ಕೊರೊನಾ ಗೆದ್ದ ಸುದೀಪ್: 'ಭೀಕರತೆ ಅರ್ಥವಾಗಿದೆ, ಸೂಕ್ತ ಯೋಜನೆ ಬೇಕಿದೆ'
'ಕೊರೊನಾ ವೈರಸ್ ಭೀಕರತೆ ನನಗೂ ಅರ್ಥವಾಗಿದೆ, ಬೇರೆ ದೇಶಗಳಿಗೆ ಹೋಲಿಸಿಕೊಂಡರೆ ನಮ್ಮಲ್ಲಿ ಸರಿಯಾದ ಯೋಜನೆ ಕಾಣ್ತಿಲ್ಲ. ಹಾಗಾಗಿ, ಕೊರತೆ ಕಾಣ್ತಿದೆ' ಎಂದು ಕಿಚ್ಚ ಸುದೀಪ್ ಕಳವಳ ವ್ಯಕ್ತಪಡಿಸಿದ್ದಾರೆ. ಕೋವಿಡ್ ಸೋಂಕಿಗೆ ತುತ್ತಾಗಿದ್ದ ಸುದೀಪ್ ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಕೋವಿಡ್ ಅನುಭವದ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಸುದೀಪ್ ಕ್ವಾರಂಟೈನ್ ಹಾಗೂ ಚಿಕಿತ್ಸೆಯ ಕ್ರಮ ಹೇಗಿತ್ತು ಎಂದು ಹೇಳಿಕೊಂಡಿದ್ದಾರೆ.
Recommended Video
''ಶೋ ನಿರೂಪಣೆ ಮಾಡುವ ಸಂದರ್ಭದಲ್ಲಿ ದೇಹ ಆಯಾಸ ಆಗಿತ್ತು, ಮನೆಗೆ ಬಂದ ನಂತರ ಅದು ಸ್ವಲ್ಪ ಮಟ್ಟಿಗೆ ತೀವ್ರವಾಯಿತು. ಅದಾದ ಮೇಲೆ ಮನೆಯಲ್ಲಿಯೇ ವಿಶ್ರಾಂತಿ ಪಡೆದೆ. ವೈದ್ಯರ ಸಲಹೆಯಂತೆ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆದುಕೊಂಡೆ'' ಎಂದು ಅನುಭವ ಬಿಚ್ಚಿಟ್ಟಿದ್ದಾರೆ.
'ಹೃದಯ ಬಡಿತ ಹೆಚ್ಚಿಸುವಂತಹ ಯಾವುದೇ ಕೆಲಸ ಮಾಡಬಾರದು. ಸಾಧ್ಯವಾದಷ್ಟು ವಿಶ್ರಾಂತಿ ಪಡೆಯಬೇಕು, ಹೊಟ್ಟೆ ತುಂಬಾ ಊಟ ಮಾಡಬೇಕು. ಏಕಂದ್ರೆ ದೇಹಕ್ಕೆ ಶಕ್ತಿ ಬೇಕು. ಅದರ ಜೊತೆಗೆ ವೈದ್ಯರು ಸಲಹೆ ಪಾಲಿಸಬೇಕು' ಎಂದು ಸುದೀಪ್ ಕೋವಿಡ್ ರೋಗಿಗಳಿಗೆ ಸಲಹೆ ನೀಡಿದ್ದಾರೆ. ಇನ್ನು ಮಾತು ಮುಂದುವರಿಸಿರುವ ಅಭಿನಯ ಚಕ್ರವರ್ತಿ ಸಮಾಜದ ವ್ಯವಸ್ಥೆಯಲ್ಲಿ ಯಾವ ರೀತಿ ಕೊರತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

ಹಣ ಮುಖ್ಯವಲ್ಲ, ಬದುಕಿದರೆ ಸಾಕು
''ಕೊರೊನಾ ಭೀಕರತೆ ತನಗೆ ಖಂಡಿತವಾಗಿಯೂ ಅರ್ಥವಾಗಿದೆ. ಅದನ್ನು ಅನುಭವಿಸುವವರಿಗೆ ಆ ನೋವು ಗೊತ್ತಾಗುತ್ತದೆ. ಒಂದು ಕ್ಷಣದಲ್ಲಿ ಹಣ ಮುಖ್ಯವಲ್ಲ, ವೈಭವವೂ ಬೇಕಾಗಿಲ್ಲ. ಬದುಕಿದರೆ ಸಾಕು ಎನ್ನುವ ಭಾವನೆ ತನ್ನಲ್ಲೂ ಉಂಟಾಗಿತ್ತು. ಆದರೆ ಸಮಾಜಕ್ಕೆ ಇದನ್ನು ಎದುರಿಸುವ ಶಕ್ತಿ ಖಂಡಿತಾ ಇಲ್ಲ' ಎಂದು ಕೋವಿಡ್ ವಿಚಾರದಲ್ಲಿ ಅಸಹಾಯಕತೆ ವ್ಯಕ್ತಪಡಿಸಿದರು.

ಯೋಜನೆ ಸರಿಯಾಗಿ ರೂಪಿಸುತ್ತಿಲ್ಲ
''ಕೊರೊನಾ ವಿಶ್ವದಾದ್ಯಂತ ಸಂಚರಿಸುತ್ತಿದೆ. ಬಹಳಷ್ಟು ದೇಶದಲ್ಲಿ ಲಸಿಕೆ ನೀಡಿ, ಇನ್ನು ಐದು ಸಲ ಲಸಿಕೆ ಕೊಡುವಷ್ಟು ಸಂಗ್ರಹ ಮಾಡಿಕೊಂಡಿದ್ದಾರೆ. ಆದರೆ, ಭಾರತದಲ್ಲಿ ಎರಡನೇ ಡೋಸ್ ನೀಡಲು ಲಸಿಕೆ ಕೊರತೆ ಇದೆ ಎನ್ನುವುದೇ ಆತಂಕ. ಭವಿಷ್ಯದಲ್ಲಿ ದೇಶ ಎಂತಹ ಗಂಡಾಂತರ ಎದುರಿಸಬೇಕಾಗುತ್ತದೆ ಎಂಬ ಭಯ ಕಾಡುತ್ತಿದೆ. ಈಗ ಸಮಾಜಕ್ಕೆ ಬೇಕಾಗಿರುವುದು ಕಾನೂನು ಜಾರಿಗೊಳಿಸುವುದಲ್ಲ. ಸರಿಯಾದ ಯೋಜನೆ ರೂಪಿಸುವುದು. ಯೋಜನೆ ಸರಿಯಾಗಿಲ್ಲ ಅಂದ್ರೆ ಏನೂ ಪ್ರಯೋಜನ ಇಲ್ಲ'' ಎಂದು ಆತಂಕಗೊಂಡಿದ್ದಾರೆ.

ಒಳ್ಳೆಯ ಕೆಲಸದ ಬಗ್ಗೆ ಮಾತ್ರ ಯೋಚಿಸುತ್ತೇನೆ
'ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿ ಕಡೆಯಿಂದ ನಡೆಯುತ್ತಿರುವ ಕೆಲಸಗಳು ಇಂದಿನದ್ದು, ನಿನ್ನೆಯಿಂದ ಅಲ್ಲ. ಕಳೆದ ಬಾರಿ ಕೊರೊನಾ ಬಂದ ಸಂದರ್ಭದಿಂದಲೂ ಜನರಿಗಾಗಿ ಕೆಲಸ ಮಾಡ್ತಿದ್ದಾರೆ. ನಾನು ಒಂದು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕೆ ಕೆಲವರು ದೊಡ್ಡ ರಾದ್ದಾಂತವೇ ಮಾಡಿದರು. ನನಗೆ ಆ ಬಗ್ಗೆ ಯಾವ ಬೇಸರವು ಇಲ್ಲ. ಸಮಾಜಕ್ಕೆ ನನ್ನಿಂದ ಹಾಗೂ ನನ್ನ ಚಾರಿಟಿಯಿಂದ ಏನು ಒಳ್ಳೆಯ ಕೆಲಸ ಆಗಬೇಕೆಂದು ಯೋಚಿಸುತ್ತೇನೆ. ಜಾಹೀರಾತಿನಿಂದ ಬಂದ ಸಂಭಾವನೆ ಇದಕ್ಕೆ ಬಳಸುತ್ತೇನೆ' ಎಂದು ತಿಳಿಸಿದರು.

ಚಿತ್ರರಂಗದಲ್ಲಿ ನಾವೆಲ್ಲರೂ ಒಂದೇ
'ಚಿತ್ರರಂಗದಲ್ಲಿ ನಾವೆಲ್ಲ ಒಂದು ಕುಟುಂಬ. ನಮ್ಮ ನಮ್ಮಲ್ಲಿ ಸಾವಿರ ಇರಬಹುದು, ನಾನು ಇಲ್ಲ ಅಂತ ಹೇಳಲ್ಲ. ಆದರೆ, ಇವತ್ತಿನ ಸಂದರ್ಭದಲ್ಲಿ ಅದು ಇಲ್ಲ. ಒಬ್ಬರಿಗೊಬ್ಬರು ಮಾತುಕತೆ ಮಾಡಿಕೊಂಡು ಸಹಾಯ ಮಾಡ್ತಿದ್ದಾರೆ. ಪ್ರತಿಯೊಬ್ಬರಿಂದಲೂ ಮಾಡಲು ಸಾಧ್ಯವಿಲ್ಲ. ನಮ್ಮಿಂದ ಆಗಿದ್ದನ್ನು ನಾವು ಮಾಡುತ್ತಿದ್ದೇವೆ' ಎಂದು ಸುದೀಪ್ ಹೇಳಿದರು.


Click it and Unblock the Notifications











