುತ್ತಿದ್ದಾರೆ. ಇದು ಅನೇಕರ ಮೇಲೆ ಪರಿಣಾಮ ಬೀರಿದೆ. ಸಾಕಷ್ಟು ಅಭಿಮಾನಿಗಳನ್ನು ಕೆಟ್ಟ ದಾರಿಗೆ ಪ್ರಚೋದಿಸುತ್ತಿದ್ದಾರೆ. ಇದರಿಂದ ಎಷ್ಟೋ ಜನರ ಜೀವನ ಹಾಳಾಗುತ್ತಿದೆ'' ಎಂದು ಆರೋಪ ಮಾಡಿದ್ದಾರೆ.

ದರ್ಶನ್-ಯಶ್ ರೀತಿ ಒಳ್ಳೆಯ ಕೆಲಸಕ್ಕೆ ಪ್ರೇರಣೆ ನೀಡಲಿ
ಒಬ್ಬ ನಟ ಜೂಜಾಟಕ್ಕೆ ಸಂದೇಶ ಕೊಡಬಾರದು. ದರ್ಶನ್, ಯಶ್ ರೀತಿ ಒಳ್ಳೆಯ ಕೆಲಸಕ್ಕೆ ಪ್ರೇರಣೆ ನೀಡಲಿ. ದರ್ಶನ್ ಹುಟ್ಟುಹಬ್ಬಕ್ಕೆ ಹಾರ-ಕೇಕ್ ಬ್ಯಾನ್ ಮಾಡಿದ್ರು. ಯಶೋಮಾರ್ಗದಿಂದ ಯಶ್ ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ಈ ರೀತಿ ಸುದೀಪ್ ಸಹ ಒಳ್ಳೆ ಸಂದೇಶವನ್ನು ಅಭಿಮಾನಿಗಳಿಗೆ ನೀಡಬೇಕು ಎಂದು ಸಂಘಟನೆಯ ಅಧ್ಯಕ್ಷ ಶಿವಕುಮಾರ್ ನಾಯಕ್ ಹೇಳಿದ್ದಾರೆ.


Click it and Unblock the Notifications











