ಮುಂಬೈನಲ್ಲಿ ಸುದೀಪ್ ಅನುಭವಿಸಿದ ಕಷ್ಟದ ದಿನಗಳು: ಜೇಬಲ್ಲಿ ಹಣವಿಲ್ಲ, ತಲೆ ತುಂಬಾ ಕನಸು!
ನಟ ಸುದೀಪ್ ಸುಲಭಕ್ಕೆ ನಾಯಕ ನಟರಾದವರಲ್ಲ. ಸಿನಿಮಾದಲ್ಲಿ ನಟಿಸುವ ಮುನ್ನ ಹಲವು ಕಷ್ಟಗಳನ್ನು ಅನುಭವಿಸಿದವರು. ಸಿನಿಮಾದಲ್ಲಿ ನಟಿಸಲೇ ಬೇಕು ಎಂಬ ಕಾರಣಕ್ಕೆ ಮುಂಬೈನಲ್ಲಿ ಕೆಲ ವರ್ಷ ಇದ್ದು ಅಭಿನಯ ತರಬೇತಿಯನ್ನೂ ಪಡೆದಿದ್ದರು.
ಮುಂಬೈನಲ್ಲಿ ರೋಶನ್ ತನೇಜಾ ಅಭಿನಯ ಶಾಲೆಯಲ್ಲಿ ಕೆಲ ಕಾಲ ನಟನೆ ಅಭ್ಯಾಸ ಮಾಡಿದ್ದ ಸುದೀಪ್ ಆ ಬಳಿಕ ಬೆಂಗಳೂರಿಗೆ ಬಂದು ಸಿನಿಮಾಗಳಲ್ಲಿ ಅವಕಾಶ ಅರಸಲು ಪ್ರಾರಂಭಿಸಿದರು.
ಸುದೀಪ್ರದ್ದು ಅಸಲಿಗೆ ತುಸು ಸ್ಥಿತಿವಂತ ಕುಟುಂಬವೇ ಆದರೆ ಮುಂಬೈ ಅಂಥಹಾ ಮಹಾನಗರಿಯಲ್ಲಿ ವರ್ಷಗಳ ಕಾಲ ವಾಸಿಸುವುದು ಖರ್ಚಿನ ಬಾಬತ್ತು. ಹಾಗಾಗಿ ತಂದೆ ನೀಡಿದ್ದ ತುಸು ಹಣದಲ್ಲಿಯೇ ಅವರು ದಿನಗಳನ್ನು ಕಳೆಯಬೇಕಿತ್ತು.

ಬೆಳಿಗ್ಗೆ ಟಿ-ಬನ್, ರಾತ್ರಿ ಅನ್ನಕ್ಕೆ ಮೆಣಸು-ಉಪ್ಪು
''ಊಟವೂ ಬಹಳ ಹಿತವಾಗಿ ಮಿತವಾಗಿ ಮಾಡಬೇಕಿತ್ತು. ನಾನು ಇದ್ದ ರೂಂಗೆ ಸನಿಹವೇ ಬಿಸ್ಮಿಲ್ಲಾ ರೆಸ್ಟೊರೆಂಟ್ ಹೆಸರಿನ ಹೋಟೆಲ್ ಒಂದಿತ್ತು. ಅಲ್ಲಿಗೆ ಪ್ರತಿದಿನ ಊಟಕ್ಕೆ ಹೋಗುತ್ತಿದ್ದೆ. ಹಣ ಕಡಿಮೆ ಎಂಬ ಬೆಳಿಗಿನ ತಿಂಡಿ ಬನ್ ಮತ್ತು ಟೀ, ರಾತ್ರಿ ಹೊತ್ತು ಕೇವಲ ರೈಸ್ ಮಾತ್ರ ತೆಗೆದುಕೊಂಡು ಅದಕ್ಕೆ ಟೇಬಲ್ ಮೇಲೆ ಇಟ್ಟಿದ್ದ ಮೆಣಸಿನ ಪುಡಿ, ಉಪ್ಪು ಹಾಕಿಕೊಂಡು ಕಲಸಿಕೊಂಡು ತಿನ್ನುತ್ತಿದ್ದೆ. ವಾರಕ್ಕೆ ಒಮ್ಮೆ ಮಾತ್ರವೇ ಮೊಟ್ಟೆ ತಿನ್ನುತ್ತಿದ್ದೆ'' ಎಂದು ನೆನಪು ಮಾಡಿಕೊಂಡಿದ್ದಾರೆ ಸುದೀಪ್.

ಬಿಸ್ಮಿಲ್ಲಾ ರೆಸ್ಟೊರೆಂಟ್ ಮಾಲೀಕ
''ಆದರೆ ಬಿಸ್ಮಿಲ್ಲಾ ರೆಸ್ಟೋರೆಂಟ್ನ ಮಾಲೀಕ ನನಗೆ ಪರಿಚಯದವರಾದರು. ಆ ನಂತರ ಅವರೇ ಗದರಿ, ಅನ್ನದ ಜೊತೆಗೆ ಉಳಿದ ಶೇರ್ವಾ ನೀಡುತ್ತಿದ್ದರು. ಆಗಾಗ ಚಿಕನ್ ಪೀಸ್ ಸಹ ನೀಡುತ್ತಿದ್ದರು. ಬಹಳ ಪ್ರೀತಿಯಿಂದ ಕಾಣುತ್ತಿದ್ದರು, ಮಾತು ಮಾತ್ರ ಗಡುಸಾಗಿಯೇ ಆಡುತ್ತಿದ್ದರು. ಅದರ ಹೊರತಾಗಿ ಹಲವು ದಿನ ವಡಾ ಪಾವ್ ಸಹ ನನ್ನ ಹೊಟ್ಟೆ ತುಂಬಿಸಿದೆ, ಬೇಲ್ ಪುರಿ ತಿಂದು ಮಲಗಿದ್ದೂ ಇದೆ'' ಎಂದಿದ್ದಾರೆ ಸುದೀಪ್.

ಅಮಿತಾಬ್ ಬಚ್ಚನ್ ಮನೆ ಮುಂದೆ ಹೋಗಿ ನಿಲ್ಲುತ್ತಿದ್ದೆ
''ಬಿಡುವಿನ ವೇಳೆಯಲ್ಲಿ ಅಮಿತಾಬ್ ಬಚ್ಚನ್ ಅವರ ಜಲ್ಸಾ ಮನೆ ಬಳಿ ನಡೆದುಕೊಂಡು ಹೋಗುತ್ತಿದ್ದೆ. ಅವರ ಮನೆಯ ಮುಂದೆ ನಿಂತು ಅಮಿತಾಬ್ ಬಚ್ಚನ್ ಬರುವುದನ್ನೇ ಕಾಯುತ್ತಿದ್ದೆ. ಅವರು ನನ್ನ ಸೂಪರ್ ಸ್ಟಾರ್ ಆಗಿದ್ದರು. ಅವರನ್ನು ನೋಡಲು ಬಹಳ ಕಾದಿದ್ದೆ ನಾನು. ಮುಂಬೈನಲ್ಲಿ ಕಷ್ಟದ ದಿನಗಳನ್ನು ಕಳೆದೆ ಆದರೆ ಆಗ ಅವೆಲ್ಲ ನನಗೆ ಕಷ್ಟ ಎನಿಸಿಯೇ ಇರಲಿಲ್ಲ. ಅವೆಲ್ಲ ನನಗೆ ಪಾಠಗಳಾಗಿದ್ದವು. ನಾನು ಆಗ ಹಾಗೆ ಬದುಕಿದ್ದಕ್ಕೆ ನನಗೆ ಹಣದ ಮಹತ್ವ ಅರಿವಾಗಿದ್ದು, ಈಗ ಬರುತ್ತಿರುವ ಹೆಸರಿನ ಮಹತ್ವ ಅರಿವಾಗಿದ್ದು, ಇದನ್ನು ಕಾಪಾಡಿಕೊಳ್ಳಬೇಕು ಎಂಬ ಛಲ ಬಂದಿರುವುದು ಎಂದಿದ್ದಾರೆ.

ಸಾಮಾನ್ಯ ಹೋಟೆಲ್ನಲ್ಲಿ ಉಳಿದುಕೊಳ್ಳುತ್ತಿದ್ದೆ
ನಟನಾದ ಬಳಿಕವೂ 'ಫೂಂಕ್', 'ಫೂಂಕ್ 2', 'ರಣ್' ಸಿನಿಮಾಗಳಿಗಾಗಿ ಮುಂಬೈಗೆ ಬಂದಾಗ ರಾಮ್ ಗೋಪಾಲ್ ವರ್ಮಾ ನನ್ನನ್ನು ಜೆ.ಡಬ್ಲು ಮ್ಯಾರಿಯೇಟ್ ಹೋಟೆಲ್ನಲ್ಲಿ ಉಳಿದುಕೊಳ್ಳಲು ಹೇಳುತ್ತಿದ್ದರು. ಆದರೆ ನನಗೆ ಅದು ಸರಿಹೋಗುತ್ತಿರಲಿಲ್ಲ. ಹೆಸರು ಬಂದಿತ್ತಾದರೂ ಜೆ.ಡಬ್ಲು ಮ್ಯಾರಿಯೇಟ್ ನಲ್ಲಿ ಉಳಿದುಕೊಳ್ಳುವಷ್ಟು ಹಣ ಬಂದಿರಲಿಲ್ಲ. ಹಾಗಾಗಿ ನಾನು ಅದರ ಎದುರಿಗೇ ಇದ್ದ ಬೆಂಗಳೂರಿನವರ ಹೋಟೆಲ್ನಲ್ಲಿ ಉಳಿದುಕೊಳ್ಳುತ್ತಿದ್ದೆ. ಆ ಹೋಟೆಲ್ನ ಮುಂದೆ ವಾಕಿಂಗ್ ಮಾಡುತ್ತಿದ್ದೆ, ಪಾನಿಪುರಿ ತಿನ್ನುತ್ತಿದ್ದೆ'' ಎಂದು ನೆನಪು ಮಾಡಿಕೊಂಡಿದ್ದಾರೆ.


Click it and Unblock the Notifications











