'ಮಾಣಿಕ್ಯ' ಬಳಿಕ ನಲ್ಲ-ಮಲ್ಲರ 'ಅಪೂರ್ವ' ಸಂಗಮ
ಕಿಚ್ಚ ಸುದೀಪ್ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಜೋಡಿಯ 'ಮಾಣಿಕ್ಯ' ಚಿತ್ರ ಬಾಕ್ಸಾಫೀಸಲ್ಲಿ ಭಾರಿ ಸದ್ದು ಮಾಡಿದ್ದು ಗೊತ್ತೇ ಇದೆ. ಆ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಸುದೀಪ್ ಗೆ ತಂದೆಯಾಗಿ ರವಿಚಂದ್ರನ್ ಕಾಣಿಸಿಕೊಂಡಿದ್ದರು. ಇವರಿಬ್ಬರ ಕಾಂಬಿನೇಷನನ್ನು ಪ್ರೇಕ್ಷಕರು ಇಷ್ಟಪಟ್ಟರು.
ಇದೀಗ ಮತ್ತೊಮ್ಮೆ ನಲ್ಲ-ಮಲ್ಲರು ಕೈಜೋಡಿಸುತ್ತಿದ್ದಾರೆ. ಆಗ 'ಮಾಣಿಕ್ಯ' ಚಿತ್ರದಲ್ಲಿ ಅಭಿನಯಿಸಲು ರವಿಚಂದ್ರನ್ ಅವರಿಗೆ ಸುದೀಪ್ ಆಹ್ವಾನಕೊಟ್ಟಿದ್ದರು. ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡು ರವಿ ಅವರ ಪಾತ್ರಕ್ಕೆ ಹೆಚ್ಚಿನ ಗಮನ ಕೊಡಲಾಗಿತ್ತು. [ಮಾಣಿಕ್ಯ ಚಿತ್ರ ವಿಮರ್ಶೆ]

ಇದೀಗ ರವಿಚಂದ್ರನ್ ಅವರು ಸುದೀಪ್ ಅವರಿಗೆ ತಮ್ಮ ಚಿತ್ರದಲ್ಲಿ ಅಭಿನಯಿಸಲು ಆಹ್ವಾನಕೊಟ್ಟಿದ್ದಾರೆ. ತಮ್ಮ ನಿರ್ದೇಶನದ 'ಅಪೂರ್ವ' ಚಿತ್ರದಲ್ಲಿ ನಲ್ಲನಿಗೆ ವಿಶೇಷ ಪಾತ್ರ ಕೊಟ್ಟಿದ್ದಾರೆ. ಎಲ್ಲವೂ ಅಂದುಕೊಂಡಿದ್ದರೆ ಒಂದೂವರೆ ವರ್ಷದ ಹಿಂದೆಯೇ ಸೆಟ್ಟೇರಬೇಕಾಗಿದ್ದ ಚಿತ್ರ ಇದು.
ಈಗ ಎಲ್ಲವೂ ಪಕ್ಕಾ ಸಿದ್ಧಮಾಡಿಕೊಂಡು ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಿದೆ. ಸುದೀಪ್ ಅವರು ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಲಿದ್ದಾರೆ. ಲಿಫ್ಟ್ ಒಂದರಲ್ಲಿ ನಡೆಯುವ ಕಥೆ ಇದಾಗಿದ್ದು, ಕೇವಲ ಎರಡೇ ಎರಡು ಪಾತ್ರಗಳ ನಡುವೆ 'ಅಪೂರ್ವ' ಕಥೆ ಸಾಗುತ್ತದೆ.
ಚಿತ್ರದಲ್ಲಿ ರವಿಚಂದ್ರನ್ ಅವರು 64 ವರ್ಷದ ವ್ಯಕ್ತಿಯಾಗಿ ಕಾಣಿಸಲಿದ್ದಾರೆ. ಅವರ ಮನೆಯಲ್ಲೇ ಲಿಫ್ಟ್ ಸೆಟ್ ಹಾಕಿ ಚಿತ್ರೀಕರಿಸಲಾಗುತ್ತಿದೆ. ಈ ರೀತಿಯ ಚಿತ್ರ ನಾನು ಹಿಂದೆ ಮಾಡಿಲ್ಲ ಮುಂದೆ ಮಾಡುತ್ತೇನೆ ಎಂಬ ನಂಬಿಕೆ ಇಲ್ಲ ಎನ್ನುವ ರವಿ, ಚಿತ್ರ ನೋಡಿದರೆ ನೀವು ಥಿಯೇಟರ್ ನಿಂದ ಹೊರ ಬರುವ ಮನಸ್ಸು ಬರಲ್ಲ. ಪ್ರೇಕ್ಷಕರ ಕಣ್ಣಂಚಲಿ ನೀರಿರುತ್ತದೆ. ಹಾಗಂತ ಇದು ಕಣ್ಣೀರಧಾರೆ ಕಥೆ ಎಂದುಕೊಳ್ಳಬೇಡಿ ಎನ್ನುತ್ತಾರೆ ರವಿಮಾಮ. (ಏಜೆನ್ಸೀಸ್)


Click it and Unblock the Notifications











