ಕೆಜಿಎಫ್, ಬಾಹುಬಲಿ ಗಳಿಕೆ ಬಗ್ಗೆ ಆಸಕ್ತಿಕರ ವಿಷಯ ಬಿಚ್ಚಿಟ್ಟ ಸುದೀಪ್
ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾ ಭಾರತೀಯ ಇತಿಹಾಸದಲ್ಲಿ ಹೊಸ ಮೈಲಿಗಲ್ಲು. 250 ಕೋಟಿ ಬಜೆಟ್ ನಲ್ಲಿ ತಯಾರಾಗಿದ್ದ ಈ ಸಿನಿಮಾ 1810 ಕೋಟಿ ಗಳಿಕೆ ಕಂಡಿತ್ತು.
ಅದೇ ರೀತಿ ದೊಡ್ಡ ಬಜೆಟ್ ನಲ್ಲಿ ಸಿದ್ಧವಾಗಿದ್ದ ಕನ್ನಡ ಕೆಜಿಎಫ್ ಸಿನಿಮಾ ನೂರು ಕೋಟಿಗೂ ಅಧಿಕ ಹಣ ಗಳಿಸಿತ್ತು. 'ಇಂತಹ ದೊಡ್ಡ ಬಜೆಟ್ ನಲ್ಲಿ ನಿರ್ಮಾಣವಾದ ಚಿತ್ರಗಳು ಲಾಭ ಮಾಡಲು ಅಥವಾ ಹೆಚ್ಚು ಕಲೆಕ್ಷನ್ ಮಾಡಬೇಕಾದರೆ ಪ್ಯಾನ್ ಇಂಡಿಯಾ ಹೋಗಬೇಕಾಗಿರುವುದು ಅಗತ್ಯ' ಎಂದು ಸುದೀಪ್ ಅಭಿಪ್ರಾಯಪಟ್ಟಿದ್ದಾರೆ.
''ಬಾಹುಬಲಿ ಸಿನಿಮಾ ಬರಿ ಆಂಧ್ರದಲ್ಲಿ ರಿಲೀಸ್ ಆಗಿದ್ದರೆ ಅಷ್ಟು ಹಣ ಗಳಿಸುತ್ತಿರಲಿಲ್ಲ. ಕೆಜಿಎಫ್ ಸಿನಿಮಾ ಬರಿ ಕರ್ನಾಟಕದಲ್ಲಿ ತೆರೆಕಂಡಿದ್ದರೆ ಅಷ್ಟು ಲಾಭ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಬಿಸಿನೆಸ್ ಚೆನ್ನಾಗಿರುತ್ತೆ, ಆದರೆ ಬಜೆಟ್ ಚಿಕ್ಕದಾಗಿರಬೇಕು'' ಎಂದು ಸುದೀಪ್ ತಿಳಿಸಿದರು.

ಈ ವೇಳೆ ಡಬ್ಬಿಂಗ್ ಬಗ್ಗೆ ಮಾತನಾಡಿದ ಸುದೀಪ್ ''ಡಬ್ಬಿಂಗ್ ಸಿನಿಮಾಗಳು ಬರುವುದರಿಂದ ತೊಂದರೆಯಾಗುತ್ತಿದೆ ಎನ್ನುವುದಕ್ಕಿಂತ ನಮ್ಮ ಭಾಷೆ ಬೆಳೆಯುತ್ತಿದೆ ಎಂಬುದನ್ನ ಗಮನಿಸಬೇಕಿದೆ. ನಮ್ಮ ಭಾಷೆ ಇರುವವರೆಗೂ ಮಾತ್ರ ನಮ್ಮ ಚಿತ್ರರಂಗ. ಆರಂಭದಲ್ಲಿ ಥಿಯೇಟರ್ ಕೊಡ್ತಿಲ್ಲ ಎನ್ನಬಹುದು. ಆದರೆ, ಮುಂದಿನ ದಿನದಲ್ಲಿ ಅದು ಬದಲಾಗುತ್ತೆ'' ಎಂದು ಬೆಂಬಲ ನೀಡಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ನಟಿಸಿದ್ದ ಸೈರಾ ನರಸಿಂಹ ರೆಡ್ಡಿ ಸಿನಿಮಾ ಕನ್ನಡದಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕನ್ನಡ ವರ್ಷನ್ ಸೈರಾ ಚಿತ್ರದಲ್ಲಿ ಸುದೀಪ್ ಪಾತ್ರಕ್ಕೆ ಸ್ವತಃ ಸುದೀಪ್ ಅವರೇ ಡಬ್ ಮಾಡಿದ್ದಾರೆ.


Click it and Unblock the Notifications











