ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇಬೇಕು ಒಳ್ಳೆತನ; ಕೆಲ ನಿರ್ಮಾಪಕರ ವಿರುದ್ಧ ಬೀದಿಗಿಳಿದ ಕಿಚ್ಚ ಫ್ಯಾನ್ಸ್!
ಚಂದನವನದಲ್ಲಿ ಸದ್ಯ ಸಾಕಷ್ಟು ದೊಡ್ಡ ಮಟ್ಟದ ವಿವಾದವನ್ನು ಎಬ್ಬಿಸಿರುವ ವಿಷಯವೆಂದರೆ ನಟ ಕಿಚ್ಚ ಸುದೀಪ್ ವಿರುದ್ಧ ಎಂ ಎನ್ ಕುಮಾರ್ ಹಾಗೂ ಕೆಲ ನಿರ್ಮಾಪಕರು ಮಾಡಿದ ಗಂಭೀರ ಆರೋಪ. ಹೌದು, ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಬಳಿಕ ಯಾವ ಚಿತ್ರದಲ್ಲಿ ನಟಿಸಬಹುದು ಎಂದು ಕಾತರರಾಗಿ ಕಾಯುತ್ತಿದ್ದ ವೇಳೆಯೇ ಸುದೀಪ್ ತಮ್ಮ ಮುಂದಿನ ಚಿತ್ರವನ್ನು ತಮಿಳು ನಿರ್ಮಾಪಕ ಕಲೈಪುಲಿ ಎಸ್ ಧನು ಜತೆ ಮಾಡಲಿದ್ದೇನೆ ಎಂಬುದನ್ನು ಘೋಷಿಸಿದ್ರು.
ಆದರೆ ಈ ಘೋಷಣೆಯ ಬೆನ್ನಲ್ಲೇ ಕನ್ನಡದ ನಿರ್ಮಾಪಕ ಎಂ ಎನ್ ಕುಮಾರ್ ಸುದೀಪ್ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ರು. 2016ರಲ್ಲಿ ಎಂ ಎನ್ ಕುಮಾರ್ ನಿರ್ಮಾಣದ ಮುಕುಂದ ಮುರಾರಿ ಚಿತ್ರದಲ್ಲಿ ಕಿಚ್ಚ ಸುದೀಪ್ ನಟಿಸಿದ್ದ ವೇಳೆ ಸುದೀಪ್ ಕುಮಾರ್ ಜತೆ ಮತ್ತೊಂದು ಚಿತ್ರದಲ್ಲಿ ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ನೀಡಿ ಮುಂಗಡ ಹಣವನ್ನೂ ಸಹ ಪಡೆದಿದ್ದರಂತೆ.

ಆದರೆ ಅಡ್ವಾನ್ಸ್ ಪಡೆದು ಎಂಟು ವರ್ಷಗಳಾದರೂ ಸಹ ಇನ್ನೂ ಸುದೀಪ್ ತನ್ನ ಜತೆ ಯಾವುದೇ ಸಿನಿಮಾವನ್ನೂ ಸಹ ಮಾಡಿಲ್ಲ ಹಾಗೂ ಮುಂದಿನ ಸಿನಿಮಾ ನಿಮ್ಮ ಜತೆಯೇ ಮಾಡಲಿದ್ದೇನೆ ಎಂದು ಹೇಳುತ್ತಾ ಕೈಕೊಡುತ್ತಾ ಬಂದಿದ್ದಾರೆ ಎಂದು ಫಿಲ್ಮ್ ಚೇಂಬರ್ನಲ್ಲಿ ಸುದ್ದಿಗೋಷ್ಟಿಯನ್ನು ಕರೆದು ಆರೋಪಿಸಿದ್ರು.
ಹೀಗೆ ಎಂ ಎನ್ ಕುಮಾರ್ ಮಾಡಿದ ಆರೋಪದ ಬಗ್ಗೆ ಸುದೀಪ್ ಎಲ್ಲಿಯೂ ಬಹಿರಂಗವಾಗಿ ಚರ್ಚಿಸದೇ ಇದ್ದರೂ ಮಾನನಷ್ಟ ಮೊಕದ್ದಮೆ ಹೂಡುವ ಮೂಲಕ ನಿರ್ಮಾಪಕ ಕುಮಾರ್ ಮಾಡಿರುವ ಆರೋಪಗಳೆಲ್ಲಾ ಸುಳ್ಳು ಎಂಬುದನ್ನು ತಿಳಿಸಿದರು.
ಹೀಗೆ ಎಂಎನ್ ಕುಮಾರ್ ಮಾಡಿದ ಆರೋಪ ಎಷ್ಟು ಸತ್ಯ, ಎಷ್ಟು ಸುಳ್ಳು ಎಂಬ ಸತ್ಯಾಂಶ ಹೊರಬೀಳುವ ಮುನ್ನವೇ ಹುಚ್ಚ ಸಿನಿಮಾಗೆ ಬಂಡವಾಳ ಹೂಡಿದ್ದ ನಿರ್ಮಾಪಕ ರೆಹಮಾನ್ ಸಹ ಸುದೀಪ್ ವಿರುದ್ಧ ಆರೋಪ ಮಾಡಿದ್ರು. 'ಹುಚ್ಚ' ಸಿನಿಮಾ ಗೆದ್ದ ಬಳಿಕ ಏನೆಲ್ಲಾ ಆಯಿತು ಎನ್ನುವುದನ್ನು ರೆಹಮಾನ್ ವಿವರಿಸಿದ್ದಾರೆ. ಸದ್ಯ ಮನೆ ಮಾರಿ ತಾವು ಬಾಡಿಗೆ ಮನೆಯಲ್ಲಿ ಇದ್ದೀನಿ. ನನ್ನ 35 ಲಕ್ಷ ಹಣ ವಾಪಸ್ ಕೊಡಿ ಎಂದಿದ್ದಾರೆ. ಎಂಟು ವರ್ಷಗಳ ಹಿಂದೆ ಇದೇ ವಿಚಾರಕ್ಕೆ ಸಂಬಂಧಿಸಿ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದಾಗಿಯೂ ವಿವರಿಸಿದ್ದಾರೆ. ಈಗ ನಾನು ನಿಮ್ಮೊಟ್ಟಿಗೆ ಸಿನಿಮಾ ಮಾಡುವ ಶಕ್ತಿ ಇಲ್ಲ. ನಿಮ್ಮನ್ನು ನಂಬಿ ಕಳೆದುಕೊಂಡ 35 ಲಕ್ಷ ರೂ. ಮರಳಿ ಕೊಡಿ ಎಂದು ಸುದ್ದಿಗೋಷ್ಠಿ ನಡೆಸಿ ಮನವಿ ಮಾಡಿಕೊಂಡಿದ್ದರು.
ಹೀಗೆ ಇಬ್ಬರು ನಿರ್ಮಾಪಕರುಗಳಿಂದ ಸುದೀಪ್ ವಿರುದ್ಧ ಆರೋಪಗಳು ಕೇಳಿಬಂದದ್ದರ ಬಗ್ಗೆ ಅಭಿಮಾನಿಗಳು ಹಾಗೂ ಸಿನಿ ಕಲಾವಿದರು ಅನುಮಾನ ವ್ಯಕ್ತಪಡಿಸಿದರು. ಇಷ್ಟು ವರ್ಷಗಳ ಕಾಲ ಸುಮ್ಮನಿದ್ದು ಈಗ ದಿಢೀರನೆ ಇಷ್ಟೊಂದು ಆಕ್ರೋಶ ಹೊರಹಾಕಿದ್ಯಾಕೆ ಎಂದು ಪ್ರಶ್ನಿಸಿದರು. ಇದರ ಹಿಂದೆ ಪಿತೂರಿ ನಡೆದಿದೆ ಎಂದು ಸುದೀಪ್ ಫ್ಯಾನ್ಸ್ ಕಿಡಿಕಾರಿದರು.
ಕೆಲವು ದಿನಗಳ ಹಿಂದಷ್ಟೇ ನಿರ್ಮಾಪಕ ಎಂ ಎನ್ ಕುಮಾರ್ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದ ಸುದೀಪ್ ಫ್ಯಾನ್ಸ್ ಫಿಲ್ಮ್ ಚೇಂಬರ್ಗೆ ಮುತ್ತಿಗೆ ಹಾಕಲು ಯತ್ನಿಸಿದ್ರು. ಈಗ ಮತ್ತೋರ್ವ ನಿರ್ಮಾಪಕನೂ ಸಹ ಸುದೀಪ್ ವಿರುದ್ಧ ಹೇಳಿಕೆಗಳನ್ನು ನೀಡಿ ಆರೋಪ ಮಾಡಿರುವುದರಿಂದ ಮತ್ತಷ್ಟು ಕುಪಿತರಾಗಿರುವ ಸುದೀಪ್ ಫ್ಯಾನ್ಸ್ ಇಂದು ( ಜುಲೈ 16 ) ಶಿವಮೊಗ್ಗ ಹಾಗೂ ದೇವನಹಳ್ಳಿಯಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.
ಇಂದು ಮಧ್ಯಾಹ್ನ 12 ಗಂಟೆಗೆ ಶಿವಮೊಗ್ಗದಲ್ಲಿ ನಿರ್ಮಾಪಕರ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಂಡಿರುವ ಕಿಚ್ಚನ ಅಭಿಮಾನಿಗಳು, ಸಂಜೆ ದೇವನಹಳ್ಳಿ ಸೇರಿದಂತೆ ಹಲವೆಡೆ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಈ ಕುರಿತು ಬ್ಯಾನರ್ಗಳನ್ನು ತಯಾರಿಸಿರುವ ಸುದೀಪ್ ಫ್ಯಾನ್ಸ್ ಸುದೀಪ್ ವಿರುದ್ಧ ನಕಲಿ ಆರೋಪ ಮಾಡಿರುವ ಕೆಲವು ನಿರ್ಮಾಪಕರ ವಿರುದ್ಧ ನಮ್ಮ ಪ್ರತಿಭಟನೆ, ಗೆದ್ದೇ ಗೆಲ್ಲುವೆ ಒಳ್ಳೆ ದಿನ ಗೆಲ್ಲಲೇಬೇಕು ಒಳ್ಳೆತನ ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











