ಕಷ್ಟದಲ್ಲಿರುವ ನಟಿ ವಿಜಯಲಕ್ಷ್ಮಿಗೆ ನೆರವು ನೀಡಿದ ಕಿಚ್ಚ ಸುದೀಪ್
ನಾಗಮಂಡಲ, ಜೋಡಿಹಕ್ಕಿ, ಸೂರ್ಯವಂಶ, ಸ್ವಸ್ತಿಕ್, ಹಬ್ಬ ಅಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನೆ ಮಾತಾಗಿದ್ದ ನಟಿ ವಿಜಯಲಕ್ಷ್ಮಿ ಇಂದು ಕಷ್ಟದ ಸ್ಥಿತಿಯಲ್ಲಿದ್ದಾರೆ ಎನ್ನುವುದು ನೋವಿನ ಸಂಗತಿ.
ಇಷ್ಟು ದಿನ ತಾಯಿಗೆ ಚಿಕಿತ್ಸೆ ಕೊಡಿಸಲು ಪರದಾಡುತ್ತಿದ್ದ ವಿಜಯಲಕ್ಷ್ಮಿ ಈಗ ಅನಾರೋಗ್ಯದ ಕಾರಣ ತಾವೇ ಆಸ್ಪತ್ರೆ ಸೇರಿದ್ದಾರೆ. ಚಿಕಿತ್ಸೆಗೆ ದುಡ್ಡಿಲ್ಲ, ನೆಲೆಸಲು ಸ್ವಂತ ಮನೆಯಿಲ್ಲ, ಇಂಡಸ್ಟ್ರಿಯವರು ಸಹಾಯ ಮಾಡಿ ಎಂದು ವಿಜಯಲಕ್ಷ್ಮಿ ಸಹೋದರಿ ಉಷಾದೇವಿ ಕಣ್ಣೀರಾಕಿದ್ದರು.
ನಂತರ ಕರ್ನಾಟಕ ವಾಣಿಜ್ಯ ಮಂಡಳಿ ವಿಜಯಲಕ್ಷ್ಮಿ ನೆರವಿಗೆ ಬಂದು ತಾವು ಇದ್ದೀವಿ ಎಂದು ಹೇಳಿದ್ದರು. ಇದೀಗ, ನಟ ಸುದೀಪ್ ಕೂಡ ವಿಜಯಲಕ್ಷ್ಮಿ ಅವರಿಗೆ ಧನಸಹಾಯ ಮಾಡಿದ್ದಾರೆ. ಮುಂದೆ ಓದಿ....

ಧನ ಸಹಾಯ ಮಾಡಿದ ಕಿಚ್ಚ
ವಿಜಯಲಕ್ಷ್ಮಿ ಅವರ ಸ್ಥಿತಿಯ ಬಗ್ಗೆ ಮಾಹಿತಿ ಪಡೆದ ನಟ ಸುದೀಪ್ ಸದ್ಯಕ್ಕೆ ಒಂದು ಲಕ್ಷ ರೂಪಾಯಿ ಹಣ ನೀಡಿ ನೆರವಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಈ ವಿಷ್ಯವನ್ನ ಸುದೀಪ್ ಆಪ್ತರು ಹಾಗೂ ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ತಿಳಿಸಿದ್ದಾರೆ.

ಭಾ.ಮ ಹರೀಶ್ ಟ್ವೀಟ್
ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಭಾ ಮಾ ಹರೀಶ್ ಟ್ವೀಟ್ ಮಾಡಿದ್ದು, ''ನಟಿ ವಿಜಯಲಕ್ಷ್ಮಿ ಯವರ ಅನಾರೋಗ್ಯದ ವಿಷಯ ತಿಳಿದು ಒಂದು ಲಕ್ಷ ರೂಪಾಯಿಗಳನ್ನು ನೀಡಿ, ಸಹಾಯ ಮಾಡಿದ 'ಕಿಚ್ಚ ಸುದೀಪ್' ರವರಿಗೆ ಧನ್ಯವಾದಗಳು'' ಎಂದು ಬರೆದುಕೊಂಡಿದ್ದಾರೆ.

ಆಸ್ಪತ್ರೆಗೆ ಭೇಟಿ ನೀಡಿದ ವಾಣಿಜ್ಯ ಮಂಡಳಿ ಸದಸ್ಯರು
ನಟಿ ವಿಜಯಲಕ್ಷ್ಮಿ ಆಸ್ಪತ್ರೆಗೆ ಸೇರಿದ್ದ ವಿಷ್ಯ ತಿಳಿದಿದ್ದ ಕರ್ನಾಟಕ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಭಾ ಮ ಹರೀಶ್ ಮತ್ತು ಗಿರೀಶ್ ಸೇರಿದಂತೆ ಫಿಲಂ ಚೇಂಬರ್ ಸದಸ್ಯರು ಭೇಟಿ ನೀಡಿ, ನಾವು ಸಹಾಯ ಮಾಡುತ್ತೇವೆ ಮತ್ತು ಸಿನಿಮಾದಲ್ಲಿ ಮತ್ತೆ ನಟಿಸುವಂತೆ ಅವಕಾಶ ಕಲ್ಪಿಸುತ್ತೇವೆ ಎಂದು ತಿಳಿಸಿದ್ದರು.

ವಿಜಯಲಕ್ಷ್ಮಿಗೆ ಸಹಾಯ ಮಾಡಿದ ಮದಗಜ
ಇನ್ನು ನಟ ಶ್ರೀಮುರಳಿ ನಟಿಸುತ್ತಿರುವ ಮದಗಜ ಚಿತ್ರದಲ್ಲಿ ವಿಜಯಲಕ್ಷ್ಮಿ ಅವರಿಗೆ ಪಾತ್ರವೊಂದು ನೀಡಲು ಮದಗಜ ಚಿತ್ರತಂಡ ನಿರ್ಧರಿಸಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಬಳಿಕ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.


Click it and Unblock the Notifications











