ವಿಶೇಷ ಚೇತನ ಮಕ್ಕಳ ನೆರವಿಗೆ ಧಾವಿಸಿದ ಕಿಚ್ಚ ಸುದೀಪ್
ಕೊರೊನಾ ಲಾಕ್ ಡೌನ್ ನಿಂದ ಅನೇಕ ಜನರ ಬದುಕು ಬೀದಿಗೆ ಬಂದಿದೆ. ಕೆಲಸವಿಲ್ಲದೆ ಒಂದೊತ್ತಿನ ಊಟಕ್ಕೂ ಪರದಾಡುತ್ತಿರುವ ಸ್ಥಿತಿನಿರ್ಮಾಣವಾಗಿದೆ. ಕಷ್ಟದಲ್ಲಿರುವವರ ಸಹಾಯಕ್ಕೆ ಸಾಕಷ್ಟು ಮಂದಿ ನೆರವಿಗೆ ಧಾವಿಸಿದ್ದಾರೆ. ಸ್ಯಾಂಡಲ್ ವುಡ್ ಕಲಾವಿದರು ಸಹ ಬಡವರ ನೆರವಿಗೆ ಧಾವಿಸಿ ತಮ್ಮ ಹೃದಯವೈಶಾಲ್ಯತೆಯನ್ನು ಮೆರೆದಿದ್ದಾರೆ.
Recommended Video
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಹ ತನ್ನ ಟ್ರಸ್ಟ್ ಮೂಲಕ ಅನೇಕರಿಗೆ ನೆರವು ನೀಡಿದ್ದಾರೆ. ಆಸ್ಪತ್ರೆ ಬಿಲ್, ಆಹಾರ ಕಿಟ್, ಶಾಲಾ ಮಕ್ಕಳು, ಶಿಕ್ಷಕರು, ಫ್ರಂಟ್ ಲೈನ್ ವರ್ಕರ್ ಸೇರಿದಂತೆ ಅನೇಕರಿಗೆ ಸಹಾಯ ಹಸ್ತ ಚಾಚಿದ್ದಾರೆ. ಇದೀಗ ವಿಶೇಷ ಚೇತನ ಮಕ್ಕಳ ನೆರವಿಗೆ ಕಿಚ್ಚ ಮುಂದಾಗಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿರುವ ಪೃಥ್ವಿ ವಸತಿ ಶಾಲೆ ಮಳೆಯಿಂದ ಸೋರುತ್ತಿತ್ತು. ಅಲ್ಲದೆ ಲಾಕ್ ಡೌನ್ ನಿಂದ ಆಹಾರಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಸುಮಾರು 40 ಕ್ಕೂ ಹೆಚ್ಚು ಮಕ್ಕಳಿರುವ ಈ ಶಾಲೆಗೆ ಕಿಚ್ಚ ಸುದೀಪ್ ನೆರವು ನೀಡಿದ್ದಾರೆ.

ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ವಿಶೇಷ ಚೇತನ ಮಕ್ಕಳ ಪಾಲಿಗೆ ಬೆಳಕಾಗಿದೆ. ಮಂಗಳವಾರ ಕಿಚ್ಚ ಸುದೀಪ್ ಚಾರಿಟೇಬಲ್ ರಾಜ್ಯ ಮುಖಂಡ ರಮೇಶ್ ಕಿಟ್ಟಿ ಹಾಗೂ ಜಿಲ್ಲಾ ಮುಖಂಡರಾದ ಸೋಮ ನಾಯಕ, ಪರಶಿವ ಅವರ ತಂಡ ಶಾಲೆಗೆ ಭೇಟಿ ನೀಡಿ, ಒಂದು ತಿಂಗಳಿಗಾಗುವಷ್ಟು ಆಹಾರದ ಕಿಟ್ ವಿತರಿಸಿ ವಸತಿ ಶಾಲೆಯ ಮೂಲ ಸೌಕರ್ಯ ಅಭಿವೃದ್ಧಿ ಮಾಡಲೂ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಈ ವಸತಿ ಶಾಲೆ ಬಾಡಿಗೆ ಕಟ್ಟಡದಲ್ಲಿದ್ದು ಅವಕಾಶ ಕೊಟ್ಟರೇ ಇದೇ ಕಟ್ಟಡವನ್ನು ದುರಸ್ತಿ ಮಾಡಿಸಲಾಗುವುದು. ಇಲ್ಲವೇ ಬೇರೆ ಕಟ್ಟಡ ನೋಡಿ ಶಾಲೆಯನ್ನು ಸ್ಥಳಾಂತರಿಸುವ ಕೆಲಸವನ್ನು ಚಾರಿಟೇಬಲ್ ಸೊಸೈಟಿ ಮಾಡಲು ಮುಂದಾಗಿದೆ.
ಜತೆಗೆ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಶಾಶ್ವತ ಪರಿಹಾರವೊಂದನ್ನು ಒದಗಿಸಲು ಚಿಂತನೆ ಮಾಡಿದೆ. ಕಳೆದ ವಾರ ಒಂದುಹೊತ್ತಿನ ಊಟಕ್ಕೂ ಕಷ್ಟ ಪಡುತ್ತಿದ್ದ ಮಂಗಳಮುಖಿಯರು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿಗೆ ಕರೆ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದರು. ತಕ್ಷಣವೇ ನೆರವಿಗೆ ಧಾವಿಸಿದ ಕಿಚ್ಚನ ಚಾರಿಟೇಬಲ್ ಸೊಸೈಟಿ, ಚಿತ್ರದುರ್ಗದ ಮಂಗಳಮುಖಿಯರ ಮನೆಗೆ ದಿನಸಿ ಕಿಟ್ಗಳನ್ನು ವಿತರಿಸಿದ್ದಾರೆ.
ಕೊರೊನಾದಿಂದ ಸಂಕಷ್ಟದಲ್ಲಿರುವ ಸಾಕಷ್ಟು ಮಂದಿಗೆ ಸುದೀಪ್ ಟ್ರಸ್ಟ್ ಸಹಾಯ ಮಾಡಿದೆ. ಕಷ್ಟ ಎಂದವರ ನೆರವಿಗೆ ತಕ್ಷಣಕ್ಕೆ ಧಾವಿಸುವ ಸುದೀಪ್ ಕೆಲಸಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.


Click it and Unblock the Notifications











