ಸಂಭಾವನೆ ಪಡೆಯದೇ ಪುಣ್ಯಕೋಟಿ ಯೋಜನೆಗೆ ಸುದೀಪ್ ರಾಯಭಾರಿ!
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನೆಚ್ಚಿನ ನಟನನ್ನು ನೋಡಲು ಕೈ ಕುಲುಕಿ ಶುಭ ಹಾರೈಸಲು ದೂರದ ಊರುಗಳಿಂದ ಅಭಿಮಾನಿಗಳು ಜಮಾಯಿಸಿದ್ದರು. ಇನ್ನು ಸಾಮಾಜಿಕ ಕೆಲಸಗಳ ಮೂಲಕ ನೆಚ್ಚಿನ ನಟನ ಹುಟ್ಟುಹಬ್ಬವನ್ನು ವಿಶೇಷವಾಗಿಸಲು ಸುದೀಪಿಯನ್ಸ್ ಮನಸ್ಸು ಮಾಡಿದ್ದಾರೆ.
ಕಳೆದೆರಡು ವರ್ಷಗಳಿಂದ ಕೊರೊನಾ ಹಾವಳಿ ಕಾರಣ ಸುದೀಪ್ ಅದ್ಧೂರಿ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಅದಕ್ಕಿಂತ ಎರಡು ವರ್ಷ ಹಿಂದೆಯೇ ತಮ್ಮ ಹುಟ್ಟುಹಬ್ಬದ ಹೆಸರಿನಲ್ಲಿ ದುಂದು ವೆಚ್ಚ ಬೇಡ ಎಂದು ಸುದೀಪ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು.
ಆದರೆ ಈ ಹುಟ್ಟುಹಬ್ಬಕ್ಕೆ ಅಭಿಮಾನಿಗಳನ್ನು ಭೇಟಿಯಾಗಿ ಶುಭಾಶಯ ಸ್ವೀಕರಿಸಿ, ಅಭಿಮಾನಿಗಳು ಫೋಟೊ ಕ್ಲಿಕ್ಕಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತಿದ್ದಾರೆ. ಈ ಬಾರಿಯ ಸುದೀಪ್ ಹುಟ್ಟುಹಬ್ಬ ಸಾಕಷ್ಟು ವಿಶೇಷತೆಗಳಿಂದ ಕೂಡಿದೆ. ಪುಣ್ಯಕೋಟಿಗೆ ರಾಯಭಾರಿ ಕೂಡ ಆಗಿದ್ದಾರೆ ಕಿಚ್ಚ.

ಸುದೀಪ್ ರಾಯಭಾರಿ!
ಪಶು ಸಂಗೋಪನೆ ಇಲಾಖೆಯು ಜಾನುವಾರುಗಳ ರಕ್ಷಣೆಗಾಗಿ ಕೈಗೊಂಡಿರುವ ಕಾರ್ಯಕ್ರಮಗಳನ್ನು ಪ್ರಚುರಪಡಿಸಲಾಗಿದೆ. ಹೈನುಗಾರಿಕೆಗೆ ಉತ್ತೇಜನ, ಜಾನುವಾರುಗಳ ಸಂರಕ್ಷಣೆ, ಪಾಲನೆ, ಪೋಷಣೆ ಮಾಡುತ್ತಿರುವ ಸರ್ಕಾರದೊಂದಿಗೆ ಕೈ ಜೋಡಿಸಿ, ಸಾರ್ವಜನಿಕರಲ್ಲಿ ಸ್ಫೂರ್ತಿ ತುಂಬಲು ತಮ್ಮನ್ನು ಪುಣ್ಯಕೋಟಿ ರಾಯಭಾರಿಯಾಗಿ ನಟ ಸುದೀಪ್ ಅವ್ರನ್ನು ನೇಮಿಸಲಾಗಿದೆ. ಈ ಬಗ್ಗೆ ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ತಿಳಿಸಿದ್ದಾರೆ. ಈ ಕುರಿತು ಕಿಚ್ಚ ಸುದೀಪ್ ಅವರಿಗೆ ಪತ್ರ ಬರೆದಿರುವ ಪ್ರಭು ಚವ್ಹಾಣ್, ತಾವು ಈ ಸತ್ಕಾರ್ಯದಲ್ಲಿ ಭಾಗಿಯಾಗಿ ಗೋ ಸಂಪತ್ತಿನ ಸಂರಕ್ಷಣೆಗೆ ಸರ್ಕಾರ ತೊಟ್ಟಿರುವ ಸಂಕಲ್ಪಕ್ಕೆ ಕೈ ಜೋಡಿಸಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸುದೀಪ್ಗೆ ಸರ್ಕಾರದ ಮನವಿ!
ಈ ಹಿಂದೆ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವರು ನಟ ಸುದೀಪ್ ಅವರಿಗೆ ಪತ್ರ ಬರೆದು, ಪುಣ್ಯಕೋಟಿ ರಾಯಭಾರಿಯಾಗುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ನಟ ಸುದೀಪ್ ಪಶು ಸಂಗೋಪನೆ ಇಲಾಖೆಯ ರಾಯಭಾರಿ ಕೆಲಸ ನಿರ್ವಹಿಸಲು ಒಪ್ಪಿಕೊಂಡಿದ್ದಾರೆ ತಿಳಿಸಿದ್ದಾರೆ.

ರಾಯಭಾರಿಯಾಗಲು ಹಣ ಪಡೆದಿಲ್ಲ!
ನಟ ಸುದೀಪ್ ಜನ್ಮದಿನದ ಅಂಗವಾಗಿ ಪುಣ್ಯಕೋಟಿ ರಾಯಭಾರಿಯಾಗಿ ನೇಮಕ ಮಾಡಿರುವ ಕುರಿತು ಅಧಿಕೃತವಾಗಿ ಪತ್ರ ಬರೆಯಲಾಗಿದೆ. ಸುದೀಪ್ ಈ ಕೆಲಸಕ್ಕ ಯಾವುದೇ ಸಂಭಾವನೆ ಪಡೆಯದೇ ಗೋಸಂಪತ್ತಿನ ಸಂರಕ್ಷಣೆಗೆ ತಮ್ಮ ಸಣ್ಣದೊಂದು ಅಳಿಲು ಸೇವೆ ಸಲ್ಲಿಸುವುದಾಗಿ ತಿಳಿಸಿರುವುದಾಗಿ ಪ್ರಭು ಚವ್ಹಾಣ್ ವಿವರಿಸಿ, ಜನ್ಮದಿನಕ್ಕೆ ಶುಭ ಕೋರಿದ್ದಾರೆ.

ಸುದೀಪ್ ಹೆಸರಲ್ಲಿ ವಿಶೇಷ 'ಅಂಚೆ ಲಕೋಟೆ'
ಭಾರತ ಸರ್ಕಾರದ ಅಂಚೆ ಇಲಾಖೆಯು ದೇಶದ ಮಹತ್ತರ ಘಟನೆಗಳನ್ನು, ಪ್ರಶಸ್ತಿಗಳನ್ನು ಅಥವಾ ವ್ಯಕ್ತಿಗಳ ಸಾಧನೆಗಳನ್ನು ನೂರಾರು ವರ್ಷ ದಾಖಲೆಯಾಗಿ ಉಳಿಸಬೇಕೆಂಬ ಕಾರಣಕ್ಕೆ ಆಗಾಗ್ಗೆ ವಿಶೇಷ 'ಅಂಚೆ ಲಕೋಟೆಯನ್ನು' ಬಿಡುಗಡೆ ಮಾಡುತ್ತದೆ. ಅದೇ ಪ್ರಕಾರ 25 ವರ್ಷಗಳ ಸಿನಿ ಜರ್ನಿಯನ್ನು ಪೂರ್ಣಗೊಳಿಸಿರುವ ಸುದೀಪ್ ಅವರ ಸಾಧನೆಯನ್ನು ಸಹ ಭಾರತೀಯ ಅಂಚೆ ಇಲಾಖೆ ದಾಖಲೆ ಮಾಡುತ್ತಿದೆ. ಅದರ ಹಿನ್ನೆಲೆಯಲ್ಲಿ ಅಂಚೆ ಇಲಾಖೆಯ ಅಧೀಕ್ಷರಾದ ಮಾದೇಶ್, ನಟ ಕಿಚ್ಚ ಸುದೀಪ್ ಅವರ ಮನೆಗೆ ಆಗಮಿಸಿ ನಿರಾಕ್ಷೇಪಣ ಪತ್ರ ಪಡೆದುಕೊಂಡಿದ್ದಾರೆ.


Click it and Unblock the Notifications











