ದಾವಣಗೆರೆಯಲ್ಲಿ ಸುದೀಪ್: ಅಭಿಮಾನಿಗಳನ್ನು ನಿಯಂತ್ರಿಸಲು ಲಘು ಲಾಠಿ ಪ್ರಹಾರ
ದಾವಣೆಗೆರೆಯ ಹರಿಹರದಲ್ಲಿ ನಡೆಯುತ್ತಿರುವ 'ವಾಲ್ಮೀಕಿ ಜಾತ್ರೆ' ಕಾರ್ಯಕ್ರಮದಲ್ಲಿ ನಟ ಸುದೀಪ್ ಇಂದು ಭಾಗವಹಿಸಿದ್ದರು.
Recommended Video
ಸುದೀಪ್ ಅನ್ನು ನೋಡಲು ಜನಜಾತ್ರೆಯೇ ದಾವಣೆಗೆರೆಯಲ್ಲಿ ನೆರೆದಿತ್ತು. ಸುದೀಪ್ ಅನ್ನು ಕಾಣಲು, ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದಿದ್ದಾರೆ. ಕೊನೆಗೆ ಜನರನ್ನು ನಿಯಂತ್ರಿಸಲಾಗದೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
ಮಧ್ಯಾಹ್ನ ಕಾರ್ಯಕ್ರಮಕ್ಕೆ ನಟ ಸುದೀಪ್ ಆಗಮನದ ವೇಳೆ ಅಭಿಮಾನಿಗಳು ಹುಚ್ಚೆದ್ದಿದ್ದರಿಂದ ನೂಕುನುಗ್ಗಲು ಉಂಟಾಗಿತ್ತು. ವೇದಿಕೆ ಮೇಲೆ ಸುದೀಪ್ ಬರುತ್ತಿದ್ದಂತೆ ಅಭಿಮಾನಿಗಳು ಮತ್ತಷ್ಟು ಹುರುಪೆದ್ದು ವೇದಿಕೆ ಬಳಿ ಬಂದು ಅಭಿಮಾನದ ಹೊಳೆ ಹರಿಸಲು ಮುಂದಾದಾಗ ಬ್ಯಾರಿಕೇಡ್ ಗಳನ್ನೇ ನೆಲಕ್ಕುರಿಳಿಸಿ, ಜಿಗಿದು, ನೆಗೆದು ಮಾಧ್ಯಮದವರ ಗ್ಯಾಲರಿಯಲ್ಲಿದ್ದ ಚೇರ್ ಗಳ ಪುಡಿ ಪುಡಿಗೊಳಿಸಿ ಹುಚ್ಚು ಅಭಿಮಾನ ಪ್ರದರ್ಶಿಸುತ್ತಾ ವೇದಿಕೆಯತ್ತ ನುಗ್ಗಿದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅನಿವಾರ್ಯವಾಗಿ ಲಘು ಲಾಠಿ ಪ್ರಹಾರ ನಡೆಸಿದರು.
ಚಿತ್ರನಟ ಸುದೀಪ್ ಗೆ ವಾಲ್ಮೀಕಿ ರತ್ನ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು. ವಾಲ್ಮಿಕಿ ಜಾತ್ರೆಯಲ್ಲಿ ಸುದೀಪ್ ಗೆ ವಾಲ್ಮಿಕಿ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ವಾಲ್ಮೀಕಿ ಗುರುಪೀಠದದಿಂದ ನೀಡುವ ವಾಲ್ಮೀಕಿ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿ ಆಶೀರ್ವದಿಸಿದರು.

ಕೆಲವು ದಿನಗಳ ಹಿಂದಷ್ಟೆ ದುಬೈಗೆ ತೆರಳಿದ್ದ ನಟ ಸುದೀಪ್ ಅಲ್ಲಿಯೂ ಸಹ ದುಬೈ ಕನ್ನಡಿಗರು ಸನ್ಮಾನ ಮಾಡಿ ಗೌರವಿಸಿದ್ದಾರೆ. ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ್ದಕ್ಕೆ ವಿಶೇಷವಾಗಿ ಬುರ್ಜ್ ಖಲೀಫಾ ಮೇಲೆ ಸುದೀಪ್ ಅವರ ಕಿರು ವಿಡಿಯೋ ಪ್ರಕಟಿಸಿ ಗೌರವ ಸಲ್ಲಿಸಲಾಗಿದೆ.
ವಾಲ್ಮೀಕಿ ಜಾತ್ರೆಯು ಅದ್ಧೂರಿಯಾಗಿ ನಡೆಯುತ್ತಿದ್ದು, ಸಿಎಂ ಯಡಿಯೂರಪ್ಪ, ಸಚಿವ ಶ್ರೀರಾಮುಲು ಸೇರಿದಂತೆ ಹಲವು ಮುಖಂಡರು, ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.


Click it and Unblock the Notifications











