'ರಕ್ಕಮ್ಮ' ಹಾಡಿಗೆ ಕುಣಿದ ಪೌರ ಕಾರ್ಮಿಕರನ್ನು ಮನೆಗೆ ಕರೆದು ಉಪಚರಿಸಿದ ಕಿಚ್ಚ!
ಕಿಚ್ಚ ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾದ 'ರಾ ರಾ ರಕ್ಕಮ್ಮ' ಹಾಡು ಬಹಳ ವೈರಲ್ ಆಗುತ್ತಿದೆ. ಹಾಡಿಗೆ ಸಿನಿಮಾ ಸೆಲೆಬ್ರಿಟಿಗಳಿಂದ ಹಿಡಿದು, ಐಟಿ ಉದ್ಯೋಗಿಗಳು, ಯುವಕರು, ವಯಸ್ಸಾದವರು ಎಲ್ಲರೂ ಡ್ಯಾನ್ಸ್ ಮಾಡುತ್ತಿದ್ದಾರೆ.
ಆದರೆ ಧಾರವಾಡದ ಕೆಲ ಪೌರ ಕಾರ್ಮಿಕರು ಮಾತ್ರ ಆ ಹಾಡಿಗೆ ಬಹಳ ವಿಭಿನ್ನವಾಗಿ ಡ್ಯಾನ್ಸ್ ಮಾಡಿದ್ದರು. ಅವರು ಮಾಡಿದ್ದ ಡ್ಯಾನ್ಸ್ ಎಷ್ಟು ಚೆನ್ನಾಗಿತ್ತೆಂದರೆ ಸ್ವತಃ ನಟ ಸುದೀಪ್ ಆ ಪೌರ ಕಾರ್ಮಿಕರನ್ನು ಮನೆಗೆ ಕರೆಸಿಕೊಂಡು ಉಪಚರಿಸಿ ಕಳಿಸಿದ್ದಾರೆ.
ಧಾರವಾಡದ ಕೆಲ ಪೌರ ಕಾರ್ಮಿಕರು ಒಟ್ಟು ಸೇರಿ ಸುಮಾರು 30,000 ಹಣ ಖರ್ಚು ಮಾಡಿ 'ವಿಕ್ರಾಂತ್ ರೋಣ' ಸಿನಿಮಾದ 'ರಾ ರಾ ರಕ್ಕಮ್ಮ' ಹಾಡಿಗೆ ಡ್ಯಾನ್ಸ್ ಮಾಡಿದ್ದರು. ಆ ವಿಡಿಯೋ ಬಹಳ ವೈರಲ್ ಆಗಿತ್ತು. ಸುದೀಪ್ ಸಹ ಆ ವಿಡಿಯೋವನ್ನು ನೋಡಿ ಮೆಚ್ಚಿಕೊಂಡು ಅವರನ್ನು ಮನೆಗೆ ಆಹ್ವಾನಿಸಿದ್ದರು.
ಮನೆಗೆ ಬಂದಿದ್ದ ಪೌರ ಕಾರ್ಮಿಕರನ್ನು ಪ್ರೀತಿಯಿಂದ ಆಧರಿಸಿರುವ ಸುದೀಪ್ ಅವರಿಗೆಲ್ಲ ಸಿಹಿ ನೀಡಿ ಆದರಿಸಿದ್ದಾರೆ. ಅವರೊಟ್ಟಿಗೆ ಮಾತನಾಡಿದ್ದಾರೆ, ಅವರೊಟ್ಟಿಗೆ ಫೋಟೊ ತೆಗೆಸಿಕೊಂಡಿದ್ದಾರೆ. ಅವರ ಡ್ಯಾನ್ಸ್ ಅನ್ನು ಮೆಚ್ಚಿಕೊಂಡಿದ್ದಾರೆ. ಅವರ ಪ್ರತಿಭೆಯನ್ನು ಕೊಂಡಾಡಿದ್ದಾರೆ.

ಸುದೀಪ್ ಭೇಟಿಯಾಗಿ ಖುಷಿಯಾದ ಪೌರ ಕಾರ್ಮಿಕರು
ಸುದೀಪ್ ಅವರ ಆತಿಥ್ಯದ ಬಗ್ಗೆ ಮಾತನಾಡಿರುವ ಪೌರ ಕಾರ್ಮಿಕ, ''ನಾವು ಸುದೀಪ್ ಅವರ 'ವಿಕ್ರಾಂತ್ ರೋಣ' ಸಿನಿಮಾ ಯಶಸ್ವಿಯಾಗಲಿ ಎಂದು ವಿಭಿನ್ನವಾಗಿ ಡ್ಯಾನ್ಸ್ ಮಾಡಿದ್ದೆವು. ನಮ್ಮದೇ ಸುಮಾರು 30,000 ಹಣ ಖರ್ಚು ಮಾಡಿ ಸೆಟ್ ಹಾಕಿ ಡ್ಯಾನ್ಸ್ ಮಾಡಿ ಸುದೀಪ್ ಅವರಿಗೆ ಶುಭಾಶಯ ಕೋರಿದ್ದೆವು. ಅದನ್ನು ಸುದೀಪ್ ಮೆಚ್ಚಿಕೊಂಡಿದ್ದು ನಮಗೆ ಬಹಳ ಖುಷಿಯಾಯಿತು. ಸುದೀಪ್ ಅವರನ್ನು ಭೇಟಿಯಾಗಿದ್ದು, ಸ್ವತಃ ದೇವರನ್ನೇ ಭೇಟಿಯಾದಷ್ಟು ಖುಷಿಯಾಯಿತು. ಅವರು ನಮ್ಮನ್ನು ಚೆನ್ನಾಗಿ ನೋಡಿಕೊಂಡರು ಅದು ಇನ್ನಷ್ಟು ಖುಷಿಯಾಯಿತು'' ಎಂದಿದ್ದಾರೆ.

ಬಹಳ ವೈರಲ್ ಆಗಿತ್ತು ವಿಡಿಯೋ
''ನಮಗೆ ನಮ್ಮ ಪ್ರತಿಭೆ ತೋರಿಸಲು ಸೂಕ್ತ ಅವಕಾಶ ಸಿಕ್ಕಿರಲಿಲ್ಲ. ಈಗ ನಮ್ಮ ಪ್ರತಿಭೆಯನ್ನು ಸ್ವತಃ ಸುದೀಪ್ ಮೆಚ್ಚಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅವಕಾಶ ಸಿಕ್ಕರೆ ನಮ್ಮ ಪ್ರತಿಭೆ ತೋರಿಸಲು ನಾವು ತಯಾರಾಗಿದ್ದೇವೆ'' ಎಂದಿದ್ದಾರೆ. ಪ್ರಶಾಂತ್ ಶಿಕ್ಕಲಗಾರ್ ನೇತೃತ್ವದಲ್ಲಿ ಇನ್ನೂ ಕೆಲವು ಪೌರ ಕಾರ್ಮಿಕರು 'ರಾ ರಾ ರಕ್ಕಮ್ಮ' ಹಾಡಿಗೆ ಡ್ಯಾನ್ಸ್ ಮಾಡಿದ್ದರು. ಆ ವಿಡಿಯೋ ಬಹಳ ವೈರಲ್ ಆಗಿದೆ.

ಸೇವೆ ಖಾಯಂ ಮಾಡಿದ ಧಾರಾವಾಡ ಜಿಲ್ಲಾಧಿಕಾರಿ!
ಇನ್ನು 'ರಾ ರಾ ರಕ್ಕಮ್ಮ' ಹಾಡಿಗೆ ಡ್ಯಾನ್ಸ್ ಮಾಡಿದ್ದ ಪೌರ ಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಇವರ ವಿಡಿಯೋ ವೈರಲ್ ಆದ ಬಳಿಕ ಧಾರಾವಾಡ ಜಿಲ್ಲಾಧಿಕಾರಿಗಳು ಅವರನ್ನು ಕರೆಸಿಕೊಂಡು ಅಭಿನಂದಿಸಿರುವುದಲ್ಲದೆ, ಅವರ ಸೇವೆಯನ್ನು ಖಾಯಂ ಮಾಡುವಂತೆ ಸಹ ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಸಿನಿಮಾ ಅವಕಾಶ ಸಿಗುವ ನಿರೀಕ್ಷೆಯಲ್ಲೂ ಇದ್ದಾರೆ ಪೌರ ಕಾರ್ಮಿಕ ಪ್ರಶಾಂತ್ ಶಿಕ್ಕಲಗಾರ್. ಒಟ್ಟಾರೆ 'ರಾ ರಾ ರಕ್ಕಮ್ಮ' ಹಾಡಿನಿಂದಾಗಿ ಪ್ರಶಾಂತ್ ಶಿಕ್ಕಲಗಾರ್ ಹಾಗೂ ಕೆಲವು ಪೌರ ಕಾರ್ಮಿಕರ ಬದುಕು ಬದಲಾಗಿದೆ.

ಜುಲೈ 28 ಕ್ಕೆ ಸಿನಿಮಾ ಬಿಡುಗಡೆ
ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾ ಜುಲೈ 28 ರಂದು ಬಿಡುಗಡೆ ಆಗಲಿದೆ. ಸಿನಿಮಾದ 'ರಾ ರಾ ರಕ್ಕಮ್ಮ' ಹಾಡು ಬಹಳ ಜನಪ್ರಿಯಗೊಂಡಿದ್ದು, ಚಂದನ್ ಶೆಟ್ಟಿ-ನಿವೇದಿತಾ, ಅರುಣ್ ಸಾಗರ್, ಪಾವಗಡ ಮಂಜು, ನವೀನ್ ಸಜ್ಜು, ಆಸಿಕಾ ರಂಗನಾಥ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಬಿಜೆಪಿ ಶಾಸಕ ರೇಣುಕಾಚಾರ್ಯ ಸಹ ಆ ಹಾಡಿಗೆ ಮಕ್ಕಳೊಟ್ಟಗೆ ಸೇರಿ ನರ್ತಿಸಿದ್ದಾರೆ. ಸಿನಿಮಾವನ್ನು ಅನುಪ್ ಭಂಡಾರಿ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಟ್ರೈಲರ್ ಜೂನ್ 23 ಕ್ಕೆ ಬಿಡುಗಡೆ ಆಗಲಿದೆ.


Click it and Unblock the Notifications











