ನಿಮ್ಮನ್ನು ಕಂಡು ಖುಷಿಪಡುವುದಾ-ಹೆದರುವುದಾ ಗೊತ್ತಾಗಲ್ಲ: ಕನ್ನಡ ಸಂಘಟನೆಗಳಿಗೆ ಸುದೀಪ್ ಕಿವಿಮಾತು
ನಟ ಸುದೀಪ್, ಮುಖಸ್ತುತಿ ಮಾಡುವುದು ಕಡಿಮೆ. ಯಾವುದೇ ವಿಷಯವಿದ್ದರೂ ನಿಷ್ಠುರವಾಗಿ ಹೇಳಿಬಿಡುತ್ತಾರೆ. ಇಂದು ಸಹ ಹೀಗೆಯೇ ಆಗಿದೆ. ತಮ್ಮನ್ನು ಭೇಟಿಯಾಗಲು ಬಂದ ಕನ್ನಡ ಸಂಘಗಳಿಗೆ ಕೆಲ ಕಿವಿಮಾತು ಹೇಳಿಕಳಿಸಿದ್ದಾರೆ ನಟ ಸುದೀಪ್.
Recommended Video
ದುಬೈನ ಬುರ್ಜ್ ಖಲೀಫಾ ಮೇಲೆ ಕನ್ನಡ ಧ್ವಜ ಹಾರಿಸಿದ ಸುದೀಪ್ ಅವರಿಗೆ ಕನ್ನಡಪರ ಸಂಘಟನೆ ಸದಸ್ಯರು ಅಭಿನಂದಿಸಿದರು. ಈ ಸಮಯ ಮಾತನಾಡಿದ ಸುದೀಪ್, ಕನ್ನಡಪರ ಸಂಘಟನೆಗಳ ಕಾರ್ಯವನ್ನು ತಮ್ಮದೇ ಮಾತುಗಳಲ್ಲಿ ವಿಮರ್ಶೆಗೊಳಪಡಿಸಿದರು.
'ಕನ್ನಡ ಪರವಾಗಿ ಹೋರಾಟ ಮಾಡುತ್ತಿರುವ ಸಂಘಟನೆಗಳಲ್ಲಿಯೇ ಗೊಂದಲಗಳಿವೆ. ನೀವುಗಳೇ ಮೊದಲು ಚರ್ಚಿಸಿ ಸ್ಪಷ್ಟಪಡಿಸಿಕೊಳ್ಳಿ. ಕನ್ನಡ ಶಾಲು ಹಾಕಿಕೊಂಡು ಬಂದರೆ ಖುಷಿಯಾಗಬೇಕೋ, ಭಯ ಪಡಬೇಕೋ ಗೊತ್ತಾಗುವುದಿಲ್ಲ' ಎಂದರು ಸುದೀಪ್.

ಎರಡಕ್ಕೂ ಬೈತೀರ: ಸುದೀಪ್
'ಕನ್ನಡ ಮಾತನಾಡೊಕೆ ಬಂದರೆ ಬೈತೀರ, ಕನ್ನಡ ಮಾತನಾಡಲಿಲ್ಲ ಅಂದ್ರೂ ಬೈತೀರ. ತೆಲುಗು-ತಮಿಳು ಅವರು ಇಲ್ಲಿ ಬಂದು ಕನ್ನಡ ಮಾತನಾಡಿದ್ದಾರೆ ಅವರು ಯಾವ ಥರಹ ಮಾತನಾಡುತ್ತಾರೆ ಎಂಬುದು ಮುಖ್ಯವಲ್ಲ. ನಾವು ಸಹ ಹೊರ ರಾಜ್ಯಕ್ಕೆ ಹೋದಾಗ ಅಲ್ಲಿ ತೆಲುಗು-ತಮಿಳನ್ನು ಸ್ಪಷ್ಟವಾಗಿ ಏನೂ ಮಾತನಾಡುತ್ತಿಲ್ಲ' ಎಂದರು ಸುದೀಪ್.

ಕಲಾವಿದ ಒಬ್ಬನೇ ಸಿಕ್ಕಿಹಾಕಿಕೊಂಡು ಬಿಡುತ್ತಾನೆ: ಸುದೀಪ್
ಎಲ್ಲ ಭಾಷೆ ಮೇಲೆ ನಮಗೆ ಗೌರವ ಇರಬೇಕು. ಬೇರೆ ಭಾಷೆಯವರು ಇಲ್ಲಿ ಬಂದು ಕನ್ನಡ ಮಾತನಾಡಿದರೆ ಗಲಾಟೆ ಮಾಡಬಾರದು. ನೀವು ಸಂಘಟನೆಗಳವರು ಮಾತನಾಡಿದರೆ ಸಾವಿರಾರು ಮಂದಿ ಬರುತ್ತೀರ. ಕಲಾವಿದರಿಗೆ ಇರುವುದು ಅಭಿಮಾನಿಗಳು ಮಾತ್ರ. ಅವರು ಊರು, ಜಿಲ್ಲೆ, ರಾಜ್ಯಗಳಲ್ಲಿ ಹರಡಿಕೊಂಡಿದ್ದಾರೆ. ನೀವು ಬೈಯಲು ಬಂದಾಗ ಕಲಾವಿದ ಒಬ್ಬನೇ ಸಿಕ್ಕಿಹಾಕಿಕೊಳ್ಳುತ್ತಾನೆ. ಕೆಲವರು ಕೆಲವು ಹೆಜ್ಜೆಗಳನ್ನಿಟ್ಟಾಗ ನೀವುಗಳೂ ಸಹ ಸಮಾಧಾನದಿಂದ ಅದನ್ನು ನಿರ್ವಹಣೆ ಮಾಡಬೇಕು' ಎಂದರು ಸುದೀಪ್.

ಕನ್ನಡವನ್ನು ಯಾಕೆ, ಯಾರಿಂದ ಉಳಿಸಬೇಕು: ಸುದೀಪ್
'ಕನ್ನಡಾಭಿಮಾನ ಅಂದ್ರೆ ಏನು ಎಂಬುದು ನನಗೆ ಅರ್ಥವಾಗುತ್ತಿಲ್ಲ್. ಕನ್ನಡ ಉಳಿಸಬೇಕು ಎನ್ನುತ್ತೀರಿ, ಕನ್ನಡವನ್ನು ಯಾಕೆ ಉಳಿಸಬೇಕು, ಯಾರ ಕೈಲಿದೆ ಅದನ್ನು ಉಳಿಸಲು. ದಯವಿಟ್ಟು ಹೀಗೆ ಹೇಳಬೇಡಿ, ಕನ್ನಡವನ್ನು ಬೆಳೆಬೇಕು ಎಂದು ಹೇಳಿ' ಎಂದರು ಸುದೀಪ್.

ಕನ್ನಡನವನ್ನು ಕಿತ್ತುಕೊಳ್ಳುವ ತಾಕತ್ತು ಯಾರಲ್ಲೂ ಇಲ್ಲ: ಸುದೀಪ್
'ಕನ್ನಡ ಭಾಷೆಗೆ ಇರುವ ಇತಿಹಾಸ ಇನ್ನಾವ ಭಾಷೆಗೂ ಇಲ್ಲವೆಂದ ಮೇಲೆ ನಾವದನ್ನ ಉಳಿಸುವ ಮಾತು ಏಕೆ ಮಾತಾಡೋಣ. ಕನ್ನಡವನ್ನು ಕಿತ್ತುಕೊಳ್ಳುವ ತಾಕತ್ತು ಯಾರಲ್ಲೂ ಇಲ್ಲ. ಕನ್ನಡದ ಮೇಲೆ ಅಭಿಮಾನ ಇಲ್ಲದವರನ್ನು ಬಿಟ್ಟುಬಿಡಿ, ಕನ್ನಡದ ಮೇಲೆ ಪ್ರೀತಿ ಇರುವ ಕೋಟ್ಯಂತರ ಮಂದಿ ಇದ್ದಾರೆ ಅವರ ಮೇಲೆ ಗಮನಹರಿಸಿ. ಕನ್ನಡ ಬರದವರಿಗೆ ನಮ್ಮ ಭಾಷೆ ಕಲಿಸಿ' ಎಂದರು ಸುದೀಪ್.


Click it and Unblock the Notifications











