'ಮದಕರಿ' ಗೊಂದಲಕ್ಕೆ ಬ್ರೇಕ್ ಹಾಕಿದ ಸುದೀಪ್: ರಾಕ್ಲೈನ್-ದರ್ಶನ್ ಚಿತ್ರಕ್ಕೆ ನೋ ಪ್ರಾಬ್ಲಂ.!
ರಾಕ್ ಲೈನ್ ವೆಂಕಟೇಶ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೋಡಿಯಲ್ಲಿ 'ಮದಕರಿ ನಾಯಕ'ನ ಕುರಿತು ಬಯೋಪಿಕ್ ಚಿತ್ರ ಬರಲಿದೆ ಎಂಬ ಸುದ್ದಿ ಬಹಿರಂಗವಾಗಿತ್ತು. ಈ ಸುದ್ದಿ ಹೊರಬೀಳುತ್ತಿದ್ದಂತೆ ಕಿಚ್ಚ ಸುದೀಪ್ ಕೂಡ ಇಂತಹದೊಂದು ಮೆಗಾ ಪ್ರಾಜೆಕ್ಟ್ ಗಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ಚರ್ಚೆಗೆ ಬಂದಿತ್ತು.
ಅಲ್ಲಿಗೆ 'ಮದಕರಿ ನಾಯಕ' ಚಿತ್ರಕ್ಕಾಗಿ ಇಬ್ಬರು ಸ್ಟಾರ್ ನಟರು ಫೈಟ್ ಮಾಡಲಿದ್ದಾರೆ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿಬಂದವು. ಇಬ್ಬರು ಒಬ್ಬರ ಬಗ್ಗೆಯೇ ಸಿನಿಮಾ ಮಾಡಲಿದ್ದಾರೆ, ಯಾರಾದರೂ ಈ ಪ್ರಾಜೆಕ್ಟ್ ನಿಂದ ಹಿಂದೆ ಸರಿಯುತ್ತಾರಾ ಎಂಬ ಕುತೂಹಲ ಕಾಡುತ್ತಿತ್ತು.
ಇದೀಗ, ಕಿಚ್ಚ ಸುದೀಪ್ ಅವರು ಈ ಚಿತ್ರದ ಬಗ್ಗೆ ಮಾತನಾಡಿದ್ದು, ಎಲ್ಲ ಗೊಂದಲಗಳಿಗೂ ಉತ್ತರ ನೀಡಿದ್ದಾರೆ. ಸುದೀಪ್ 'ವೀರ ಮದಕರಿ ನಾಯಕ'ನ ಸಿನಿಮಾ ಮಾಡೋದು ಖಚಿತವೆಂದು ಸ್ಪಷ್ಟಪಡಿಸಿದ್ದಾರೆ. ಅದೇ ರೀತಿ ದರ್ಶನ್ ಮತ್ತು ರಾಕ್ ಲೈನ್ ಮದಕರಿಗೂ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಬಗ್ಗೆ ತಮ್ಮ ಗೂಗಲ್ ಪ್ಲಸ್ ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಸುದೀಪ್ ವೀರ ಮದಕರಿ ನಾಯಕನ ಸಿನಿಮಾ ನಿರ್ಮಾಣದ ಕುರಿತಂತೆ ಕೆಲವು ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ. ಮುಂದೆ ಓದಿ.....

ಮದಕರಿ ಸಿನಿಮಾ ಕುರಿತು ಕೆಲಸ ಮಾಡುತ್ತಿದ್ದೇವೆ
ನಾನು ನನ್ನ ತಂಡ ಹಾಗೂ ಕೆಲವು ಲೇಖಕರ ಬಳಗವು ಈಗ್ಗೆ ಒಂದು-ಒಂದೂವರೆ ವರ್ಷದಿಂದ 'ವೀರ ಮದಕರಿ ನಾಯಕ' ಸಿನಿಮಾ ನಿರ್ಮಾಣದ ದಿಸೆಯಲ್ಲಿ ಕೆಲಸ ಮಾಡುತ್ತಿದೇವೆ. ಈಗಾಗಲೇ ಒಂದಷ್ಟು ಸಂಶೋಧನೆ ಮತ್ತೂ ಯೋಜನೆಗಳನ್ನು ರೂಪಿಸಿಕೊಳ್ಳಲಾಗಿದೆ.

ಈ ಆಲೋಚನೆ ವರ್ಷಗಳ ಹಿಂದೆಯೇ ಇತ್ತು
ವೀರ ಮದಕರಿ ಸಿನಿಮಾ ಮಾಡುವ ನಮ್ಮ ಆಲೋಚನೆ ವರ್ಷಗಳ ಹಿಂದೆಯೇ ಹುಟ್ಟಿದಂತಹುದು. ಆದರೆ, ಈ ದಿಸೆಯಲ್ಲಿ ಕೆಲಸ ಮಾಡಲು ಒಂದಷ್ಟು ಸಮಯ ಬೇಕಾಯಿತು. ಹೀಗಾಗಿ ಈ ಸಿನೆಮಾ ನಿರ್ದೇಶನ ಕೂಡ ಮಾಡುವ ಸ್ಫೂರ್ತಿ ಚಿಗುರೊಡೆಸಿತ್ತು.

ಯಾರು ಬೇಕಾದರು ಸಿನಿಮಾ ಮಾಡಬಹುದು
ಇತ್ತೀಚೆಗೆ ಇದೇ ಕಥೆಯ ಆಧಾರಿತ ಮತ್ತೊಂದು ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ ಎಂಬ ಸುದ್ದಿ ನನಗೆ ನಿಜಕ್ಕೂ ಆಶ್ಚರ್ಯ ಉಂಟು ಮಾಡಿತು. ಸಹಜವಾಗಿಯೇ ನನಗೆ ಇದರಲ್ಲಿ ಏನಿದೆ ಎಂಬ ಪ್ರಶ್ನೆ ಹುಟ್ಟು ಹಾಕಿತು. ಯಾರೇ ಆಗಲೀ, ಇತಿಹಾಸದ ವಿಷಯಗಳ ಮೇಲೆ ಸಿನಿಮಾ ನಿರ್ಮಿಸಲು ಅರ್ಹರಿದ್ದಾರೆ.

ನಾನೊಬ್ಬನೇ ಮದಕರಿ ಎನ್ನುವುದು ಎಷ್ಟು ಸರಿ.?
ಒಂದೇ ವಿಷಯ, ಒಬ್ಬನೇ ವ್ಯಕ್ತಿಯ ಮೇಲೆ ಈಗಾಗಲೇ ಒಂದಕ್ಕಿಂತ ಹೆಚ್ಚು ಸಿನಿಮಾಗಳು ತೆರೆಕಂಡ ಉದಾಹರಣೆಗಳಿವೆ. ನಾನೊಬ್ಬನೇ ಮದಕರಿ ನಾಯಕನ ಪಾತ್ರ ನಿರ್ವಹಿಸಬೇಕು ಎಂಬುದು ಎಷ್ಟು ಸರಿ? ಆತ ಕರ್ನಾಟಕದ ವೀರಪುತ್ರ. ಅವರ ಬಗ್ಗೆ ಸಿನೆಮಾ ಯಾರಾದರೂ ಮಾಡಬಹುದು.

ದಿಗ್ಗಜರ ಸಮ್ಮಿಲನದಿಂದ ಅದ್ಭುತ ಸಿನಿಮಾ
ರಾಕ್ಲೈನ್ ವೆಂಕಟೇಶ್ ಅವರ ಸಿನಿಮಾ ಆಸಕ್ತಿ ಅದ್ವಿತೀಯವಾದದ್ದು. ಇದನ್ನೊಂದು ಅತ್ಯುತ್ತಮ ಚಿತ್ರವಾಗಿ ತೆರೆಯ ಮೇಲೆ ತರುತ್ತಾರೆ ಎಂಬುದಕ್ಕೆ ಅನುಮಾನವೇ ಇಲ್ಲ. ರಾಜೇಂದ್ರ ಸಿಂಗ್ ಬಾಬು ಅವರ ಅನುಭವ ಕೂಡಾ ಇದರಲ್ಲಿ ಸಮ್ಮಿಲನವಾಗಿದೆ.

ನಮಗೆ ಈ ಚಿತ್ರ ಅಡ್ಡಿಯಿಲ್ಲ
ಆದರೆ, ನಾನು ಮತ್ತು ನನ್ನ ತಂಡವು ಮಾಡ ಹೊರಟಿರುವ ಚಿತ್ರಕ್ಕೆ ಇದು ಅಡ್ಡಿಯಾಗುವುದಿಲ್ಲ. ಇದು ನಮ್ಮ ಕನಸೂ ಕೂಡಾ. ಇದು ಬರೀ ನನ್ನೊಬ್ಬನ ಕನಸಲ್ಲ. ಇಡೀ ತಂಡದ ಕನಸನ್ನು ನಾನು ಭಗ್ನಗೊಳಿಸಲು ಇಚ್ಛಿಸುವುದಿಲ್ಲ. ಇದರ ಬದಲಿಗೆ ಮಾಡಿ ಮಡಿಯುವುದೇ ಮೇಲು. ನಾನೂ ಒಬ್ಬ ಮದಕರಿ!

ರಾಕ್ ಲೈನ್ ಚಿತ್ರಕ್ಕೆ ಶುಭಕೋರುತ್ತೇನೆ
ರಾಕ್ಲೈನ್ ಅವರ ತಂಡವನ್ನು ನಾನು ಇಂತಹ ಒಳ್ಳೆಯ ಕರ್ನಾಟಕದ ನೆಲದ ಕಥೆಯನ್ನು ಆಯ್ಕೆ ಮಾಡಿರುವುದಕ್ಕೆ ಅಭಿನಂದಿಸುತ್ತೇನೆ. ಅವರಿಗೆ ನನ್ನ ಶುಭಾಶಯಗಳು. ಅದೇ ರೀತಿಯಾಗಿ ನನ್ನ ನಿರ್ಣಯವನ್ನು ನೀವೆಲ್ಲರೂ ಸಮ್ಮತಿಸುತ್ತೀರೆಂದು ನಂಬಿರುವೆ. ನಿಮ್ಮವ, ಕಿಚ್ಚ


Click it and Unblock the Notifications











