ಸಾಹಸ ಕಲಾವಿದರ 'ಕನಸಿನ ಭವನ'ಕ್ಕೆ 10 ಲಕ್ಷ ನೀಡಿದ ಕಿಚ್ಚ ಸುದೀಪ್
Recommended Video
ಕನ್ನಡ ಚಲನಚಿತ್ರ ಕಲಾವಿದರ ಸಂಘಕ್ಕೊಂದು ಭವನ, ನಿರ್ದೇಶಕ ಸಂಘಕ್ಕೊಂದು ಭವನ, ನಿರ್ಮಾಪಕ ಸಂಘಕ್ಕೊಂದು ಭವನ ಇದೆ. ಇದೀಗ, ಕರ್ನಾಟಕ ಚಲನಚಿತ್ರ ಸಾಹಸ ಕಲಾವಿದರ ಸಂಘಕ್ಕೊಂದು ಭವನ ಬೇಕು ಎಂಬ ಉದ್ದೇಶದಿಂದ ನೂತನ ಕಟ್ಟಡ ನಿರ್ಮಿಸಲಾಗುತ್ತಿದೆ.
ಈ ಕಟ್ಟಡ ನಿರ್ಮಾಣಕ್ಕೆ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಜೊತೆಯಾಗಿದ್ದಾರೆ. ಸಾಹಸ ಕಲಾವಿದರ ಭವನ ನಿರ್ಮಾಣ ಕೆಲಸಕ್ಕೆ 10 ಲಕ್ಷ ರೂಪಾಯಿ ನೀಡುವ ಮೂಲಕ ಬೆಂಬಲವಾಗಿ ನಿಂತಿದ್ದಾರೆ.
ಈ ವಿಷಯವನ್ನ ಹಿರಿಯ ಸಾಹಸ ನಿರ್ದೇಶಕ, ನಟ ಥ್ರಿಲ್ಲರ್ ಮಂಜು ಅವರು ತಮ್ಮ ಟ್ವಿಟ್ಟರ್, ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದೇ ವಿಚಾರವಾಗಿ ಸಾಹಸ ನಿರ್ದೇಶಕ ರವಿವರ್ಮ ಕೂಡ ಟ್ವೀಟ್ ಮಾಡಿದ್ದಾರೆ.

ಈ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ ಥ್ರಿಲ್ಲರ್ ಮಂಜು ''ಸುಮಾರು 30 ವರ್ಷದಿಂದ ಸಾಹಸ ಕಲಾವಿದರ ಭವನ ಕಟ್ಟಲು ಹೋರಾಡುತ್ತಿದ್ದೇವೆ. ಆ ಘಳಿಗೆ ಈಗ ಕೂಡಿಬಂದಿದೆ. ಕೆಲವು ದಿನಗಳ ಹಿಂದೆ ಸುದೀಪ್ ಅವರನ್ನ ನಮ್ಮ ಸಂಘದ ಪದಾಧಿಕಾರಿಗಳು ಭೇಟಿ ಮಾಡಿದ್ದರು. ಕಟ್ಟಡ ನಿರ್ಮಿಸುತ್ತಿರುವ ಬಗ್ಗೆ ತಿಳಿಸಲಾಗಿತ್ತು. ಈ ವಿಷಯ ಕೇಳಿ ಸಂತಸದಿಂದ, ಹೃದಯಪೂರ್ವಕವಾಗಿ 10 ಲಕ್ಷ ನೀಡಿದ್ದಾರೆ. ಈಗಾಗಲೇ ಹಣ ನಮ್ಮ ಸಂಘದ ಖಾತೆಗೆ ಜಮಾ ಆಗಿದೆ'' ಎಂದು ತಿಳಿಸಿದರು.
''ಕಳೆದ ಏಳೆಂಟು ವರ್ಷದಿಂದ ಬಸವನಗುಡಿ ಬಳಿ ಬಾಡಿಗಿಗೆ ಸಂಘದ ಕಛೇರಿ ಮಾಡಿಕೊಳ್ಳಲಾಗಿತ್ತು. ಈಗ ನಾಯಂಡಹಳ್ಳಿ ಬಳಿ ಜಾಗ ಖರೀದಿಸಿ ಕಟ್ಟಡ ನಿರ್ಮಿಸಲಾಗುತ್ತಿದೆ. ನಮ್ಮ ಸಂಘದ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ'' ಎಂದು ಸಂತಸ ಹಂಚಿಕೊಂಡಿದ್ದಾರೆ.
ಒಂದು ತಿಂಗಳ ಹಿಂದೆಯೇ ಕಾಮಗಾರಿ ಆರಂಭವಾಗಿದೆ. ಮುಂದಿನ ವರ್ಷಕ್ಕೆ ಕಟ್ಟಡ ನಿರ್ಮಾಣ ಮಾಡಿ, ಉದ್ಘಾಟನೆ ಮಾಡುವ ಗುರಿ ಹೊಂದಿದ್ದಾರಂತೆ ಸಾಹಸ ಕಲಾವಿದ ಸಂಘದ ಸದಸ್ಯರು. ಸದ್ಯ ಸಾಹಸ ಕಲಾವಿದರ ಸಂಘದ ಅಧ್ಯಕ್ಷರಾಗಿ ವಿನೋದ್ ಕಾರ್ಯನಿರ್ವಹಿಸುತ್ತದ್ದು, ಕಾರ್ಯದರ್ಶಿಯಾಗಿ ರಾಜ್ ಕುಮಾರ್ ಇದ್ದಾರೆ.


Click it and Unblock the Notifications











