'ದರ್ಶನ್-ಸುದೀಪ್' ಗೆಳೆತನದ ಬಗ್ಗೆ 'ಸುದೀಪ್ ಸಾಂಸ್ಕೃತಿಕ ಪರಿಷತ್' ಬರೆದ ಬಹಿರಂಗ ಪತ್ರ
ಒಂದ್ಕಾಲದಲ್ಲಿ ಆಪ್ತಮಿತ್ರರು ಎನಿಸಿಕೊಂಡಿದ್ದ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಡುವೆ ಎಲ್ಲವೂ ಅಂತ್ಯವಾಗಿದೆ ಎನ್ನುವಷ್ಟರಲ್ಲಿ, ಇವರಿಬ್ಬರ ಸ್ನೇಹಕ್ಕೆ ಮತ್ತೆ ಜೀವ ಬಂದಿದೆ.
ಇದಕ್ಕೆ ಕಾರಣ ಅಭಿನಯ ಚಕ್ರವರ್ತಿ ಸುದೀಪ್ ಎರಡು ದಿನಗಳಿಂದ ಮಾಡಿದ ಟ್ವೀಟ್. ದರ್ಶನ್ ಅಭಿನಯಿಸುತ್ತಿರುವ 50ನೇ ಚಿತ್ರ 'ಕುರುಕ್ಷೇತ್ರ' ಆಗಸ್ಟ್ 6 ರಂದು ಅದ್ಧೂರಿಯಾಗಿ ಸೆಟ್ಟೇರಿದೆ. ಈ ಹಿನ್ನೆಲೆಯಲ್ಲಿ ದರ್ಶನ್ ಹಾಗೂ 'ಕುರುಕ್ಷೇತ್ರ' ಚಿತ್ರತಂಡಕ್ಕೆ ಸುದೀಪ್ ಶುಭ ಕೋರಿದ್ದಾರೆ.
ತಮ್ಮಿಬ್ಬರ ಸ್ನೇಹ ಮುರಿದು ಬಿದ್ದಿದ್ದರು, ತನ್ನ ಗೆಳಯನ ಚಿತ್ರಕ್ಕೆ ವಿಶ್ ಮಾಡಿರುವುದನ್ನ ಡಿ-ಬಾಸ್ ಅಭಿಮಾನಿಗಳು ಹಾಗೂ ಸುದೀಪ್ ಅಭಿಮಾನಿಗಳು ಸ್ವಾಗತಿಸಿದ್ದಾರೆ. ಇದಕ್ಕೆ ಉತ್ತರವಾಗಿ 'ಸುದೀಪ್ ಸಾಂಸ್ಕೃತಿಕ ಪರಿಷತ್' ಬಹಿರಂಗವಾಗಿ ಒಂದು ಪತ್ರ ಬರೆದಿದೆ. ಮುಂದೆ ಓದಿ....
('ಸುದೀಪ್ ಸಾಂಸ್ಕೃತಿಕ ಪರಿಷತ್ತು' ಬರೆದಿರುವ ಪತ್ರದ ಯಥಾವತ್ ಸಾಲುಗಳಿವು)

ದರ್ಶನ್ ಗೆ ಸುದೀಪ್ ವಿಶ್ ಮಾಡಿದ್ದು ಯಾಕೆ?
''ಸುದೀಪ್ ನನ್ನ ಸ್ನೇಹಿತನೇ ಅಲ್ಲವೆಂದ ದರ್ಶನ್ 'ಕುರುಕ್ಷೇತ್ರ'ಕ್ಕೆ ಸುದೀಪ್ ಶುಭಾಶಯ ಹೇಳಿದ್ದಾರೆಂದರೆ ಅದು ತೆಗೆದು ಹಾಕುವ ವಿಷ್ಯವಲ್ಲ. ಅತ್ಯಂತ ಗಂಭೀರವಾಗಿ ಯೋಚಿಸಲು ಅರ್ಹವಾದ ವಿಷಯ. ಸುಮ್ನೆ ಯೋಚಿಸಿ ನೋಡಿ'' - ಸುದೀಪ್ ಸಾಂಸ್ಕೃತಿಕ ಪರಿಷತ್ತು

ವೈಮನಸ್ಸು ಮರೆತರಾ ಸುದೀಪ್?
''ನಮ್ಮನ್ನ್ಯಾರೋ ಒಬ್ಬಾತ ನೀನು ನನ್ನ ಗೆಳೆಯನೇ ಅಲ್ಲ ಅಂತ ಪಬ್ಲಿಕ್ ನಲ್ಲಿ ಹೀಯಾಳಿಸಿದಾಗ, ಜನ್ಮದಲ್ಲಿ ಅವನ ಮುಖ ನೋಡಬಾರದು ಅಂದ್ಕೋತೀವಿ ಅಲ್ವಾ? ನಮ್ಮಂತಹ ಸಾಮಾನ್ಯರಿಗೇ ಹಾಗನ್ನಿಸಬೇಕಾದರೆ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಸುದೀಪ್ ಅವರಿಗೆ ಇನ್ನೆಷ್ಟು ಮುಜುಗರವಾಗಿರಬೇಕು? ಹಿಂಸೆಯೆನಿಸಿರಬೇಕು? ನೋವಾಗಿರಬೇಕು? ಹಾಗೆ ನೋಡಿದರೆ, ದರ್ಶನ್ ಅವರನ್ನು ಸುದೀಪ್ ಜೀವನಪರ್ಯಂತ ನೆನಪಿಸಿಕೊಳ್ಳಬಾರದು'' - ಸುದೀಪ್ ಸಾಂಸ್ಕೃತಿಕ ಪರಿಷತ್ತು

ದರ್ಶನ್ ಕುರುಕ್ಷೇತ್ರಕ್ಕೆ ಸುದೀಪ್ ಶ್ಲಾಘನೆ
''ಆದರೆ ಸುದೀಪ್ ಹಾಗೆ ಮಾಡಲಿಲ್ಲ ಬದಲಾಗಿ ತನ್ನ ಗೆಳೆಯನ ಆತುರದ ನಿರ್ಧಾರವನ್ನು ಅತ್ಯಂತ ಸಂಯಮದಿಂದ ನಿಭಾಯಿಸಿದ್ದಾರೆ. ಕನ್ನಡದ ಮಟ್ಟಿಗೆ ದಾಖಲಾರ್ಹ ಚಿತ್ರವಾಗಿ ಮೂಡಿಬರುತ್ತಿರುವ 'ಕುರುಕ್ಷೇತ್ರ'ಕ್ಕೆ ಶುಭಾಶಯ ಕೋರಿದ್ದಾರೆ. ಈ ಚಿತ್ರ ಕನ್ನಡದ ಹಿರಿಮೆಗೆ ಗರಿಯಾಗಲಿ ಎನ್ನುತ್ತಲೇ ದರ್ಶನ್ ಅವರಿಂದ ಮಾತ್ರ ಈ ಪಾತ್ರ ಮಾಡಲು ಸಾಧ್ಯ ಎಂದು ಮುಕ್ತಕಂಠದಿಂದ ಹೊಗಳಿದ್ದಾರೆ'' - ಸುದೀಪ್ ಸಾಂಸ್ಕೃತಿಕ ಪರಿಷತ್ತು

ಸುದೀಪ್ ಹೆಚ್ಚೆಚ್ಚು ಪ್ರಬುದ್ದರಾಗುತ್ತಿದ್ದಾರೆ
''ಒಬ್ಬ ಸೂಪರ್ ಸ್ಟಾರ್ ಮತ್ತೊಬ್ಬ ಸೂಪರ್ ಸ್ಟಾರ್ ಬಗ್ಗೆ ಈ ರೀತಿ ಹೇಳುತ್ತಾನೆ ಅಂದರೆ ಆತನೆಷ್ಟು ಹೃದಯವಂತನೆಂದು ಅರ್ಥೈಸಿಕೊಳ್ಳಬೇಕಿದೆ. ಸುದೀಪ್ ಹೆಚ್ಚೆಚ್ಚು ಪ್ರಬುದ್ದರಾಗುತ್ತಿದ್ದಾರೆ. ಸರ್ವೇಜನ ಸುಖಿನೋಭವಂತು ಎನ್ನುತ್ತಿದ್ದಾರೆ. ಚಿತ್ರರಂಗವನ್ನು ಒಂದೇ ಕುಟುಂಬದ ರೀತಿ ನೋಡುತ್ತಿದ್ದಾರೆ. ಆ ಕುಟುಂಬದ ಸದಸ್ಯನೊಬ್ಬ ಆತುರದಿಂದ ಮಾತನಾಡಿದಾಗ, ಹಿರಿಯಣ್ಣನ ಸ್ಥಾನದಲ್ಲಿ ನಿಂತು ಸಂಯಮ, ಪ್ರಬುದ್ಧತೆಯಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಪ್ಪಿಸುತ್ತಿದ್ದಾರೆ. ಇದಲ್ಲವೇ ನಾಯಕತ್ವ! ಇದಲ್ಲವೇ ಹೃದಯವಂತಿಕೆ! ಇದಲ್ಲವೇ ಹಿರಿತನದ ಮಾದರಿ! ಈ ಸತ್ಸಂಪ್ರದಾಯ ಹೀಗೇ ಮುಂದುವರಿಯಲಿ, ಕನ್ನಡ ಚಿತ್ರರಂಗ ಒಂದೇ ದೋಣಿಯಲ್ಲಿ ಪಯಣಿಸಲಿ'' - ಸುದೀಪ್ ಸಾಂಸ್ಕೃತಿಕ ಪರಿಷತ್ತು

ರಾಜ್ ಮತ್ತು ವಿಷ್ಣುರಂತೆ ಆಗದಿರಲಿ
''ಆ ತಲೆಮಾರಿನಲ್ಲಿ ರಾಜ್ ಮತ್ತು ವಿಷ್ಣು ಅವರ ಮಧ್ಯೆ ತಂದಿಟ್ಟು ತಮಾಷೆ ನೋಡಿದ ಕಾರಣಕ್ಕೆ ಚಿತ್ರರಂಗಕ್ಕೆ ಉಂಟಾದ ಅಪಾರನಷ್ಟ ಈ ಕಾಲದ ಸುದೀಪ್, ದರ್ಶನ್ ಅವರ ವಿಷ್ಯದಲ್ಲಿ ಆಗದಿರಲಿ ಎಂದು ಆಶಿಸೋಣ. ಅದೇ ನಿಲುವನ್ನು ಪ್ರದರ್ಶಿಸುತ್ತಿರುವ ಸುದೀಪ್ ಅವರನ್ನು ಅಭಿನಂದಿಸೋಣ.'' - ಸುದೀಪ್ ಸಾಂಸ್ಕೃತಿಕ ಪರಿಷತ್ತು

ದರ್ಶನ್ ಫ್ಯಾನ್ಸ್ ಮನಗೆಲ್ಲಲು ಮಾಡಿರುವ ಟ್ವೀಟ್ ಅಲ್ಲ
''ಕೊನೆಗೊಂದು ಮಾತು. ಮೊಸರಲ್ಲಿ ಕಲ್ಲು ಹುಡುಕುವ ಜನ, ದರ್ಶನ್ ಫ್ಯಾನ್ಸ್ ಮನಗೆಲ್ಲಲು ಸುದೀಪ್ ಆ ಟ್ವೀಟ್ ಮಾಡಿರಬಹುದು ಅಂತ ಹೇಳಬಹುದು. ಆದರೆ ಅದೆಲ್ಲಾ ನಂಬಲರ್ಹವಲ್ಲದ ಸಂಗತಿಗಳಷ್ಟೇ. ಯಾಕೆಂದರೆ ಸುದೀಪ್ ಅವ್ರ ಫ್ಯಾನ್ಸ್ ಫಾಲೋಯಿಂಗ್ ದರ್ಶನ್ ಅವರಿಗಿಂತ ಕಡಿಮೆಯೇನಲ್ಲ.! ಸುದೀಪ್ ಅವರಿಗೆ ಆ ಅನಿವಾರ್ಯತೆಗಳೇನು ಇಲ್ಲ ಎಂಬುದು ಕನ್ನಡಿಗರು ಬಲ್ಲದ ವಿಷಯವೇನಲ್ಲ'' - ಸುದೀಪ್ ಸಾಂಸ್ಕೃತಿಕ ಪರಿಷತ್ತು
ನಿಮ್ಮ
ಸುದೀಪ್ ಸಾಂಸ್ಕೃತಿಕ ಪರಿಷತ್ತು
('ಸುದೀಪ್ ಸಾಂಸ್ಕೃತಿಕ ಪರಿಷತ್ತು' ಬರೆದಿರುವ ಪತ್ರದ ಯಥಾವತ್ ಸಾಲುಗಳಿವು)


Click it and Unblock the Notifications











