ಅದೊಂದನ್ನು ಸೂರಪ್ಪ ಬಾಬು ಜೀವನ ಪರ್ಯಂತ ನೆನಪಿಟ್ಟುಕೊಂಡರೆ ಸಾಕು: ಸುದೀಪ್
'ಕೋಟಿಗೊಬ್ಬ 3' ಸಿನಿಮಾದ ಸಕ್ಸಸ್ ಮೀಟ್ನಲ್ಲಿ ಸುದೀಪ್ ಇಂದು ಭಾಗವಹಿಸಿದ್ದರು. ಸಿನಿಮಾ ಯಶಸ್ವಿಯಾಗಿದ್ದಕ್ಕೆ ಅಭಿಮಾನಿಗಳಿಗೆ, ಸಿನಿಮಾ ಪ್ರೇಮಿಗಳಿಗೆ ಧನ್ಯವಾದ ಅರ್ಪಿಸಿದ ಸುದೀಪ್, ಹಲವು ವಿಷಯಗಳ ಬಗ್ಗೆ ಮಾತನಾಡಿದರು.
ಪೈರಸಿ ಬಗ್ಗೆ ಎದುರಾದ ಪ್ರಶ್ನೆಗೆ ಉತ್ತರಿಸಿದ ಸುದೀಪ್, ''ಎಲ್ಲ ಕಡೆ ಕೆಟ್ಟ ಜನ ಇದ್ದೇ ಇರುತ್ತಾರೆ ಅವರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು ಅಷ್ಟೆ. ನಮ್ಮ ತಂಡ ಹಗಲು ರಾತ್ರಿ ಕಷ್ಟಪಟ್ಟು ಸಾಕಷ್ಟು ಲಿಂಕ್ಗಳನ್ನು ಡಿಲೀಟ್ ಮಾಡಿಸಿದೆ. ಅವರ ಶ್ರಮವನ್ನು ಮೆಚ್ಚಲೇ ಬೇಕು'' ಎಂದರು.
''ಈಗಾಗಲೇ ಎರಡು ವರ್ಷದಿಂದ ಮೊಬೈಲ್ನಲ್ಲಿ, ಟಿವಿಯಲ್ಲಿ ಸಿನಿಮಾಗಳನ್ನು ನೋಡಿದ್ದೀರಿ. ಈಗಲಾದರು ಅದರಿಂದ ಹೊರಗೆ ಬಂದು ಚಿತ್ರಮಂದಿರದಲ್ಲಿ ಸಿನಿಮಾ ನೋಡಿ. ಚಿತ್ರಮಂದಿರದಲ್ಲಿ ಸಿನಿಮಾ ನೋಡುವುದಕ್ಕೂ, ಥಿಯೇಟರ್ನಲ್ಲಿ ಸಿನಿಮಾ ನೋಡುವುದಕ್ಕೂ ವ್ಯತ್ಯಾಸ ಏನೆಂಬುದನ್ನೇ ನೀವೆ ಕಂಡುಕೊಳ್ಳಿ. ಕೆಲವು ಪೈರಸಿ ಕಾಪಿಗಳಲ್ಲಿ ನಾನೇ ಹೀರೋ ಎಂಬುದು ಸಹ ಗೊತ್ತಾಗುತ್ತಿಲ್ಲ ಅಷ್ಟು ಕೆಟ್ಟದಾಗಿವೆ'' ಎಂದು ತಮಾಷೆ ಮಾಡಿದರು ಸುದೀಪ್.

ಸಿನಿಮಾದ ಕಲೆಕ್ಷನ್ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸುದೀಪ್, ''ಆ ಬಗ್ಗೆ ನನಗೆ ಸ್ಪಷ್ಟ ಮಾಹಿತಿ ಇಲ್ಲ. ಇದು ನನ್ನ ಪ್ರೊಡಕ್ಷನ್ನ ಸಿನಿಮಾ ಆಗಿದ್ದರೆ ಮಾತನಾಡಬಹುದು. ನಮ್ಮ ಪ್ರೊಡಕ್ಷನ್ ರೀತಿಯೇ ಕೆಲಸ ಮಾಡಿದ್ದೇವೆ ಆದರೆ ಕಲೆಕ್ಷನ್ ಬಗ್ಗೆ ನಿರ್ಮಾಪಕರೇ ಹೇಳಬೇಕು'' ಎಂದರು.
''ನಿರ್ಮಾಪಕರು ಖುಷಿಯಾಗಿದ್ದಾರೆ, ವಿತರಕರು ಖುಷಿಯಾಗಿದ್ದಾರೆ. ಹಾಗಿದ್ದ ಮೇಲೆ ನನಗೆ ಅಷ್ಟು ಸಾಕು. ನಿರ್ಮಾಪಕರು ಕಲೆಕ್ಷನ್ ಬಗ್ಗೆ ಏನಾದರೂ ಹೇಳಿದರೆ ನಾನು ಅದನ್ನು ಅನುಮೋದಿಸಬಲ್ಲೆ. ನಾನೇನೋ ಹೇಳುವುದು, ಅಷ್ಟು ಆಗಿಲ್ಲವೆಂದು ಅಥವಾ ಇನ್ನೂ ಹೆಚ್ಚು ಆಗಿದೆಯೆಂದು ಆ ಮೇಲೆ ಚರ್ಚೆಗಳು ಏಳುತ್ತವೆ. ನನ್ನದೇ ಪ್ರೊಡಕ್ಷನ್ ಆಗಿದ್ದಾಗ ನಾನು ಸ್ಪಷ್ಟವಾಗಿರಬಲ್ಲೆ'' ಎಂದರು ಸುದೀಪ್.
''ಕಲೆಕ್ಷನ್ ಅನ್ನೋದು ನನಗೆ ಮಾನದಂಡ ಆಗಿಲ್ಲ. ನಾನು ಬಹಳಷ್ಟು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ಸಿನಿಮಾ ಕಲೆಕ್ಷನ್ ನಟನನ್ನು ಅಳೆಯುವ ಮಾಧ್ಯಮ ಅಲ್ಲ. ನಮ್ಮ ನಿರ್ಮಾಪಕರು ಸೇಫ್ ಆಗಿದ್ದಾರೆ. ಕೆಟ್ಟ ಸಮಯದಲ್ಲಿ ಕೆಲವು ವ್ಯಕ್ತಿಗಳು (ಜಾಕ್ ಮಂಜು ಕಡೆ ಕೈ ಮಾಡುತ್ತಾ) ಜೊತೆಯಾಗಿ ನಿಂತು ಸಹಾಯ ಮಾಡಿದರು. ಅದಷ್ಟನ್ನು ಅವರು ಜೀವನಪರ್ಯಂತ ನೆನಪಿಟ್ಟುಕೊಂಡರೆ ಸಾಕು. ಕಲೆಕ್ಷನ್ ಮರೆತರೂ ಪರ್ವಾಗಿಲ್ಲ'' ಎಂದು ಸಣ್ಣನೆ ನಗು ಬೀರಿದರು ಸುದೀಪ್.


Click it and Unblock the Notifications











