ಪಶು ವೈದ್ಯೆ ಅತ್ಯಾಚಾರ: ಆಕ್ರೋಶ ವ್ಯಕ್ತಪಡಿಸಿದ ಕಿಚ್ಚ ಸುದೀಪ್
ತೆಲಂಗಾಣ ಪಶು ವೈದ್ಯೆ ಅತ್ಯಾಚಾರ ಮತ್ತು ಹತ್ಯೆ ವಿರೋಧಿಸಿ ಇಡೀ ದೇಶವೇ ಆಕ್ರೋಶ ವ್ಯಕ್ತಪಡಿಸುತ್ತಿದೆ. ಇಂತಹ ಕಾಮುಕರನ್ನು ಮಟ್ಟಹಾಕಲು ಕಠಿಣ ಕ್ರಮ ಜಾರಿಯಾಗಬೇಕೆಂದು ಎಲ್ಲರು ಒತ್ತಾಯ ಮಾಡುತ್ತಿದ್ದಾರೆ. 26 ವರ್ಷದ ಪಶು ವೈದ್ಯೆ ರಾತ್ರಿ ಕೆಲಸ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ಸಮಯದಲ್ಲಿ ಕಾಮುಕರು ಆಕೆಯ ಮೇಲೆ ಅತ್ಯಾಚಾರ ವೆಸಗಿ, ಜೀವಂತವಾಗಿ ಸುಟ್ಟುಹಾಕಿದ್ದಾರೆ.
ಇಂತಹ ಘಟನೆಗಳು ಪದೇ ಪದೇ ನಡೆಯುತ್ತಲೆ ಇದೆ. ಇದಕ್ಕೆ ಕೊನೆಯನ್ನೊದೆ ಇಲ್ಲವಾ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಜೊತೆಗೆ ಕಲಾವಿದರು ಸಹ ಈ ಘಟನೆಯನ್ನು ಖಂಡಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಬಾಲಿವುಡ್, ಟಾಲಿವುಡ್, ಕಾಲಿವುಡ್ ಸೇರಿದಂತೆ ಎಲ್ಲಾ ಭಾಷೆಯ ಕಲಾವಿದರು ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಈಗ ಕಿಚ್ಚ ಸುದೀಪ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ದಬಾಂಗ್-3 ಪ್ರಮೋಷನ್ ನಲ್ಲಿ ಪ್ರತಿಕ್ರಿಯೆ
ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಕಾನೂನಿನ ಬಗ್ಗೆ ಭಯವಿಲ್ಲದಿದ್ದರೆ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿರುತ್ತವೆ ಎಂದು ಆಕ್ರೋಶ ಹೊರಹಾಕಿದ್ದಾರೆ. ದಬಾಂಗ್-3 ಚಿತ್ರದ ಪ್ರಮೋಷನ್ ವೇಳೆ ಸುದೀಪ್ ಈ ಬಗ್ಗೆ ಎಎನ್ಐ ಜೊತೆ ಮಾತನಾಡಿದ್ದಾರೆ.

ಸುದೀಪ್ ಹೇಳಿದ್ದೇನು?
"ಪ್ರತಿಯೊಬ್ಬ ತಂದೆ, ಪ್ರತಿಯೊಬ್ಬ ಸಹೋದರ, ಪ್ರತಿಯೊಬ್ಬ ಗಂಡ, ಪ್ರತಿಯೊಬ್ಬರಿಗೂ ನೋವುಂಟು ಮಾಡಿದೆ. ತುಂಬಾ ನೋವಾಗುತ್ತೆ. ಕಾನೂನು ರಚನೆಯಾಗುತ್ತೆ ಮತ್ತು ಸರ್ಕಾರ ಆ ವಿಚಾರವಾಗಿ ಕೆಲಸ ಮಾಡುತ್ತಿದೆ, ಅವರಿಗೆ ನಮ್ಮ ಸಲಹೆ ಅಗತ್ಯವಿಲ್ಲ. ಕಾನೂನಿನ ಬಗ್ಗೆ ಜನರಿಗೆ ಭಯವಿರಬೇಕು" ಎಂದು ಹೇಳಿದ್ದಾರೆ.

ಭಯ ಪಡುವ ಕಾನೂನು ಜಾರಿಯಾಗಬೇಕು
"ಭಯ ಪಡುವಂತ ಕಾನೂನು ಇಲ್ಲದಿದ್ದರೆ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿರುತ್ತವೆ. ಕಠಿಣ ಕಾನೂನು ಜಾರಿಯಾಗಬೇಕು. ಈ ಬಗ್ಗೆ ಯೋಚಿಸಲು ಜನ ಭಯ ಪಡುವಂತ ಕಠಿಣ ಕ್ರಮ ಕೈಗೊಳ್ಳಬೇಕು. ಕಾನೂನಿನ ಬಗ್ಗೆ ಭಯವಿಲ್ಲದಿದ್ದರೆ ಇಂತಹ ಘಟನೆಗಳು ನಡೆಯುತ್ತಿರುತ್ತವೆ" ಎಂದು ಹೇಳಿದ್ದಾರೆ.

ಕಠಿಣ ಕ್ರಮಕ್ಕೆ ಕಲಾವಿದರ ಒತ್ತಾಯ
ಈಗಾಗಲೆ ದಕ್ಷಿಣ ಭಾರತೀಯ ಚಿತ್ರರಂಗದ ಕಲಾವಿದರಾದ ಅನುಷ್ಕಾ ಶೆಟ್ಟಿ, ಕೀರ್ತಿ ಸುರೇಶ್, ರಶ್ಮಿಕಾ ಮಂದಣ್ಣ, ಡೈಸಿ ಶಾ, ಹನ್ಸಿಕಾ, ನಟರಾದ ಜಗ್ಗೇಶ್, ಅನಿರುದ್ಧ, ಸೋನು ಸೂದ್ ಮತ್ತು ಬಾಲಿವುಡ್ ಕಲಾವಿದರಾದ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಜಯಾ ಬಚ್ಚನ್ ಸೇರಿದಂತೆ ಅನೇಕರು ಕಲಾವಿದರು ಆಕ್ರೋಶ ವ್ಯಕ್ತಪಡಿಸಿ ಕಠಿಣ ಕಾನೂನು ಜಾರಿಯಾಗಬೇಕೆಂದು ಒತ್ತಾಯಿಸುತ್ತಿದ್ದಾರೆ.


Click it and Unblock the Notifications











