ಆರ್ಕೆಸ್ಟ್ರಾ ಕಲಾವಿದರ ಹೋರಾಟಕ್ಕೆ ನನ್ನ ಬೆಂಬಲ ಇದೆ: ಕಿಚ್ಚ ಸುದೀಪ್
ಕೊರೊನಾ ಸಮಸ್ಯೆ ಬಂದ್ಮೇಲೆ ಎಲ್ಲರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ನಿಧಾನವಾಗಿ ಕೊರೊನಾ ಭೀತಿಯಿಂದ ಜನರು ಹೊರಗೆ ಬರುತ್ತಿದ್ದಾರೆ. ಸಾರ್ವಜನಿಕ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗುತ್ತಿದೆ. ಲಾಕ್ಡೌನ್ ಆದ ಸಂದರ್ಭದಿಂದಲೂ ಆರ್ಕೆಸ್ಟ್ರಾ ಕಲಾವಿದರ ಕಷ್ಟ ಕೇಳಿದವರಿಲ್ಲ.
ಹಬ್ಬ, ಜಾತ್ರೆಗಳು ನಡೆಯುತ್ತಿಲ್ಲ. ಆರ್ಕೆಸ್ಟ್ರಾದವರಿಗೆ ಕೆಲಸ ಇಲ್ಲ. ಇದು ಸಹಜವಾಗಿ ಆರ್ಕೆಸ್ಟ್ರಾ ಕಲಾವಿದರ ಕುಟುಂಬಗಳಿಗೆ ಕಷ್ಟ ತಂದೊಡ್ಡಿದೆ. ಈ ಹಿನ್ನೆಲೆ ಅಖಿಲ ಕರ್ನಾಟಕ ವಾದ್ಯಗೋಷ್ಠಿ ಕಲಾವಿದರ ಮಹಾ ಸಂಘದಿಂದ ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಈಗ ಕಿಚ್ಚ ಸುದೀಪ್ ಟ್ವಿಟ್ಟರ್ ಮೂಲಕ ಆರ್ಕೆಸ್ಟ್ರಾ ಕಲಾವಿದರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ''ನಾನು ಪ್ರತಿಭಟನಾ ನಿರತ ವಾದ್ಯಗೋಷ್ಠಿ ಕಲಾವಿದರ ಜೊತೆಗಿದ್ದೇನೆ. ಅವರ ಹೋರಾಟಕ್ಕೆ ನನ್ನ ಬೆಂಬಲವಿದೆ. ನನ್ನ ಸ್ನೇಹಿತರು ಮತ್ತು ಅಭಿಮಾನಿಗಳನ್ನು ಈ ವಿಷಯವಾಗಿ ಗಮನ ಹರಿಸಲು ಮತ್ತು ನಿಮ್ಮಿಂದಾಗುವ ನೆರವನ್ನು ನೀಡಲು ವಿನಂತಿಸುವೆ'' ಎಂದು ಟ್ವೀಟ್ ಮಾಡಿದ್ದಾರೆ.

''ಹಾಗೆ ಈ ಕಲಾವಿದರ ಪರವಾಗಿ ಸರ್ಕಾರ ಸಹ ಪೂರಕ ಕ್ರಮಗಳನ್ನು ಕೈಗೊಳ್ಳಲು ಕೋರುತ್ತೇನೆ. ಏಕಂದರೆ, ದೂರದರ್ಶನವಿಲ್ಲದ ಕಾಲದಿಂದಲೂ ನಮ್ಮನ್ನು ರಂಜಿಸುತ್ತಿರುವ ಈ ಕಲಾ ಬಳಗವನ್ನು ಮುಂದಿನ ತಲೆಮಾರುಗಳ ತನಕ ಕಾಪಾಡಿಕೊಳ್ಳಬೇಕಾದುದು ನಮ್ಮೆಲ್ಲರ ಕರ್ತವ್ಯವೆಂದು ಭಾವಿಸಿದ್ದೇನೆ. ನಮ್ಮ ಈ ಪ್ರತಿಭೆಗಳ ಪರವಾಗಿ ನಾವೇ ನಿಲ್ಲದಿದ್ದರೆ ಬೇರಾರು ನೊಲ್ಲುತ್ತಾರೆ ಅಲ್ಲವೇ?'' ಎಂದು ಸುದೀಪ್ ಪ್ರಶ್ನಿಸಿದ್ದಾರೆ.
ಪ್ರತಿಭಟನೆ ನಿರತ ವಾದ್ಯಗೋಷ್ಠಿ ಕಲಾವಿದರು ಸರ್ಕಾರದ ಮುಂದೆ ಕೆಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ''ಕನ್ನಡ ಸಂಸ್ಕೃತಿ ಇಲಾಖೆಯಿಂದ ನೀಡಲಾಗುವ ಸೌಲಭ್ಯಗಳನ್ನು ನಮಗೂ ಕೊಡಬೇಕು. ಜಾತ್ರೆ, ಉತ್ಸವ, ರಾಜ್ಯೋತ್ಸವ ಸಮಾರಂಭಗಳಲ್ಲಿ ಪ್ರೋತ್ಸಾಹ ನೀಡಬೇಕು. ವಾದ್ಯಗೋಷ್ಠಿ ನುಡಿಸುವ ಕಲಾವಿದರಿಗೆ 5 ಸಾವಿರ ಮನೆ ಮಂಜೂರು ಮಾಡಬೇಕು ಹಾಗೂ ರಾಜ್ಯೋತ್ಸವ, ಕೆಂಪೇಗೌಡ ಪ್ರಶಸ್ತಿಗಳನ್ನು ನೀಡಿ ಗೌರವಿಸಬೇಕು'' ಎಂದು ಪ್ರತಿಭಟನೆಕಾರರು ಆಗ್ರಹಿಸಿದ್ದಾರೆ.


Click it and Unblock the Notifications











