ಸುದೀಪ್, ರಮೇಶ್ ಅರವಿಂದ್ ನಿರ್ಬಂಧಕ್ಕೆ ಪ್ರತಿಕ್ರಿಯೆ
ಕಿಚ್ಚ ಸುದೀಪ್, ರಮೇಶ್ ಅರವಿಂದ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅವರು ಗಾಂಧಿನಗರದ ನಿರ್ಮಾಪಕರ ಕೆಂಗಣ್ಣಿಗೆ ಗುರಿಯಾಗಿರುವುದು ಗೊತ್ತೇ ಇದೆ. ಇವರು ಕಿರುತೆರೆಯಲ್ಲಿ ಶೋಗಳನ್ನು ನಡೆಸಿಕೊಡುತ್ತಿದ್ದರೆ ಇನ್ನು ಸಿನಿಮಾ ಮಂದಿರಗಳಿಗೆ ಯಾರು ಬರುತ್ತಾರೆ ಎಂಬ ಹೊಸ ವಾದವನ್ನು ಮಂಡಿಸಿದ್ದಾರೆ.
ಈ ಸಂಬಂಧ ಮಂಗಳವಾರ (ಆ.19) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆಯಬೇಕಿದ್ದ ಸಭೆ ಆ.24ಕ್ಕೆ ಮುಂದೂಡಲಾಗಿದೆ. ರಮೇಶ್ ಮತ್ತು ಸುದೀಪ್ ಅವರು ವಾರಾಂತ್ಯದಲ್ಲಿ ಕಿರುತೆರೆಯಲ್ಲಿ ಶೋಗಳನ್ನು ನಡೆಸಿಕೊಡುತ್ತಿರುವುದರಿಂದ ಪ್ರೇಕ್ಷಕರು ಚಿತ್ರಮಂದಿರದ ಕಡೆ ತಲೆಹಾಕುತ್ತಿಲ್ಲ. ಇವರ ಚಿತ್ರಗಳಿಗೆ ನಿರ್ಬಂಧ ಹೇರಬೇಕು ಎಂಬ ಮಾತುಗಳನ್ನು ಆಡಿದ್ದರು.
ನಿರ್ಮಾಪಕರು ಎತ್ತಿರುವ ಪ್ರಶ್ನೆಗೆ ರಮೇಶ್ ಅರವಿಂದ್ ಮತ್ತು ಸುದೀಪ್ ತಮ್ಮದೇ ಆದಂತಹ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಅವರ 'ಸೂಪರ್ ಮಿನಿಟ್' ಎಂಬ ಶೋ ಈಟಿವಿ ಕನ್ನಡದಲ್ಲಿ ಆಗಸ್ಟ್ 30ರಿಂದ ಆರಂಭವಾಗುತ್ತಿದೆ. ಈಗಲೇ ಅವರು ಪ್ರತಿಕ್ರಿಯೆ ನೀಡುವುದರಲ್ಲಿ ಯಾವುದೇ ಅರ್ಥವಿಲ್ಲ.

"ಸಂವಿಧಾನ ನಮಗೆ ಕೆಲಸ ಮಾಡುವ ಹಕ್ಕು ಕೊಟ್ಟಿದೆ. ಅದರಂತೆ ನನ್ನ ಶಕ್ತಿ ಸಾಮರ್ಥ್ಯಗಳನ್ನು ಬಳಸಿ ಕೆಲಸ ಮಾಡುತ್ತೇನೆ. ಜೀ ಕನ್ನಡದಲ್ಲಿ ಮೂಡಿಬರುತ್ತಿರುವ ತಮ್ಮ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಸಾಧಕರ ಕುರಿತದ್ದಾಗಿದೆ. ಈ ಕಾರ್ಯಕ್ರ ಅದೆಷ್ಟೋ ಮಂದಿ ವೀಕ್ಷಕರಿಗೆ ಸ್ಫೂರ್ತಿಯಾಗುತ್ತಿದೆ.
ಒಪ್ಪಂದದ ಪ್ರಕಾರ ಆ ಕಾರ್ಯಕ್ರಮವನ್ನು ನಾನು ಯಾವುದೇ ಸಮಸ್ಯೆ ಇಲ್ಲದಂತೆ ಮುಗಿಸಿಕೊಡಬೇಕಿದೆ. ಸದ್ಯಕ್ಕೆ ತಾವು ಚೆನ್ನೈನಲ್ಲಿದ್ದು ಕಮಲ್ ಹಾಸನ್ ಜೊತೆಗಿನ ತಮ್ಮ 'ಉತ್ತಮ ವಿಲನ್' ಚಿತ್ರದಲ್ಲಿ ತೊಡಗಿಕೊಂಡಿದ್ದೇನೆ. ಅಲ್ಲಿಂದ ವಾಪಸ್ ಆದ ಕೂಡಲೆ ನಿರ್ಮಾಪಕರನ್ನು ಭೇಟಿ ಮಾಡಿ ಅವರೊಂದಿಗೆ ಚರ್ಚಿಸುತ್ತೇನೆ" ಎಂದಿದ್ದಾರೆ ನಟ ರಮೇಶ್.
ಇನ್ನು ಸುದೀಪ್ ಅವರು ಮಾತನಾಡುತ್ತಾ, "ತಮ್ಮ ಚಿತ್ರಗಳನ್ನು ಬ್ಯಾನ್ ಮಾಡಬೇಕು ಎಂದು ಯಾವ ಯಾವ ನಿರ್ಮಾಪಕರು ಹೇಳಿದ್ದಾರೆ ಎಂಬುದು ತಮಗೆ ಗೊತ್ತಿಲ್ಲ. ನಿರ್ಮಾಪಕರ ಕಷ್ಟ ಏನು ಎಂದು ತಿಳಿದುಕೊಳ್ಳುತ್ತೇನೆ. ಈ ಸಂಬಂಧ ಫಿಲಂ ಚೇಂಬರ್ ನಿಂದ ನಮಗೆ ಯಾವುದೇ ಅಧಿಕೃತ ಪತ್ರ ಬಂದಿಲ್ಲ. ಒಂದು ವೇಳೆ ಫಿಲಂ ಚೇಂಬರ್ ಏನು ನಿರ್ಧಾರ ತೆಗೆದುಕೊಳ್ಳುತ್ತದೋ ನೋಡಿ ಬಳಿಕ ನಾನು ಪ್ರತಿಕ್ರಿಯಿಸುತ್ತೇನೆ" ಎಂದಿದ್ದಾರೆ ಸದ್ಯಕ್ಕೆ ಹೈದರಾಬಾದ್ ನಲ್ಲಿರುವ ಸುದೀಪ್.


Click it and Unblock the Notifications











