"ಕಾಂಗ್ರೆಸ್- BJP ಎರಡೂ ಪಕ್ಷಗಳಿಂದ ಆಫರ್ ಇದೆ: ಆದ್ರೆ ಫ್ಯಾನ್ಸ್ ಪಕ್ಷಕ್ಕೆ ನನ್ನ ಬೆಂಬಲ": ಕಿಚ್ಚ ಸುದೀಪ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪೊಲಿಟಿಕಲ್ ಎಂಟ್ರಿ ಬಗ್ಗೆ ಕೆಲ ದಿನಗಳಿಂದ ಭಾರೀ ಚರ್ಚೆ ನಡೀತಿತ್ತು. ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ. ಶಿವಕುಮಾರ್ ನಟ ಸುದೀಪ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಇದರಿಂದ ಕಿಚ್ಚ ಕಾಂಗ್ರೆಸ್ ಪಕ್ಷ ಸೇರುತ್ತಾರಾ? ಎನ್ನುವ ಅನುಮಾನ ಶುರುವಾಗಿತ್ತು. ಇದೇ ಮೊದಲ ಬಾರಿಗೆ ಸುದೀಪ್ ತಮ್ಮ ಪೊಲಿಟಿಕಲ್ ಎಂಟ್ರಿ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಟಿವಿ9 ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ನಟ ಸುದೀಪ್ ರಾಜಕೀಯರಂಗ ಸೇರುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳಿಂದ ನನಗೆ ಆಹ್ವಾನ ಬರುತ್ತಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಸದ್ಯಕ್ಕೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಒಂದು ವೇಳೆ ಅಂತಹ ನಿರ್ಧಾರ ಕೈಗೊಂಡರೆ ಕಂಡಿತ ತಿಳಿಸುತ್ತೇನೆ ಎಂದು ಸುದೀಪ್ ಹೇಳಿದ್ದಾರೆ. ಅಭಿಮಾನಿಗಳು ಒಪ್ಪಿದರೆ ಒಂದು ಕೈ ನೋಡೇ ಬಿಡೋಣ ಎನ್ನುವ ಅರ್ಥದಲ್ಲಿ ಸುದೀಪ್ ಮಾತನಾಡಿದ್ದಾರೆ.
ಪ್ರಧಾನಿ ಮೋದಿ ಇತ್ತೀಚೆಗೆ ಸ್ಯಾಂಡಲ್ವುಡ್ ಕಲಾವಿದರಿಗೆ ನೀಡಿದ ಔತಣಕೂಟಕ್ಕೆ ನನಗೂ ಆಹ್ವಾನ ಬಂದಿತ್ತು. ಆದರೆ ಅನಾರೋಗ್ಯ ಕಾರಣದಿಂದ ಹೋಗಲಿಲ್ಲ ಎಂದು ಸುದೀಪ್ ವಿವರಿಸಿದ್ದಾರೆ.

ಯಾವುದೇ ನಿರ್ಧಾರ ಕೈಗೊಂಡಿಲ್ಲ
"ನಾನೊಬ್ಬ ಕಲಾವಿದ. ನನ್ನ ಮೇಲೆ ಎಲ್ಲರಿಗೂ ಪ್ರೀತಿ ವಿಶ್ವಾಸ ಇದೆ. ಇವರೆಲ್ಲಾ ನನ್ನ ಸ್ನೇಹಿತರು. ಇವರು ಸ್ನೇಹಿತರಾಗಿ ನನ್ನ ಮನೆಗೆ ಬಂದಿದ್ದರು ಎಂದು ನಾನು ತೇಲಿಸಲು ಹೋಗಲ್ಲ. ಎಲ್ಲರೂ ಬಂದಾಗ ರಾಜಕೀಯದ ಮಾತುಗಳೇ ಇರುತ್ತವೆ. ಆದರೆ ಸದ್ಯಕ್ಕೆ ನಾನು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಅವರು ಮಾತುಕತೆ ನಡೆಸಲು ಬರುವುದರಲ್ಲಿ ತಪ್ಪಿಲ್ಲ. ಭಗವಂತ ಒಂದಷ್ಟು ಜವಾಬ್ದಾರಿ ಕೊಟ್ಟಿದ್ದಾನೆ. ಅಭಿಮಾನಿಗಳನ್ನು ಕೊಟ್ಟಿದ್ದಾನೆ. ಇದರ ನಡುವೆ ರಾಜಕೀಯ ನಾಯಕರಿಗೆ ನನ್ನ ಮೇಲೆ ನಂಬಿಕೆ ಬಂದಿದೆ. ಅದಕ್ಕೆ ನನ್ನ ದಾರಿ, ನಿಯತ್ತು, ಹಠ ಕಾಣಿಸಿರಬಹುದು. ಸದ್ಯಕ್ಕೆ ಎಲ್ಲರೂ ಬಂದು ಚರ್ಚೆ ನಡೆಸ್ತಿದ್ದಾರೆ. ಅವರನ್ನು ಗೌರವಿಸುತ್ತೇನೆ. ಡಿಕೆ ಶಿವಕುಮಾರ್ ಸರ್, ಸುಧಾಕರ್, ಬೊಮ್ಮಾಯಿ ಅಂಕಲ್, ಸ್ನೇಹಿತೆ ರಮ್ಯಾ ಎಲ್ಲರೂ ಬಂದು ಮಾತುಕತೆ ನಡೆಸುತ್ತಾರೆ. ಇನ್ನು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಎಲ್ಲಾ ಮಾತುಕತೆ ಹಂತದಲ್ಲೇ ಇದೆ. ಒಮ್ಮೆ ನಿರ್ಧಾರ ತೆಗೆದುಕೊಂಡರೆ ನಿಮಗೆ ಹೇಳುತ್ತೇನೆ".

ಎರಡೂ ಪಕ್ಷಗಳಿಂದ ಆಹ್ವಾನ ಇದೆ
ಕಾಂಗ್ರೆಸ್, ಬಿಜೆಪಿ ನಾಯಕರ ಜೊತೆ ಆತ್ಮೀಯ ಒಡನಾಟ ಇದೆ. ನಿರ್ಧಾರ ಕೈಗೊಳ್ಳುವುದು ಕಷ್ಟ ಅನ್ನಿಸುವುದಿಲ್ಲವೇ ಎನ್ನುವ ಪ್ರಶ್ನೆಗೆ "ಒಂದು ನಿರ್ಧಾರ ತೆಗೆದುಕೊಳ್ಳುವಾಗ ಕಷ್ಟ ಇರುತ್ತದೆ. ಅಲ್ಲಿ ಸನ್ನಿವೇಶ ಸುಲಭವಾಗಿ ಇರುವುದಿಲ್ಲ. ನಿಮಗೆ ಯಾವುದೇ ಸರಿ ಎನ್ನಿಸುತ್ತದೋ ಅದರ ಪರ ನಿಲ್ಲಬೇಕು, ಆ ದಿಕ್ಕಿನಲ್ಲಿ ಹೋಗಬೇಕು. ಅದರ ಬಗ್ಗೆ ಈಗಲೇ ಏನು ಹೇಳಲ್ಲ. ಎಮೋಷನ್ಸ್ ಇದೆ. ನನ್ನದು ಬಹಳ ಸೂಕ್ಷ್ಮ ವ್ಯಕ್ತಿತ್ವ. ಆದರೆ ನಿರ್ಧಾರ- ಎಮೋಷನ್ಸ್ ಎರಡನ್ನು ಒಟ್ಟಿಗೆ ಸೇರಿಸಲು ಹೋಗಲ್ಲ. ನನಗೆ ಯಾವುದು ಸರಿ ಎನ್ನಿಸುತ್ತೋ ಅದನ್ನು ಮಾಡುತ್ತೇನೆ. ಹೌದು ಎರಡೂ ಕಡೆಯಿಂದಲೂ ನನಗೆ ಆಹ್ವಾನ ಬರ್ತಿದೆ.

ಫ್ಯಾನ್ಸ್ ಏನಂತಾರೆ ನೋಡೋಣ
"ಎಲ್ಲರಿಗಿಂತ ನನಗೆ ಜನರು ಮುಖ್ಯ. ಜನರಿಗೆ ನಾನು ರಾಜಕೀಯಕ್ಕೆ ಬರುವುದು ಇಷ್ಟ ಇಲ್ಲದೇ ಇರಬಹುದು. ಸಿನಿಮಾದಲ್ಲೇ ಚೆನ್ನಾಗಿರಲಿ ಎನಿಸಬಹುದು. ಅದು ಕೂಡ ಮುಖ್ಯ ಅಲ್ಲವೇ. ಎರಡೇ ಪಕ್ಷ ನೋಡುತ್ತಿದ್ದೀರಾ. 3ನೇ ಪಕ್ಷ ಒಂದು ಇದೆ. ಅದೇ ನಮ್ಮ ಜನರ ಪಕ್ಷ. ಅಭಿಮಾನಿಗಳ ಪಕ್ಷ. ಅವರು ಏನು ಸಲಹೆ ನೀಡುತ್ತಾರೋ ಅದು ಕೂಡ ನೋಡಬೇಕು ಅಲ್ಲವೇ. ಜನರಿಗೆ ಒಳ್ಳೆಯದು ಮಾಡಲು ಪವರ್ ಬೇಕಾಗಿಲ್ಲ. ಇರುವುದರಲ್ಲಿ ಮಾಡಬಹುದು. ಇನ್ನು ಮಾಡಬಹುದು. ಒಂದು ವೇಳೆ ರಾಜಕೀಯ ಬೇಕು ಅಂದ್ರೆ, ಯಾಕೆ ಬೇಕು? ಅದಕ್ಕೆ ನಾನು ಒಂದಷ್ಟು ಪ್ರಶ್ನೆಗಳನ್ನು ಹಾಕಿಕೊಳ್ಳುತ್ತೇನೆ. ಯಾಕೆ ಹೋಗಬೇಕು. ಏನು ಮಾಡುವುದು, ಅಲ್ಲಿ ಹೆಚ್ಚು ಏನು ಮಾಡಬಹುದು ಅಂತ. ಆಗ ನೋಡೋಣ. ಎಲ್ಲಾ ಪಕ್ಷಗಳಲ್ಲೂ ಸ್ನೇಹಿತರಿದ್ದಾರೆ. ಅವರ ಪರ ನಿಲ್ಲಬಹುದು ಅಲ್ಲವೇ. ಒಳ್ಳೆ ನಿರ್ಧಾರ ತೆಗೆದುಕೊಳ್ಳುತ್ತೇನೆ."

ಪ್ರಧಾನಿ ಭೇಟಿ ಮಾಡುವುದು ಅದೃಷ್ಟ
ಪ್ರಧಾನಿ ಮೋದಿ ಔತಣಕೂಟಕ್ಕೆ ಆಹ್ವಾನ ಇತ್ತಾ ಎನ್ನುವ ಪ್ರಶ್ನೆಗೆ "ಖಂಡಿತ ಆಹ್ವಾನ ಇತ್ತು. ಅದಕ್ಕೆ ದೊಡ್ಡ ಧನ್ಯವಾದ. ಬಹಳ ಕರೆ ಮಾಡಿ ಆಹ್ವಾನ ನೀಡಿದ್ದರು. ನಾನು ಬರೋದಾಗಿ ಹೇಳಿದ್ದೆ. ನನಗೆ ಹುಷಾರಿರಲಿಲ್ಲ. ಅಲ್ಲಿ ಪ್ರೊಟೊಕಾಲ್ ಇತ್ತು. ನಾನು ಅಲ್ಲಿ ಹೋಗಿ ತಪಾಸಣೆ ವೇಳೆ ಹುಷಾರಿಲ್ಲ ಎಂದು ವಾಪಸ್ ಬರುವುದಕ್ಕಿಂತ ಯಾರಿಗೆ ಹೇಳಬೇಕು ಅವರಿಗೆ ಮನವರಿಕೆ ಮಾಡಿಕೊಟ್ಟೆ. ಮುಂದೆ ಯಾವಾಗದಾರೂ ಭೇಟಿ ಮಾಡ್ತೀನಿ ಎಂದು. ಪ್ರಧಾನಿ ಭೇಟಿ ಮಾಡುವುದು ನಮ್ಮ ಅದೃಷ್ಟ. ಅವರನ್ನು ಭೇಟಿ ಮಾಡಲಿಲ್ಲ ಎನ್ನುವ ನೋವಿದೆ. ದೊಡ್ಡ ವ್ಯಕ್ತಿಗಳಿಗೆ ನಾವು ಬರೋಕೆ ಸಾಧ್ಯವಿಲ್ಲ ಎಂದು ಹೇಳುವುದಕ್ಕೆ ಆಗುವುದಿಲ್ಲ. ಅವರು ನನ್ನನ್ನು ಆಹ್ವಾನಿಸುವಷ್ಟು ಸಾಧಿಸಿದ್ದೇನೆ ಎನ್ನುವ ತೃಪ್ತಿ ಇದೆ" ಎಂದು ಸುದೀಪ್ ಹೇಳಿದ್ದಾರೆ.


Click it and Unblock the Notifications











