'ಭೀಮ್ಲಾ ನಾಯಕ್' ಟ್ರೇಲರ್ ನೋಡಿ ಸುದೀಪ್ ಅಭಿಮಾನಿಗಳು ಖುಷಿ: ಕಾರಣ?
ತೆಲುಗಿನ ಸ್ಟಾರ್ ನಟ ಪವನ್ ಕಲ್ಯಾಣ್ ಮತ್ತೆ ಬೆಳ್ಳಿ ತೆರೆಯ ಮೇಲೆ ಅಬ್ಬರಿಸುತ್ತಿದ್ದಾರೆ. ಮೂರು ವರ್ಷಗಳ ಕಾಲ ಸಿನಿಮಾದಿಂದ ದೂರ ಉಳಿದಿದ್ದ ಪವನ್ ಕಲ್ಯಾಣ್, 'ವಕೀಲ್ ಸಾಬ್' ಸಿನಿಮಾ ಮೂಲಕ ಮತ್ತೆ ರಂಗಕ್ಕೆ ಧುಮುಕಿದರು. ಇದೀಗ 'ಭೀಮ್ಲಾ ನಾಯಕ್' ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ಪವನ್ ಕಲ್ಯಾಣ್ ನಟನೆಯ 'ಭೀಮ್ಲ ನಾಯಕ್' ಸಿನಿಮಾ ಫೆಬ್ರವರಿ 25 ರಂದು ಬಿಡುಗಡೆ ಆಗಲಿದ್ದು, ಸಿನಿಮಾದ ಟ್ರೇಲರ್ ಎರಡು ದಿನದ ಹಿಂದೆ ಬಿಡುಗಡೆ ಆಗಿದೆ. ಟ್ರೇಲರ್ ಬಗ್ಗೆ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗಿವೆ.
'ಭೀಮ್ಲ ನಾಯಕ್' ಸಿನಿಮಾದ ಟ್ರೇಲರ್ ನೋಡಿದ ಸುದೀಪ್ ಅಭಿಮಾನಿಗಳು ಮಾತ್ರ ಸಾಕಷ್ಟು ಖುಷಿಯಾಗಿದ್ದಾರೆ. ಅವರ ಖುಷಿಗೆ ಕಾರಣವೂ ಇದೆ.
'ಭೀಮ್ಲ ನಾಯಕ್' ಸಿನಿಮಾದಲ್ಲಿ ಪವನ್ ಕಲ್ಯಾಣ್ ಜೊತೆಗೆ ರಾಣಾ ದಗ್ಗುಬಾಟಿ ನಟಿಸಿದ್ದಾರೆ. ಅಸಲಿಗೆ ಈ ಪಾತ್ರದಲ್ಲಿ ಸುದೀಪ್ ನಟಿಸಬೇಕಿತ್ತು. ಆದರೆ ಸುದೀಪ್ ಅವರು ಸಿನಿಮಾದಿಂದ ಕಾರಣಾಂತರಗಳಿಂದ ದೂರ ಉಳಿದರು. ಈಗ ಟ್ರೇಲರ್ ನೋಡಿರುವ ಸುದೀಪ್ ಅಭಿಮಾನಿಗಳು, ಸುದೀಪ್ ಆ ಸಿನಿಮಾದಲ್ಲಿ ನಟಿಸದೇ ಇದ್ದದ್ದು ಒಳ್ಳೆಯದಾಯಿತು ಎಂದುಕೊಳ್ಳುತ್ತಿದ್ದಾರೆ.

'ಅಯ್ಯಪ್ಪನುಂ ಕೋಶಿಯುಂ'ನಲ್ಲಿ ಸಮಾನ ಅವಕಾಶ
'ಭೀಮ್ಲಾ ನಾಯಕ್' ಸಿನಿಮಾವು ಮಲಯಾಳಂನ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾದ ರೀಮೇಕ್ ಆಗಿದ್ದು, ಒಬ್ಬ ಪೊಲೀಸ್ ಅಧಿಕಾರಿ ಹಾಗೂ ಒಬ್ಬ ಮಾಜಿ ಸೈನಿಕನ ನಡುವೆ ನಡೆವ ಕದನದ ಕತೆಯನ್ನು ಸಿನಿಮಾ ಒಳಗೊಂಡಿದೆ. 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾದಲ್ಲಿ ಇಬ್ಬರು ನಾಯಕ ಪಾತ್ರಧಾರಿಗಳಿಗೆ ಸಮಾನ ಅವಕಾಶ, ಸಮಾನ ಗೌರವ ನೀಡಲಾಗಿದೆ. ಆದರೆ 'ಭೀಮ್ಲಾ ನಾಯಕ್' ಸಿನಿಮಾದಲ್ಲಿ ಹಾಗಾಗಿಲ್ಲ.

ಪವನ್ ಪಾತ್ರದ ಮೇಲಷ್ಟೆ ಕೇಂದ್ರಿತವಾಗಿರುವ ಸಿನಿಮಾ
'ಭೀಮ್ಲಾ ನಾಯಕ್' ಸಿನಿಮಾ ಸಂಪೂರ್ಣವಾಗಿ ಪವನ್ ಕಲ್ಯಾಣ್ರ ಪಾತ್ರದ ಮೇಲಷ್ಟೆ ಕೇಂದ್ರೀಕೃತಗೊಳಿಸಿರುವುದು ಟ್ರೇಲರ್ನಿಂದಲೇ ಗೊತ್ತಾಗುತ್ತಿದೆ. ರಾಣಾ ದಗ್ಗುಬಾಟಿ ಪಾತ್ರವನ್ನು 'ಡಮ್ಮಿ' ಮಾಡಲಾಗಿದೆ. ಪವನ್ ಹೀರೋಯಿಸಂ ತೋರಿಸಲು ರಾಣಾರ ಪಾತ್ರವನ್ನು ಬಳಸಿಕೊಳ್ಳಲಾಗಿರುವುದು ಟ್ರೇಲರ್ನಿಂದಲೇ ಗೊತ್ತಾಗುತ್ತಿದೆ. ಒಂದೊಮ್ಮೆ ಸುದೀಪ್ ಈ ಸಿನಿಮಾದಲ್ಲಿ ನಟಿಸಿದ್ದರೆ ಅವರ ಪಾತ್ರ ಡಮ್ಮಿ ಆಗಿರುತ್ತಿತ್ತು. ಹಾಗಾಗಿ ಸುದೀಪ್ ಒಳ್ಳೆಯ ನಿರ್ಣಯ ಮಾಡಿದ್ದಾರೆಂದು ಅಭಿಮಾನಿಗಳು ಖುಷಿಯಿಂದಿದ್ದಾರೆ.

ಗಟ್ಟಿಯಾದ ಪಾತ್ರಗಳಲ್ಲಿಯಷ್ಟೆ ನಟಿಸಿದ್ದಾರೆ ಸುದೀಪ್
ಸುದೀಪ್ ಹಲವು ಪರಭಾಷೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಲನ್ ಪಾತ್ರದಲ್ಲಿಯೇ ನಟಿಸಿದ್ದಾರೆ ಆದರೆ ವಿಲನ್ ಪಾತ್ರದಲ್ಲಿ ನಟಿಸಿದರೂ ಶಕ್ತಿಯುತವಾದ ಸಾಕಷ್ಟು ಸಿನಿಮ್ಯಾಟಿಕ್ ಸ್ಕೋಪ್ ಇರುವ ಪಾತ್ರಗಳಲ್ಲಿ ಅಷ್ಟೆ ಸುದೀಪ್ ನಟಿಸಿದ್ದಾರೆ. ತೆಲುಗಿನ 'ಈಗ', ಹಿಂದಿಯ 'ದಬಂಗ್ 3' ಸಿನಿಮಾಗಳಲ್ಲಿ ಸುದೀಪ್ರ ವಿಲನ್ ಪಾತ್ರಗಳನ್ನು ಸುಲಭಕ್ಕೆ ಮರೆಯಲು ಸಾಧ್ಯವಿಲ್ಲ. ಒಂದೊಮ್ಮೆ 'ಭೀಮ್ಲಾ ನಾಯಕ್' ಸಿನಿಮಾವನ್ನು ಒಪ್ಪಿಕೊಂಡಿದ್ದಿದ್ದರೆ ಸುದೀಪ್ರ ಹೀರೋ ಇಮೇಜಿಗೆ ಧಕ್ಕೆ ಆಗುವ ಸಾಧ್ಯತೆ ಇತ್ತು.

ಏಕೆ ಒಪ್ಪಿಕೊಳ್ಳಲಿಲ್ಲ ಸುದೀಪ್?
'ಭೀಮ್ಲಾ ನಾಯಕ್' ಸಿನಿಮಾವನ್ನು ಸುದೀಪ್ ಏಕೆ ಒಪ್ಪಿಕೊಳ್ಳಲಿಲ್ಲ ಎಂಬುದಕ್ಕೆ ಸ್ಪಷ್ಟ ಕಾರಣ ಇಲ್ಲ. ಆದರೆ ಕತೆಯ ಕಾರಣಕ್ಕೆ ಸುದೀಪ್ ಆ ಸಿನಿಮಾವನ್ನು ಕೈಬಿಟ್ಟಿರುವ ಸಾಧ್ಯತೆ ಇದೆ. ಅದೂ ಅಲ್ಲದೆ 'ಭೀಮ್ಲಾ ನಾಯಕ್' ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿಯೇ ಸುದೀಪ್ 'ವಿಕ್ರಾಂತ್ ರೋಣ' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಜೊತೆಗೆ ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಸಹ ತೊಡಗಿಸಿಕೊಂಡಿದ್ದರು. ಇದೀಗ 'ಭೀಮ್ಲಾ ನಾಯಕ್' ಸಿನಿಮಾವು ಫೆಬ್ರವರಿ 25 ರಂದು ಬಿಡುಗಡೆ ಆಗಲಿದೆ. ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾವು ಫೆಬ್ರವರಿ 24 ಕ್ಕೆ ಬಿಡುಗಡೆ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದೆ. ಹೊಸ ದಿನಾಂಕ ಇನ್ನಷ್ಟೆ ಘೋಷಣೆ ಆಗಬೇಕಿದೆ.


Click it and Unblock the Notifications











