ಭಾರತ-ಪಾಕಿಸ್ತಾನ ಹಾಗೂ ಟೆಸ್ಟ್ ಕ್ರಿಕೆಟ್ ಬಗ್ಗೆ ಕಿಚ್ಚನ ಮಾತುಗಳಿವು
'ವಿಕ್ರಾಂತ್ ರೋಣ' ಚಿತ್ರೀಕರಣ ಮುಗಿಸಿರುವ ಕಿಚ್ಚ ಸುದೀಪ್ ಬಿಡುವು ಪಡೆದುಕೊಂಡು ಪತ್ನಿ ಪ್ರಿಯಾ ಸಮೇತ ದುಬೈಗೆ ತೆರಳಿದ್ದಾರೆ. ಅಲ್ಲಿ ನಡೆಯುತ್ತಿರುವ ಐಪಿಎಲ್ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುತ್ತಿದ್ದಾರೆ.
ಸುದೀಪ್ ಕ್ರಿಕೆಟ್ ಪ್ರೀತಿಯ ಬಗ್ಗೆ ಅವರ ಅಭಿಮಾನಿಗಳಿಗೆ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ಸಿಸಿಎಲ್ ನಲ್ಲಿ ಕರ್ನಾಟಕ ತಂಡ ಮುನ್ನಡೆಸುವ ಸುದೀಪ್, ಕ್ರಿಕೆಟ್ ಕಾಶಿ ಲಾರ್ಡ್ಸ್ನಲ್ಲಿಯೂ ಕ್ರಿಕೆಟ್ ಆಡಿದ್ದಾರೆ.
ದುಬೈನಲ್ಲಿರುವ ಕಿಚ್ಚ ಸುದೀಪ್ ಅಲ್ಲಿನ ಸ್ಥಳೀಯ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದು, ಈ ವೇಳೆ ತಮ್ಮ ಮೆಚ್ಚಿನ ಕ್ರೀಡೆಗಳಲ್ಲಿ ಒಂದಾದ ಕ್ರಿಕೆಟ್ ಕುರಿತು ಸಾಕಷ್ಟು ಮಾತನಾಡಿದ್ದಾರೆ. ಐಪಿಎಲ್, ಆರ್ಸಿಬಿ, ಕ್ರೀಡಾ ಸ್ಪೂರ್ತಿ ಹಲವು ವಿಷಯ ಮಾತನಾಡಿರುವ ಸುದೀಪ್, ಭಾರತ-ಪಾಕಿಸ್ತಾನ ಹಾಗೂ ಟೆಸ್ಟ್ ಕ್ರಿಕೆಟ್ ಬದಲಾಗಿರುವ ರೀತಿಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಸುದೀಪ್ ಮಾತುಗಳು ಪಕ್ಕಾ ಕ್ರಿಕೆಟ್ ವಿಶ್ಲೇಷಕರೊಬ್ಬರ ಮಾತಿನಂತೆಯೇ ಇವೆ.

ಭಾರತ-ಪಾಕ್ ಮ್ಯಾಚ್ ನೋಡಲು ಬರುತ್ತೇನೆ: ಸುದೀಪ್
ಸಂದರ್ಶನದ ವೇಳೆ ಟಿ20 ವಿಶ್ವಕಪ್ ಸಮೀಪಿಸುತ್ತಿರುವ ಬಗ್ಗೆ ಮಾತನಾಡುತ್ತಾ, ''ವಿಶ್ವಕಪ್ ಒಂದು ಅದ್ಭುತ ವೇದಿಕೆ ಎಲ್ಲ ದೇಶಗಳ ತಂಡಗಳೂ ತಮ್ಮ ಪ್ರತಿಭೆಯ ಮೊಹರು ಒತ್ತಲು ಅವಕಾಶ ನೀಡುವ, ವಿಶ್ವವಿಜೇತ ಪಟ್ಟ ಗೆದ್ದುಕೊಳ್ಳುವ ವೇದಿಕೆ ಅದು. ವಿಶ್ವಕಪ್ನಲ್ಲಿ ಭಾರತ-ಪಾಕಿಸ್ತಾನ ಪಂದ್ಯವಂತೂ ಅತ್ಯಂತ ರೋಚಕವಾಗಿರುತ್ತದೆ. ನಾನು ಬಹಳ ವರ್ಷಗಳಾಯಿತು ವಿಶ್ವಕಪ್ನಲ್ಲಿ ಭಾರತ-ಪಾಕಿಸ್ತಾನ ಪಂದ್ಯ ವೀಕ್ಷಿಸಿ ಹಾಗಾಗಿ ಈ ಬಾರಿ ಭಾರತ-ಪಾಕಿಸ್ತಾನ ಪಂದ್ಯ ಇರುವ ದಿನ ಬಂದು ಮ್ಯಾಚ್ ನೋಡಿ ಹೋಗುವ ನಿರ್ಧಾರ ಮಾಡಿದ್ದೇನೆ'' ಎಂದರು ಸುದೀಪ್. ಟಿ20 ವಿಶ್ವಕಪ್ನಲ್ಲಿ ಭಾರತ-ಪಾಕಿಸ್ತಾನ ಪಂದ್ಯವು ಅಕ್ಟೋಬರ್ 24ರಂದು ದುಬೈನಲ್ಲಿ ನಡೆಯಲಿದೆ.

ವೆಂಕಟೇಶ್ ಪ್ರಸಾದ್-ಅಮೀರ್ ಸೋಹೆಲ್ ಘಟನೆ ನೆನಪು
''ನಾನು ಬಹಳ ವರ್ಷಗಳ ಹಿಂದೆ ಭಾರತ-ಪಾಕಿಸ್ತಾನ ಮ್ಯಾಚ್ ಅನ್ನು ಲೈವ್ ಆಗಿ ಸ್ಟೇಡಿಯಂನಲ್ಲಿ ಕೂತು ನೋಡಿದ್ದೆ. ಆ ಪಂದ್ಯದಲ್ಲಿ ವೆಂಕಟೇಶ್ ಪ್ರಸಾದ್ಗೆ ಅಮೀರ್ ಸೋಹೆಲ್ ಎರಡು ಫೋರ್ ಹೊಡೆದು ಬ್ಯಾಟ್ ತೋರಿಸಿದ ಮರುಬಾಲ್ನಲ್ಲಿಯೇ ವೆಂಕಟೇಶ್ ಪ್ರಸಾದ್ ಬೋಲ್ಡ್ ಮಾಡುತ್ತಾರೆ. ಆ ಮ್ಯಾಚ್ ಅನ್ನು ನಾನು ಕ್ರೀಡಾಂಗಣದಲ್ಲಿ ಕೂತು ನೋಡಿದ್ದೆ. ನಾನು ಆಗ ಕಾಲೇಜು ಅಥವಾ ಸ್ಕೂಲ್ನಲ್ಲಿದ್ದೆ ಎನಿಸುತ್ತದೆ. ಅದಾದ ಮೇಲೆ ಕ್ರೀಡಾಂಗಣದಲ್ಲಿ ಭಾರತ-ಪಾಕಿಸ್ತಾನ ಮ್ಯಾಚ್ ನೋಡಿಲ್ಲ'' ಎಂದು ಹಳೆಯ ನೆನಪುಗಳಿಗೆ ಜಾರಿದರು ಸುದೀಪ್.

''ಕರ್ನಾಟಕ-ತಮಿಳುನಾಡು ಮ್ಯಾಚ್ಗಳು ಬಹಳ ಜಿದ್ದಾ-ಜಿದ್ದಿನಿಂದ ಕೂಡಿರುತ್ತವೆ''
''ಭಾರತ-ಪಾಕಿಸ್ತಾನ ಮ್ಯಾಚ್ಗಳು ಸದಾ ಜಿದ್ದಾಜಿದ್ದಿನಿಂದ ಕೂಡಿರುತ್ತವೆ. ಅದನ್ನು ಕ್ರೀಡಾಂಗಣದಲ್ಲಿಯೇ ನೋಡಿ ಖುಷಿ ಪಡಬೇಕು. ಭಾರತ-ಪಾಕ್ ಮ್ಯಾಚ್ಗೆ ಎರಡೂ ಕಡೆಯ ಆಟಗಾರರು ತಮ್ಮೆಲ್ಲ ಶ್ರಮ ಹಾಕಿ ಆಡುತ್ತಾರೆ. ಯಾವುದೇ ಆಟಗಾರ ಒಳ್ಳೆಯ ಆಟ ಆಡಿದಾಗ ಎರಡೂ ಕಡೆಯವರು ಚಪ್ಪಾಳೆ ತಟ್ಟುತ್ತಾರೆ. ಆದರೆ ಆ ಪಂದ್ಯದಲ್ಲಿ ಮಾತ್ರ ಅದೊಂದು ಬೇರೆಯದೇ ರೀತಿಯ ಫೈರ್ ಎರಡೂ ಕಡೆ ಇರುತ್ತದೆ. ನಾವು ಸಿಸಿಎಲ್ ಆಡುವಾಗ ಕರ್ನಾಟಕ-ತಮಿಳುನಾಡು ಪಂದ್ಯಕ್ಕೂ ಇದೇ ರೀತಿಯ ಫೈರ್ ಇರುತ್ತದೆ. ಎರಡೂ ಕಡೆಯವರು ಬಹಳ ಜೋಶ್ನಿಂದ ಆಟವಾಡುತ್ತಾರೆ. ಆದರೆ ಪಂದ್ಯದ ಬಳಿಕ ನಾವೆಲ್ಲರೂ ಗೆಳೆಯರೇ, ಒಟ್ಟಿಗೆ ಮಾತನಾಡುತ್ತೇವೆ, ಒಟ್ಟಿಗೆ ಪಾರ್ಟಿ ಮಾಡುತ್ತೇವೆ. ಆ ಫೈರ್ ಕ್ರೀಡಾಂಗಣದಲ್ಲಷ್ಟೆ'' ಎಂದಿದ್ದಾರೆ ಸುದೀಪ್.

ಟೆಸ್ಟ್ ಕ್ರಿಕೆಟ್ ಬಗ್ಗೆ ಸುದೀಪ್ ಹೇಳಿದ್ದು ಹೀಗೆ
ಟೆಸ್ಟ್ ಕ್ರಿಕೆಟ್ ಬಗ್ಗೆ ಮಾತನಾಡುತ್ತಾ, ''ನಾನು ಟೆಸ್ಟ್ ಕ್ರಿಕೆಟ್ನ ದೊಡ್ಡ ಅಭಿಮಾನಿ. ಈಗ ಟೆಸ್ಟ್ ಕ್ರಿಕೆಟ್ ಸಹ ಉಳಿದ ಫಾರ್ಮ್ಯಾಟ್ಗಳಂತೆ ಬಹಳ ರೋಚಕವಾಗುತ್ತಿದೆ. ಪ್ರತಿ ಟೆಸ್ಟ್ ಮ್ಯಾಚ್ಗಳಲ್ಲೂ ಫಲಿತಾಂಶ ಬರುತ್ತಿದೆ. ಆಟಗಾರರು ಸಹ ಬೇರೆಯದ್ದೇ ಮೈಂಡ್ ಸೆಟ್ನಲ್ಲಿ ಆಟವಾಡುತ್ತಿದ್ದಾರೆ. ಅವರಿಗೆ ಡ್ರಾ ಸಮಾಧಾನ ತರುತ್ತಿಲ್ಲ, ಪ್ರತಿ ತಂಡವೂ ಗೆಲ್ಲುವ ಪ್ರಯತ್ನವನ್ನೇ ಮಾಡುತ್ತಿವೆ. ಟೆಸ್ಟ್ ಪಂದ್ಯದ ಐದೂ ದಿನಗಳು ರೋಚಕವಾಗಿರುತ್ತವೆ. ಹಿಂದೆಂದಿಗಿಂತಲೂ ಜನ ಟೆಸ್ಟ್ ಕ್ರಿಕೆಟ್ ಅನ್ನು ಈಗ ಹೆಚ್ಚು ಎಂಜಾಯ್ ಮಾಡುತ್ತಿದ್ದಾರೆ'' ಎಂದಿದ್ದಾರೆ ಸುದೀಪ್.


Click it and Unblock the Notifications











