ಡಬಲ್ ಆಯ್ತಾ ಬಜೆಟ್? ಶೂಟಿಂಗ್ ಇನ್ನು ಮುಗಿದಿಲ್ವಾ? ಏನಿದು 'ಮ್ಯಾಕ್ಸ್' ಮಿಸ್ಟರಿ?
ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಸದ್ಯಕ್ಕೆ ಸಿನಿಮಾ ಬರೋದು ಡೌಟು ಎನ್ನುವ ಚರ್ಚೆ ಶುರುವಾಗಿದೆ. ಶೂಟಿಂಗ್ ಮುಗಿದಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಇನ್ನು 20% ಶೂಟಿಂಗ್ ಬಾಕಿಯಿದೆ ಎಂದು ಕಾಲಿವುಡ್ನಲ್ಲಿ ಗುಲ್ಲಾಗಿದೆ.
ಅದ್ಯಾಕೋ 'ಮ್ಯಾಕ್ಸ್' ಸಿನಿಮಾ ವಿಚಾರದಲ್ಲಿ ಚಿತ್ರತಂಡ ಸೈಲೆಂಟ್ ಆಗಿದೆ. ಯಾವುದೇ ಅಪ್ಡೇಟ್ ಕೊಡದೇ ಅಭಿಮಾನಿಗಳನ್ನು ಸತಾಯಿಸುತ್ತಿದೆ. ಖುದ್ದು ಸುದೀಪ್ ಟ್ವೀಟ್ ಮಾಡಿ ಸುಖಾ ಸುಮ್ಮನೆ ಅಪ್ಡೇಟ್ ಕೋಡೊಕೆ ಆಗೋಲ್ಲ. ಸಮಯ ಬಂದಾಗ ಹೇಳ್ತಿವಿ ಎಂದುಬಿಟ್ಟಿದ್ದಾರೆ. ಇನ್ನು ಸಿನಿಮಾ ರಿಲೀಸ್ ಯಾವಾಗ ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.

'ವಿಕ್ರಾಂತ್ ರೋಣ' ಸಿನಿಮಾ ಬಂದೋಗಿ 2 ವರ್ಷ ಆಗ್ತಾ ಬಂತು. ಸುದೀಪ್ ನಟನೆಯ ಮತ್ತೊಂದು ಸಿನಿಮಾ ಮಾತ್ರ ಬರಲೇಯಿಲ್ಲ. ಆಗಸ್ಟ್ 15ಕ್ಕೆ ಸಿನಿಮಾ ರಿಲೀಸ್ ಎನ್ನುವ ಗುಸುಗುಸು ಶುರುವಾಗಿದೆ. ಆದರೆ ಅಂತಹ ಯಾವುದೇ ಲಕ್ಷಣಗಳು ಇಲ್ಲ ಎಂದು ಹೇಳಲಾಗುತ್ತಿದೆ. ಸೆಪ್ಟೆಂಬರ್ 2ಕ್ಕೆ ಸುದೀಪ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿನಿಮಾ ಬರಬಹುದು ಎನ್ನುವುದು ಅಭಿಮಾನಿಗಳ ಲೆಕ್ಕಾಚಾರ. ಆದರೆ ಅಷ್ಟೊತ್ತಿಗೆ ಸಿನಿಮಾ ರೆಡಿ ಆಗಬೇಕಲ್ಲವೇ?
ತಮಿಳಿನ ಯುವ ನಿರ್ದೇಶಕ ವಿಜಯ್ ಕಾರ್ತಿಕೇಯನ್ 'ಮ್ಯಾಕ್ಸ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಟೀಸರ್, ಪೋಸ್ಟರ್ ಬಿಟ್ಟು ಚಿತ್ರತಂಡ ಸಿನಿಮಾ ಘೋಷಿಸಿತ್ತು. ಮಹಾಬಲಿಪುರಂಣಲ್ಲಿ ಸೆಟ್ ನಿರ್ಮಿಸಿ ಚಿತ್ರೀಕರಣ ನಡೆಸಲಾಗಿದೆ. ಬಹುತೇಕ ಸಿನಿಮಾ ಅಲ್ಲೇ ಸೆರೆ ಹಿಡಿಯಲಾಗಿದೆ. ಸಂಯುಕ್ತಾ ಹೊರನಾಡ್, ಉಗ್ರಂ ಮಂಜು ಸೇರಿದಂತೆ ಸಾಕಷ್ಟು ಜನ ಕಲಾವಿದರು ಚಿತ್ರದಲ್ಲಿದ್ದಾರೆ.

ಕಲೈಪುಲಿ ಎಸ್. ತನು ಜೊತೆ ಸೇರಿ ಸುದೀಪ್ 'ಮ್ಯಾಕ್ಸ್' ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಒಂದು ಆಕ್ಷನ್ ಥ್ರಿಲ್ಲರ್ ಚಿತ್ರವನ್ನು ಕಟ್ಟಿಕೊಡಲಾಗುತ್ತಿದೆ. ಆದರೆ ಕಾರಣಾಂತರಗಳಿಂದ ಸಿನಿಮಾ ಚಿತ್ರೀಕರಣ ತಡವಾಗುತ್ತಿದೆ. ಇದೇ ಕಾರಣಕ್ಕೆ ಚಿತ್ರತಂಡ ಯಾವುದೇ ಅಪ್ಡೇಟ್ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಕಾಲಿವುಡ್ ಗಲ್ಲಿಗಳಲ್ಲಿ ಗುಲ್ಲಾಗಿದೆ. 46 ಕೋಟಿ ರೂ. ಬಜೆಟ್ ಎಂದು ಶುರುವಾದ ಸಿನಿಮಾ ಖರ್ಚು ಈಗಾಗಲೇ 76 ಕೋಟಿ ರೂ. ದಾಟಿದೆ ಎಂದು ತಮಿಳು ಚಿತ್ರರಂಗದಲ್ಲಿ ಚರ್ಚೆ ನಡೆಯುತ್ತಿದೆ.
ಕಂಪ್ಲೀಟ್ ಸಿನಿಮಾ ಚಿತ್ರೀಕರಣ ಮುಗಿದಿಲ್ಲ. ಇನ್ನು 20%ರಷ್ಟು ಶೂಟಿಂಗ್ ಬಾಕಿಯಿದೆ. ಕಲೈಪುಲಿ ಎಸ್. ತನು ರೀತಿಯ ಅನುಭವಿ ನಿರ್ಮಾಪಕರು ಬಜೆಟ್ ವಿಚಾರದಲ್ಲಿ ಯಾಮಾರಿಬಿಟ್ರಾ? ಎನ್ನುವ ಮಾತುಗಳು ಶುರುವಾಗಿದೆ. ಆದರೆ ಚಿತ್ರತಂಡ ಮಾತ್ರ ಯಾವುದಕ್ಕೂ ಪ್ರತಿಕ್ರಿಯಿಸದೇ ಮೌನ ವಹಿಸಿದೆ. ಸುದೀಪ್ ಸಿನಿಮಾ ತಡವಾಗುತ್ತಿರುವುದು ಅಭಿಮಾನಿಗಳಿಗೂ ಬೇಸರ ತಂದಿದೆ.
ಇನ್ನು ಬುಕ್ಮೈಶೋ ಸೈಟ್ನಲ್ಲಿ 'ಮ್ಯಾಕ್ಸ್' ಚಿತ್ರದ ಒನ್ಲೈನ್ ಸ್ಟೋರಿ ರಿವೀಲ್ ಆಗಿದೆ. ಚಿತ್ರದಲ್ಲಿ ಅರ್ಜುನ್ ಮಹಾಕ್ಷಯ್ ಎನ್ನುವ ಖಡಕ್ ಪೊಲೀಸ್ ಆಫೀಸರ್ ಆಗಿ ಸುದೀಪ್ ಬಣ್ಣ ಹಚ್ಚಿದ್ದಾರೆ. ಅಮಾನತಿನಲ್ಲಿದ್ದ ಅರ್ಜುನ್ ಮತ್ತೆ ಕೆಲಸಕ್ಕೆ ವಾಪಸ್ ಆಗುತ್ತಾನೆ. ಮಂತ್ರಿ ಮಗ ತನ್ನ ಇಲಾಖೆಯ ಅಧಿಕಾರಿಗಳ ಮೇಲೆ ದೌರ್ಜನ್ಯ ಎಸಗುತ್ತಿರುವುದನ್ನು ನೋಡಿ ಅರ್ಜುನ್ ಆತನನ್ನು ಬಂಧಿಸುತ್ತಾನೆ. ದುರದೃಷ್ಟವಶಾತ್ ಆತ ಸಾಯ್ತಾನೆ. ಮುಂದೇನು ಎನ್ನುವುದೇ ಸಿನಿಮಾ ಕಥೆ ಎನ್ನಲಾಗ್ತಿದೆ.
ಸುದೀಪ್ ಮೂರ್ನಾಲ್ಕು ಸಿನಿಮಾಗಳನ್ನು ಘೋಷಣೆ ಮಾಡಿದ್ದಾರೆ. ಆದರೆ 'ಮ್ಯಾಕ್ಸ್' ರಿಲೀಸ್ ಬಳಿಕವೇ ಉಳಿದ ಸಿನಿಮಾಗಳು ಶುರುವಾಗಬೇಕಿದೆ. ಅಭಿಮಾನಿಗಳಂತೂ ತೆರೆಮೇಲೆ ಕಿಚ್ಚನ ದರ್ಬಾರ್ ನೋಡೋಕೆ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.


Click it and Unblock the Notifications











