ಸುದೀಪ್ ಫ್ಯಾನ್ಸ್ ವಿರುದ್ಧ ವಿಜಯಲಕ್ಷ್ಮಿ ದರ್ಶನ್ ಯುದ್ಧ? 'ಕ್ಲಾಸ್ ಫ್ಯಾನ್ಸ್' ಎಂದು ಕುಟುಕಿದ್ದು ಯಾರಿಗೆ?
ಚಂದನವನದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುದೀಪ್ ಫ್ಯಾನ್ಸ್ ಹಾಗೂ ದರ್ಶನ್ ಫ್ಯಾನ್ಸ್ ನಡುವೆ ಜಟಾಪಟಿ ಜೋರಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಇದೇ ವಿಚಾರ ಭಾರೀ ಸದ್ದು ಮಾಡುತ್ತಿದೆ. ಹುಬ್ಬಳ್ಳಿಯಲ್ಲಿ ಸುದೀಪ್ ಯುದ್ಧದ ಹೇಳಿಕೆ ಬೆನ್ನಲ್ಲೇ ವಿಜಯಲಕ್ಷ್ಮಿ ದರ್ಶನ್ ಆಡಿದ ಮಾತು ಕಿಚ್ಚು ಹಚ್ಚಿತ್ತು.
ನಾನು ಪೈರಸಿ ಮಾಡುವವರ ಬಗ್ಗೆ ಹೇಳಿದ್ದು ಎಂದು ಸುದೀಪ್ ಸ್ಪಷ್ಟನೆ ಕೊಟ್ಟಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ನಡುವೆ ಕಿರಿಕ್ ಹೆಚ್ಚುತ್ತಲೇ ಇದೆ. ಕೆಟ್ಟ ಕೆಟ್ಟ ಕಾಮೆಂಟ್ಸ್ ಮಾಡಿ ಕೆಲವರು ಅತಿರೇಕದ ವರ್ತನೆ ತೋರುತ್ತಿದ್ದಾರೆ. ಅಶ್ಲೀಲ ಪದಗಳ ಬಳಕೆ, ಕೆಟ್ಟದಾಗಿ ಮೀಮ್ಸ್ ಕ್ರಿಯೇಟ್ ಮಾಡಿ ವೈರಲ್ ಮಾಡುತ್ತಿದ್ದಾರೆ. ಇಲ್ಲಿ ಪ್ರಕಟಿಸಲು ಸಾಧ್ಯವಾಗದಂತಹ ಕೊಳಕು ಭಾಷೆಯಲ್ಲಿ ಟ್ರೋಲ್ ಮಾಡುತ್ತಿದ್ದಾರೆ.

ಆನ್ಲೈನ್ನಲ್ಲಿ ಕಿರುಕುಳ ನೀಡುತ್ತಿರುವ ಕಿಡಿಗೇಡಿಗಳ ವಿರುದ್ಧ ವಿಜಯಲಕ್ಷ್ಮಿ ಸಮರ ಸಾರಿದ್ದಾರೆ. ದೂರು ನೀಡಿ ತಪ್ಪಿತಸ್ಥರಿಗೆ ತಕ್ಕ ಪಾಠ ಮಾಡಲು ಮುಂದಾಗಿದ್ದಾರೆ. 15 ಇನ್ಸ್ಟಾಗ್ರಾಂ ಐಡಿ ಹಾಗೂ 150ಕ್ಕೂ ಹೆಚ್ಚು ಕೆಟ್ಟ ಕಮೆಂಟ್ಗಳ ಸ್ಕ್ರೀನ್ ಶಾಟ್ ಸಮೇತ ದೂರು ನೀಡಿದ್ದಾರೆ. ಖುದ್ದಾಗಿ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದೂರು ದಾಖಲಿಸಿದ್ದು ಸೈಬರ್ ಕ್ರೈಂ ವಿಭಾಗದ ಇನ್ಸ್ಪೆಕ್ಟರ್ ದೂರು ಸ್ವೀಕರಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಕೆಟ್ಟದಾಗಿ ಮೆಸೇಜ್ ಮಾಡಿದವರ ವಿರುದ್ಧ ದೂರ ನೀಡಿರುವ ವಿಜಯಲಕ್ಷ್ಮಿ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಆ ಅಸಭ್ಯ ಪದಗಳ ಕಾಮೆಂಟ್ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ. ಇನ್ನು ಈ ಬಗ್ಗೆ ಬರೆದುಕೊಂಡಿರುವ ವಿಜಯಲಕ್ಷ್ಮಿ 'ಕ್ಲಾಸ್ ಫ್ಯಾನ್ಸ್' ಎಂದು ಕುಟುಕಿದ್ದಾರೆ. ಯಾರಪ್ಪಾ ಈ ಕ್ಲಾಸ್ ಫ್ಯಾನ್ಸ್ ಎಂದು ಇದೀಗ ಚರ್ಚೆ ಶುರುವಾಗಿದೆ.

ದರ್ಶನ್ ಹಾಗೂ ಅವರ ಅಭಿಮಾನಿಗಳು ಮಾಸ್ ಎಂದು ಕೆಲವರು ಹೇಳಿಕೊಳ್ಳುತ್ತಾರೆ. ಸುದೀಪ್ ಫ್ಯಾನ್ಸ್ ಕ್ಲಾಸ್. ಅವ್ರು ಅತಿರೇಕವಾಗಿ ವರ್ತಿಸಲ್ಲ ಎಂದು ಕೆಲವೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತದೆ. ಇಂತಹ ಹುಚ್ಚಾಟಗಳು ಗಮನಕ್ಕೆ ಬಂದಾಗ ಮೊದಲು ದರ್ಶನ್ ಅಭಿಮಾನಿಗಳ ವಿರುದ್ಧ ಬೊಟ್ಟು ಮಾಡುವವರೇ ಜಾಸ್ತಿ. ಅದೇ ಕಾರಣಕ್ಕೋ ಏನೋ 'ಕ್ಲಾಸ್ ಫ್ಯಾನ್ಸ್' ಎನಿಸಿಕೊಂಡವರು ನಿಮ್ಮ ಸ್ಯಾಂಡರ್ಡ್ ಏನು ಎಂದು ಸಾರ್ವಜನಿಕವಾಗಿ ಪ್ರದರ್ಶಿಸಿದ್ದಕ್ಕಾಗಿ ಧನ್ಯವಾದಗಳು" ಎಂದು ಆರಂಭದಲ್ಲೇ ವಿಜಯಲಕ್ಷ್ಮಿ ವ್ಯಂಗ್ಯವಾಡಿದ್ದಾರೆ ಎಂದು ಚರ್ಚೆ ನಡೀತಿದೆ.
ಅಭಿಮಾನದ ಹೆಸರಲ್ಲಿ ಇನ್ನುಮುಂದೆ ಕಿರುಕುಳ ನಡೆಯುವುದಿಲ್ಲ ಎಂದು ಮತ್ತೊಂದು ಸಾಲನ್ನು ವಿಜಯಲಕ್ಷ್ಮಿ ಬರೆದುಕೊಂಡಿದ್ದಾರೆ. ಪರೋಕ್ಷವಾಗಿ ಸುದೀಪ್ ಫ್ಯಾನ್ಸ್ ಉದ್ದೇಶಿಸಿ ಈ ಮಾತು ಹೇಳಿದ್ರಾ? ಎನ್ನುವ ಊಹಾಪೋಹ ಶುರುವಾಗಿದೆ. ಕ್ಲಾಸ್ ಹುಡುಗಿಯರಿಗೆ ಎಂದು ಮತ್ತೊಂದು ಕಡೆ ವಿಜಯಲಕ್ಷ್ಮಿ ಪ್ರಸ್ತಾಪಿಸಿದ್ದಾರೆ. ಒಟ್ಟಾರೆ ಕೆಟ್ಟದಾಗಿ ಕಾಮೆಂಟ್ ಮಾಡುವವರಿಗೆ ತಕ್ಕ ಶಾಸ್ತಿ ಮಾಡಲು ವಿಜಯಲಕ್ಷ್ಮಿ ದರ್ಶನ್ ಪಣ ತೊಟ್ಟಿದ್ದಾರೆ.
ಇನ್ನು ವಿಜಯಲಕ್ಷ್ಮಿ ದರ್ಶನ್ ಸದ್ಯ ಹಂಚಿಕೊಂಡಿರುವ ಸ್ಕ್ರೀನ್ ಶಾಟ್ಗಳನ್ನು ನೋಡಿದರೆ ಇದೆಲ್ಲಾ ಸುದೀಪ್ ಅಭಿಮಾನಿಗಳದ್ದಾ ಎನ್ನುವ ಅನುಮಾನ ಮೂಡುತ್ತದೆ. ಬಹುತೇಕ ಅಕೌಂಟ್ಗಳ ಹೆಸರು, ಡಿಪಿ ಸುದೀಪ್ ಅವರದ್ದೇ ಆಗಿದೆ. ಹಾಗಾಗಿ ಈ ರೀತಿ ವಿಜಯಲಕ್ಷ್ಮಿ ದರ್ಶನ್ ಅವರಿಗೆ ಕೆಟ್ಟದಾಗಿ ಕಾಮೆಂಟ್ಸ್ ಮಾಡಿದವರೆಲ್ಲಾ ಸುದೀಪ್ ಅಭಿಮಾನಿಗಳಾ? ಎಂದು ಪೊಲೀಸ್ ತನಿಖೆ ಬಳಿಕ ಗೊತ್ತಾಗಲಿದೆ.
ದರ್ಶನ್ ಅಭಿಮಾನಿಗಳು ನನಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದಾರೆ ಎಂದು ನಟಿ ರಮ್ಯಾ ಆರೋಪಿಸಿದ್ದರು. ದೂರು ನೀಡಿದ್ದರು. ಅವರೆಲ್ಲಾ ದರ್ಶನ್ ಅಭಿಮಾನಿಗಳು ಎನ್ನುವುದಕ್ಕೆ ಆಧಾರ ಇದ್ಯಾ? ಎಂದು ಕೆಲವರು ಪ್ರಶ್ನಿಸಿದ್ದು ಗೊತ್ತೇಯಿದೆ. ಒಟ್ಟಾರೆ ಕಿಡಿಗೇಡಿಗಳ ಹುಚ್ಚಾಟಕ್ಕೆ ನಿಜವಾದ ಅಭಿಮಾನಿಗಳಿಗೂ ಕೆಟ್ಟ ಹೆಸರು ಬರುವಂತಾಗುತ್ತದೆ.


Click it and Unblock the Notifications











